Advertisement

ನಮ್ಮ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ಗೆ ಚಿನ್ನ: ಗೋಲ್ಡ್‌ ಇಟಿಎಫ್ ಸೂಕ್ತ

12:30 AM Feb 18, 2019 | udayavani editorial |

ಚಿನ್ನವನ್ನು ನಮ್ಮ ಹೂಡಿಕೆ ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಗೋಲ್ಡ್‌ ಇಟಿಎಫ್ ಒಂದು ಉತ್ತಮ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ.

Advertisement

ಇದಕ್ಕೆ ಮುಖ್ಯ ಕಾರಣ ಚಿನ್ನದ ಆನ್‌ಲೈನ್‌ ಖರೀದಿ ಸೌಕರ್ಯ, ಶಿಸ್ತುಬದ್ಧ ಕಂತುಕಂತಿನ ಹೂಡಿಕೆಗಿರುವ ಅವಕಾಶ, ಸುಲಭ ನಗದೀಕರಣಕ್ಕೆ ಇರುವ ಅವಕಾಶ ಮತ್ತು ಖರೀದಿಸಿದ ಚಿನ್ನವನ್ನು ಅಭೌತಿಕ ರೂಪದಲ್ಲಿ ಕೂಡಿಡುವ ಡಿಮ್ಯಾಟ್‌ ವ್ಯವಸ್ಥೆ ಎನ್ನುವುದು ಗಮನಾರ್ಹ.

ನಿಜ ಹೇಳಬೇಕೆಂದರೆ ಒಂದು ವರ್ಷದ ಹಿಂದೆ ಗೋಲ್ಡ್‌ ಇಟಿಎಫ್ ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಶೇರು ಮಾರುಕಟ್ಟೆಯ ಏರುಗತಿ. ಸಾಮಾನ್ಯವಾಗಿ ಶೇರು ಮಾರುಕಟ್ಟೆಗಳು ಏರುಗತಿಯನ್ನು ಕಂಡಾಗ ಹೂಡಿಕೆಯಾಗಿ ಚಿನ್ನ ತನ್ನ ಹೊಳಪನ್ನು ಕಳೆದುಕೊಳ್ಳುವುದು ರೂಢಿ.

ವಹಿವಾಟುದಾರರಿಗೆ ಮುಖ್ಯವಾಗಿ ಯಾವ ಮಾಧ್ಯಮದಲ್ಲಿ ಬಂಡವಾಳ ತೊಡಗಿಸಿದರೆ ಹೆಚ್ಚು ಇಳುವರಿ ಬರುತ್ತದೋ ಅದರತ್ತ ಗಮನ. ಅದನ್ನೇ ದೊಡ್ಡ ದೊಡ್ಡ ಹೂಡಿಕೆದಾರರು, ವಹಿವಾಟುದಾರರು hedging ರೂಪದಲ್ಲಿ ಮಾಡುತ್ತಾರೆ. 

ಶೇರು ಮಾರುಕಟ್ಟೆ ಏರುಗತಿಯಲ್ಲಿದ್ದರೆ ಹೂಡಿಕೆದಾರರು, ವಿಶೇಷವಾಗಿ ವಿದೇಶೀ ಮತ್ತು ದೇಶೀಯ ಹೂಡಿಕೆ ಸಂಸ್ಥೆಗಳು, ಶೇರು ಮಾರುಕಟ್ಟೆಯಲ್ಲಿ ತಮ್ಮ ಬಂಡವಾಳವನ್ನು ಸುರಿಯುತ್ತವೆ. ಶೇರುಮಾರುಕಟ್ಟೆಯು ನಾಲ್ಕು – ಐದು ವರ್ಷಗಳ ಆವರ್ತನೆಯಲ್ಲಿ  ಒಂದು ಎತ್ತರವನ್ನು ತಲುಪಿ ಅಲ್ಲಿಂದ ಕ್ರಮೇಣ ಇಳಿಯುವ ಅಭ್ಯಾಸ ಹೊಂದಿರುವುದನ್ನು ನಾವು ಕಳೆದ ಎರಡು ದಶಕಗಳಿಂದ  ಕಾಣುತ್ತೇವೆ.

