Advertisement

ಗೋರೆಗಾಂವ್‌ ಕರ್ನಾಟಕ ಸಂಘದ 61ನೇ ನಾಡಹಬ್ಬಕ್ಕೆ ಚಾಲನೆ

05:52 PM Oct 23, 2018 | Team Udayavani |

ಮುಂಬಯಿ: ವಿಶ್ವದಲ್ಲಿ ಹಿಂದೂಸ್ಥಾನದ ಸಂಸ್ಕೃತಿಯೇ ಶ್ರೇಷ್ಟವಾಗಿದೆ. ಆದ್ದರಿಂದ ಭಾರತೀಯ ಕಲೆ, ಸಂಸ್ಕೃತಿ ಜಗತ್ತಿಗೇ ಮಾದರಿಯಾಗಿದೆ.  ಈ ಎಲ್ಲಾ ಕಲೆ, ಸಂಸ್ಕೃತಿಯ ಮೂಲ ಯಕ್ಷಗಾನವಾಗಿದೆ. ನೂರಾರು ವರ್ಷಗಳ ಇತಿಹಾಸವುಳ್ಳ ಯಕ್ಷಗಾನವು ಎಲ್ಲಾ ಸಂಸ್ಕೃತಿಗಳ ತಳಪಾಯ ಇದ್ದಂತೆ. ಯಾವುದೇ ವಿಶ್ವವಿದ್ಯಾಲಯಗಳು ಕಲೆ, ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ನೀಡುವ ಅಧ್ಯಾಯನಗಳಲ್ಲಿ ಯಕ್ಷಗಾನ ಪ್ರಧಾನವಾಗಿದೆ ಎಂದು ಬಂಟ್ಸ್‌ ಸಂಘ ಮುಂಬಯಿ  ಸಂಚಾಲಕತ್ವದ ಎಸ್‌. ಎಂ. ಶೆಟ್ಟಿ ಕಾಲೇಜು ಪೊವಾಯಿ ಇದರ ಪ್ರಾಂಶುಪಾಲ ಶ್ರೀಧರ್‌ ಎಸ್‌. ಶೆಟ್ಟಿ ಅವರು ನುಡಿದರು.

Advertisement

ಅ.22 ರಂದು ಗೋರೆಗಾಂವ್‌ ಪಶ್ಚಿಮದ ಕೇಶವಗೋರೆ ಸ್ಮಾರಕ ಟ್ರಸ್ಟ್‌ ಸಭಾಗೃಹದಲ್ಲಿ ನಡೆದ ಗೋರೆಗಾಂವ್‌ ಕರ್ನಾಟಕ ಸಂಘದ 61 ನೇ ವಾರ್ಷಿಕ ನಾಡಹಬ್ಬ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಗೋರೆಗಾಂವ್‌ ಕರ್ನಾಟಕ ಸಂಘವು ನಾಡು-ನುಡಿಯ ಬಗ್ಗೆ ಹೊಂದಿರುವ ಅಭಿಮಾನ ಮೆಚ್ಚುವಂಥದ್ದಾಗಿದೆ. ಸಂಘವು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಸಲ್ಲಿಸುತ್ತಿರುವು ಸೇವೆ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ನುಡಿದು ಶುಭಹಾರೈಸಿದರು.

