Advertisement

ಪ್ರವಾಹ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ

09:01 PM Dec 14, 2021 | Team Udayavani |

ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಉಂಟಾದ ಅತಿವೃಷ್ಟಿ ಗೆ ರಾಜ್ಯ ಸರ್ಕಾರ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಎನ್‌ಡಿ ಆರ್‌ ಎಫ್‌, ಎಸ್‌ಡಿಆರ್‌ಎಫ್‌ ನಿಯಮದ ಮೂರು ಪಟ್ಟು ಪರಿಹಾರ ನೀಡಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

ರಾಜ್ಯದಲ್ಲಿ ಉಂಟಾದ ಪ್ರವಾಹದ ಕುರಿತು ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳನ್ವಯ 33% ಬೆಳೆ ಹಾನಿಯಾದವರಿಗೆ ಪರಿಹಾರ ನೀಡಲ್ಲ. ಹೊಲ, ಗದ್ದೆಗಳಲ್ಲಿ ಬೆಳೆದು ನಿಂತ ಬೆಳೆಗಳು ಹಾನಿಯಾದಾಗ ಮಾತ್ರ ಪರಿಹಾರ ನೀಡಲಾಗುತ್ತೆ. ಒಂದು ವೇಳೆ ಬೆಳೆ ಕಟಾವು ಆಗಿ, ಕಣ ಸೇರಿದ ಮೇಲೆ ಮಳೆಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಸಿಗಲ್ಲ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು 2015 ರಲ್ಲಿ ಕಡೇ ಬಾರಿ ಪರಿಷ್ಕರಣೆಗೊಂಡಿದ್ದು, ನಿಯಮಗಳಲ್ಲಿ ಕೆಲವು ಲೋಪದೋಷಗಳಿವೆ. ಇನ್ನಾದರೂ ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಪರಿಷ್ಕರಿಸಬೇಕು. ಈಗ ನೀಡುತ್ತಿರುವ ಪರಿಹಾರದ ಮೂರು ಪಟ್ಟು ಪರಿಹಾರ ನೀಡುವಂತೆ ಆಗ್ರಹಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಬ್ಬರಿಯ ಪ್ರೋತ್ಸಾಹ ಧನವನ್ನು ರೂ. 700 ರಿಂದ ರೂ. 1000 ಕ್ಕೆ ಹೆಚ್ಚು ಮಾಡಿದ್ದು,  2017-18ರಲ್ಲಿ 2 ಲಕ್ಷದ 96 ಸಾವಿರ ಕ್ವಿಂಟಾಲ್‌ ಕೊಬ್ಬರಿ ಖರೀದಿ ಮಾಡಿದ್ದೆವು. ರೈತ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ಕೇವಲ 50,400 ಕ್ವಿಂಟಾಲ್‌ ಮಾತ್ರ ಖರೀದಿ ಮಾಡಿದೆ.

ತೊಗರಿ,ಭತ್ತ, ಕಡಲೆ ಹಾಗೂ ತೋಟಗಾರಿಕೆ ಬೆಳೆಗಳಿಗೂ ಹೆಚ್ಚಿನ ಪರಿಹಾರ ನೀಡಿದ್ದೆ. ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಬದ್ಧತೆ ಬೇಕು. ಎನ್‌.ಡಿ.ಆರ್‌.ಎಫ್‌ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ರೂ. 6,800 ಮತ್ತು ತರಿ ಜಮೀಮಿಗೆ ರೂ. 13,500 ಮತ್ತು ತೋಟಗಾರಿಕಾ ಬೆಳೆಗಳಿಗೆ ರೂ. 18,000 ಪರಿಹಾರ ನೀಡಬೇಕು ಮತ್ತು ಗರಿಷ್ಠ ಎರಡು ಹೆಕ್ಟೇರ್‌ ಬೆಳೆಹಾನಿಗೆ ಮಾತ್ರ ಪರಿಹಾರ ನೀಡಬೇಕೆಂದಿದೆ. ಈಗ ನೀಡುತ್ತಿರುವ ಪರಿಹಾರದ ಹಣ ರೈತರು ಬಿತ್ತನೆ ಬೀಜ ಖರೀದಿ ಮಾಡಲು ಹೂಡುವ ಹಣಕ್ಕಿಂತ ಕಡಿಮೆಯಿದ್ದು ಇದನ್ನು ಕನಿಷ್ಠ ಮೂರು ಪಟ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

