Advertisement

ನನ್ನ ತಂದೆ ತಾಯಿ ನೀಡಿದ ಸಂಸ್ಕಾರದಿಂದಾಗಿ ನಾನು ರಾಜ್ಯಪಾಲ ಸ್ಥಾನಕ್ಕೇರಿದೆ

06:58 PM Aug 19, 2021 | Team Udayavani |

ಪಣಜಿ: ನನ್ನ ತಂದೆ ತಾಯಿಯು ನನಗೆ ನೀಡಿದ್ದ ಸಂಸ್ಕಾರದಿಂದಾಗಿ ನಾನು ರಾಜ್ಯಪಾಲ ಸ್ಥಾನದ ವರೆಗೆ ತಲುಪಲು ಸಾಧ್ಯವಾಯಿತು. ಅವರು ನನಗೆ ನೀಡಿದ್ದ ಸಂಸ್ಕಾರದಿಂದಲೇ ಚಿಕ್ಕಂದಿನಿಂದಲೇ ನನಗೆ ರಾಷ್ಟ್ರಪ್ರೇಮ ನಿರ್ಮಾಣವಾಗಲು ಸಾಧ್ಯವಾಯಿತು. ಗೋವಾ ರಾಜ್ಯದ ಜನತೆ ಕೂಡ ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ. ಭವಿಷ್ಯದಲ್ಲಿಯೂ ಕೂಡ ಗೋವಾದ ಜನರ ಪ್ರೇಮ ನನ್ನೊಂದಿಗಿರಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಭಿಪ್ರಾಯಪಟ್ಟರು.

Advertisement

ಗೋವಾದ ವಾಸ್ಕೊಕ್ಕೆ ಆಗಮಿಸಿದ್ದ ಗೋವಾ ರಾಜ್ಯದ ಸುಪುತ್ರ ಹಾಗೂ ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ರವರನ್ನು ಮುರಗಾಂವ ಹಿಂದೂ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ವಾಸ್ಕೊದಲ್ಲಿ ಬಹುತೇಕ ಜನರು ನಾನು ವಿದ್ಯಾರ್ಥಿಯಿದ್ದಾಗಿನಿಂದ ಈಗ ರಾಜ್ಯಪಾಲರಾಗುವ ವರೆಗೆ ನನ್ನನ್ನು ನೋಡಿದ್ದಾರೆ. ಎಲ್ಲರ ಆಶೀರ್ವಾದ ಪ್ರೀತಿಯಿಂದ ನಾನು ಇಂತಹ ದೊಡ್ಡ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ. ಗೋವಾ ರಾಜ್ಯದಂತೆಯೇ ಹಿಮಾಚಲಪ್ರದೇಶದ ಜನರು ಕೂಡ ಶಾಂತ ಸ್ವಭಾವದವರಾಗಿದ್ದಾರೆ. ಗೋವಾ ಮತ್ತು ಹಿಮಾಚಲಪ್ರದೇಶದ ಜನರ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಲು ಸಾನು ಪ್ರಯತ್ನಿಸುತ್ತೇನೆ ಎಂದು ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ನುಡಿದರು.

ಇದನ್ನೂ ಓದಿ:ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧ

ಈ ಸಂದರ್ಭದಲ್ಲಿ ಮುರಗಾಂವ ಹಿಂದೂ ಸಮಾಜದ ಅಧ್ಯಕ್ಷ ನಾರಾಯಣ ಬಾಂದೇಕರ್, ಪಂಚಾಯತ ಮಂತ್ರಿ ಮಾವಿನ್ ಗುದಿನ್ಹೊ, ಕುಠ್ಠಾಳೀ ಕ್ಷೇತ್ರದ ಶಾಸಕಿ ಎಲಿನಾ ಸಾಲ್ಡಾನಾ, ವಾಸ್ಕೊ ಶಾಸಕ ಕಾರ್ಲುಸ್ ಅಲ್ಮೆದಾ, ಮಾಜಿ ಸಚಿವ ಜುಜೆ ಫಿಲಿಪ್ ಡಿಸೋಜಾ, ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next