Advertisement

ಸಿಎಂ ಆಪ್ತರಿಂದ ಆಡಳಿತ ದುರುಪಯೋಗ

09:15 AM Aug 11, 2019 | Suhan S |

ಹುಬ್ಬಳ್ಳಿ: ಏಕವ್ಯಕ್ತಿ ಸರಕಾರದಲ್ಲಿ ಸಚಿವರು ಇಲ್ಲದ ಕಾರಣ ಮುಖ್ಯಮಂತ್ರಿ ಬೆಂಬಲಿಗರಿಂದ ಅಧಿಕಾರ ದುರುಪಯೋಗ ನಡೆಯುತ್ತಿದ್ದು, ದೊಡ್ಡಮಟ್ಟದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿಗಳ ಆಪ್ತರೊಬ್ಬರು ನೀರಾವರಿ ಇಲಾಖೆ ಗುತ್ತಿಗೆದಾರರನ್ನು ಕರೆದು ಸಭೆ ಮಾಡಿದ್ದಾರೆ. ಅವರೇನು ರಾಜಕಾರಣಿಗಳಲ್ಲ. ಯಾರಿಗೂ ಅಧಿಕಾರ ಕೊಡದೆ ಎಲ್ಲ ಇಲಾಖೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಒಳಮರ್ಮವೇ ಬೇರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ನೆರೆ ಹಾವಳಿ ಉಂಟಾಗಿ ಲಕ್ಷಾಂತರ ಜನರು ಬದುಕು ಕಳೆದುಕೊಂಡಿದ್ದಾರೆ. ಆದರೆ ಕೇಂದ್ರದಿಂದ ಸೂಕ್ತ ಸ್ಪಂದನೆ ಇಲ್ಲ. ಪ್ರಧಾನಿಗಳಂತೂ ತುಟಿ ಬಿಚ್ಚುತ್ತಿಲ್ಲ. ಪ್ರಧಾನಿಗಳನ್ನು ಒತ್ತಾಯಿಸುವ ಕೆಲಸ ರಾಜ್ಯದ ಕೇಂದ್ರ ಸಚಿವರಿಂದ ಆಗದಿರುವುದು ವಿಪರ್ಯಾಸ. ಕೂಡಲೇ ಪ್ರಸ್ತುತ ಪ್ರವಾಹ ಸ್ಥಿತಿಯನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ಎಂದು ಘೋಷಿಸಬೇಕು. ರಾಜ್ಯಕ್ಕೆ ತಕ್ಷಣಕ್ಕೆ ಐದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಯಾರಿಗೂ ಅಧಿಕಾರ ಕೊಡದೆ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಓಡಾಡಲಿಕ್ಕೆ ಇವರೇನು ಸೂಪರ್‌ಮ್ಯಾನ್‌ ಅಂತೂ ಅಲ್ಲ. ಇದು ತೋರಿಕೆಯ ಸಮೀಕ್ಷೆ ಎಂದು ಜರಿದರು.

ಸಿದ್ದರಾಮಯ್ಯ ಬರುತ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಪರೇಷನ್‌ ಆಗಿದೆ. ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ದೆಹಲಿಯಲ್ಲಿ ಕಾರ್ಯಕಾರಣಿ ಸಭೆ ಇರುವುದರಿಂದ ಅಲ್ಲಿಗೆ ತೆರಳಿದ್ದಾರೆ. ಅಲ್ಲಿಂದ ಬರುತ್ತಿದ್ದಂತೆ ಈ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಕೆಪಿಸಿಸಿ ಎರಡು ತಂಡಗಳು ರಾಜ್ಯದ ಪ್ರವಾಸ ಮಾಡುತ್ತಿದ್ದು, ಜನತೆ ಕಣ್ಣೀರೊರೆಸುವ ಕೆಲಸ ಮಾಡುತ್ತಿವೆ. ನೆರೆ ಸಮಗ್ರ ಮಾಹಿತಿ ಸಂಗ್ರಹಿಸಿ ರಾಜ್ಯ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಆಗಮಿಸುತ್ತಿರುವುದನ್ನು ಸ್ವಾಗತಿಸುತ್ತೇನೆ. ಅವರ ಭೇಟಿ ರಾಜ್ಯದ ಜನತೆಯಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕಾಟಾಚಾರಕ್ಕೆ ಸಮೀಕ್ಷೆ ಮಾಡದೆ ರಾಜ್ಯದಲ್ಲಿ ನಷ್ಟವಾಗಿರುವುದಕ್ಕೆ ಸೂಕ್ತ ಅನುದಾನ ರಾಜ್ಯದಲ್ಲೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ತನಿಖೆಯಾಗಲಿ: ಮೋಡ ಬಿತ್ತನೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅನುಮಾನವಿದ್ದರೆ ತನಿಖೆಯಾಗಲಿ ಎಂದು ಸವಾಲೆಸೆದರು. ಹುಬ್ಬಳ್ಳಿಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಪಸಂಖ್ಯಾತ, ದಲಿತರ ಪ್ರದೇಶಗಳಿಗೆ ಸ್ಥಳೀಯ ಬಿಜೆಪಿ ಶಾಸಕರು ಭೇಟಿ ನೀಡದಿರುವುದು ಗಮನಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜ್ಯ ಸರಕಾರದಿಂದ ಎಲ್ಲರೂ ಒಂದೇ ಎಂಬ ಮಾನವೀಯತೆ ಮೇಲೆ ಪರಿಹಾರ ಕಾರ್ಯ ಆಗಬೇಕಿದೆ ಎಂದು ಹೇಳಿದರು.

