Advertisement

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

01:11 PM May 18, 2024 | Team Udayavani |

50 ವರ್ಷಗಳ ಹಿಂದೆ ಇದೇ ದಿನ ಭಾರತವು ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಜಗತ್ತಿನ ಅಣ್ವಸ್ತ್ರ ಬಲಾಡ್ಯ ರಾಷ್ಟ್ರಗಳ ಸಾಲಿಗೆ ಸೇರಿತು. ಈ ಪರಮಾಣು ಪರೀಕ್ಷೆಯನ್ನು ಕೈಗೊಂಡಿದ್ದೇಕೆ, ಅದರ ಹಿಂದಿರುವ ಕಾರಣಗಳು, ಪರೀಕ್ಷೆ ಅನಂತರದ ಪರಿಣಾಮಗಳು ಇತ್ಯಾದಿ ಮಾಹಿತಿ ಇಲ್ಲಿದೆ.

Advertisement

ಕೊನೆಗೂ ಬುದ್ಧ ನಕ್ಕ!. 1974 ಮೇ 18ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಾಬಾ ಆಟೋ ಮಿಕ್‌ ರಿಸರ್ಚ್‌ ಸೆಂಟರ್‌ನ ನಿರ್ದೇಶಕರಾಗಿದ್ದ ರಾಜಾರಾಮಣ್ಣ ಅವರು, ರಾಜಸ್ಥಾನದ ಪೋಖ್ರಾನ್‌ನಲ್ಲಿ ಕೈಗೊಳ್ಳಲಾದ ಭೂಗತ ಪರಮಾಣು ಪರೀಕ್ಷೆಯ ಯಶಸ್ಸಿನ ಕುರಿತು ಹೇಳಿದ ಮಾತಿದು. ಆ ಗಳಿಗೆಗೆ ಈಗ ಭರ್ತಿ 50 ವರ್ಷ.

ವಿಶ್ವಸಂಸ್ಥೆಯ ಭದ್ರತಾ ಸಮಿತಿ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಚೀನ, ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ಹೊರತಾದ ಪರಮಾಣು ಪರೀಕ್ಷೆ ನಡೆಸಿದ 6ನೇ ರಾಷ್ಟ್ರ ಎಂಬ ಕೀರ್ತಿಗೆ ಭಾರತವು ಪಾತ್ರವಾಯಿತು. ತನ್ನ ಈ ಪರಾಕ್ರಮಕ್ಕೆ ಭಾರತವು ಬೆಲೆಯನ್ನು ತೆರಬೇಕಾಯಿತು. ಶಾಂತಿಯುತ ಉದ್ದೇಶಕ್ಕಾಗಿ ಪರೀಕ್ಷೆ ನಡೆಸಲಾಗಿದೆ ಎಂಬ ಭಾರತದ ವಾದವನ್ನು ಒಪ್ಪದ ಅಂತಾರಾಷ್ಟ್ರೀಯ ಸಮುದಾಯ ಅನೇಕ ನಿರ್ಬಂಧಗಳನ್ನು ಹೇರಿತು. ಪರಿಣಾಮ ಮುಂದಿನ ಹಲವು ವರ್ಷಗಳವರೆಗೆ ಪರಮಾಣು ಚಟುವಟಿಕೆಗಳ ಕುರಿತು ಭಾರತದ ಕೆಲಸಗಳು ನಿಧಾನಗತಿ ಹಿಡಿದವು. ಆದರೆ ಪ್ರಪಂಚದ ನಕಾಶೆಯಲ್ಲಿ ಭಾರತವು ಪರಮಾಣುಸಜ್ಜಿತ ರಾಷ್ಟ್ರ ಎಂಬುದು ಸ್ಥಾಪಿತವಾಯಿತು ಮತ್ತು ಇಂದಿರಾ ಗಾಂಧಿ ನಾಯಕತ್ವದ ಕೀರ್ತಿ ದಶ ದಿಕ್ಕುಗಳಿಗೂ ಹರಡಿತು. ಇದು ಮುಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು 2ನೇ ಪರಮಾಣು ಪರೀಕ್ಷೆ ನಡೆಸಲು ಸ್ಫೂರ್ತಿಯಾಯಿತು.

