Advertisement

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

01:22 PM Mar 29, 2024 | Team Udayavani |

ಜಾಗತಿಕವಾಗಿ ಕ್ರೈಸ್ತರು ಆಚರಿಸುವ ಶುಭ ಶುಕ್ರವಾರವು ಪ್ರಭು ಯೇಸುಕ್ರಿಸ್ತರ ಶಿಲುಬೆಯ ಯಾತನೆಯ ಸ್ಮರಣೆಯ ಸಂದರ್ಭವಾಗಿದೆ. ಈ ದಿನ ಕ್ರೈಸ್ತರು ಅತಿಯಾದ ಗೌರವ ಹಾಗೂ ಆಧ್ಯಾತ್ಮಿಕ ಸಿದ್ಧತೆಗಳೊಂದಿಗೆ ಕ್ರಿಸ್ತರ ತ್ಯಾಗವನ್ನು ಸ್ಮರಿಸುತ್ತಾರೆ. ಅವರ ನಿರಂತರವಾದ ಪ್ರೀತಿ, ಕ್ಷಮೆ, ವಿಮೋಚನೆಯ ಸಂದೇಶದಿಂದ ಸ್ಫೂರ್ತಿ ಪಡೆಯುತ್ತಾರೆ.

Advertisement

ಕ್ರೈಸ್ತ ಇತಿಹಾಸ ಮತ್ತು ಸಂಪ್ರದಾಯದ ಪ್ರಕಾರ ಮನುಜರಾಗಿ ಧರೆಗೆ ಬಂದ ದೇವರ ಪುತ್ರರಾದ ಪ್ರಭು ಕ್ರಿಸ್ತರು ಸ್ವ-ಇಚ್ಛೆಯಿಂದ ನಮ್ಮ ರಕ್ಷಣೆಗಾಗಿ ಯಾತನೆಯನ್ನು ಅನುಭವಿಸಿ, ಜೆರುಸಲೇಮಿನ ಹೊರಭಾಗದಲ್ಲಿರುವ ಗೊಲ್ಗೊಥಾ ಶಿಖರದಲ್ಲಿ ಶಿಲುಬೆಗೇರಿಸಲ್ಪಟ್ಟರು. ಅಮಾನವೀಯ, ಅವಮಾನಭರಿತ ಶಿಲುಬೆಯ ಮರಣ ಹಾಗೂ ಪುನರುತ್ಥಾನದ ಮೂಲಕ ಯೇಸು ಕ್ರಿಸ್ತರು, ಎಲ್ಲ ಮಾನವರಿಗೂ ವಿಶೇಷವಾಗಿ ವಿಶ್ವಾಸಿಸುವ ಎಲ್ಲರಿಗೂ ರಕ್ಷಣೆಯನ್ನು ನೀಡಿದರು.

ಕ್ರೈಸ್ತರಿಗೆ ಶುಭ ಶುಕ್ರವಾರ ಪ್ರಭು ಯೇಸುವಿನ ಬಲಿಯರ್ಪಣೆಯನ್ನು ಅತ್ಯಂತ ಕೃತಜ್ಞತಾಪೂರ್ವಕವಾಗಿ ಸ್ಮರಿಸಿ, ಧ್ಯಾನಿಸುವ ದಿನ. ಈ ಶಿಲುಬೆಯ ಮರಣ ಸ್ವಾರ್ಥರಹಿತ ಪ್ರೀತಿಯ ಪ್ರಕಟನೆಯ ಪರಮೋನ್ನತ ಕಾರ್ಯವಾಗಿದೆ ಹಾಗೂ ಎÇÉೆ ಇಲ್ಲದ ಮನುಕುಲದ ಮೇಲಿನ ಪ್ರೀತಿ ಹಾಗೂ ಕರುಣೆಯ ನಿದರ್ಶನವಾಗಿದೆ. ತ್ವರಿತಗತಿಯಲ್ಲಿ ಮುನ್ನುಗ್ಗುತ್ತಿರುವ ಅನೇಕ ಬಾರಿ ಗೊಂದಲಕ್ಕೊಳಗಾದ ಈ ಸಮಾಜದಲ್ಲಿ ಶುಭ ಶುಕ್ರವಾರ ನಿರಂತರ ಪ್ರಸ್ತುತತೆಯನ್ನು ಹೊಂದಿದೆ. ಪ್ರಸ್ತುತ ಸಮಾಜಕ್ಕೆ ಇದು ಕರುಣೆ, ಸಹಾನುಭೂತಿ, ಉಪಶಮನ ಹಾಗೂ ಹೊಂದಾಣಿಕೆಗಳ ಪ್ರಾಮುಖ್ಯವನ್ನು ನೆನಪಿಸುತ್ತದೆ. ಅನ್ಯಾಯ, ಯಾತನೆ, ಒಡಕಿನಿಂದ ಕೂಡಿದ ಈ ಸಮಾಜದಲ್ಲಿ ಶುಭ ಶುಕ್ರವಾರ ಭರವಸೆಯ ಕಿರಣಗಳನ್ನು ಚೆಲ್ಲುತ್ತಾ ಇತರರಿಗೆ ಕರುಣೆ ತೋರುವಂತೆ, ನ್ಯಾಯಕ್ಕಾಗಿ ಹೋರಾಡುವವರಿಗೆ, ಶಾಂತಿಗಾಗಿ ಶ್ರಮಿಸುವವರಿಗೆ ಸದಾ ನೆರವಾಗುವಂತೆ ಕರೆ ನೀಡುತ್ತದೆ.

