Advertisement

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

01:19 PM May 02, 2024 | Team Udayavani |

ಮಹಾನಗರ: ಈ ಮೊದಲು ಸರಾಸರಿ 600ರಿಂದ 700 ಯುನಿಟ್‌ ರಕ್ತ ಸಂಗ್ರಹವಿರುತ್ತಿದ್ದ “ರೆಡ್‌ಕ್ರಾಸ್‌’ ಬ್ಲಡ್‌ ಬ್ಯಾಂಕ್‌ನಲ್ಲಿ ರಕ್ತದ ಲಭ್ಯತೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇದು ಕೇವಲ ರೆಡ್‌ ಕ್ರಾಸ್‌ನಲ್ಲಿ ಎದುರಾಗಿರುವ ಅಭಾವವಲ್ಲ. ಜಿಲ್ಲೆಯ ಎಲ್ಲ ಬ್ಲಡ್‌ ಬ್ಯಾಂಕ್‌ಗಳಲ್ಲೂ ಎದುರಾಗಿರುವ ಸಮಸ್ಯೆ!

Advertisement

ಸರಿಸುಮಾರು 8 ಮೆಡಿಕಲ್‌ ಕಾಲೇಜುಗಳು, ಹತ್ತಾರು ಬ್ಲಡ್‌ ಬ್ಯಾಂಕ್‌ ಗಳಿರುವ ದ.ಕ. ಜಿಲ್ಲೆಯಲ್ಲಿ ಇದೀಗ ರಕ್ತದ ಕೊರತೆ
ಎದುರಾಗಿದೆ. ಮಂಗಳೂರು ನಗರದಲ್ಲೇ ರಕ್ತ ಸಂಗ್ರಹ ಕೊರತೆ ಎಂಬುವುದು ಸದ್ಯದ ಮಾಹಿತಿ. ಲಭ್ಯತೆಗಿಂತ ಬೇಡಿಕೆ ವಿಪರೀತ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಮಾಸಿಕ ಸರಿಸುಮಾರು 6ರಿಂದ 7 ಸಾವಿರ ಯುನಿಟ್‌ಗೂ ಅಧಿಕ ರಕ್ತ ಬೇಕಾಗುತ್ತಿದ್ದು, ಪ್ರಸ್ತುತ ರಕ್ತ ಸಂಗ್ರಹಣೆ ಬಹುತೇಕ ಕಡಿಮೆಯಾಗಿದೆ. ಅದರಲ್ಲೂ “ಒ’ ಗ್ರೂಪ್‌ನ ರಕ್ತವಂತೂ ತೀರಾ ವಿರಳ. ಜನಸಾಮಾನ್ಯರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಚುನಾವಣೆ, ಕಾಲೇಜುಗಳಿಗೆ ರಜೆ ಎಫೆಕ್ಟ್!
ಲೋಕಸಭಾ ಚುನಾವಣೆಯ ಕಾರ್ಯಗಳಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡ ಕಾರಣ ದಾನಿಗಳು ಸಿಗುತ್ತಿಲ್ಲ. ಮತ್ತೂಂದೆಡೆ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ, ಬೇಸಗೆ ರಜೆ. ಈ ಎಲ್ಲ ಕಾರಣಗಳಿಂದಾಗಿ ಮಾರ್ಚ್‌ ತಿಂಗಳ ಬಳಿಕ ರಕ್ತದಾನ ಶಿಬಿರಗಳು ನಡೆಯದೆ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹಿಸಲು ಸಾಧ್ಯವಾಗಿಲ್ಲ. ರೋಗಿಗಳ ಕುಟುಂಬ ಸದಸ್ಯರು ರಕ್ತ ನೀಡಲು ಹಿಂದೇಟು ಹಾಕುತ್ತಿದ್ದು, ಸಮಸ್ಯೆಗೆ ಕಾರಣ. ಮತ್ತೂಂದೆಡೆ ಮದುವೆ ಸೇರಿದಂತೆ ನಿರಂತರ ಸಮಾರಂಭಗಳಿರುವ ಹಿನ್ನೆಲೆ ರಕ್ತದಾನ ಸಾಧ್ಯವಾಗುತ್ತಿಲ್ಲ.