ಭಾರತದ ಮೊದಲ ಪರಮಾಣು ಪರೀಕ್ಷೆಯ 1974ರ “ಬುದ್ಧ ಪೂರ್ಣಿಮೆ’ಯ ದಿನವೇ ನಡೆದಿದ್ದಕ್ಕಾಗಿ ಈ ಕಾರ್ಯಾಚರಣೆಗೆ, “ಆಪರೇಷನ್‌ ಸ್ಮೈಲಿಂಗ್‌ ಬುದ್ಧ’ ಎಂದು ಹೆಸರಿಡಲಾಗಿತ್ತು. ಜತೆಗೆ “ಆಪರೇಷನ್‌ ಹ್ಯಾಪಿ ಕೃಷ್ಣ’ ಅಥವಾ “ಪೋಖ್ರಾನ್‌-1′ ಕಾರ್ಯಾಚರಣೆ ಎಂದೂ ಕರೆಯಲಾಗುತ್ತದೆ. ಈ ಕಾರ್ಯಾಚರಣೆಗೆ 1974ರಲ್ಲಿ ಅಂದಾಜು 18.60 ಕೋಟಿ ರೂ. ವೆಚ್ಚವಾಗಿತ್ತು.

ಪೋಖ್ರಾನ್‌ನಲ್ಲಿ ಪರೀಕ್ಷೆ ನಡೆದಿದ್ದು ಹೇಗೆ? 

Advertisement

1972 ಸೆಪ್ಟಂಬರ್‌ 2ರಂದು ಪ್ರಧಾನಿ ಇಂದಿರಾ ಗಾಂಧಿ ಅವರು ಪರಮಾಣು ಪರೀಕ್ಷೆ ಕೈಗೊಳ್ಳುವ ಹೊಣೆಯನ್ನು ಭಾಭಾ ಆಟೋಮಿಕ್‌ ರಿಸರ್ಚ್‌ ಸೆಂಟರ್‌ಗೆ ವಹಿಸಿದರು. ಮೊದಲಿಗೆ ಪರಮಾಣು ಪರೀಕ್ಷೆಗೆ “ಶಾಂತಿಯುತ ಪರಮಾಣು ಸ್ಫೋಟಕ’ ಎಂದು ಹೆಸರಿಡಲಾಗಿತ್ತು. 1974ರ ಬುದ್ಧ ಜಯಂತಿ ಯಂದು ಪರೀಕ್ಷೆ ನಡೆಸಲು ನಿರ್ಧರಿಸಿದ್ದರಿಂದ ಬಳಿಕ “ಸ್ಮೈಲಿಂಗ್‌ ಬುದ್ಧ’ ಎಂದು ಕರೆಯಲಾಯಿತು.

ಕಾರ್ಯಾಚರಣೆಯ ಸಂಪೂರ್ಣ ನೇತೃತ್ವವನ್ನು ವಿಜ್ಞಾನಿ ರಾಜಾರಾಮಣ್ಣ ಅವರು ವಹಿಸಿದ್ದರು. ಮೊದಲ ಪರಮಾಣು ಪರೀಕ್ಷೆ ಅವರ ಒಟ್ಟು ಪ್ರಯತ್ನದ ಫ‌ಲ. ರಾಮಣ್ಣ ನೇತೃತ್ವದ ಸುಮಾರು 75 ಎಂಜಿನಿಯರ್‌ ಮತ್ತು ವಿಜ್ಞಾನಿಗಳ ತಂಡವು ಇಡೀ ಕಾರ್ಯಾಚರಣೆಯನ್ನು ವಿನ್ಯಾಸಗೊಳಿಸಿತು.

ಫೈರಿಂಗ್‌ ಬಟನ್‌ ಒತ್ತಿದ ಅಂತಿಮ ಗಳಿಗೆ!

