Advertisement

ಟಿ.ಸಿ. ಅಳವಡಿಕೆ, ದೀನದಯಾಳ್‌ ಸಂಪರ್ಕಕ್ಕೆ ಹಣ ವಸೂಲಿ

01:30 AM Aug 09, 2018 | Team Udayavani |

ಕೊಕ್ಕಡ: ವಿದ್ಯುತ್‌ ಪರಿವರ್ತಕ ಅಳವಡಿಕೆ, ದೀನದಯಾಳ್‌ ಯೋಜನೆಯಡಿ ವಿದ್ಯುತ್‌ ಸಂಪರ್ಕಕ್ಕೆ ಗುತ್ತಿಗೆದಾರರು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗೋಳಿತ್ತೂಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗೋಳಿತ್ತೂಟ್ಟು ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಎಸ್‌., ನೋಡಲ್‌ ಅಧಿಕಾರಿಯಾಗಿದ್ದರು. ಮೆಸ್ಕಾಂ ಬಗ್ಗೆ ಉಪ್ಪಿನಂಗಡಿ ಶಾಖಾ ಸಹಾಯಕ ಎಂಜಿನಿಯರ್‌ ರಾಜೇಶ್‌ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾವಿಸಿದ ಗ್ರಾಮಸ್ಥರು, ವಿದ್ಯುತ್‌ ಪರಿವರ್ತಕ, ದೀನದಯಾಳ್‌ ಯೋಜನೆಯಡಿ ವಿದ್ಯುತ್‌ ಸಂಪರ್ಕಕ್ಕೆ ಗುತ್ತಿಗೆದಾರರು ಫಲಾನುಭವಿಗಳಿಂದ 20ರಿಂದ 40 ಸಾವಿರ ರೂ. ತನಕವೂ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿ ಸಿದ ರಾಜೇಶ್‌, ಫ‌ಲಾನುಭವಿಗಳು ಯಾವುದೇ ವೆಚ್ಚ ಪಾವತಿಸಬೇಕಾಗಿಲ್ಲ. ಗುತ್ತಿಗೆದಾರರು ಹಣ ವಸೂಲಿ ಮಾಡಿದ್ದಲ್ಲಿ ಲಿಖಿತವಾಗಿ ದೂರು ನೀಡಿ. ಪರಿಶೀಲಿಸಿ, ಕ್ರಮಕೈಗೊಳ್ಳುತ್ತೇವೆ ಎಂದರು.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಫಲಾನುಭವಿಗಳು ಹಣ ಪಾವತಿ ಮಾಡಿದ ಮೇಲೆ ಬಂದು ನಮ್ಮಲ್ಲಿ ದೂರು ಕೊಡುತ್ತಾರೆ. ಆ ಬಳಿಕ ಏನು ಮಾಡಲು ಸಾಧ್ಯವಿದೆ ಎಂದರು. ಗ್ರಾಮಸ್ಥ ಫಿಲಿಪ್‌ ಮಾತನಾಡಿ, ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದರು. 