ಬಿಸಿಲ ಬೇಗೆ: ನಿರ್ಜಲೀಕರಣದ ಆತಂಕ ಬೇಡ!
ಜಿಲ್ಲೆಯಲ್ಲಿ ವಿಪರೀತ ಬಿಸಿಲು ಏರಿಕೆಯಾಗುತ್ತಿರುವ ಕಾರಣದಿಂದಾಗಿ ಜನ ಮನೆಯಿಂದ ಹೊರ ನಡೆಯಲು ಹಿಂದೇಟು ಹಾಕುತ್ತಿದ್ದಾರೆ. ಶಿಬಿರಗಳನ್ನು ಆಯೋಜಿಸುವ ಕೇಂದ್ರಗಳಲ್ಲೂ ವಿಪರೀತ ಸೆಕೆ ಇರುವ ಕಾರಣದಿಂದಾಗಿ ಜನರು ರಕ್ತ ನೀಡಲು
ಮುಂದಾಗುತ್ತಿಲ್ಲ. ವಿಪರೀತ ತಾಪಮಾನದೊಂದಿಗೆ ನಿರ್ಜಲೀಕರಣದಿಂದ ತೊಂದರೆಯಾಗಬಹುದೆನ್ನುವ ಆತಂಕ ಜನರಲ್ಲಿದೆ. ಇಂತಹ ಯಾವುದೇ ಆತಂಕ ಬೇಡ ಎಂಬುವುದು ವೈದ್ಯರ ಮಾತು.  ಕೇವಲ ಹವಾನಿಯಂತ್ರಿತ ಕೇಂದ್ರಗಳನ್ನು ಜನ ಅವಲಂಬಿಸಿರುವ ಕಾರಣ ಶಿಬಿರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗುವುದು ಅನುಮಾನ.

Advertisement

ಯಾರಿಗೆ ತುರ್ತು ರಕ್ತ
ನಗರ ಸಹಿತ ಹೊರವಲಯಗಳಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ ಕೆಲವರಿಗೆ ತುರ್ತು ರಕ್ತದ ಅಗತ್ಯವಿರುತ್ತದೆ. ಹೆರಿಗೆ ಸಂದರ್ಭ ರಕ್ತಸ್ರಾವವಾಗುವ ವೇಳೆ ರಕ್ತ ಬೇಕೇಬೇಕು. ರಕ್ತ ಹೀನತೆಯಿಂದ ಬಳಲುವವರಿಗೂ ಸಮಯಕ್ಕೆ ಸರಿಯಾಗಿ ರಕ್ತ ನೀಡಬೇಕು. ಇದನ್ನು ಹೊರತುಪಡಿಸಿ ಶಸ್ತ್ರಚಿಕಿತ್ಸೆ, ವಿವಿಧ ರೀತಿಯ ಗಂಭೀರ ಕಾಯಿಲೆಗಳಿಂದ ಬಳಲುವವರಿಗೆ ತಕ್ಷಣ ರಕ್ತದ ಆವಶ್ಯಕತೆ ಇರುತ್ತದೆ. ಇಂತಹ ವೇಳೆ ರಕ್ತನಿಧಿಗಳೇ ನೆರವಾಗುವುದು.

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿವೆ. ಈ ಕಾರಣದಿಂದಾಗಿ ರಕ್ತ, ಪ್ಲೇಟ್‌ ಲೆಟ್‌ಗಳು ಹೆಚ್ಚು ಬಳಕೆಯಾಗುತ್ತಿವೆ. ಇದರಿಂದಾಗಿ ರಕ್ತದ ಬೇಡಿಕೆ ಹೆಚ್ಚಾಗಿದೆ. ಸಾರ್ವಜನಿಕರು ರಕ್ತದಾನ ಮಾಡುವು ಮೂಲಕ ಕೊರತೆ ನೀಗಿಸಬಹುದು. ಪ್ರಸ್ತುತ ರೋಗಿಗಳ ಕುಟುಂಬಸ್ಥರ ಮೂಲಕವೇ ರಕ್ತ ಸಂಗ್ರಹಿಸುವ ಕಾರ್ಯವಾಗುತ್ತಿದೆ.