ನೆರೆ ಪೀಡಿತ ಪ್ರದೇಶಗಳಿಗೆ ದಿನೇಶ ಭೇಟಿ: ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಶನಿವಾರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.

ಹುಬ್ಬಳ್ಳಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ನೆರೆ ಸಂತ್ರಸ್ತರ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವೀಕ್ಷಿಸುವ ಜವಾಬ್ದಾರಿಯುತ ಕಾರ್ಯವನ್ನು ವಿಪಕ್ಷವಾಗಿ ಕಾಂಗ್ರೆಸ್‌ ಮಾಡುತ್ತಿದೆ. ಈಗಾಗಲೇ ಕೆಪಿಸಿಸಿಯ ಎರಡು ತಂಡಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರಕಾರದಿಂದ ಆಗಬೇಕಾದ ಕಾರ್ಯಗಳ ಕುರಿತು ಅಧ್ಯಯನ ಮಾಡಲಾಗುತ್ತಿದೆ ಎಂದರು.

ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ನೆರೆ ಉಂಟಾಗಿ ಸಾಕಷ್ಟು ನಷ್ಟವಾಗಿದೆ. ಕೂಡಲೇ ಸರಕಾರ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು. ಮನೆ, ಬೆಳೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗಿದೆ. ನಿಮ್ಮ ಪರ ಧ್ವನಿಯಾಗಿ ಕಾಂಗ್ರೆಸ್‌ ಪಕ್ಷವಿದೆ, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ: ಪ್ರವಾಹ ಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಗಳೆಲ್ಲವನ್ನು ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ. ಅಧಿಕಾರಿಗಳೇ ನೋಡಿಕೊಳ್ಳುವುದಾದರೆ ಮಂತ್ರಿಮಂಡಲ ಯಾಕೆ ಬೇಕು? ಮುಖ್ಯಮಂತ್ರಿಯೊಬ್ಬರಿಂದಲೇ ಸರಕಾರದ ಆಡಳಿತ ನಡೆಯಲಿ. ಸಚಿವರು ಇಲ್ಲದ ಕಾರಣ ಏಕವ್ಯಕ್ತಿಯ ಸರಕಾರದಲ್ಲಿ ಎಲ್ಲ ದಂಧೆಗಳು ಭರ್ಜರಿಯಾಗಿ ನಡೆಯುತ್ತಿವೆ. ಅತೃಪ್ತ ಶಾಸಕರನ್ನು ತೃಪ್ತಿಪಡಿಸುವುದಕ್ಕಾಗಿಯೇ ಸಚಿವ ಸಂಪುಟ ರಚನೆಗೆ ಕಾಯುತ್ತಿರಬಹುದು ಎಂದೆನ್ನಿಸುತ್ತಿದೆ ಎಂದು ಆರೋಪಿಸಿದರು.

•41 ಲಕ್ಷ ದೇಣಿಗೆ: ಕೆಪಿಸಿಸಿಯಿಂದ ಸಂಗ್ರಹಿಸಿದ 41 ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಹಾರ ನಿಧಿಗೆ ನೀಡಿದ್ದೇವೆ ಎಂದರು.

ಹಳೇ ಹುಬ್ಬಳ್ಳಿಯಲ್ಲಿ ನೆರೆ ಪೀಡಿತ ಗೌಸಿಯಾ ನಗರ, ಸದರಸೋಫಾ, ಕುಂಬಾರ ಓಣಿಗೆ ಭೇಟಿಕೊಟ್ಟು ಪರಿಶೀಲಿಸಿದರು. ಜೊತೆಗೆ ಸಂತ್ರಸ್ತ ಕುಟುಂಬಗಳಿಗೆ ಹೊದಿಕೆ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next