ಶುಭ ಶುಕ್ರವಾರದ ಕಥೆಯು ಸಾಮಾಜಿಕ ನ್ಯಾಯದ ಅನ್ವೇಷಣೆಯ ಉತ್ತಮ ಉದಾಹರಣೆಯಾಗಿದೆ. ಸಮಾಜದಲ್ಲಿದ್ದ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಿ ಯೇಸು ಕ್ರಿಸ್ತರು ನಿರ್ಗತಿಕರ, ಸಮಾಜದಲ್ಲಿ ಶೋಷಣೆಗೆ ಒಳಗಾದವರ, ಸಮಾಜದ ಶೋಷಿತ ನಿಯಮಗಳ ವಿರುದ್ಧ ಹೋರಾಡುವವರ ಪರವಾಗಿ ಪ್ರತಿಪಾದಿಸು ವವರಾಗಿದ್ದಾರೆ. ಸಾಮಾಜಿಕ ಸ್ಥಾನಮಾನಗಳನ್ನು ಲೆಕ್ಕಿಸದೆ ಸಮಾನತೆ, ಪ್ರೀತಿ, ಸಹಾನು ಭೂತಿಗೆ ಅವರು ತಮ್ಮ ಬೋಧನೆಗಳಲ್ಲಿ ಒತ್ತು ನೀಡಿದ್ದರು.

ಶುಭ ಶುಕ್ರವಾರದ ಆಚರಣೆಯಲ್ಲಿ ಯೇಸುವಿನ ನಿಸ್ವಾರ್ಥ ತ್ಯಾಗ, ಜಾತಿ, ಧರ್ಮ, ಜನಾಂಗ ಹಾಗೂ ಸಾಮಾಜಿಕ ಸ್ಥಾನಮಾನದ ಅಡೆತಡೆಗಳನ್ನು ಮೀರಿದ ಕರುಣೆ ಹಾಗೂ ಸಹಾನುಭೂತಿಯನ್ನು ಎತ್ತಿ ತೋರಿಸುತ್ತದೆ. ಇಂದಿನ ಸಮಾಜದಲ್ಲಿ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವವರ ನಡುವೆ ಸೇತುವೆಯಾಗಿರಲು, ಸಂಧಾನವನ್ನು ಏರ್ಪ ಡಿಸಲು, ವಿಭಜನೆಗಳನ್ನು ತೊಡೆದು ಹಾಕಿ ಏಕತೆ ಬೆಳೆಸಲು ಇದು ಅವಶ್ಯವಾಗಿದೆ. ಕ್ಷಮೆ ಮತ್ತು ಉಪ ಶಮನದ ಮನೋಭಾವವನ್ನು ಬೆಳೆಸುವ ಆಚರಣೆ ಇದಾಗಿದೆ. ತನ್ನನ್ನು ಹಿಂಸಿಸಿದವರನ್ನು ಶಿಲುಬೆಯ ಮೇಲಿನಿಂದ ಕ್ಷಮಿಸಿದ ಯೇಸುವಿನ ಮನೋಭಾವ ಸಮಾಜಕ್ಕೆ ಪ್ರಬಲ ಉದಾಹರಣೆಯಾಗಿದೆ.

Advertisement

ಯೇಸುವಿನ ಪ್ರೀತಿ ಮತ್ತು ಕ್ಷಮೆಯ ಸಂದೇಶವು ಎಲ್ಲ ಕಾಲಗಳಲ್ಲೂ ಅನ್ವಯ ವಾಗುತ್ತದೆ. ನ್ಯಾಯಯುತ ಹಾಗೂ ಸಹಾನುಭೂತಿಯ ಸಮಾಜವನ್ನು ನಿರ್ಮಿಸಲು ಬೇಕಾದ ನೀಲನಕ್ಷೆಯನ್ನು ಇದು ಒದಗಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಈ ಎಲ್ಲ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಾವು ಸಮಾಜದಲ್ಲಿ ಏಕತೆಯನ್ನು ಮೂಡಿಸಿ, ಸಾಮರಸ್ಯದ ಜಗತ್ತನ್ನು ನಿರ್ಮಿಸೋಣ.

ಕರುಣೆ, ಕ್ಷಮೆ, ಸಹಾನುಭೂತಿಯ ಮೌಲ್ಯಗಳನ್ನು ನಮ್ಮದಾಗಿಸಿಕೊಂಡು, ಉತ್ತಮ ಸಂವಾದ-ಸಂಭಾಷಣೆಗಳನ್ನು ಉತ್ತೇಜಿಸಿ ಏಕತೆಯನ್ನು ಬೆಳೆಸೋಣ. ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸುವ ಮುಲಕ ದೇಶವನ್ನು ವಿಭಜಿಸುವ ಮನೋಭಾವದಿಂದ ದೂರವಿದ್ದು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸೋಣ. ಅಂಧಕಾರದ ಸಂದರ್ಭದಲ್ಲೂ ಭರವಸೆಯಿಂದಿದ್ದು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ. ಪ್ರಭು ಕ್ರಿಸ್ತರು ಪ್ರತಿಪಾದಿಸಿದ ಮೌಲ್ಯಗಳಿಂದ ಸಮಾಜವನ್ನು ಕಟ್ಟುವವರಾಗೋಣ. ಶುಭ ಶುಕ್ರವಾರವು ಏಕತೆಯನ್ನು ಬೆಳೆಸಲು, ಉತ್ತಮ ಮೌಲ್ಯಾಧಾರಿತ ಸಮಾಜವನ್ನು ಕಟ್ಟಲು ನಮ್ಮನ್ನು ಪ್ರೇರೇಪಿಸಲಿ.

ಫಾ| ಡಾ| ಸುದೀಪ್‌ ಪಾವ್ಲ್,

ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next