Advertisement

ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಒದಗಿಸುವ ಪ್ರಮಾಣಿಕ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ

04:29 PM Dec 03, 2023 | Team Udayavani |

ಕಲಬುರಗಿ: ನಮ್ಮದು ಆಳುವ ಸರ್ಕಾರವಲ್ಲ ಆಲಿಸುವ ಸರ್ಕಾರವಾಗಿದೆ. ವಿಕಲಚೇತನರಿಗೆ ನಮ್ಮ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

Advertisement

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರ್ಗಿ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲಾ ಸಂಘ ಸ್ವಯಂಸೇವೆ ಸಂಸ್ಥೆಗಳು ಹಾಗೂ ಎಂ ಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ ರವರ ಸಂಯುಕ್ತ ಆಶ್ರಯದಲ್ಲಿ ನಗರದ ಎಸ್ ಎಂ ಪಂಡಿತ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಕಲಚೇತನರ ರಾಜಕೀಯ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರತಿಯೊಂದು ಅಂಶಗಳಲ್ಲಿ ವಿಕಲಾಂಗ ವ್ಯಕ್ತಿಗಳ ಏಕೀಕರಣದಿಂದ ಪಡೆಯಬಹುದಾದ ಲಾಭಗಳ ಅರಿವನ್ನು ಹೆಚ್ಚಿಸಲು ವಿಶ್ವ ವಿಕಲಚೇತನರ ದಿನವನ್ನು ಆಚರಿಸಲಾಗುತ್ತಿದೆ. “2011 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 66392 ವಿಕಲಚೇತನರಿದ್ದು ಅವರಲ್ಲಿ 53213 ವಿಕಲಚೇತನರು ಮಾಶಾಸಲ ಪಡೆಯುತ್ತಿದ್ದಾರೆ. ಇಲಾಖೆಯವತಿಯಿಂದ ಈ ಸಾಲಿನಲ್ಲಿ 36 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ” ಎಂದು ಅವರು ಹೇಳಿದರು.

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಟೆಕ್ ಸಮ್ಮಿಟ್ ನಲ್ಲಿ ಅಸಿಸ್ಟಿಂಗ್ ಟೆಕ್ನಾಲಜಿ ಬಳಕೆಗೆ ರೂ 5 ಕೋಟಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಡಿಸೆಂಬರ್ ಅಂತ್ಯದವರಗೆ ಕಂಪನಿಗಳನ್ನು ಕರೆಸಿ ಸಂಘ ಸಂಸ್ಥೆ ಗಳೊಂದಿಗೆ ಚರ್ಚೆ ನಡೆಸಿ ವಿಕಲಚೇತನರಿಗೆ ತಂತ್ರಜ್ಞಾನ ಬಳಸಿಕೊಂಡು ಏನು ಅನುಕೂಲ ಮಾಡಿಕೊಡಬೇಕು ಎನ್ನುವುದಕ್ಕೆ ರೂಪುರೇಷ ನೀಡಲಿದ್ದೇನೆ.

ಜೊತೆಗೆ ಪಂಚಾಯತ ರಾಜ್ ಇಲಾಖೆಯ ವತಿಯಿಂದ ಒಂದು ವಿಶೇಷ ಕಾರ್ಯಕ್ರಮವನ್ನು ಮಾರ್ಚ್ ಒಳಗೆ ಮಾಡಲಿದ್ದೇನೆ. ಇದಲ್ಲದೆ ಕಲಬುರಗಿ ಯಲ್ಲಿ ಸಧ್ಯ ಇರುವ ತೀರಾ ಹಳೆಯದಾದ ಬ್ಲೈಂಡ್ ಶಾಲೆಯನ್ನು ನೆಲಸಮ ಮಾಡಿ ರೂ‌ 10 ಕೋಟಿ ವೆಚ್ಚದಲ್ಲಿ ನೂತನ ಶಾಲೆ ನಿರ್ಮಾಣ ಮಾಡಲಾಗುವುದು ಎಂದು‌ ಸಚಿವರು ಭರವಸೆ ನೀಡಿದರು.

Advertisement

ಈ ಸಂದರ್ಭದಲ್ಲಿ ದೃಷ್ಟಿ ಹೀನ ವಿಶೇಷ ಚೇತನರಿಗೆ ಲ್ಯಾಪ್ ಟಾಪ್ ಹಾಗೂ ಬ್ರೈಲ್ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಎಸ್ .ಪಿ ಶ್ರೀನಿವಾಸ್ ಅಡ್ಡೂರು ಅಪಾರ ಜಿಲ್ಲಾಧಿಕಾರಿ ರಾಯಪ್ಪ ಹುಣಸಿಗಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನವೀನ್ ಕುಮಾರ್ ಯು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ ಗಾಯತ್ರಿ .ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಖಾನ್  ಕಾಂಗ್ರೆಸ್ ಮುಖಂಡ ಬಿ ಜಗದೇವಪ್ಪ ಮಹಾನಗರ ಪಾಲಿಕೆಯ ಮಾಜಿ ಅಧ್ಯಕ್ಷಿ ಚಂದ್ರಿಕಾ ಪರಮೇಶ್ವರ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ದತ್ತು ಅಗ್ರವಾಲ್ ಸೇರಿದಂತೆ ಹಾಗೂ ಅಂಧ ಬಾಲಕ, ಬಾಲಕಿಯರ ಶಾಲೆಯ ಮಕ್ಕಳು ಶಾಲೆಯ ಮುಖ್ಯಸ್ಥರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next