Advertisement

ಗಡಿನಾಡ ಕನ್ನಡಿಗರಿಗೆ ಸರಕಾರ ಸ್ಪಂದಿಸಲಿ: ಕೋಟ ಶ್ರೀನಿವಾಸ ಪೂಜಾರಿ

12:24 AM Jun 25, 2019 | Team Udayavani |

ಬದಿಯಡ್ಕ: ಕಾಸರ ಗೋಡಿನ ಕನ್ನಡಿಗರ ಮನಸ್ಸು ಭಾವನಾತ್ಮಕವಾಗಿ ಕನ್ನಡತನವನ್ನು ಉಳಿಸಿ ಕೊಂಡು ಕರ್ನಾಟಕದ ಜತೆ ಇದೆ. ಆದುದರಿಂದ ಕಾಸರಗೋಡಿನ ಕನ್ನಡಿಗರ ಕಷ್ಟನಷ್ಟಗಳಿಗೆ ಸರಕಾರ ರಕ್ಷಣೆ ಕೊಡಬೇಕು. ಬಹುಭಾಷೆ, ಬಹು ಸಂಸ್ಕೃತಿ, ಬಹು ಪ್ರಾಂತ್ಯ ವೈವಿಧ್ಯವನ್ನು ಏಕತೆಯನ್ನು ಸಾರುವ ಭೂಮಿಯಲ್ಲಿ ಯಾವುದೇ ಭಾಗದಲ್ಲಿದ್ದರೂ ನಮ್ಮೊಳಗಿನ ಭಾಷಾಪ್ರೇಮ ಜೀವಂತವಾಗಿರಬೇಕು. ಗಟ್ಟಿಯಾಗಿರಬೇಕು. ಹೋರಾಟದ ಹಾದಿ ಬೇರೆ ಬೇರೆ ರೀತಿಯಲ್ಲಿದ್ದರೂ ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡುವಲ್ಲಿ ನಮ್ಮ ಜಾಣತನವಿದೆ. ಕಾಸರಗೋಡಿನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರು ತೋರಿದ ದಾರಿ, ಹಾಕಿ ಕೊಟ್ಟ ಬುನಾದಿಯನ್ನು ಯುವ ಪೀಳಿಗೆ ಅನುಸರಿಸಿ ಕನ್ನಡದ ರಕ್ಷಕರಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಜಾನಪದ ಪರಿಷತ್‌ ಕೇರಳ ಗಡಿನಾಡ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಬದಿಯಡ್ಕದ ಗುರುಸದನದಲ್ಲಿ ನಡೆದ ಮಕ್ಕಳ ಜಾನಪದ ಮೇಳ ಹಾಗೂ ಕೇಳು ಮಾಸ್ಟರ್‌ ಸ್ಮರಣಾರ್ಥ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಸರಗೋಡಿನ ಮಹಾನ್‌ ಯಕ್ಷಗಾನ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ ಅವರ ಸ್ಪಷ್ಟ ಸರಳ ಸುಂದರ ಭಾಷೆಯ ಬಳಕೆ ಹಾಗೂ ತನ್ನ ಕನ್ನಡ ಮಾತಿನ ಮೋಡಿಯಲ್ಲಿ ಕರ್ನಾಟಕದ ಜನರ ಮನಗೆದ್ದ ಕುಂಬಳೆ ಸುಂದರ ರಾವ್‌ರವರಂತಹವರು ಜನಿಸಿ ನಾಡಿನಲ್ಲಿ ಕನ್ನಡ ಕಂಪನ್ನು ಎತ್ತಿಹಿಡಿದ ಕಯ್ನಾರರ ಭೂಮಿಯಲ್ಲಿ ಕನ್ನಡದ ಸಂತ, ಸರಳತೆಗೆ ಹೆಸರಾದ ಕೇಳು ಮಾಸ್ತರ್‌ ಅಗಲ್ಪಾಡಿಯವರ ಪುಸ್ತಕ ಪ್ರೀತಿಗೆ ನೀಡಿದ ಗೌರವ ಈ ಉಚಿತ ಪುಸ್ತಕ ವಿತರಣೆ ಎಂದು ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ ಹೇಳಿ ಪುಸ್ತಕ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಅವರು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್‌ ಕುಮಾರ್‌ ರೈಯವರಿಗೆ ಪುಸ್ತಕಗಳನ್ನು ಹಸ್ತಾಂತರಿಸಿ ಮಾತನಾಡಿದರು.