ಕಂಬ ಎಳೆದಿರುವುದಕ್ಕೆ ಆಕ್ಷೇಪ
ಕೊಣಾಲು ಗ್ರಾಮದ ಶಿವಾರು ಎಂಬಲ್ಲಿ ಮಮತಾ, ಲೀಲಾವತಿ ಎಂಬವರ ಮನೆಗೆ ದೀನದಯಾಳ್‌ ಯೋಜನೆಯಡಿ ಕಂಬ ಅಳವಡಿಸಿದ್ದರೂ ವಿದ್ಯುತ್‌ ಸಂಪರ್ಕ ಆಗಿಲ್ಲ ಎಂದು ಗ್ರಾಮಸ್ಥ ಬಾಲಕೃಷ್ಣ ಅಲೆಕ್ಕಿ ಹೇಳಿದರು. ಪ್ರತಿಕ್ರಿಯಿಸಿದ ನೆಲ್ಯಾಡಿ ಶಾಖಾ JE ರಮೇಶ್‌ ಕುಮಾರ್‌, ಕಂಬ ಹಾಕಿ, ತಂತಿ ಎಳೆದಿರುವುದಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪ ಬಂದಿದ್ದು, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೋಟಿಸ್‌ ಕಳಿಸಿದ್ದಾರೆ ಎಂದರು. ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಜಿಲ್ಲಾ ಮಟ್ಟದ ಅಧಿಕಾ ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪಡಿತರ ಚೀಟಿ: ಆಕ್ರೋಶ
ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ 10 ತಿಂಗಳಾದರೂ ಪಡಿತರ ಚೀಟಿ ಸಿಕ್ಕಿಲ್ಲ ಎಂದು ಗ್ರಾಮಸ್ಥ ಜಯಂತ ಅಂಬರ್ಜೆ ಹೇಳಿದರು. ಆಹಾರ ಇಲಾಖೆ ಅಧಿಕಾರಿಗಳ ಉತ್ತರದಿಂದ ತೃಪ್ತರಾಗದ ಜಯಂತ್‌, ಆದಾಯ ಪ್ರಮಾಣಪತ್ರ ತಂದ ಕೆಲವರಿಗೆ ತಾ.ಪಂ.ನಲ್ಲಿ ಪಡಿತರ ಚೀಟಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಂತ್ರಿಕ ತೊಂದರೆಯಿಂದಾಗಿ ವಿತರಣೆ ಆಗಿಲ್ಲ. ಇನ್ನೊಂದು ವಾರದಲ್ಲಿ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಗಲಿದೆ ಎಂದು ಇಒ ಹೇಳಿದರು.

ಉಪಾಧ್ಯಕ್ಷ ಪ್ರಸಾದ್‌ ಕೆ.ಪಿ. ಮಾತನಾಡಿ, ಗೋಳಿತ್ತೂಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಒಳಜಗಳದಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದರು. ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಜಾಗವನ್ನು ಮನೆ ನಿವೇಶನಕ್ಕೆ ಕಾದಿರಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಶ್ಮಶಾನ, ಮನೆ ನಿವೇಶನಕ್ಕೆ ಜಾಗ ಕಾದಿರಿಸಿದ್ದರೂ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೋಲ್ಪೆ ಮಸೀದಿ ಸಮೀಪದಲ್ಲಿರುವ ಖಾಲಿ ಸರಕಾರಿ ಜಾಗವನ್ನು ಮನೆ ನಿವೇಶನಕ್ಕೆ ಹಂಚಲು ಕ್ರಮ ಕೈಗೊಳ್ಳಬೇಕೆಂದು ಇಸ್ಮಾಯಿಲ್‌ ಕೋಲ್ಪೆ ಆಗ್ರಹಿಸಿದರು.