ರಾಜಸ್ಥಾನದ ಪೋಖ್ರಾನ್‌ನಲ್ಲಿ ಕೈಗೊಳ್ಳಲಾದ ಪರೀಕ್ಷೆಯ ಪರಮಾಣು ಸಾಧನವು, ಅಮೆರಿಕವು ಜಪಾನ್‌ನ ನಾಗಾಸಾಕಿಯಲ್ಲಿ ಮೇಲೆ ಎಸೆದ “ಫ್ಯಾಟ್‌ ಮ್ಯಾನ್‌’ ಅಣು ಬಾಂಬಿನಷ್ಟೇ ಶಕ್ತಿಶಾಲಿಯಾಗಿತ್ತು! 1.25 ಮೀಟರ್‌ ವ್ಯಾಸ ಹಾಗೂ 1,400 ಕೆ.ಜಿ. ತೂಕದ, ಸಂಪೂರ್ಣವಾಗಿ ಜೋಡಿಸಲಾದ ಪರಮಾಣು ಸಾಧನವು ಷಡ್ಭುಜಿ ಅಡ್ಡ ವಿಭಾಗವನ್ನು(ಕ್ರಾಸ್‌ ಸೆಕ್ಷನ್‌) ಹೊಂದಿತ್ತು. 1.25 ಮೀಟರ್‌ ವ್ಯಾಸ ಮತ್ತು 1,400 ಕೆ.ಜಿ. ತೂಕವಿದ್ದ ಅದನ್ನು ಷಡ್ಬುಜಾಕೃತಿಯ ಲೋಹದ ಟ್ರೈಪಾಡ್‌ನ‌ಲ್ಲಿ ಅಳವಡಿಸಲಾಗಿತ್ತು. ಬಳಿಕ ಅದನ್ನು ಸೈನ್ಯವು ಮರಳಿನಿಂದ ಮುಚ್ಚಿದ ಹಳಿಗಳ ಮೇಲೆ ಪರೀಕ್ಷೆ ನಡೆಸುವ ಶಾಫ್ಟ್ಗೆ ಸಾಗಿಸಿ, ಭೂಗತಗೊಳಿಸಲಾಯಿತು. ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್‌ ಪ್ರಣಬ್‌ ಆರ್‌. ದಸ್ತಿದಾರ್‌ ಮೇ 18ರಂದು ಬೆಳಗ್ಗೆ 8.05 ಗಂಟೆಗೆ ಫೈರಿಂಗ್‌ ಬಟನ್‌ ಒತ್ತಿದಾಗ ಪರಮಾಣು ಸ್ಫೋಟಗೊಂಡಿತು. ಸ್ಫೋಟದ ಬಳಿಕ ಹಾನಿಯ ತೀವ್ರತೆಯ 8ರಿಂದ 12 ಕಿಲೋ ಟನ್‌ನಷ್ಟಿತ್ತು. ಆದರೆ, ಈ ಬಗ್ಗೆ ವಿವಾದಗಳಿವೆ. ಈ ಪರೀಕ್ಷೆಯೊಂದಿಗೆ ಭಾರತವು ಪರಮಾಣುಸಜ್ಜಿತ ರಾಷ್ಟ್ರಗಳಿಗೆ ಸಾಲಿಗೆ ಸೇರಿತು. ಪರಮಾಣು ಪ್ರಸರಣ ರಹಿತ ಒಪ್ಪಂದ ಏರ್ಪಟ್ಟ 6 ವರ್ಷದ ಬಳಿಕ ಭಾರತವು ಈ ಪರೀಕ್ಷೆಯನ್ನು ನಡೆಸಿತು.

ಪರಮಾಣು ಪರೀಕ್ಷೆ ನಡೆಸಿದ್ದೇಕೆ?

1962ರ ಭಾರತ ಮತ್ತು ಚೀನ ಯುದ್ಧದ ಬಳಿಕ ಪ್ರಾದೇಶಿಕ ಭದ್ರತೆಯ ನಾನಾ ಸವಾಲು ಎದುರಾದವು. ಪರಿಣಾಮ ಭಾರತವು ನಿಧಾನವಾಗಿ ಪರಮಾಣು ಚಟುವಟಿಕೆಗಳನ್ನು ಆರಂಭಿಸಿತ್ತು. ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರು ಹೋಮಿ ಜಹಾಂಗೀರ್‌ ಭಾಭಾ ಅವರೊಂದಿಗೆ ಭಾರತದ ಅಣು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಅಂತಿಮವಾಗಿ ಭಾರತದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಕಾಪಾಡುವುದು ಮತ್ತು ಸಂಭಾವ್ಯ ವಿಪ್ಲವಗಳನ್ನು ಎದುರಿಸಲು ಸಜ್ಜಾಗುವುದು ಅನಿವಾರ್ಯವಾಯಿತು. ಅದರ ಭಾಗವಾಗಿ 1974ರಲ್ಲಿ ಮೊದಲು ಪರಮಾಣು ಪರೀಕ್ಷೆ ನಡೆಸಿದೆ.

