Advertisement

ಖಾಸಗಿ ಪರಿಣತರ ನೇಮಕ: ಪ್ರಕ್ರಿಯೆ ಪಾರದರ್ಶಕವಾಗಿರಲಿ

06:00 AM Jun 15, 2018 | Team Udayavani |

ಸರಕಾರಿ ಹುದ್ದೆಗಳಿಗೆ ಖಾಸಗಿ ಕ್ಷೇತ್ರದ ಪರಿಣತರನ್ನು ನೇಮಿಸಿಕೊಳ್ಳುವ ಕೇಂದ್ರ ಸರಕಾರದ ನಿರ್ಧಾರ ಕ್ರಾಂತಿಕಾರಿ ಮಾತ್ರವಲ್ಲದೆ ಸಮಯೋಚಿತವೂ ಆಗಿದೆ. ಲ್ಯಾಟರಲ್‌ ಸ್ಕೀಂ ಎನ್ನಲಾಗಿರುವ ಈ ಕಾರ್ಯಕ್ರಮದಡಿ ಸರಕಾರ ಜಂಟಿ ಕಾರ್ಯದರ್ಶಿ ದರ್ಜೆಯ ಹತ್ತು ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ನಾಗರಿಕ ವಿಮಾನಯಾನ, ವಾಣಿಜ್ಯ, ಆರ್ಥಿಕ ವ್ಯವಹಾರ ಸೇರಿದಂತೆ ಹತ್ತು ಕ್ಷೇತ್ರಗಳ ಪೈಕಿ ಯಾವುದಾದರೊಂದರಲ್ಲಿ 15 ವರ್ಷದ ಪರಿಣತಿ ಹೊಂದಿರುವ 40 ವರ್ಷ ಮೇಲ್ಪಟ್ಟವರು ಈ ಹುದ್ದೆಗಳಿಗೆ ಅರ್ಹರಾಗುತ್ತಾರೆ. ಅಭಿವೃದ್ಧಿಯಲ್ಲಿ ಹೊಸ ಶಕೆಯತ್ತ ಮುಖಮಾಡಿರುವ ಈ ಸ್ಥಿತ್ಯಂತರದ ಸಮಯದಲ್ಲಿ ದೇಶದಲ್ಲಿರುವ ಅತ್ಯುತ್ತಮ ಪ್ರತಿಭೆಗಳನ್ನು ಸರಕಾರಿ ಯಂತ್ರದ ಭಾಗವಾಗಿ ಮಾಡಿಕೊಳ್ಳುವುದು ಸಮಯೋಚಿತ ನಿರ್ಧಾರ. 

