Advertisement

“Udupi ಘಟಕದಿಂದ ಸತ್ಕಾರ್ಯಗಳಾಗಲಿ’: ಎಚ್‌.ಎಸ್‌. ಬಲ್ಲಾಳ್‌

01:08 AM Mar 11, 2024 | Team Udayavani |

ಉಡುಪಿ: ಕರಾವಳಿಯ ಗಂಡು ಕಲೆಯಾಗಿ ಇಲ್ಲಿನ ಮಣ್ಣಿನ ಕಣಕಣದಲ್ಲೂ ಬೆರೆತಿರುವ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ತನ್ನ ಬದುಕಿನೊಂದಿಗೆ ಇತರರಿಗೂ ಸಹಾಯ, ಸಹಕಾರ ಮಾಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಉಡುಪಿ ಘಟಕದಿಂದ ಸಾಕಷ್ಟು ಸತ್ಕಾರ್ಯಗಳು ನೆರವೇರಲಿ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಹಾರೈಸಿದರು.

Advertisement

ಅಂಬಾಗಿಲಿನ ಅಮೃತ್‌ ಗಾರ್ಡನ್‌ನಲ್ಲಿ ರವಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರ ಸ್ಟ್‌ ಮಂಗಳೂರು ಇದರ ಉಡುಪಿ ಘಟಕವನ್ನು ಅವರು ಉದ್ಘಾಟಿಸಿ ಮಾತನಾಡಿ, ಪಟ್ಲ ಸತೀಶ ಶೆಟ್ಟಿಯವರು ಯಕ್ಷಗಾನದಲ್ಲಿ ಭಾಗವತರಾಗಿ ಹೆಸರು ಗಳಿಸಿದ್ದಲ್ಲದೆ, ಟ್ರಸ್ಟ್‌ ಮೂಲಕ ಕಲಾವಿದರ ಶ್ರೇಯೋಭಿವೃದ್ಧಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಚಿಂತಕ ಪಟ್ಲ ಸತೀಶ್‌ ಶೆಟ್ಟಿಯವರು. ಸಂಬಂಧ, ಮಾನವೀಯತೆ, ಅಸಮಾನತೆಯನ್ನು ಎದುರಿಸುತ್ತಿರುವ ಸಮಾಜವನ್ನು ಸರಿಪಡಿಸಲು ಯಕ್ಷಗಾನದಿಂದ ಸಾಧ್ಯವಿದೆ. ಅಂತರಂಗವನ್ನು ತೆರೆಸಬಲ್ಲ ಶಕ್ತಿಯುಳ್ಳ ಕಲೆಗೆ ಇನ್ನಷ್ಟು ಮಾನ್ಯತೆ ದೊರಕಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿಯವರು ಉಡುಪಿ ಘಟಕದ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು. ಯಕ್ಷಗಾನ ಪ್ರಸಂಗಕರ್ತ ಪ್ರೊ| ಪವನ್‌ ಕಿರಣಕೆರೆ ಅವರು, “ಪಟ್ಲ’ ಎನ್ನುವುದು ಒಂದು ಬ್ಯಾಂಡ್‌ ಆಗಿ ಬೆಳೆದು ನಿಂತಿದೆ ಎಂದರು.

ಸಮ್ಮಾನ ಸ್ವೀಕರಿಸಿದ ಪ್ರೊ| ಹರಿಕೃಷ್ಣ ಭಟ್‌ ಮಾತನಾಡಿ, ಇಲ್ಲಿನ ಯುವಕರಿಗೆ ಜಪಾನ್‌ ಭಾಷೆ ಕಲಿಸುವುದರೊಂದಿಗೆ ಜಪಾನ್‌ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.

Advertisement

ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ, ಕೆ. ದಿವಾಕರ ಶೆಟ್ಟಿ ತೋಟದಮನೆ, ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಿ. ಕಿಶನ್‌ ಹೆಗ್ಡೆ, ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಸುರೇಶ್‌ ರೈ, ಟ್ರಸ್ಟ್‌ನ ಕೋಶಾಧಿಕಾರಿ ಸುದೇಶ್‌ ಕುಮಾರ್‌ ರೈ, ಪ್ರದೀಪ್‌ ಆಳ್ವ, ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.

ಉಡುಪಿ ಘಟಕದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕಾರ್ಯದರ್ಶಿ ಡಾ| ಹರೀಶ್‌ ಜೋಷಿ ವಿಟ್ಲ ನಿರೂಪಿಸಿದರು. ಉಪಾಧ್ಯಕ್ಷ ಡಾ| ಸುನಿಲ್‌ ಮುಂಡ್ಕೂರು, ತಾರಾ ಆಚಾರ್ಯ ಪರಿಚಯಿಸಿದರು. ಮಹೇಂದ್ರ ಆಚಾರ್ಯ ಹೇರಂಜೆ ವಂದಿಸಿದರು.

ಉಡುಪಿ ಘಟಕದ ಉಪಾಧ್ಯಕ್ಷರಾದ ಆನಂದ ಮಡಿವಾಳ, ಹರಿಪ್ರಸಾದ್‌ ರೈ, ಸಚಿನ್‌ ಶೆಟ್ಟಿ, ಡಾ| ಸಾಯಿ ಗಣೇಶ್‌, ಸಂಚಾಲಕ ಸುಧಾಕರ ಆಚಾರ್ಯ, ಜತೆಕಾರ್ಯದರ್ಶಿ ರತನ್‌ರಾಜ್‌ ರೈ ಮಣಿಪಾಲ, ಕಾರ್ತಿಕ್‌ ಎಸ್‌. ರಾವ್‌, ಸತ್ರಾಜಿತ ಭಾರ್ಗವ್‌, ಹರ್ಷಿತ್‌ ಜೋಷಿ ಮಣಿಪಾಲ, ಚಿರಾಗ್‌ ಹೆಗ್ಡೆ ಬೈಲೂರು, ಭುವನ ಪ್ರಸಾದ್‌ ಹೆಗ್ಡೆ ಗೌರವ ಮಾರ್ಗದರ್ಶಕರು, ಸದಸ್ಯರು ಭಾಗವಹಿಸಿದ್ದರು. ಶ್ರೀ ಪಾವಂಜೆ ಮೇಳದವರಿಂದ “ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನಗೊಂಡಿತು.

ಪಟ್ಲಾಭಿಮಾನಿ ಅಭಿವಂದನೆ
ನಿಟ್ಟೆ ವಿ.ವಿ.ಯ ಜಪಾನ್‌ ಭಾಷಾ ತಜ್ಞರಾದ ಯುಸುಕೋ ಸತೋ ಮತ್ತು ಪ್ರೊ| ಹರಿಕೃಷ್ಣ ಭಟ್‌ ದಂಪತಿಗೆ “ಪಟ್ಲಾಭಿಮಾನಿ ಅಭಿವಂದನೆ’ ಹಾಗೂ ಅಂತಾರಾಷ್ಟ್ರೀಯ ಯೋಗಪಟು ತನು ಶ್ರೀ ಪಿತ್ರೋಡಿಯವರಿಗೆ “ವಿಶೇಷ ಬಾಲ ಪುರಸ್ಕಾರ’ ನೀಡಿ ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next