Advertisement

ಕನ್ನಡ ಬಾರದ ಅಧಿಕಾರಿ ಜಿ.ಪಂ. ವಿಶೇಷ ಸಾಮಾನ್ಯ ಸಭೆ ಮೊಟಕು

07:40 AM Sep 12, 2017 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಅಧಿಕಾರಿಗಳ ಜತೆ ಜಿ.ಪಂ. ವಿಶೇಷ ಸಾಮಾನ್ಯ ಸಭೆಯು ಜಿ.ಪಂ. ಭಾಂಗಣದಲ್ಲಿ ಸೋಮವಾರ ನಡೆದಿದ್ದು, ರಾ.ಹೆ. ಅಧಿಕಾರಿಗೆ ಕನ್ನಡ ಭಾಷೆ ಬಾರದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಜಿ.ಪಂ.ಸದಸ್ಯರ ಸಹಿತ ಅಧ್ಯಕ್ಷ ದಿನಕರ ಬಾಬು ಅವರು ಸಭೆಯನ್ನು ಮೊಟಕುಗೊಳಿಸಿದರು.

Advertisement

ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಅವರು ವಿಷಯ ಪ್ರಸ್ತಾವಿಸಿ, ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳು ಮುಖ್ಯ ವಾಗಿ ಅಂಬಲಪಾಡಿ, ಸಂತೆಕಟ್ಟೆ, ಕರಾ ವಳಿ ಜಂಕ್ಷನ್‌ ನಲ್ಲಿ ಪಾದಚಾರಿಗಳಿಗೆ ದಾಟಲು ಏನು ಕ್ರಮ ಕೈಗೊಂಡಿದ್ದೀರಿ, ಸರ್ವೀಸ್‌ ರಸ್ತೆಗಳ ಅವಸ್ಥೆ ಏನು, ಇನ್ನಿತರ ವಿಷಯ ಗಳ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಭೆಗೆ ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್‌ ವಿಜಯ ಕುಮಾರ್‌ ಅವರು ಇಂಗ್ಲಿಷ್‌ನಲ್ಲಿ  ಹೇಳಿ ಉತ್ತರಿಸುವೆ ಎಂದರು. ಇದಕ್ಕೆ ಸಭಾಧ್ಯಕ್ಷರ ಸಹಿತ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಭಾಷೆ ಅರ್ಥವಾಗದ ಇಂತಹ ಅಧಿಕಾರಿಗಳನ್ನು ಸಭೆಗೆ ಕರೆಸೋದಾದ್ರು ಯಾಕೆ? ಸಭೆ ಕನ್ನಡದಲ್ಲಿ ನಡೆಯುವುದೆಂದು ಗೊತ್ತಿದ್ದರೂ ಕನ್ನಡ ಬರುವ ಅಧಿಕಾರಿಗಳನ್ನೇಕೆ ಕರೆದುಕೊಂಡು ಬಂದಿಲ್ಲ? ಇಂತಹ ಅಧಿಕಾರಿಗಳಿಂದ ನಾವೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸಭೆ ಬೇಡ ಎನ್ನುವ ಮಾತು ಕೇಳಿ ಬಂದಿತು. ಸ್ವಲ್ಪ ಹೊತ್ತಿನ ಬಳಿಕ ಸಭೆಯನ್ನು ಅಧ್ಯಕ್ಷರು ಮೊಟಕುಗೊಳಿಸಿ ಮುಂದಿನ ಸಭೆಯ ದಿನಾಂಕ ತಿಳಿಸಲಾಗುವುದು ಎಂದರು.

ಶಾಸಕ ಕೆ. ಪ್ರತಾಪ್‌ಚಂದ್ರ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಿಇಒ ಶಿವಾನಂದ ಕಾಪಶಿ, ಮುಖ್ಯ ಯೋಜ ನಾಧಿಕಾರಿ ಶ್ರೀನಿವಾಸ ರಾವ್‌, ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಉಪಸ್ಥಿತರಿದ್ದರು.

ಮಾಹಿತಿ ಕೊಡದ ಅಧಿಕಾರಿಗಳು: ಅಧ್ಯಕ್ಷರ ಬೇಸರ
ಜಿ.ಪಂ.ನ ಎಲ್ಲ ಸಭೆಗಳಲ್ಲಿಯೂ ಪ್ರಮುಖ ಇಲಾಖಾ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಭಿವೃದ್ಧಿ ಕಾಮಗಾರಿ, ಯೋಜನೆಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಕೂಡ ಒದಗಿಸುತ್ತಿಲ್ಲ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ಸಭೆ ಮೊಟಕುಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದರು.
ಸಾಮಾನ್ಯ ಸಭೆ, ಕೆಡಿಪಿ ಸಭೆಯಲ್ಲೂ ಮಾಹಿತಿ ಕೇಳಿದರೆ ಒಬ್ಬರೂ ಸರಿಯಾಗಿ ಉತ್ತರಿಸುವುದಿಲ್ಲ. ಕೆಲವು ಅಧಿಕಾರಿಗಳು ಸಭೆಗೂ ಹಾಜರಾಗುವುದಿಲ್ಲ. ಈ ರೀತಿಯಾದರೆ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಮೊಟಕುಗೊಂಡ ವಿಶೇಷ ಸಾಮಾನ್ಯ ಸಭೆಯನ್ನು ಮುಂದಿನ ವಾರ ಕರೆಯಲು ನಿರ್ಧರಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next