Advertisement

ಗೋರಖ್‌ಪುರ: ಆಸ್ಪತ್ರೆಯ ಅರಳಿ ಮರ ಆಪದ್ಬಾಂಧವ!

06:45 AM Aug 17, 2017 | Team Udayavani |

ಗೋರಖ್‌ಪುರ: “ವೈದ್ಯೋ ನಾರಾಯಣೋ ಹರಿ’ ಎಂದು ನಂಬಿದವರ ಎದುರು ಸಾಕ್ಷಾತ್‌ ಡಾಕ್ಟರೇ ಪ್ರತ್ಯಕ್ಷನಾಗಿ, “ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಇನ್ನೇನಿದ್ರು ಆ ದೇವರೇ ಕಾಪಾಡಬೇಕು’ ಎನ್ನುತ್ತಾ ಆಸ್ಪತ್ರೆಯ ಛಾವಣಿಯತ್ತ ಬೆರಳು ಮಾಡಿ ತೋರಿಸಿದಾಗಲೇ ಎಷ್ಟೋ ಜನರಿಗೆ, ಈ ವೈದ್ಯನಿಗಿಂತಲೂ ದೊಡ್ಡ ದೇವರೊಬ್ಬ ಮೇಲಿದ್ದಾನೆ ಎಂಬುದು ನೆನಪಾಗುತ್ತದೆ. ಹಾಗೆ ನೆನಪಾದಾಗ, ರೋಗಿಯ ಕಾಪಾಡು ತಂದೆ/ತಾಯಿ ಎಂದು ವ್ರತ, ಪೂಜೆ, ಅರ್ಚನೆ, ಆರತಿ, ನೈವೇದ್ಯಾದಿಗಳನ್ನು ಮಾಡುವುದು ಸಹಜ.

Advertisement

ಧಾರ್ಮಿಕ ನಂಬಿಕೆಗಳೇ ಸಮಾಜದ ತಳಹದಿ ಯಾಗಿರುವ ಭಾರತದ ಹಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ದೇವಾಲಯಗಳಿರುವುದು ಗೊತ್ತೇ ಇದೆ. ಅಲ್ಲಿಗೆ ಬರುವ ರೋಗಿಗಳ ಕಾಯಿಲೆ ಬೇಗ ವಾಸಿಯಾಗಲೆಂದು ಕುಟುಂಬದವರು ಆ ಆಲಯಗಳಲ್ಲಿ ಹರಕೆ ಹೊರುತ್ತಾರೆ. ಹಲವು ಆಸ್ಪತ್ರೆಗಳಲ್ಲಿ ದೇವಾಲಯಗಳಿರುವಂತೆಯೇ ಗೋರಖ್‌ಪುರದ ಬಾಬಾ ರಾಘವ ದಾಸ್‌ ವೈದ್ಯ ಕಾಲೇಜಿನಲ್ಲಿ ಒಂದು ಅರಳಿ ಮರವಿದೆ !

ವಾರದಿಂದೀಚೆಗೆ 70 ಮಕ್ಕಳ ಸಾವಿಗೆ ವೇದಿಕೆಯಾಗುವ ಮೂಲಕ ದೇಶಾದ್ಯಂತ ಹೆಚ್ಚು ಸುದ್ದಿಯಾಗಿರುವ ಗೋರಖ್‌ಪುರದ ಬಿಆರ್‌ಡಿ ವೈದ್ಯ ಕಾಲೇಜು ಈಗ ಅರಳಿ ಮರ (ಅಶ್ವತ್ಥ ವೃಕ್ಷ)ದ ಕಾರಣದಿಂದಾಗಿ ದೇಶದ ಗಮನ ಸೆಳೆಯುತ್ತಿದೆ. ಆಮ್ಲಜನಕದ ಕೊರತೆಯಿಂದ ಮಕ್ಕಳನ್ನು ಕಳೆದುಕೊಂಡು ನೊಂದಿರುವ ಕುಟುಂಬದವರು ಹಾಗೂ ಪ್ರಸ್ತುತ ಆಸ್ಪತ್ರೆಯಲ್ಲಿ ಮಕ್ಕಳು, ಸಂಬಂಧಿಗಳನ್ನು ದಾಖಲಿಸಿರುವವರು ಈ ಅರಳಿ ಮರದ ಮೊರೆ ಹೋಗುತ್ತಿದ್ದಾರೆ. ತಮ್ಮವರನ್ನು ಉಳಿಸಿ ಕೊಡು ಎಂದು ಅಶ್ವತ್ಥ ವೃಕ್ಷದ ಎದುರು ಅಂಗಲಾಚುತ್ತಿದ್ದಾರೆ.