ಸಮಾರಂಭದಲ್ಲಿ ಅತಿಥಿ- ಗಣ್ಯರುಗಳಾಗಿ ಬೊಂಬೆ ಬಂಟ್ಸ್‌ ಅಸೋಸಿಯೇಶನ್‌ ಗೌರವ ಪ್ರಧಾನ ಕಾರ್ಯದರ್ಶಿ ಸಿಎ  ಸುರೇಂದ್ರ ಎಸ್‌. ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ, ಮನುಷ್ಯ ಜೀವನಕ್ಕೆ ಶಿಕ್ಷಣವೇ ಶಕ್ತಿಯಾಗಿದೆ. ಗುಣಮಟ್ಟದ  ಶಿಕ್ಷಣವು ಸಮಾಜೋದ್ಧಾರಕ್ಕೆ ಪ್ರಧಾನವಾಗಿದೆ. ನಾವು ಇದು ಮಕ್ಕಳಿಗೆ ಕನಿಷ್ಠ ಪ್ರಮಾಣದ ನೆರವಿನ ಮೂಲಕವಾದರೂ ಪ್ರೋತ್ಸಾಹಸುವ ಇಂತಹ  ಸೇವೆ  ಭವಿಷ್ಯತ್ತಿಗೆ ಒಳ್ಳೆಯ ಪೀಳಿಗೆಯನ್ನು ಸಿದ್ಧಪಡಿಸಲು ಪೂರಕವಾಗಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.
ಇನ್ನೋರ್ವೆ ಅತಿಥಿ ಲೇಖಕಿ-ಕವಯತ್ರಿ ಅರುಷಾ ಎನ್‌. ಶೆಟ್ಟಿ ಅವರು ಮಾತನಾಡಿ, ಗೋರೆಗಾಂವ್‌ ಕರ್ನಾಟಕ ಸಂಘವು ಮಹಾನಗರದ ಜನತೆಯ ಕಾರ್ಯಗಾರ ಇದ್ದಂತೆ. ಮುಂಬಯಿಯಲ್ಲಿ ಈ ಸಂಘಕ್ಕೆ ಮೀರಿದ ಸಂಸ್ಥೆ ಮತ್ತೂಂದಿಲ್ಲ. ಒಳ್ಳೆಯ ಉದ್ದೇಶವನ್ನಿಟ್ಟು ಪ್ರಯತ್ನ, ಪರಿಶ್ರಮದಿಂದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅದು ಫಲಪ್ರದವಾಗಿಯೆ ಮೂಡುತ್ತದೆ. ಎಂದಿಗೂ ಋಣಾತ್ಮಕ ಚಿಂತನೆ ಮೂಡಿಸಿಕೊಳ್ಳುವುದಕ್ಕಿಂತ ಧನಾತ್ಮಕ ಮನೋಭಾವದಿಂದ ಯೋಚಿಸಿ- ಆಯೋಜಿಸುವ ಯಾವುದೇ ಕಾಯಕಗಳು ಯಶಸ್ವಿಗೊಳ್ಳುವುದರಲ್ಲಿ ಸಂಶಯಿಲ್ಲ ಎಂದು ನುಡಿದರು.

ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಯಾಗಿ ಕ್ಯಾಟರಿಂಗ್‌ ಉದ್ಯಮಿ ಸತೀಶ್‌ ಜೆ. ಪೂಜಾರಿ ಭಾಯಂದರ್‌ ಮತ್ತಿತರರು ಉಪಸ್ಥಿತರಿದ್ದರು. 
ಸಂಘವು ವಾರ್ಷಿಕವಾಗಿ ಕೊಡಮಾಡುವ ದತ್ತಿನಿಧಿ ಬಹುಮಾನ‌, ವಿದ್ಯಾರ್ಥಿ ನೆರವನ್ನು ಸ್ಥಳಿಯ ಐಬಿ ಪಾಟೀಲ್‌ ಮುನ್ಸಿಪಾಲಿಟಿ ಶಾಲೆ, ಪಹಡಿ ಶಾಲೆ ಮತ್ತು ಸರಸ್ವತಿ ರಾತ್ರಿ ಶಾಲಾ ಮಕ್ಕಳಿಗೆ ಅತಿಥಿ-ಗಣ್ಯರು ಹಸ್ತಾಂತರಿಸಿ ಶುಭ ಹಾರೈಸಿದರು.
ಸಂಘದ ಮಾಜಿ ಅಧ್ಯಕ್ಷ ವಿ. ಪಿ. ಕೋಟ್ಯಾನ್‌, ಹಾಲಿ ಮಾಜಿ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು. ಸೀಮಾ ಕುಲಕರ್ಣಿ, ವೇದಾ ಶೆಟ್ಟಿ ಮತ್ತು ಪ್ರೀತಿ ಕುಡ್ವ ಪ್ರಾರ್ಥನೆಗೈದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಪದ್ಮಜಾ ಮಣ್ಣೂರು, ವಸಂತಿ ಕೋಟೆಕರ್‌, ವೇದಾ ಸುವರ್ಣ, ಸರಿತಾ ಸುರೇಶ್‌ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಮಾಜಿ ಅಧ್ಯಕ್ಷರುಗಳಾದ ಜಿ. ಟಿ. ಆಚಾರ್ಯ, ಪಯ್ನಾರು ರಮೇಶ್‌ ಶೆಟ್ಟಿ, ಶಕುಂತಳಾ ಆರ್‌. ಪ್ರಭು, ಎಸ್‌. ಎಂ. ಶೆಟ್ಟಿ ಅತಿಥಿಗಳಿಗೆ ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಜಯಕರ ಡಿ. ಪೂಜಾರಿ ಸಭಾ ಮತ್ತು ಸಾಂಸ್ಕೃತಿಕ  ಕಾರ್ಯಕ್ರಮ ನಿರೂಪಿಸಿದರು.