ಜಾಗೃತಿ ಅಗತ್ಯ
ಮಂಗಳೂರಿನಲ್ಲಿ ಅನೇಕ ಸಂದರ್ಭಗಳಲ್ಲಿ ರೋಗಿಗಳ ಜತೆ ಇರುವವರು ರಕ್ತ ನೀಡಲು ಹಿಂಜರಿಯುತ್ತಾರೆ. ಇತರರನ್ನೇ
ಅವಲಂಬಿಸಿಕೊಳ್ಳುತ್ತಾರೆ. ಅವರದೇ ಕುಟುಂಬಸ್ಥರು ರಕ್ತ ನೀಡಿದ್ದಲ್ಲಿ ಸಮಸ್ಯೆ ಎದುರಾಗದು. ಯುವ ಜನತೆ ರಕ್ತದಾನದ ಬಗ್ಗೆ ಜಾಗೃತರಾಗಬೇಕು. ರಕ್ತದಾನದಿಂದ ಇನ್ನೊಬ್ಬರಿಗೆ ಮರು ಜೀವ ನೀಡಲು ಸಾಧ್ಯ. ರಕ್ತ ನೀಡಿದವರಿಗೆ ಯಾವುದೇ ಅಡ್ಡ ಪರಿಣಾಮಗಳಾಗದು ಎಂಬುವುದು ರೆಡ್‌ ಕ್ರಾಸ್‌ನ ಪ್ರಮುಖರ ಮಾತು.

ಸಮಸ್ಯೆ ಎದುರಾಗದಂತೆ ಕ್ರಮ
ಪ್ರಸ್ತುತ ಎಲ್ಲ ಕಡೆಗಳಲ್ಲೂ ರಕ್ತದ ಅಗತ್ಯ ಅಧಿಕವಾಗಿದೆ. ದ.ಕ. ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಗಳು, ಬ್ಲಿಡ್‌ ಬ್ಯಾಂಕ್‌ಗಳು ಸಾಕಷ್ಟಿರುವ ಕಾರಣ ದೊಡ್ಡ ಸಮಸ್ಯೆ ಇಲ್ಲ. ಎಲ್ಲರೊಂದಿಗೆ ಸಂಪರ್ಕ ದಲ್ಲಿದ್ದು, ಸಮಸ್ಯೆ ಎದುರಾಗದಂತೆ ನಿರ್ವಹಣೆಗೆ
ಕ್ರಮ ವಹಿಸಲಾಗುತ್ತಿದೆ.
*ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ರಕ್ತ ಕೊರತೆಯಾಗದು
ರಕ್ತ ಲಭ್ಯತೆ ಕಡಿಮೆ ಇದ್ದರೂ ರೋಗಿಗಳಿಗೆ ಸಮಸ್ಯೆಯಾಗದಂತೆ ದಾನಿಗಳನ್ನು ಹುಡುಕಿ ವ್ಯವಸ್ಥೆ ಮಾಡುತ್ತಿದ್ದೇವೆ. ಹೆಚ್ಚಿನವರು ರೆಡ್‌ ಕ್ರಾಸ್‌ ಸಂಸ್ಥೆ ಅವಲಂಬಿಸಿಕೊಂಡಿದ್ದಾರೆ. ಲೇಡಿಗೋಶನ್‌ಗೆ ಉಚಿತವಾಗಿ ರಕ್ತ ಪೂರೈಸುತ್ತಿದ್ದೇವೆ. ಯಾವುದೇ ರೋಗಿಗೂ ರಕ್ತದ ಸಮಸ್ಯೆಯಾಗದಂತೆ ನಿರ್ವಹಿಸುತ್ತಿದ್ದೇವೆ. ಪ್ರಸ್ತುತ 130 ಯುನಿಟ್‌ ರಕ್ತ ಸಂಗ್ರಹಿಸಿದ್ದೇವೆ.
*ಸಿಎ ಶಾಂತಾರಾಮ್‌ ಶೆಟ್ಟಿ,
ಚೇರ್ಮನ್‌, ಇಂಡಿಯನ್‌ ರೆಡ್‌ಕ್ರಾಸ್‌ ದಕ್ಷಿಣ ಕನ್ನಡ ಜಿಲ್ಲೆ

ಆರೋಗ್ಯವಂತರು ರಕ್ತದಾನ ಮಾಡಿ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು. ಬೇಸಗೆ ಎಂಬ ಹಿಂಜರಿಕೆ ಬೇಡ. ರಕ್ತದಾನದಿಂದ ಯಾವುದೇ
ಅಡ್ಡಪರಿಣಾಮಗಳಿಲ್ಲ. 18ರಿಂದ 60 ವರ್ಷದ ಆರೋಗ್ಯವಂತರು ರಕ್ತದಾನ ಮಾಡಬಹುದು.
*ಡಾ| ದೀಪಾ ಅಡಿಗ, ನಿರ್ದೇಶಕರು,
ಕೆಎಂಸಿ ಅತ್ತಾವರ ಬ್ಲಿಡ್‌ ಸೆಂಟರ್‌

*ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next