Advertisement

ಇದನ್ನೂ ಓದಿ:ಮದುಮಕ್ಕಳ ಗ್ರ್ಯಾಂಡ್‌ ಎಂಟ್ರಿ ಎಡವಟ್ಟು! ವಿಡಿಯೋ ವೈರಲ್‌

ಈ ಬಾರಿ ರಾಜ್ಯದಲ್ಲಿ 6.9 ಲಕ್ಷ ಹೆಕ್ಟೇರ್‌ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದು, 13 ಲಕ್ಷ ಟನ್‌ ಬೆಳೆ ನಿರೀಕ್ಷೆ ಮಾಡಲಾಗಿತ್ತು. 10 ಲಕ್ಷದ 21 ಸಾವಿರ ಹೆಕ್ಟೇರ್‌ಪ್ರದೇಶದಲ್ಲಿ ಭತ್ತದ ಬೀಜ ಬಿತ್ತನೆ ಮಾಡಲಾಗಿತ್ತು, ಸುಮಾರು 25 – 30 ಲಕ್ಷ ಟನ್‌ ಬೆಳೆ ನಿರೀಕ್ಷೆಯಿತ್ತು. ಇದರಲ್ಲಿ ಶೇ. 75 ಬೆಳೆ ನಾಶವಾಗಿದೆ. 14 ಲಕ್ಷ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಸುಮಾರು 51 ಲಕ್ಷ ಟನ್‌ ಬೆಳೆ ನಿರೀಕ್ಷೆ ಇತ್ತು. 4.9 ಲಕ್ಷ ಹೆಕ್ಟೇರ್‌ಪ್ರದೇಶದಲ್ಲಿ ಶೇಂಗಾ ಬಿತ್ತನೆ ಆಗಿತ್ತು. ಹೀಗೆ ಹತ್ತಿ, ರಾಗಿ, ಮೆಕ್ಕೆಜೋಳ, ಈರುಳ್ಳಿ, ಅಡಿಕೆ, ತೆಂಗು ಮುಂತಾದ ಬೆಳೆಗಳ ಫಸಲು ಕೈಗೆ ಬರುವ ವೇಳೆ ಮಳೆಗೆ ಸಿಲುಕಿ ನಷ್ಟವಾಗಿದೆ. ಪ್ರಸಕ್ತ ವರ್ಷ 39,000 ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿದೆ. ಈ ವರೆಗೆ ಒಂದೇ ಒಂದು ಮನೆಗೆ ಪರಿಹಾರದ ಹಣ ನೀಡಿಲ್ಲ. 12 ಲಕ್ಷ ಎಕರೆ ಪ್ರದೇಶಕ್ಕೆ ರೂ. 782 ಕೋಟಿ ಬೆಳೆ ಪರಿಹಾರದ ಹಣ ಮಾತ್ರ ನೀಡಲಾಗಿದೆ ಎಂದು ಹೇಳಿದರು.