ಗೌರವ  ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ ಮತ್ತು ಗುಣೋದಯ ಎಸ್‌. ಐಲ್‌ ಫಲಾನುಭವಿ ಮಕ್ಕಳ ಯಾದಿ ವಾಚಿಸಿದರು. ವಸಂತಿ ಕೋಟೆಕರ್‌ ಅವರು ವಂದಿಸಿದರು. 

Advertisement

ಸಂಘದ ಉಪ ವಿಭಾಗಗಳ ಸದಸ್ಯರು ಹಾಗೂ ಮಹಾ ನಗರದಲ್ಲಿನ ವಿವಿಧ ಸಂಘ-ಸಂಸ್ಥೆಗಳು ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಗೋರೆಗಾಂವ್‌ ಕರ್ನಾಟಕ ಸಂಘದ ರಂಗಸ್ಥಳ  ವಿಭಾಗದ ಕಲಾವಿದರಿಂದ “ಪಿಂಗಳಾಕ್ಷ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು. 

1958 ರ ಅಕ್ಟೋಬರ್‌ನ ವಿಜಯದಶಮಿಯ  ದಿನ  ಮೂರೂರು ಸಂಜೀವ ಶೆಟ್ಟಿ ಮತ್ತು ಅವರ ಸಮಾನ ಮನಸ್ಕ ಜೊತೆಗಾರರ ದೂರದೃಷ್ಟಿತ್ವದಿಂದ ಹುಟ್ಟು ಪಡೆದ ಈ ಸಂಘವು ತನ್ನ ಉದಾತ್ತ ಧ್ಯೇಯೋದ್ದೇಶಗಳನ್ನು ಪರಿಪೂರ್ಣಗೊಳಿಸಿ ಸ್ವಂತಿಕೆಯ ಪ್ರತಿಷ್ಠೆಯೊಂದಿಗೆ ಬೆಳೆದು ನಿಂತಿದೆ. ಅರ್ವತ್ತರ ನಡಿಗೆಯಲ್ಲೂ ಇಂದಿಗೂ ಒಂದು ಕುಟುಂಬವಾಗಿಯೇ ಸಂಘವು ಮುನ್ನಡೆದಿದೆ. ಸಂಘವು ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಕ್ರೀಡೆ, ಧಾರ್ಮಿಕ ಇನ್ನಿತರ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅನುಪಮವಾಗಿದೆ. ಸಂಘದ ಬಗ್ಗೆ ಇಲ್ಲಿನ ಕನ್ನಡಿಗರು ಹೊಂದಿರುವ ಅಭಿಮಾನ, ಗೌರವವನ್ನು ನೋಡುವಾಗ ಸಂತೋಷವಾಗುತ್ತಿದೆ. ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರ ಸಹಕಾರ, ಪ್ರೋತ್ಸಾಹ ಸದಾಯಿರಲಿ.
-ದೇವಲ್ಕುಂದ ಭಾಸ್ಕರ್‌ ಶೆಟ್ಟಿ , 
ಅಧ್ಯಕ್ಷರು : ಗೋರೆಗಾಂವ್‌ ಕರ್ನಾಟಕ ಸಂಘ

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next