Advertisement

ರೈತನ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ: ರೈತರ ಆರೋಪ

05:48 PM Apr 22, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಕೊನಘಟ್ಟ ಗ್ರಾಮದ ರೈತ ಹನುಮಂತಗೌಡ ಆತ್ಮಹತ್ಯೆಗೆ ಸರ್ಕಾರವೇ ಕಾರಣವಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೆ ಬಲವಂತದ ಭೂಸ್ವಾಧೀನ ಮಾಡಿಕೊಳ್ಳ ಬಾರದು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತಾಲೂಕಿನ ಆದಿನಾರಾಯಣ ಹೊಸಹಳ್ಳಿ, ಕೊಡಿಹಳ್ಳಿ ಕೊನಘಟ್ಟ ಗ್ರಾಮದ 1,034 ಎಕರೆ ಕೃಷಿ ಜಮೀನಲ್ಲಿ ಕೈಗಾರಿಕಾ ವಲಯಕ್ಕಾಗಿ ಭೂಸ್ವಾಧೀನ ಮಾಡಲು ಸರ್ಕಾರ ಮುಂದಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಪಿ) ಕೊನಘಟ್ಟದ ಗ್ರಾಮದ ಹನುಮಂತಗೌಡರವರಿಗೆ ಭೂಸ್ವಾಧೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಿತ್ತು.

ನೋಟಿಸ್‌ ಬಂದ ಒಂದು ವಾರದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದ ಹನುಮಂತಗೌಡ, ತನ್ನ ಎರಡು ಎಕರೆ 20 ಗುಂಟೆ ಜಮೀನು ಉಳಿಸಿಕೊಳ್ಳಲು ಜನಪ್ರತಿನಿಧಿ ಭೇಟಿ ಮಾಡಿ ನೋವು ತೊಡಿಕೊಂಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ: ಇಲ್ಲಿನ ರೈತರು ಫಲವತ್ತಾದ ಕೃಷಿ ಭೂಮಿಯಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಪೂರ್ವಜರ ಸಮಾಧಿ ಹೊಲದಲ್ಲಿಯೇ ಇವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಲಗಳಲ್ಲಿ ಮನೆ ಕಟ್ಟಿದ್ದಾರೆ. ಈಗ ಏಕಾಏಕಿ ಜಮೀನು ಸ್ವಾಧೀನಕ್ಕೆ ಮುಂದಾ ಗಿರುವುದು ಸರಿಯಲ್ಲ. ಸರ್ಕಾರ ಬಲವಂತವಾಗಿ ಭೂಸ್ವಾಧೀನ ಮಾಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಪ್ರವೀಣ್‌ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ರೈತ ಹನುಮಂತಗೌಡ ಆತ್ಮಹತ್ಯೆಗೆ ಸರ್ಕಾರವೇ ನೇರ ಕಾರಣ. ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ರೈತರಿಂದ ವಶಪಡಿಸಿಕೊಂಡಿರುವ ಜಮೀನಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗದೆ ಪಾಳು ಬಿದ್ದಿವೆ. ಈಗ ಹೊಸದಾಗಿ ಕೈಗಾರಿಕಾ ಸ್ಥಾಪನೆಗಾಗಿ ಭೂಸ್ವಾಧೀನಕ್ಕಾಗಿ ಸರ್ಕಾರ ಮುಂದಾಗಿದೆ. ಅಂಗೈ ಅಗಲದ ಜಮೀನು ಇಟ್ಟುಕೊಂಡು ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ರೈತರನ್ನು ಸರ್ಕಾರ ಬೀದಿಪಾಲು ಮಾಡುತ್ತಿದೆ ಎಂದರು.

Advertisement

ಸರ್ಕಾರಕ್ಕೆ ವರದಿ ಸಲ್ಲಿಸುವೆ: ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಮೋಹನ ಕುಮಾರಿ ಮಾತನಾಡಿ, ಭೂಸ್ವಾಧೀನದ ಕಾರಣಕ್ಕಾಗಿ ರೈತ ಹನುಮಂತಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೃತ ರೈತನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.

ಭೂಸ್ವಾಧೀನ ಆತಂಕ: ರೈತ ಆತ್ಮಹತ್ಯೆ
ದೊಡ್ಡಬಳ್ಳಾಪುರ: ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನ ಮಾಡಿಕೊಳ್ಳಲು ನೋಟಿಸ್‌ ಬಂದ ಹಿನ್ನೆಲೆ, ಆತಂಕಕ್ಕೆ ಒಳಗಾದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕು ಕೊನಘಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ರೈತ ಹನುಮಂತೇಗೌಡ(65) ಹೊಲದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಈತನಿಗೆ ಮಡದಿ ಮತ್ತು ನಾಲ್ಕು ಮಕ್ಕಳಿದ್ದಾರೆ. ಕೊನಘಟ್ಟದಲ್ಲಿ 2.5 ಎಕರೆ ಜಮೀನನ್ನು ಹೊಂದಿದ್ದ ಹನು ಮಂತೇಗೌಡನಿಗೆ, ಕೈಗಾರಿಕಾ ಪ್ರದೇಶ ನಿರ್ಮಾಣ ಪ್ರಕ್ರಿಯೆಗೆ ಸ್ವಾಧೀನಪಡಿಸಿ ಕೊಳ್ಳಲು ಅಷ್ಟು ಜಮೀನಿಗೆ ನೋಟಿಸ್‌ ನೀಡಿದ್ದರಿಂದ ಆತಂಕಗೊಂಡು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next