Advertisement

ಉದ್ಯಮಿಗಳಿಗೆ ಸರ್ಕಾರದ ಬೆಂಬಲ; ಸಚಿವ ಕೋಟ ಶ್ರೀನಿವಾಸ ಪೂಜಾರಿ

05:24 PM Sep 29, 2021 | Team Udayavani |

ಕಲಬುರಗಿ: ಕೋವಿಡ್‌ನಿಂದಾಗಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ವಾಣಿಜ್ಯೋದ್ಯಮಿಗಳ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತದೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಹೋಟೆಲ್‌-ಬೇಕರಿ, ವಸತಿಗೃಹಗಳ ಮಾಲೀಕರ ಸಂಘ, ದಕ್ಷಿಣ ಕನ್ನಡ ಸಂಘವು ಇಲ್ಲಿನ ಆಮಂತ್ರಣ ಸಭಾಂಗಣದಲ್ಲಿ ಏರ್ಪಡಿಸಿದ್ದ “ಕರಾವಳಿ ಉದ್ಯಮಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೋವಿಡ್‌ ನಿಯಮ ಜಾರಿ ವೇಳೆ ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಉದ್ಯಮಿ ವಿರೋಧಿ  ಆದೇಶ ರಿ ಮಾಡಿದ ಬಗ್ಗೆ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೇ ಅಗತ್ಯಬಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ತಿದ್ದುಪಡಿಗೆ ಸಹಕರಿಸಲಾಗುವುದು. ಉದ್ಯಮಿಗಳಿಗೆ ತೊಂದರೆ ಕೊಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟಚಾರ ಮುಕ್ತ ಮತ್ತು ಅಭಿವೃದ್ಧಿ ಪರ ಆಡಳಿತಕ್ಕೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆದ್ಯತೆ ನೀಡುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡಿದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಧಿ ಕಾರ, ಅಂತಸ್ತು ಜನಸಾಮಾನ್ಯರ ಬದುಕಿನ ಶ್ರೇಯಸ್ಸಿಗೆ ಇರಬೇಕು. ಸ್ವಹಿತಕ್ಕಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕು. ಬದಲಾವಣೆಗೆ ಎಲ್ಲರೂ ಕೈಜೋಡಿಸಬೇಕು. ಸಂವಿಧಾನದ 370ನೇ
(ಜೆ) ವಿಧಿ  ತಿದ್ದುಪಡಿ, ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಆಡಳಿತ, ರಾಷ್ಟ್ರಧ್ವಜಕ್ಕೆ ಗೌರವ, ಕಾಶ್ಮೀರಿ ಪಂಡಿತರಿಗೆ ಪುನರ್‌ ವಸತಿಯಂಥಹ ಉತ್ತಮ ಬದಲಾವಣೆಗೆ ನಾಂದಿ ಹಾಡುವ ಯೋಜನೆ ಜಾರಿಮಾಡಿ ಪ್ರಧಾನಿಯವರು ಜಗತ್ತಿನ ನಾಯಕರಾಗಿ ಬೆಳೆದಿದ್ದಾರೆ. ಇದ್ದೆಲ್ಲವೂ ಪಕ್ಷದ ಸಾಧನೆಯಲ್ಲ, ರಾಷ್ಟ್ರದ ಸಾಧನೆ ಎಂದು ಕೊಂಡಾಡಬೇಕು ಎಂದರು.

ಕರಾವಳಿ ಉದ್ಯಮಿಗಳೊಂದಿಗೆ ಸಂವಾದದಲ್ಲಿ ಹೈದ್ರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಪ್ರಶಾಂತ ಮಾನಕರ್‌ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗವು ಪ್ರವಾಸೋದ್ಯಮ ಕೇಂದ್ರವಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಅಗತ್ಯ. ಕರಾವಳಿ ಉದ್ಯಮಿಗಳು ಈ ಭಾಗದಲ್ಲಿ ಆರ್ಥಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಮಹಾನ್‌ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