Advertisement

ರಸ್ತೆಯಲ್ಲೇ ನೀರು
ತಿರ್ಲೆ ದೇವಸ್ಥಾನದ ಬಳಿ ಮಳೆ ನೀರು ರಸ್ತೆಯಲ್ಲಿ ನೀರು ಹರಿಯುತ್ತಿದೆ ಎಂದು ಗ್ರಾಮಸ್ಥ ಮೋನಪ್ಪ ಶೆಟ್ಟಿ ಆರೋಪಿಸಿದರು. ಈ ಬಗ್ಗೆ ದೂರು ಬಂದಿದ್ದು, ಪರಿಶೀಲಿಸಲಾಗಿದೆ. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಇತ್ಯರ್ಥಗೊಂಡಿದೆ ಎಂದು ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಪ್ರತಿಕ್ರಿಯಿಸಿದರು. ಆಲಂತಾಯ ಗ್ರಾಮದ ಕಲ್ಲಂಡ, ಪೆರ್ಲ, ತಾರಕೆರೆ ಎಂಬಲ್ಲಿ ತೋಡಿನ ಬದಿ ಕುಸಿದಿದೆ. ತಡೆಗೋಡೆ ನಿರ್ಮಿಸಬೇಕೆಂದು ಗ್ರಾಮಸ್ಥ ವೆಂಕಪ್ಪ ಗೌಡ ಒತ್ತಾಯಿಸಿದರು. ಕಿಂಡಿ ಅಣೆಕಟ್ಟುಗಳ ವಿಚಾರ ಪ್ರಸ್ತಾವವಾದಾಗ ಪ್ರತಿಕ್ರಿಯಿಸಿದ ಇಒ ಜಗದೀಶ್‌, ದುರಸ್ತಿಗೆ ಜಿ.ಪಂ. ಸಿಇಒಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಗೋಳಿತ್ತೂಟ್ಟು ಜನತಾ ಕಾಲನಿಯಲ್ಲಿರುವ ಎಎನ್‌ಎಂ ಕಟ್ಟಡ ಸೋರುತ್ತಿದೆ. ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಅಬ್ದುಲ್‌ ಕುಂಞಿ ಒತ್ತಾಯಿಸಿದರು. ಕಟ್ಟಡದ ದುರಸ್ತಿಗೆ 1 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ತಾ.ಪಂ. ಸದಸ್ಯೆ ತೇಜಸ್ವಿನಿ ಶೇಖರ ಗೌಡ ಮಾಹಿತಿ ನೀಡಿದರು. ಶಾಂತಿನಗರ ಶಾಲೆ ಆಟದ ಮೈದಾನದಲ್ಲಿರುವ ಹಳೆಯ ಅಂಗನವಾಡಿ ಕಟ್ಟಡ ನೆಲಸಮ ಮಾಡುವಂತೆ ಗ್ರಾಮಸ್ಥರಾದ ಪ್ರತಾಪ್‌ಚಂದ್ರ ರೈ, ದೇಜಪ್ಪ ಆಗ್ರಹಿಸಿದರು. ಅಂದಾಜು ಪಟ್ಟಿ ತಯಾರಿಸಿ ಕ್ರಮ ಕೈಗೊಳ್ಳುವುದಾಗಿ ಇಒ ಭರವಸೆ ನೀಡಿದರು.

ಕರಪತ್ರ ಹಂಚಿದ್ದೀರಾ?
ಮಲೇರಿಯಾ ಕರಪತ್ರ ಮುದ್ರಣಕ್ಕೆ ಗ್ರಾ.ಪಂ.ನಿಂದ ಹಣ ಖರ್ಚುಮಾಡಲಾಗಿದೆ. ಕರಪತ್ರ ಹಂಚಿದ್ದು ಕಂಡುಬಂದಿಲ್ಲ ಎಂದು ವೆಂಕಪ್ಪ ಗೌಡ ಹೇಳಿದರು. ಆಶಾ ಕಾರ್ಯ ಕರ್ತೆಯರ ಮೂಲಕ ಹಂಚಲಾಗಿದೆ ಎಂದು ಪಿಡಿಒ ನಯನಕುಮಾರಿ ಹೇಳಿದರು. ಗೋಳಿತ್ತೂಟ್ಟು ಹಾಲು ಉತ್ಪಾದಕರ ಹಾಗೂ ಕೊಣಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ತಲಾ 5 ಸೆಂಟ್ಸ್‌ ಜಾಗ ಕಾಯ್ದಿರಿಸುವ ಕುರಿತಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮಸ್ಥರಾದ ಫಿಲಿಪ್‌ ಬಳಕ, ಹರೀಶ್‌ ಪಾತ್ರಮಾಡಿ, ಅಬ್ರಹಾಂ, ನಾಸೀರ್‌ ಹೊಸಮನೆ, ಇಸ್ಮಾಯಿಲ್‌ ಕೋಲ್ಪೆ, ಸುರೇಶ್‌ ತಿರ್ಲೆ ಚರ್ಚೆಯಲ್ಲಿ ಪಾಲ್ಗೊಂಡರು.

ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯೆಯರಾದ ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ, ಉಷಾ ಅಂಚನ್‌, ಸದಸ್ಯ ರಾದ ವಿ.ಸಿ. ಜೋಸೆಫ್‌, ಮೀನಾಕ್ಷಿ, ವಾಣಿ ಶೆಟ್ಟಿ, ಹೇಮಲತಾ, ಸವಿತಾ, ವಿಶ್ವನಾಥ ಮೂಲ್ಯ, ಡೀಕಯ್ಯ ಪೂಜಾರಿ, ನೀಲಪ್ಪ ನಾಯ್ಕ, ನೇಮಿರಾಜ, ಗಾಯತ್ರಿ, ಮುತ್ತಪ್ಪ ಗೌಡ, ಪುರುಷೋತ್ತಮ ಜಿ., ರೇಖಾ ಪಿ. ರೈ, ಭವ್ಯಾ, ತುಳಸಿ ಉಪಸ್ಥಿತರಿದ್ದರು. ಪಿಡಿಒ ನಯನಕುಮಾರಿ ಸ್ವಾಗತಿಸಿ, ವರದಿ ವಾಚಿಸಿದರು. ಸಿಬಂದಿ ಬಾಬು ನಾಯ್ಕ ವಂದಿಸಿದರು. ಪುಷ್ಪಾ ಜಯಂತ್‌, ದಿನೇಶ್‌, ಯಶವಂತ್‌ ಸಹಕರಿಸಿದರು.

ತಿರ್ಲೆಯಲ್ಲಿ ಟಿ.ಸಿ. ಅಳವಡಿಸಿ
ತಿರ್ಲೆಯಲ್ಲಿ ಹೆಚ್ಚುವರಿ ಟಿ.ಸಿ. ಅಳವಡಿಸುವಂತೆ ಮನವಿ ನೀಡಿದ್ದೇವೆ. ಇಲ್ಲಿ 30ಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್‌ಗಳಿವೆ. ಮಂಜೂರಾದ ಟಿಸಿಯನ್ನು ರಾಜಕೀಯ ಒತ್ತಡ ಬಳಸಿ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇ.ಇ. ರಾಜೇಶ್‌, ತಿರ್ಲೆಯಲ್ಲಿ ಹೆಚ್ಚುವರಿ ಟಿ.ಸಿ. ಅಳವಡಿಸುವ ಸಂಬಂಧ ಅಂದಾಜು ಪಟ್ಟಿ ಮಾಡಲಾಗಿದೆ. ಮಂಜೂರಾತಿ ಹಂತದಲ್ಲಿದೆ ಎಂದರು.

ಹಕ್ಕುಪತ್ರ ಸಿಕ್ಕಿದರೂ ನಿವೇಶನವಿಲ್ಲ
ಮನೆ ನಿವೇಶನದ ಹಕ್ಕುಪತ್ರ ದೊರೆತರೂ ನಿವೇಶನ ಸಿಕ್ಕಿಲ್ಲ. ಗ್ರಾಮಕರಣಿಕರಲ್ಲಿ ತೋರಿಸಿದಾಗ ಹಕ್ಕುಪತ್ರ ಒರಿಜಿನಲ್‌ ಅಲ್ಲ ಎಂದು ತಿಳಿಸಿದ್ದಾರೆಂದು ಮಹಿಳೆಯೊಬ್ಬರು ಸಭೆಯಲ್ಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಸದಸ್ಯೆ ಉಷಾ ಅಂಚನ್‌, ಇದೊಂದು ಗಂಭೀರ ಸಮಸ್ಯೆ. ಜಾಗದ ಸಮಸ್ಯೆ ಇದ್ದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯವರು ಸರಿಪಡಿಸಿಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next