Advertisement

ಮಹಿಳಾ ಕಾಲೇಜು ನಿರ್ಮಾಣಕ್ಕೆ ಗೌಡ ಸಮಾಜ ತೀವ್ರ ವಿರೋಧ: ಜಂಟಿ ನಿರ್ದೇಶಕರೊಂದಿಗೆ ಚರ್ಚೆ

10:03 PM Feb 12, 2020 | Sriram |

ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿಯ ಗೌಡ ಸಮಾಜದ ಪಕ್ಕದಲ್ಲೆ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ್ಥಾಪನೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಸ್ಥಳ ಪರಿಶೀಲನೆಗೆ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಇದರ ಬಿಸಿ ತಟ್ಟಿತು.

Advertisement

ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕರಾದ ಡಾ| ಅಪ್ಪಾಜಿ ಗೌಡ ಅವರು ಸೋಮವಾರ ಮಧ್ಯಾಹ್ನ ಮಹಿಳಾ ಕಾಲೇಜು ನಿರ್ಮಾಣಕ್ಕೆ ಗುರುತಿಸಿದ ಜಾಗಕ್ಕೆ ಭೇಟಿ ನೀಡಿದ ಸಂದರ್ಭ, ಅಲ್ಲಿ ಅದಾಗಲೆ ನೆರೆದಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸೇರಿದಂತೆ ಪದಾಧಿಕಾರಿಗಳು ಸೂಚಿತ ಸ್ಥಳದಲ್ಲಿ ಕಾಲೇಜು ನಿರ್ಮಾಣವಾದರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.

ಸ್ಥಳಕ್ಕಾಗಮಿಸಿದ ಜಂಟಿ ನಿರ್ದೇಶಕ ಡಾ| ಅಪ್ಪಾಜಿ ಗೌಡ ಅವರ ಸಮ್ಮುಖದಲ್ಲೆ ಸಮತಟ್ಟು ಗೊಳಿಸಿರುವ ಕಾಲೇಜು ನಿರ್ಮಾಣದ ಜಾಗದ ವಿಸ್ತೀರ್ಣವನ್ನು ಪರಿಶೀಲಿಸಿದಾಗ ಒಂದು ಬದಿ 60 ಅಡಿ ಉದ್ದ ಮತ್ತು ಮತ್ತೂಂದು ಬದಿ 130 ಅಡಿ ಅಗಲವಿದ್ದು, ಒಟ್ಟಾಗಿ ಜಾಗ ಅಂದಾಜು 16 ಸೆಂಟ್‌ಗಳಷ್ಟೆ ಇರುವುದು ಪತ್ತೆಯಾಯಿತು. ಜಾಗದ ಎರಡೂ ಕಡೆಗಳಲ್ಲಿ ಅಗಲ ಕಿರಿದಾದ ರಸ್ತೆಗಳಿದ್ದು, ಅವುಗಳನ್ನು ವಿಸ್ತರಿಸಿದಲ್ಲಿ ಕಾಲೇಜು ನಿರ್ಮಾಣಕ್ಕೆ ಸೂಚಿಸಿದ ಜಾಗದ ವಿಸ್ತೀರ್ಣ 13 ಸೆಂಟ್‌ಗಳಿಗೆ ಕುಸಿಯುವ ಸಾಧ್ಯತೆ ಇದೆ.

ತೀವ್ರ ವಿರೋಧ
ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮತ್ತು ಪದಾಧಿಕಾರಿಗಳು ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ, ಮಹಿಳಾ ಕಾಲೇಜಿಗೆ ಗುರುತಿಸಿರುವ ಜಾಗದ ಪಕ್ಕದಲ್ಲೇ ಗೌಡ ಸಮಾಜವಿದ್ದು, ವರ್ಷಪೂರ್ತಿ ವಿವಾಹ ಸೇರಿದಂತೆ ವಿವಿಧ ಸಮಾರಂಭಗಳು ನಡೆಯುತ್ತದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಲಿದೆ, ಮಹಿಳಾ ಕಾಲೇಜಿಗೆ ನಮ್ಮ ವಿರೋಧವಿಲ್ಲ. ಆದರೆ ಅದನ್ನು ನಿರ್ಮಿಸಲು ಆಯ್ಕೆ ಮಾಡಿಕೊಂಡಿರುವ ಜಾಗದ ಬಗ್ಗೆ ನಮ್ಮ ಆಕ್ಷೇಪವೆಂದು ಸ್ಪಷ್ಟಪಡಿಸಿದರು.

ಒಂದೊಮ್ಮೆ ಕಾಲೇಜು ನಿರ್ಮಾಣವಾದರೆ ಮುಂಬರುವ ದಿನಗಳಲ್ಲಿ ಕಾಲೆೇಜು ಸಮೀಪ ಸಮಾರಂಭಗಳು ನಡೆಯಬಾರದೆಂದು ನಿರ್ದೇಶನಗಳು ಬಂದಲ್ಲಿ ಗೌಡ ಸಮಾಜಗಳಲ್ಲಿ ನಡೆಯುವ ಗೌಡ ಸಮುದಾಯದ ವಿವಾಹ ಸಮಾರಂಭ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುವುದು ಅಸಾಧ್ಯವಾಗಬಹುದು. ಆದ್ದರಿಂದ ಕಾಲೇಜು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸೂರ್ತಲೆ ಸೋಮಣ್ಣ ತಿಳಿಸಿದರು.

Advertisement

ನಗರದ ಐಟಿಐ ಕಾಲೇಜು ಸಾಕಷ್ಟು ಜಾಗವನ್ನು ಹೊಂದಿದ್ದು, ಅಲ್ಲಿಯೂ ಮಹಿಳಾ ಕಾಲೇಜು ನಿರ್ಮಾಣ ಮಾಡಬಹುದಾಗಿದೆ, ಇಲ್ಲವೆ ಪ್ರಸ್ತುತ ಜಿ.ಪಂ, ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ ಮಾಡಿರುವ ಪ್ರದೇಶದಲ್ಲು ಮಹಿಳಾ ಕಾಲೇಜು ನಿರ್ಮಾಣಕ್ಕೆ ಅವಕಾಶವಿದ್ದು, ಈ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.

ಒಕ್ಕೂಟದ ಆಕ್ಷೇಪಗಳನ್ನು ಆಲಿಸಿದ ಜಂಟಿ ನಿರ್ದೇಶಕರು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭ ಅವರೊಂದಿಗೆ ಕಾಲೆೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಶ್ರೀನಿವಾಸಯ್ಯ, ಹಿರಿಯ ವ್ಯವಸ್ಥಾಪಕ ಸುಮುಖ್‌ ಆರ್ಯ, ಮಹಿಳಾ ಕಾಲೆೇಜು ಪ್ರಾಂಶುಪಾಲ ಜವರಪ್ಪ ಅವರು ಹಾಜರಿದ್ದರು.

ಮಡಿಕೇರಿಯ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಕೊಡಗು ಗೌಡ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ನಗರಸಭಾ ಮಾಜಿ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮಾತನಾಡಿದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್‌ ಜೋಯಪ್ಪ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೋರನ ಸಿ. ವಿಶ್ವನಾಥ್‌, ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್‌ ಹಾಗೂ ಪ್ರಮುಖರಾದ ಕೆ.ಡಿ. ದಯಾನಂದ, ಪೊನ್ನಚ್ಚನ ಮಧು, ದಂಬೆಕೋಡಿ ಹರೀಶ್‌, ಬೈತಡ್ಕ ಜಾನಕಿ, ಕೊಡಗು ಗೌಡ ಯುವ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಗೌಡ ಸಮಾಜದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next