Advertisement

ಕಂದಾಯ, ಹಣಕಾಸು, ವಾಣಿಜ್ಯ, ಕೃಷಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು, ಪರಿಸರ, ಇಂಧನ, ನಾಗರಿಕ ವಿಮಾನಯಾನ ಹೀಗೆ ಸಾಕಷ್ಟು ಮಹತ್ವ ಇರುವ ಇಲಾಖೆಗಳನ್ನೇ ಸರಕಾರ ಈ ಹೊಸ ಪ್ರಯೋಗಕ್ಕೆ ಆರಿಸಿಕೊಂಡಿರುವುದು ಕೂಡ ಗಮನಾರ್ಹವಾದ ಅಂಶ. ನಾಗರಿಕ ವಿಮಾನಯಾನದಂಥ ಇಲಾಖೆಗಳಿಗೆ ಈಗ ಹೊಸ ಚೈತನ್ಯ ತುಂಬುವುದು ಅನಿವಾರ್ಯ. ಒಂದೆಡೆ ಖಾಸಗಿ ವಿಮಾನಯಾನ ಕಂಪೆನಿಗಳು ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದೆ. ಖಾಸಗಿಯವರಿಗೆ ಸಾಧ್ಯವಾದ ಈ ಸಾಧನೆ ಸರಕಾರಕ್ಕೆ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಈ ನೇಮಕಾತಿಯಿಂದ ಉತ್ತರ ಸಿಗಲೂಬಹುದು. ಹಾಗೆಂದು ಇದು ಮೋದಿ ಸರಕಾರದ ಪರಿಕಲ್ಪನೆಯಂತೂ ಅಲ್ಲ. ಈ ಮೊದಲೇ ಹೀಗೊಂದು ಪ್ರಸ್ತಾವ ಇದ್ದರೂ ವಿವಿಧ ಕಾರಣಗಳಿಗಾಗಿ ಅದನ್ನು ಅನುಷ್ಠಾನಿಸುವ ದಿಟ್ಟತನವನ್ನು ಹಿಂದಿನ ಸರಕಾರಗಳು ತೋರಿಸಿರಲಿಲ್ಲ. ಆದರೆ ವಿರಳವಾಗಿ ಇಂಥ ಪ್ರಯತ್ನಗಳಾಗಿವೆ ಹಾಗೂ ಅದರಿಂದ ತೃಪ್ತಿಕರ ಫ‌ಲಿತಾಂಶ ಸಿಕ್ಕಿದೆ. ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯ, ವಿಜಯ್‌ ಕೇಳ್ಕರ್‌, ಅರವಿಂದ ಸುಬ್ರಹ್ಮಣಿಯನ್‌, ನಂದನ್‌ ನಿಲೇಕಣಿಯಂಥ ಉದಾಹರಣೆಗಳು ನಮ್ಮ ಮಂದಿವೆ. 

ಈ ನಿರ್ಧಾರದಿಂದ ಸರಕಾರದ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಬದಲಾವಣೆ  ನಿರೀಕ್ಷಿಸಬಹುದು. ದೇಶದ ಕಾರ್ಯಾಂಗ ಬ್ರಿಟಿಷರ ಪಳೆಯುಳಿಕೆಯಂತೆಯೇ ಕಾರ್ಯ ನಿರ್ವಹಿಸುತ್ತಿದೆ ಎಂಬ ಟೀಕೆಗಳಿವೆ. ಉದಾರೀಕರಣದ ವೇಗಕ್ಕೆ ಹೊಂದಿಕೊಳ್ಳಲು ಕಾರ್ಯಾಂಗದಿಂದ ಸಾಧ್ಯವಾಗಿಲ್ಲ. ಸರಕಾರವೇನೋ ಉತ್ತಮ ಯೋಜನೆಗಳನ್ನು ರೂಪಿಸುತ್ತದೆ. ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಾಂಗ ನಿರೀಕ್ಷಿತ ಮಟ್ಟದಲ್ಲಿ ಸಫ‌ಲವಾಗದಿರುವುದರಿಂದ ಅಭಿವೃದ್ಧಿಯ ಅನುಭವಗಳು  ಜನ ಸಾಮಾನ್ಯರಿಗೆ ಆಗುತ್ತಿಲ್ಲ. ಈಗಲೂ ದೇಶ ನಡೆಯುತ್ತಿರುವುದು ಐಎಎಸ್‌ ಅಧಿಕಾರಿಗಳಿಂದ. ಅವರು ಅತಿ ಕಠಿನ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬಂದಿರುತ್ತಾರಾದರೂ ಸರಕಾರಿ ಯಂತ್ರದ ಭಾಗವಾದ ಬಳಿಕ ಹೆಚ್ಚಿನವರು ಜಡವಾಗುತ್ತಾ ಹೋಗುತ್ತಾರೆ. ಸರಕಾರದ ಈಗಿನ ನಿರ್ಧಾರ ಐಎಎಸ್‌ ಪರಂಪರೆಗೆ ಪರ್ಯಾಯ ವ್ಯವಸ್ಥೆಯಾಗುವ ಅವಕಾಶವಿದೆ.  