ದೇಶದ ರಕ್ಷಣೆ, ವಿದೇಶಾಂಗ ಸಚಿವರಿಗೆ ಗೊತ್ತಿರಲಿಲ್ಲ!

ಭಾರತವು ಮೊದಲ ಪರಮಾಣು ಪರೀಕ್ಷೆಯನ್ನು ಭಾರೀ ರಹಸ್ಯವಾಗಿ ನಡೆಸಿತು. ಅಸಲಿಗೆ, ಅಂದಿನ ರಕ್ಷಣ ಸಚಿವರಾಗಿದ್ದ ಜಗಜೀವನ್‌ ರಾಮ್‌ ಅವರಿಗೆ ಪರೀಕ್ಷೆ ನಡೆದ ಬಳಿಕವಷ್ಟೇ ಈ ಬಗ್ಗೆ ಗೊತ್ತಾಗಿತ್ತು. ಪ್ರಧಾನಿ ಹಾಗೂ ಅವರ ಸಲಹೆಗಾರರಾದ ಪರಮೇಶ್ವರ ಹಕ್ಸರ್‌, ದುರ್ಗಾ ಧಾರ್‌ ಅವರಿಗೆ ಮಾಹಿತಿ ಇತ್ತು. ಪರೀಕ್ಷೆ ಕೈಗೊಳ್ಳುವ 48 ಗಂಟೆ ಮೊದಲು ವಿದೇಶಾಂಗ ಸಚಿವ ಸ್ವರಣ್‌ ಸಿಂಗ್‌ಗೆ ಮಾಹಿತಿ ನೀಡಲಾಯಿತು. ಸೇನೆಯ ಪೈಕಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಜಿ.ಜಿ. ಬೇವೂರ್‌ ಮತ್ತು ಇಂಡಿಯನ್‌ ವೆಸ್ಟರ್ನ್ ಕಮಾಂಡ್‌ನ‌ ನಾಯಕರಿಗೆ ಮಾತ್ರ ಗೊತ್ತಿತ್ತು. ಅಮೆರಿಕ, ರಷ್ಯಾ ಸೇರಿದಂತೆ ವಿಶ್ವದ ಯಾವುದೇ ಗುಪ್ತಚರ ಸಂಸ್ಥೆಗಳಿಗೂ ಈ ಕುರಿತು ಸುಳಿವೇ ಇರಲಿಲ್ಲ.

ಕನ್ನಡಿಗ ರಾಜಾ ರಾಮಣ್ಣ ನೇತೃತ್ವ

ಭಾರತದ ನಡೆಸಿದ ಮೊದಲ ಪರಮಾಣು ಪರೀಕ್ಷೆ ಸ್ಮೈಲಿಂಗ್‌ ಬುದ್ಧ ಕಾರ್ಯಾಚರಣೆಯನ್ನು ಹೊಣೆಯನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಕರ್ನಾಟಕದ ಭೌತಶಾಸ್ತ್ರಜ್ಞರಾದ ರಾಜಾ ರಾಮಣ್ಣ ಅವರಿಗೆ ವಹಿಸಿದರು. ಹೋಮಿ ಜೆಹಾಂಗೀರ್‌ ಭಾಬಾ ಅವರ ಕೆಳಗೆ ಕೆಲಸ ಶುರು ಮಾಡಿದ ರಾಮಣ್ಣ ಅವರು 1964ರಲ್ಲಿ ಪರಮಾಣು ಕಾರ್ಯಕ್ರಮವನ್ನು ಸೇರಿಕೊಂಡರು. 1967ರಲ್ಲಿ ಅದರ ನಿರ್ದೇಶಕರಾದರು. ಭಾಭಾ ಆಟೋಮಿಕ್‌ ರಿಸರ್ಚ್‌ ಸೆಂಟರ್‌ನ ನಿರ್ದೇಶಕ ರಾದ ಅವರು ಅಣ್ವಸ್ತ್ರಗಳ ವೈಜ್ಞಾನಿಕ ಸಂಶೋಧನೆಯ ಮೇಲ್ವಿಚಾರಣೆಯನ್ನು ನಡೆಸುತ್ತಿ ದ್ದರು. ಸುಮಾರು 4 ದಶಕಗಳ ಕಾಲ ಭಾರತದ ಪರಮಾಣ ಸಂಬಂಧಿ ಕಾರ್ಯ ಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ತುಮಕೂರು ಜಿಲ್ಲೆಯವರಾದ ರಾಜಾ ರಾಮಣ್ಣ ಅವರಿಗೆ ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳು ದೊರೆತಿವೆ.