ಕರ್ನಾಟಕ ವಿಧಾನ ಪರಿಷತ್ತು ಉಪಸಭಾಪತಿ ಎಸ್‌.ಎಲ್. ಧರ್ಮೇಗೌಡ ಇಲ್ಲಿ ನೆರೆದಿರುವ ಜನರೇ ಕಾಸರಗೋಡಿನಲ್ಲಿ ಕನ್ನಡಿಗರ ಭಾಷಾಪ್ರೇಮ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಸಾಕ್ಷಿ. ಅಚ್ಚಗನ್ನಡದ ಮಾತು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಅಪಾರ. ಆದರೆ ಸಮಸ್ಯೆಗಳು ಗಡಿಭಾಗದ ಜನರಿಗೆ ಸವಾಲಾಗಿ ಕಾಡುವುದು ಇಂದು ನಿನ್ನೆಯದಲ್ಲ. ಆದುದರಿಂದ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳನ್ನು ನಾವು ಮೂವರೂ ಒಟ್ಟಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಯತ್ನ ಮಾಡುತ್ತೇವೆ ಎಂದು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಭರವಸೆ ನೀಡಿದರು.

Advertisement

ಕ್ರೀಡಾ ಅಂಕಣಕಾರರಾದ ಜಗದೀಶ್ಚಂದ್ರ ಅಂಚನ್‌ ಸೂಟರ್‌ಪೇಟೆ ಅವರನ್ನು ಸಮ್ಮಾನಿಸಲಾಯಿತು.

ಬದಿಯಡ್ಕ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್‌ ಕುಮಾರ್‌ ಕಲ್ಕೂರ, ಕರ್ನಾಟಕ ಜಾನಪದ ಪರಿಷತ್ತಿನ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್‌. ಸುಬ್ಬಯ್ಯಕಟ್ಟೆ, ಪಟ್ಲ ಫೌಂಡೇಶನ್‌ನ ಜಗನ್ನಾಥ ಶೆಟ್ಟಿ, ಗ.ಸಾ.ಸಾ. ಅಕಾಡೆಮಿ ಅಧ್ಯಕ್ಷರಾದ ಪ್ರಭಾಕರ ಕಲ್ಲೂರಾಯ, ಸುಧಾಮ ಗೋಸಾಡ, ಬ್ಲೋಕ್‌ ಪಂಚಾಯತ್‌ ಸದಸ್ಯ ಅವಿನಾಶ್‌ ರೈ,ಝಡ್‌.ಎ. ಕಯ್ನಾರ್‌, ಕರ್ನಾಟಕ ಜಾನಪದ ಪರಿಷತ್ತು ಕುಶಲನಗರ ಘಟಕದ ಅಧ್ಯಕ್ಷ ಚಂದ್ರಮೋಹನ, ಪ್ರೊ| ಶ್ರೀನಾಥ್‌, ಶ್ರೀಕಾಂತ್‌ ನೆಟ್ಟಣಿಗೆ, ರವಿ ನಾಯ್ಕಪು, ಪುರುಷೋತ್ತಮ ಭಟ್ ಪೈವಳಿಕೆ, ಸಂಧ್ಯಾಗೀತಾ ಬಾಯಾರು, ರೇಶ್ಮಾ ನಾರಂಪಾಡಿ, ಜಯಲಕ್ಷ್ಮೀ ಮುಳ್ಳೇರಿಯ ಮುಂತಾದವರು ಉಪಸ್ಥಿತರಿದ್ದರು. ಪ್ರಸ್ತುತ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಭಾಗದಲ್ಲಿ ರ್‍ಯಾಂಕ್‌ ವಿಜೇತೆ ರಮ್ಯಾ ಭಟ್ ಹಾಗೂ ಪುಲ್ಲಾಂಜಿಯ ನಿರ್ದೇಶಕ ಹರೀಶ್‌ ಮಕ್ರೇರಿಯ, ನಿರ್ಮಾಪಕ ಮಹೇಶ್‌ ಕೋಯಿಪರಂಬತ್ತ್ ಹಾಗೂ ಬಾಲನಟ ವಿಜಯರನ್ನು ಅಭಿನಂಧಿಸಲಾಯಿತು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಸ್ವಾಗತಿಸಿ, ಝಡ್‌.ಎ. ಕಯ್ನಾರ್‌ ವಂದಿಸಿದರು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ನವಜೀವನ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ರವಿ ನಾಯ್ಕಪು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಭಾಗದಲ್ಲಿ ರ್‍ಯಾಂಕ್‌ ವಿಜೇತೆ ರಮ್ಯಾ ಭಟ್ ಹಾಗೂ ಪುಲ್ಲಾಂಜಿ ಕಿರು ಚಿತ್ರದ ಬಾಲನಟ ವಿಜಯ ಪೆರಡಾಲ ಅವರನ್ನು ಅಭಿನಂದಿಸಲಾಯಿತು. ಜಿಲ್ಲೆಯ 150ಕ್ಕಿಂತಲೂ ಮಿಕ್ಕಿದ ಕನ್ನಡ ಶಾಲೆಗಳು ಮತ್ತು 60ಕ್ಕಿಂತಲೂ ಮಿಕ್ಕಿದ ಗ್ರಂಥಾಲಯಗಳಿಗೆ ಉಚಿತ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು.