ಲ್ಯಾಟರಲ್‌ ಸ್ಕೀಂನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗುವುದರಿಂದ ದೇಶಕ್ಕೆ ಅಂಟಿಕೊಂಡಿರುವ ಕೆಂಪುಪಟ್ಟಿಯ ಕಳಂಕ ನಿವಾರಣೆಯಾಗಲು ಸಹಕಾರಿ. ಅಂತೆಯೇ ನೇಮಕವಾದ ವ್ಯಕ್ತಿಗೆ ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆಯೂ ಇದೆ. ಇಲ್ಲದಿದ್ದರೆ ಆ ಸ್ಥಾನಕ್ಕೆ ಬರಲು ಇನ್ನೋರ್ವ ವ್ಯಕ್ತಿ ತಯಾರಾಗಿರುತ್ತಾನೆ. ಇದು ಒಂದು ರೀತಿಯಲ್ಲಿ ಸರಕಾರಿ ಇಲಾಖೆಗಳಿಗೆ ಕಾರ್ಪೊರೇಟ್‌ ಸಂಸ್ಕೃತಿಯನ್ನು ತಂದಂತೆ. ಕಾರ್ಪೋರೇಟ್‌ ಸಂಸ್ಕೃತಿಯಲ್ಲಿ ಕಾರ್ಯಕ್ಷಮತೆಯೇ ಸಾಧನೆಯ ಮಾನದಂಡ. ಸಾಧಿಸಲಾಗದವ ಅಲ್ಲಿ ನೇಪಥ್ಯಕ್ಕೆ ಸರಿಯುತ್ತಾನೆ. ಲ್ಯಾಟರಲ್‌ ಸ್ಕೀಂ ಮೂಲಕ ಜಂಟಿ ಕಾರ್ಯದರ್ಶಿಗಳನ್ನು ನೇಮಿಸು ವುದರಿಂದ ಸಿಬಂದಿಗಳಲ್ಲೂ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಕೆಲಸ ಮಾಡದೆ ಕಾಲಹರಣ ಮಾಡುವವರೂ ಕೆಲಸ ಮಾಡಿ ತೋರಿಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. 

ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪೆಪ್ಸಿ, ಗೂಗಲ್‌, ಮೈಕ್ರೋಸಾಫ್ಟ್, ಮಾಸ್ಟರ್‌ ಕಾರ್ಡ್‌, ಅಡೋಬ್‌ ಸಿಸ್ಟಂನಂತಹ ಬಹುರಾಷ್ಟ್ರೀಯ ಕಂಪೆನಿಗಳ ಉನ್ನತ ಹುದ್ದೆಗಳಿಗೂ ಪ್ರತಿಭಾವಂತರನ್ನು ನೀಡಿದ ದೇಶ ನಮ್ಮದು. ಈ ಪೈಕಿ ಅನೇಕ ಮಂದಿ ಆಡಳಿತದಲ್ಲಿ ಸಹಭಾಗಿಗಳಾಗುವ ಉತ್ಸುಕತೆಯನ್ನೂ ಹೊಂದಿದ್ದಾರೆ. ಇಲಾಖೆಗಳಲ್ಲಿರುವ ಐಎಎಸ್‌ ಏಕಸ್ವಾಮ್ಯ ಹೋಗ ಬೇಕಾದರೆ ಅಲ್ಲಿ ಸ್ಪರ್ಧಾತ್ಮಕ ವಾತಾವರಣ ಮೂಡಿಸುವುದು ಅಗತ್ಯ. ಆದರೆ ಖಾಸಗಿ ಪರಿಣತರ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಮತ್ತು ರಾಜಕೀಯ ಲಾಭದ ಉದ್ದೇಶಗಳಿರಬಾರದು. ನೇಮಕಾತಿ ಪ್ರಕ್ರಿಯೆ ಪಾರದರ್ಶಕ ವಾಗಿದ್ದರೆ ಇದರಿಂದ ದೇಶಕ್ಕೆ ಲಾಭವೇ ಆಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next