ಅರಳಿ ಮರದ ಮಹಿಮೆ: ಈಗ ರೋಗಿಗಳ ಪಾಲಿಗೆ ಆಪದಾºಂಧವನಾಗಿರುವ ಅರಳಿ ಮರ ಇರುವುದು ಬಿಆರ್‌ಡಿ ವೈದ್ಯ ಕಾಲೇಜಿನ ಆವರಣದಲ್ಲಿರುವ ಕ್ಯಾಂಟೀನ್‌ ಎದುರು. ಇಲ್ಲಿ ಯಾರೂ ಸಸಿ ತಂದು ನೆಟ್ಟು ಈ ಮರವನ್ನು ಬೆಳೆಸಿಲ್ಲ. ಬದಲಿಗೆ ವರ್ಷದ ಹಿಂದೆ ತನ್ನಷ್ಟಕ್ಕೇ ಹುಟ್ಟಿದ ಅರಳಿ ಸಸಿ, ತಂತಾನೆ ಬೆಳೆಯು ತ್ತಿರುವುದೇ ವಿಸ್ಮಯ. ಮೊದಲೇ ದೇಶದ ಧಾರ್ಮಿಕ ವಲಯದಲ್ಲಿ ಅರಳಿ ಮರಕ್ಕೆ ಶ್ರೇಷ್ಠ ಸ್ಥಾನವಿದೆ. ಹೀಗಿರುವಾಗ ತಂತಾನೆ ಹುಟ್ಟಿ, ಬೆಳೆದಿರುವ ಈ ಮರ ರೋಗಿಗಳನ್ನು ಗುಣಪಡಿ ಸುವ ಅಗೋಚರ ಶಕ್ತಿಯಾಗಿ ಪರಿಣಮಿಸಿದೆ.

ಗುಣವಾದ ನಿದರ್ಶನಗಳಿವೆ: ಆಸ್ಪತ್ರೆಗೆ ಬರುವವರು ತಮ್ಮವರ ಆರೋಗ್ಯ ಸುಧಾರಿಸ ಲೆಂದು ಅರಳಿ ಮರದ ಮೊರೆ ಹೋಗುವುದು ಒಂದು ಮೂಢ ನಂಬಿಕೆ ಎಂದೆನಿಸಿದರೂ ಹೀಗೆ ಈ ವೃಕ್ಷದ ಮೊರೆ ಹೋದ ಹಲವರಿಗೆ ಪ್ರತಿಫ‌ಲ ಸಿಕ್ಕಿದೆ ಎನ್ನುತ್ತಾರೆ ಸ್ಥಳೀಯರು. “ನನ್ನ 5 ವರ್ಷದ ಸೊಸೆಗೆ ಮೆದುಳಿನ ಉರಿಯೂತದ ಲಕ್ಷಣಗಳಿದ್ದವು. 18 ದಿನ ಆಸ್ಪತ್ರೆಯಲ್ಲಿದ್ದರೂ ಪ್ರಯೋಜನ ವಾಗಿರಲಿಲ್ಲ. ಆಗ ನಾನು ಅರಳಿ ಮರದ ಮೊರೆ ಹೋದೆ. ಅಚ್ಚರಿ ಎಂಬಂತೆ ಒಂದೆರಡು ದಿನದಲ್ಲೇ ಸೊಸೆ ಸಂಪೂರ್ಣ ಗುಣವಾದಳು. ಆಕೆಗೆ ಉರಿಯೂತವಿಲ್ಲ ಎಂದು ವೈದ್ಯರು ತಿಳಿಸಿದರು’ ಎನ್ನುತ್ತಾರೆ ಪ್ರಭು ಕುಮಾರ್‌.

Advertisement

ಜನಿವಾರ, ಮರದ ಪಾದುಕೆ: ಇಲ್ಲಿ ಹರಕೆ ಹೊರುವವರು ಅರಳಿಮರಕ್ಕೆ ಜನಿವಾರ ದಾರ ಹಾಗೂ ಮರದ ಪಾದುಕೆ ಅರ್ಪಿಸಿ ಹರಕೆ ತೀರಿಸುತ್ತಾರೆ. ಹೀಗಾಗಿ ವರ್ಷದಿಂದೀಚೆಗೆ 5000ದಷ್ಟು ಜನಿವಾರ ದಾರದ ಉಂಡೆಗಳು ಹಾಗೂ ಪಾದುಕೆಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ಊದುಬತ್ತಿ, ಕರ್ಪೂರ ಅರ್ಪಿಸುವ ಭಕ್ತರು, ದೀಪೋತ್ಸವವನ್ನೂ ನಡೆಸುತ್ತಾರೆ ಎಂದು ವೈದ್ಯ ಕಾಲೇಜಿನ ಕ್ಯಾಂಟೀನ್‌ ಸಿಬಂದಿ ಹೇಳಿದ್ದಾರೆ.

ಆಕ್ಸಿಜನ್‌ ಕೊರತೆ ಕಾರಣವಲ್ಲ:  ಗೋರಖ್‌ಪುರದ ಆಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರದ ತಂಡ ಕ್ಲೀನ್‌ಚಿಟ್‌ ನೀಡಿದೆ. 72 ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ ಎಂದೂ ಹೇಳಿದೆ. ಅಲ್ಲದೆ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ, ಈ ತಿಂಗಳ ಮಕ್ಕಳ ಸಾವು ಕಡಿಮೆ ಇದೆ ಎಂಬ ಆಘಾತಕಾರಿ ಮಾಹಿತಿಯನ್ನೂ ಈ ತಂಡ ನೀಡಿದೆ. ಈ ನಡುವೆ ಬಿಹಾರದ ವ್ಯಕ್ತಿಯೊಬ್ಬರು ತಮ್ಮ ಮಗುವಿನ ಸಾವಿಗೆ ಆಸ್ಪತ್ರೆ ಮತ್ತು ಉತ್ತರ ಪ್ರದೇಶ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆರೋಗ್ಯ ಸಚಿವರು ಮತ್ತು ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next