Advertisement

ಶಾಲಾ ಮಕ್ಕಳಿಗೆ ಕಳಪೆ ಸೈಕಲ್‌, ಸಮವಸ್ತ್ರ ವಿತರಣೆ: ಆರೋಪ

07:13 AM Jan 27, 2019 | |

ಬೆಂಗಳೂರು: ”ಕೊಪ್ಪಳ ತಾಲೂಕಿನ ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯ ಮಕ್ಕಳಿಗೆ ಸರ್ಕಾರ ಕಳಪೆ ಗುಣಮಟ್ಟದ ಸೈಕಲ್‌ ಮತ್ತು ಸಮವಸ್ತ್ರ ವಿತರಣೆ ಮಾಡಿದೆ, ”ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದೇವಪ್ಪ ದೂರಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

”ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯ ಮಕ್ಕಳಿಗೆ ಸರ್ಕಾರ ನೀಡಿರುವ ಸೈಕಲ್‌ಗ‌ಳು ಕಳಪೆ ಗುಣಮಟ್ಟದಿಂದ ಕೂಡಿವೆ.ಕೆಲವು ಸೈಕಲ್‌ಗ‌ಳಿಗೆ ಬ್ರೇಕ್‌ಗಳನ್ನು ಅಳವಡಿಕೆ ಮಾಡಿದರೆ ಇನ್ನೂ ಕೆಲವು ಸೈಕಲ್‌ಗ‌ಳಿಗೆ ಬ್ರೇಕ್‌ ಅಳವಡಿಕೆ ಮಾಡಿಲ್ಲ. ಹಲವು ಸೈಕಲ್‌ಗ‌ಳಿಗೆ ಗುತ್ತಿಗೇದಾರರು ಸ್ಟಾಂಡ್‌ ಅಳವಡಿಸುವುದನ್ನೇ ಮರೆತ್ತಿದ್ದಾರೆ,’ ಎಂದು ಟೀಕಿಸಿದರು.

”ಆ ಹಿನ್ನೆಲೆಯಲ್ಲಿ ಸೈಕಲ್‌ ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ನೋಡಿಕೊಳ್ಳಿ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ಮಾಡಬೇಕಾಗಿರುವ ಸರ್ಕಾರ ಅನ್ಯಾಯ ಮಾಡುತ್ತಿದೆ’, ಎಂದರು.

” ಬಡ ಮಕ್ಕಳಿಗೆ ಸಮವಸ್ತ್ರ ನೀಡುವ ಬದಲು, ಬರಿ ಬಟ್ಟೆಗಳನ್ನು ಮಾತ್ರ ವಿತರಣೆ ಮಾಡಲಾಗಿದೆ. ಅವು ಕೂಡ ಕಳಪೆ ಗುಣ ಮಟ್ಟದಿಂದ ಕೂಡಿದ್ದು, ಆ ಬಟ್ಟೆಗಳನ್ನು ಹೋಲಿಸಲು ಸುಮಾರು 500 ರಿಂದ 600 ರೂ ಖರ್ಚಾಗಲಿದೆ. ಇಷ್ಟು ಮೊತ್ತದ ಹಣವನ್ನು ಬಡ ವಿದ್ಯಾರ್ಥಿಗಳ ಪೋಷಕರು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’, ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next