Advertisement

ಗೋಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಿರಿ : ಸಚಿವೆ ಜೊಲ್ಲೆ ಮನವಿ

07:24 PM Nov 02, 2021 | Team Udayavani |

ಬೆಂಗಳೂರು : ದೀಪಾವಳಿಯ ಬಲಿಪಾಡ್ಯದ ದಿನವಾದ ನವೆಂಬರ್ 5ರಂದು ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ನಡೆಯುವ ಗೋಪೂಜಾ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಮನವಿ ಮಾಡಿದ್ದಾರೆ.

Advertisement

ಬಲಿಪಾಡ್ಯ ದಿನ ಇಲಾಖೆಯ ದೇವಾಲಯಗಳಲ್ಲಿ ನಡೆಯುವ ಗೋಪೂಜೆ ಅಂಗವಾಗಿ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸೂಚನೆಗಳನ್ನು ನೀಡಿ ಮಾತನಾಡಿದ ಅವರು, ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾದ ಗೋವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಗೋಪೂಜೆಗೆ ತನ್ನದೇ ಆದ ಮಹತ್ವವಿದೆ ಎಂದರು.

ಗೋವುಗಳ ಮಹತ್ವ ಹಾಗೂ ಗೋವುಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ನವೆಂಬರ್ 5ರ ಬಲಿಪಾಡ್ಯ ದಿವಸದಂದು ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ಗೋಮಾತೆ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಗೋಮಾತೆಯನ್ನು ಪೂಜಿಸುವ ಸನಾತನ ಧರ್ಮದ ಸಂಪ್ರದಾಯವನ್ನು ನಮ್ಮ ಮುಂದಿನ ಪೀಳಿಗೆಗೂ ತಲುಪಿಸಬೇಕಾದ ಜವಾಬ್ದಾರಿಯೂ ನಮ್ಮೆಲ್ಲರದಾಗಿದೆ. ಪ್ರತಿ ರೈತಕುಟುಂಬಗಳಲ್ಲಿ ಕನಿಷ್ಠ ಒಂದಾದರೂ ದೇಶೀಯ ಗೋವು ಸಾಕಲು ಪ್ರೋತ್ಸಾಹಿಸುವುದು. ಗೋವುಗಳ ಮಹತ್ವವನ್ನು ಅರಿತಿರುವ ರಾಜ್ಯ ಸರ್ಕಾರ ಗೋವುಗಳ ರಕ್ಷಣೆ ಮಾಡುವ ಸದುದ್ದೇಶದಿಂದ ‘ಗೋ ಸಂರಕ್ಷಣಾ ಕಾಯ್ದೆ-2021’ನ್ನು ಜಾರಿಗೊಳಿಸಿದೆ ಎಂದು ಸಚಿವರು ವಿವರಿಸಿದರು.

ಇದನ್ನೂ ಓದಿ : ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಸದಸ್ಯರ ಅಪಹರಣ : ಗುಡಿಬಂಡೆಯಲ್ಲಿ ಭುಗಿಲೆದ್ದ ಆಕ್ರೋಶ

Advertisement

ಆಯಾ ಭಾಗದಲ್ಲಿ ನಡೆಯುವ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ಗೋಪೂಜೆ ಮಹತ್ವ ಮತ್ತು ದೇಶೀಯ ಗೋತಳಿ ಸಾಕುವ ಕುರಿತು ಜಾಗೃತಿ ಮೂಡಿಸುವಂತೆ ನಾನು ಮಾನ್ಯ ಸಚಿವರು, ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಮಾನ್ಯ ಸದಸ್ಯರುಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳೂ ಸಹ ಸದರಿ ದಿನ ಗೋಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಪರಿಷತ್ತಿನ ಸದಸ್ಯರು, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರರನ್ನು ಗೋಪೂಜೆಗೆ ಆಹ್ವಾನಿಸುವುದು ಎಂದು ಅವರು ಹೇಳಿದರು.

ಗೋಪೂಜೆಯಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ಪೂರ್ವಭಾವಿಯಾಗಿ ವ್ಯಾಪಕ ಪ್ರಚಾರ ನೀಡುವುದು. ಗೋಪೂಜೆಯನ್ನು ಒಂದು ವ್ಯಾಪಕ ಅಭಿಯಾನದ ರೂಪದಲ್ಲಿ ಕೈಗೊಳ್ಳುವುದು. ಗೋಪೂಜೆಯ ಮಹತ್ವ ಎಲ್ಲರಿಗೂ ಗೊತ್ತಾಗಲು ಆಯಾ ಭಾಗದಲ್ಲಿ ಸ್ಥಳೀಯ ಮಾಧ್ಯಮಗಳಿಗೆ ಅಂದು ಆಹ್ವಾನ ನೀಡುವುದು. ಗೋವುಗಳು ಪೂಜಾ ಸಮಯದಲ್ಲಿ ಜನಸಂದಣಿ, ಮಾಧ್ಯಮ ಸಹೋದರರ ಕ್ಯಾಮರಾಗಳಿಂದ ಬೆದರಿ ನುಗ್ಗಿ ಹಾನಿ ಮಾಡದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾದಂತೆ ಗಮನ ಹರಿಸುವುದು ಸೇರಿದಂತೆ ಸಚಿವರು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.

ಪೂಜೆಗೆ ಅವಶ್ಯವಾಗಿ ದೇಶೀಯ ಗೋವುಗಳನ್ನೇ ಕರೆತರುವುದು. ಗೋಪೂಜಾ ಅಭಿಯಾನಕ್ಕೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಸಹಾಯ ಪಡೆಬಹುದು. ಈಗಾಗಲೇ ಮುಜರಾಯಿ ಇಲಾಖೆಯ ಆಯುಕ್ತರು ಸಂಬಂಧಿಸಿದ ದೇವಾಲಯಗಳಿಗೆ ಗೋಪೂಜೆ ಕುರಿತಾದ ಆದೇಶಗಳನ್ನು ಕಳಿಸಿದ್ದು, ವಿಧಿವಿಧಾನದಲ್ಲಿ ಯಾವುದೇ ಲೋಪವಾಗದಂತೆ ಪೂಜೆ ನೆರವೇರಿಸಬೇಕೆಂದು ಸಚಿವರು ತಿಳಿಸಿದರು.

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಯಾವುದಾದರೊಂದು ದೇವಾಲಯದಲ್ಲಿ ನಡೆಯುವ ಗೋಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆದೇಶ ನೀಡಲು ಪ್ರಧಾನ ಕಾರ್ಯದರ್ಶಿಯವರಿಗೆ ಸಚಿವರು ಸೂಚನೆ ನೀಡಿದರು.

ಅಭಿಯಾನದಲ್ಲಿ ಸಾರ್ವಜನಿಕರಿಗೆ ಗೋಪೂಜೆ ಮಹತ್ವ ಮತ್ತು ದೇಶೀಯ ಗೋವುಗಳನ್ನು ಸಾಕುವ ಕುರಿತು ತಿಳಿವಳಿಕೆ ಮೂಡಿಸಬೇಕೆಂದು ಜೊಲ್ಲೆ ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಜರಾಯಿ ಇಲಾಖೆ ಆಯುಕ್ತೆ ಶ್ರೀಮತಿ ರೋಹಿಣಿ ಸಿಂಧೂರಿ, ರಾಜ್ಯದ ವಿವಿಧ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ದೇವಾಲಯ ವ್ಯವಸ್ಥಾಪನ ಮಂಡಳಿಗಳ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next