Advertisement

ಕೋವಿಡ್‌ ಸಂದರ್ಭದಲ್ಲಿ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ಹೋಟೆಲ್‌, ಬೇಕರಿ ಮತ್ತು ವಸತಿ ಮಾಲೀಕರ ಹಿತಕಾಯಲು ಸರ್ಕಾರವು ಉದಾರ ನೀತಿ ಜಾರಿಗೊಳಿಸಿ ನೆರವಾಗುವುದಲ್ಲದೇ ಪ್ಯಾಕೇಜ್‌ ನೀಡಿ ಸಹಕರಿಸಬೇಕು. ವಿದ್ಯುತ್‌ ಹಾಗೂ ವಿವಿಧ ಪರವಾನಗಿ ಶುಲ್ಕ ವಿನಾಯಿತಿ ಘೋಷಿಸಬೇಕು ಎಂದು ಸಂಘದ ಕಾರ್ಯದರ್ಶಿ ನರಸಿಂಹ ಮೆಂಡನ್‌ ಒತ್ತಾಯಿಸಿದರು.

ಕಳೆದ ಸೆ. 13ರಂದು ಜಿಲ್ಲಾಧಿಕಾರಿಗಳು ಜಿಲ್ಲೆಗೆ ಸೀಮಿತವಾಗಿ ಹೊರಡಿಸಿದ ಕೋವಿಡ್‌ ನಿರ್ಬಂಧ ಆದೇಶದಲ್ಲಿ ಬಾರ್‌ ಮತ್ತು ವೈನ್ಸ್‌ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಪ್ರಕರಣ 0.03 ರಷ್ಟಿರುವ ಕಲಬುರಗಿಯಲ್ಲಿ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯ ವರೆಗೆ ಪಾರ್ಸೆಲ್‌ ಗೆ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಆರ್ಥಿಕವಾಗಿ ಬಹುದೊಡ್ಡ ಹೊಡೆತ ಬಿದ್ದಿದೆ. ಬಾರ್‌, ವೈನ್‌ ಶಾಪ್‌ ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತೀವ್ರ ತೊಂದರೆ ಕೊಡುತ್ತಿದ್ದಾರೆ. ತಕ್ಷಣ ಸರ್ಕಾರ ಗಮನಹರಿಸಬೇಕು ಎಂದು ಜಿಲ್ಲಾ ವೈನ್‌ ಮರ್ಚಂಟ್ಸ್‌ ಅಸೋಸಿಯೇಶನ್‌ನ ಪ್ರವೀಣ ಜತ್ತನ್‌ ಆಗ್ರಹಿಸಿದರು.

ಶಾಸಕರಾದ ಡಾ| ಅವಿನಾಶ ಜಾಧವ, ಬಸವರಾಜ ಮತ್ತಿಮಡು, ವಿಧಾನಪರಿಷತ್‌ ಸದಸ್ಯರಾದ ಶಶಿಲ್‌ ಜಿ. ನಮೋಶಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ನಗರಾಧ್ಯಕ್ಷ ಸಿದ್ಧಾಜಿ ಪಾಟೀಲ, ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ, ವೆಂಕಟೇಶ ಕಡೇಚೂರ್‌, ಮಹಾದೇವ ಗುತ್ತೇದಾರ, ವೀರಯ್ಯ ಗುತ್ತೇದಾರ, ಸುದರ್ಶನ್‌ ಜತ್ತನ್‌, ಮಿಲಿತ್‌ ಹೆಗ್ಡೆ, ಸುನೀಲ ಶೆಟ್ಟಿ, ಸಂತೋಷ ಪೂಜಾರಿ, ಸತ್ಯ, ಕಿರಣ್‌ ಜತ್ತನ್‌, ಮಲ್ಲಯ್ಯ ಗುತ್ತೇದಾರ, ಶರಣಯ್ಯ ಗುತ್ತೇದಾರ, ತಿಮ್ಮಪ್ಪ ಗಂಗಾವತಿ, ರಾಜೇಶ ಬಿ. ಗುತ್ತೇದಾರ, ರಾಮಕೃಷ್ಣ ಕೆದಿಲಾಯ, ಹೈದ್ರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಂಘದ ಗೌರವ ಕಾರ್ಯದರ್ಶಿ ಶರಣು ಪಪ್ಪಾ, ಅನಿಲ ಯರಗೋಳ, ಚಂದ್ರಶೇಖರ ಶೆಟ್ಟಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next