Advertisement

ಸರ್ಕಾರಿ ನೌಕರರಿಗೆ ಭದ್ರತೆ ನೀಡಿ

02:44 PM Jul 11, 2020 | Suhan S |

ಬಾಗಲಕೋಟೆ: ರಾಜ್ಯ ಸರ್ಕಾರಿ ನೌಕರರು ನಿತ್ಯ ಭಯದಲ್ಲೇ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಸರ್ಕಾರ ನೌಕರರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಸರ್ಕಾರಿ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಡಾ|ಕೆ. ರಾಜೇಂದ್ರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಎಂ.ಬಿ ಬಳ್ಳಾರಿ ಮಾತನಾಡಿ, ಕೊಲ್ಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್‌ ಬಿ.ಕೆ ಚಂದ್ರಮೌಳೇಶ್ವರ ಅವರು ತಾಲೂಕಿನ ಗ್ರಾಮದ ರಾಮಮೂರ್ತಿ ಹಾಗೂ ವೆಂಕಟಪತಿ ಎಂಬುವವರ ಜಮೀನಿನ ವ್ಯಾಜ್ಯದ ಕುರಿತ ಜಂಟಿ ಸರ್ವೇ ಕಾರ್ಯನಿರತರಾಗಿದ್ದ ವೇಳೆ ಆರೋಪಿ ವೆಂಕಟಪತಿ ಎಂಬಾತ ಪೊಲೀಸರ ಸಮ್ಮುಖದಲ್ಲೇ ತಹಶೀಲ್ದಾರ್‌ ಅವರನ್ನು ಹತ್ಯೆ ಮಾಡಿದ್ದಾನೆ. ಈ ಘಟನೆಯನ್ನು ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆಯಿಂದ ನೌಕರರು, ಭಯದಲ್ಲಿ ಕೆಲಸ ಮಾಡುವಂತಾಗಿದ್ದು, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಇಂತಹ ಅನೇಕ ಘಟನೆಗಳು ಸಂಭವಿಸುತ್ತಿವೆ. ತಹಶೀಲ್ದಾರರನ್ನು ಹತ್ಯೆ ಮಾಡಿದ ಆರೋಪಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯಾದ್ಯಂತ ಸರ್ಕಾರಿ ನೌಕರರು, ಅಧಿಕಾರಿಗಳು ನಿರ್ಭೀತಿಯಿಂದ ಕೆಲಸ ಮಾಡುವಂತೆ ಅಗತ್ಯ ರಕ್ಷಣೆ ಕ್ರಮ ಕೈಗೊಳ್ಳಬೇಕು. ಹತ್ಯೆಯಾದ ತಹಶೀಲ್ದಾರರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಬೇಕು. ಮೃತರ ಕುಟುಂಬದ ಓರ್ವ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕೊಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಎಸ್‌.ವಿ. ಸತ್ಯರಡ್ಡಿ, ಶಶಿಕಾಂತ ಪೂಜಾರಿ, ಬಿ.ಟಿ. ಕವಳ್ಳಿ, ಸಿ.ಬಿ. ಕಲ್ಲೂರ, ಎಸ್‌.ಎ. ಸಾರಂಗಮಠ, ಎಸ್‌.ಕೆ. ಹಿರೇಮಠ, ವಿಠuಲ ವಾಲಿಕಾರ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next