ಯಶಸ್ಸಿನ ರೂವಾರಿಗಳು

* ಇಂದಿರಾ ಗಾಂಧಿ, ಪ್ರಧಾನಿ

* ರಾಜಾರಾಮಣ್ಣ, ಸ್ಮೈಲಿಂಗ್‌ ಬುದ್ಧ ಕಾರ್ಯಾಚರಣೆ ನೇತೃತ್ವ ಮತ್ತು ಬಾರ್ಕ್‌ ಚೇರ್ಮನ್‌

* ವಾಮನ್‌ ದತ್ತಾತ್ರೇಯ ಪಟವರ್ಧನ್‌, ಸ್ಫೋಟಕ ವಸ್ತು ಮತ್ತು ಡಿಟೋನೇಷನ್‌ ಸಿಸ್ಟಮ್‌ ಅಭಿವೃದ್ಧಿ

* ಹೋಮಿ ಸೇಥಿ, ಅಣು ಇಂಧನ ಆಯೋಗ ಚೇರ್ಮನ್‌

* ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ, ಡಿಆರ್‌ಡಿಒ ವಿಜ್ಞಾನಿ

* ಪಿ.ಕೆ.ಅಯ್ಯಂಗಾರ್‌, ಪರಮಾಣು ಸಾಧನ ವಿನ್ಯಾಸ ಮತ್ತು ತಯಾರಿಕ

ಪರೀಕ್ಷೆ ಬಳಿಕ ಏನಾಯ್ತು?

‌*ಪ್ರಧಾನಿ ಇಂದಿರಾ ಗಾಂಧಿ ಜನಪ್ರಿಯತೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಹೆಚ್ಚಾಯಿತು.

* ಭಾರತೀಯ ಸಂಸತ್ತಿನಲ್ಲಿ ಕಾಂಗ್ರೆಸ್‌ ಸರಕಾರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿಯಿತು.

* ತಾನು ನಡೆಸಿದ ಪರಮಾಣು ಪರೀಕ್ಷೆ ಶಾಂತಿ ಕಾರ್ಯಗಳಿಗೆ ಎಂಬುದನ್ನು ಭಾರತ ಜಗತ್ತಿನ ಎದುರು ಸಾಬೀತು ಪಡಿಸಿತು.

* ಅಮೆರಿಕ, ಕೆನಡಾ ಸೇರಿ ಹಲವು ರಾಷ್ಟ್ರಗಳು ನಾನಾ ನಿರ್ಬಂಧಗಳನ್ನು ಹೇರಿದವು.

* ಈ ಪರೀಕ್ಷೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪರಮಾಣು ಪೂರೈಕೆದಾರರ ಗ್ರೂಪ್‌ ಸೃಷ್ಟಿಯಾಯಿತು.

* ಪರಿಣಾಮ ಭಾರತಕ್ಕೆ ಪರಮಾಣು ರಫ್ತು ನಿಷೇಧವನ್ನು ಹೇರಲಾಯಿತು.

* 2008 ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಏರ್ಪಟ್ಟ ಬಳಿಕ ನಿಷೇಧ ಹಿಂಪಡೆಯಲಾಯಿತು.

* ಶಾಂತಿ ಉದ್ದೇಶಕ್ಕಾಗಿಯೇ ಭಾರತ ಪರೀಕ್ಷೆ ನಡೆಸಿದೆ ಎಂಬುದನ್ನು ಪಾಕ್‌ ಒಪ್ಪಲಿಲ್ಲ.

* ಪರಿಣಾಮ ಪಾಕಿಸ್ಥಾನ ಕೂಡ ತನ್ನದೇ ಆದ ಅಣ್ವಸ್ತ್ರಗಳನ್ನು ಹೊಂದಲು ಶೋಧ ನಡೆಸಿತು.

* ಪೋಖ್ರಾನ್‌-2ನೇ ಪರಮಾಣು ಪರೀಕ್ಷೆಗೂ ಪ್ರೇರಣೆ ನೀಡಿತು.

ಮಲ್ಲಿಕಾರ್ಜುನ ತಿಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next