ಕೇರಳ ಸರಕಾರದ ಚೈಲ್ಡ್ ಲೈನ್‌ಗೆ ಪುಸ್ತಕ
ನೊಂದ ಮಕ್ಕಳ ಬಾಲಿನ ಬೆಳಕಾಗಿರುವ ಕೇರಳ ಸರಕಾರದ ಚೈಲ್ಡ್ ಲೈನ್‌ಗೆ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಅಕಾಡೆಮಿ ಮುಂದಾಗಿದೆ. ಕಾಸರಗೋಡು ಚೈಲ್ಡ್ ಲೈನ್‌ನ ಉದಯಕುಮಾರ್‌ ನೀರ್ಚಾಲ್ ವಸುಂಧರಾ ಭೂಪತಿಯವರಿಂದ ಪುಸ್ತಕಗಳನ್ನು ಸ್ವೀಕರಿಸಿದ್ದು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಕ್ಕಳಿಗಾಗಿ ವಾಚನಾಲಯವನ್ನು ಪ್ರಾರಂಭಿಸಲು ಮುಂದಾಗಿದೆ. ಆ ಮೂಲಕ ಓದುವ ಹವ್ಯಾಸವನ್ನು ಹೆಚ್ಚಿಸಿ ಕನ್ನಡ ಸಾಹಿತ್ಯಗಳತ್ತ ಮಕ್ಕಳನ್ನು ಸೆಳೆಯುವ ಪ್ರಯತ್ನ ಇದಾಗಿದೆ.

ಪುಸ್ತಕ ಪ್ರೀತಿ ಬೆಳೆಯಲಿ

ಗಡಿನಾಡು ಕಾಸರಗೋಡಿನ ಕನ್ನಡ ಚಟುವಟಿಕೆಗಳು ಭಾಷೆಗೆ ಜೀವಂತಿಕೆ ನೀಡುತ್ತದೆ. ಕನ್ನಡಿಗರನ್ನು ಸದಾ ಜಾಗೃತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ. ಪುಸ್ತಕಗಳು ಮನಸ್ಸಿನ ಅಂಧಕಾರ ನೀಗಿ ಹೊಸ ಬೆಳಕನ್ನು ನೀಡುವ ದೀವಿಗೆಗಳು. ಓದುವ ಆಸಕ್ತಿ ಹಾಗೂ ಪುಸ್ತಕ ಪ್ರೀತಿಯನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳಿಗೆ ಪುಸ್ತಕ ಪ್ರಾಧಿಕಾರದ ಸಹಕಾರ ಎಂದೂ ಇದೆ.

-ಡಾ| ವಸುಂಧರಾ ಭೂಪತಿ

ಅಧ್ಯಕ್ಷೆ, ಕನ್ನಡ ಪುಸ್ತಕ ಪ್ರಾಧಿಕಾರ
Advertisement

Udayavani is now on Telegram. Click here to join our channel and stay updated with the latest news.

Next