ಹಿಂದಿನ ಯು.ಪಿ.ಎ ಸರ್ಕಾರದ ಅವಧಿಯ ಬಜೆಟ್‌ ಗಾತ್ರ 16 ಲಕ್ಷದ 65 ಸಾವಿರ ಕೋಟಿ ಇತ್ತು, ಕೇಂದ್ರದ ಈಗಿನ ಬಜೆಟ್‌ ಗಾತ್ರ ರೂ. 34 ಲಕ್ಷದ 83 ಸಾವಿರ ಕೋಟಿ ಆಗಿದೆ. ಬಜೆಟ್‌ ಗಾತ್ರ ಹೆಚ್ಚಾದಂತೆ ಎನ್‌.ಡಿ.ಆರ್‌.ಎಫ್‌ ಹಣ, ರಾಜ್ಯಗಳಿಗೆ ನೀಡುವ ಪರಿಹಾರದ ಹಣ ಹೆಚ್ಚಾಗಬೇಕಲ್ಲವೇ? 2019 ರಲ್ಲಿ ರಾಜ್ಯ ಸರ್ಕಾರ ನೀಡಿದ್ದು ರೂ. 1652 ಕೋಟಿ. ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅನ್ವಯ ನೀಡಬೇಕಾದುದ್ದು ರೂ. 3,891 ಕೋಟಿ. 2020 ರಲ್ಲಿ ರೂ. 1,318 ಕೋಟಿ ಪರಿಹಾರ ನೀಡಲಾಗಿದೆ. ಕಳೆದ ಎರಡು ವರ್ಷದಲ್ಲಿ ಒಟ್ಟು ರೂ. 2,971 ಕೋಟಿ ಪರಿಹಾರ ನೀಡಲಾಗಿದೆ. ಇನ್ನುಳಿದ ಪರಿಹಾರದ ಹಣ ಸಂತ್ರಸ್ತ ಬಡಜನರನ್ನು ತಲುಪೋದು ಯಾವಾಗ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ರಾಜ್ಯಕ್ಕೆ ಅತಿ ಹೆಚ್ಚು ಪರಿಹಾರದ ರೂಪದಲ್ಲಿ ಹಣ ನೀಡಿದ್ದಾರೆ ಎಂಬ ಬಿಜೆಪಿಯವರ ಹೇಳಿಕೆ ಶುದ್ಧ ಸುಳ್ಳು. 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ರೂ. 5,495 ಕೋಟಿ ಹಣವನ್ನು ತರಲು ಛ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು, ರಾಜ್ಯ ಸರ್ಕಾರ ಒಂದು ದಿನವಾದರೂ ಪ್ರಧಾನಿಯವರ ಮುಂದೆ ಇದನ್ನು ಕೇಳಿದ್ದಾರ? ಪ್ರತಿಭಟಿಸಿದ್ದಾರ? ಇದು ರಾಜ್ಯಕ್ಕಾದ ಅನ್ಯಾಯವಲ್ಲವೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕು, ಆಗ ಡಬ್ಬಲ್‌ ಇಂಜಿನ್‌ ಸರ್ಕಾರ ವೇಗವಾಗಿ ಕೆಲಸ ಮಾಡುತ್ತೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದರು. ಈಗ ಎರಡೂ ಬಿಜೆಪಿ ಸರ್ಕಾರಗಳು ಸೇರಿ ಡಬ್ಬಲ್‌ ದೋಖಾ ಸರ್ಕಾರ ನಡೆಸುತ್ತಿವೆ.

ಇದನ್ನೂ ಓದಿ:ರಾಜ್ಯವನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಇಲಾಖೆ ಸಂಕಲ್ಪ : ಪ್ರಭು ಚವ್ಹಾಣ್

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೇವಲ ಎರಡು ವರ್ಷಗಳಲ್ಲಿ ರಾಜ್ಯದ ತೆರಿಗೆ ಪಾಲಿನಲ್ಲಿ ರೂ. 18,000 ಕೋಟಿ ಖೋತಾ ಆಗಿದೆ. ಬಿಜೆಪಿಯ ಯಾವೊಬ್ಬ ನಾಯಕರು ಈ ಅನ್ಯಾಯದ ವಿರುದ್ಧ ಮಾತನಾಡುವುದಿಲ್ಲ ಎಂದು ನರೇಂದ್ರ ಮೋದಿ ಸರ್ಕಾರ ಹೀಗೆ ಮಾಡುತ್ತಿದೆ. ಪ್ರವಾಹ, ಅತಿವೃಷ್ಟಿಯಿಂದಾದ ನಷ್ಟದ ಕುರಿತು ರಾಜ್ಯ ಸರ್ಕಾರ ಕೇಂದ್ರದ ಪರಿಹಾರಕ್ಕಾಗಿ 4 ಮನವಿಗಳನ್ನು ನೀಡಿದೆ. ಆದರೆ ಇವತ್ತನ ವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರದ ಹಣ ರಾಜ್ಯಕ್ಕೆ ಬಂದಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಕೂಡಲೇ ಪ್ರವಾಹ, ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆ ಹಾಗೂ ಮನೆಗಳಿಗೆ ಪರಿಹಾರ ನೀಡಬೇಕು. 2019 ರಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಕೆಲವು ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು, ಅವುಗಳ ಸ್ಥಳಾಂತರ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next