Advertisement

ಕೆಲವೊಮ್ಮೆ ಇದು ಕರೆಕ್ಷನ್‌, ಕೆಲವೊಮ್ಮೆ ಇದು ಕ್ರ್ಯಾಶ್‌ ಎನಿಸುವುದಿದೆ ! ಕ್ರ್ಯಾಶ್‌ ಎಂದಾಗ ನಮಗೆ ನೆನಪಾಗುವುದು 2008 ಜಾಗತಿಕ ಆರ್ಥಿಕತೆ ಮತ್ತು ಶೇರು ಮಾರುಕಟ್ಟೆಯ ತಾಜಾ ಮಹಾ ಪತನ ! 

ಕ್ರ್ಯಾಶ್‌ ಎಂದಾಗ ನಮಗೆ ನೆನಪಾಗುವುದು 2008 ಜಾಗತಿಕ ಆರ್ಥಿಕತೆ ಮತ್ತು ಶೇರು ಮಾರುಕಟ್ಟೆಯ ಮಹಾ ಪತನ ! ಅಂತಹ ದುಸ್ಥಿತಿ ಶೇರು ಮಾರುಕಟ್ಟೆಗೆ ಬಂದಾಗ ಕೆಲವರು ಆತ್ಮಹತ್ಯೆಗೆ ಶರಣಾಗುವುದಿದೆ; ಕೆಲವರು ಸಾರಾಸಗಟು ದಿವಾಳಿ ಆಗುವುದಿದೆ. ಹಲವರು ತಮ್ಮ ಜೀವಮಾನದಲ್ಲಿ ಇನ್ನೆಂದೂ ಶೇರು ಮಾರುಕಟ್ಟೆಯ ಬಳಿ ತಾವು ಸುಳಿಯುವುದಿಲ್ಲ ಎಂಬ ಶಪಥ ಕೈಗೊಳ್ಳುವುದಿದೆ !

2008 – 09ರಲ್ಲಿ ಶೇರು ಮಾರುಕಟ್ಟೆ ಭಾರೀ ಪತನವನ್ನು ಕಂಡಿದ್ದಾಗ ಚಿನ್ನದ ಧಾರಣೆ ಶೇ.28ರ ಜಿಗಿತವನ್ನು ಕಂಡಿತ್ತು. ಆಗ ಶೇರು ಮಾರುಕಟ್ಟೆಯು ಶೇ.45 – 50ರ ಪತನವನ್ನು ಕಂಡಿತ್ತು. ಇದಕ್ಕಿಂತ ಹಿಂದೆ 2000 ಇಸವಿಯಲ್ಲಿ ಡಾಟ್‌ ಕಾಮ್‌ ಬಬಲ್‌ ಬಸ್ಟ್‌ ಆಗಿದ್ದಾಗ ಶೇರು ಮಾರುಕಟ್ಟೆ ಶೇ.50ರ ಭಾರೀ ಪತನವನ್ನು ಕಂಡಿತ್ತು. 2010-11ರಲ್ಲಿ ಮುಂಬಯಿ ಶೇರು ಮಾರುಕಟ್ಟೆ ಶೇ. 25ರ ಪತನವನ್ನು ಕಂಡಿತ್ತು. ಆಗ ಚಿನ್ನದ ಧಾರಣೆ ಶೇ.32ರಷ್ಟು ಜಿಗಿದಿತ್ತು.

ಅದಾಗಿ 2015-16ರಲ್ಲಿ ಮುಂಬಯಿ ಶೇರು ಪೇಟೆ ಶೇ.22ರಷ್ಟು ಕುಸಿದಿತ್ತು. ಆಗಲೂ ಚಿನ್ನದ ಧಾರಣೆ ಶೇ.10ರಷ್ಟು ಜಿಗಿದಿತ್ತು. ಹಾಗಿದ್ದರೂ  1992 -93 ರಿಂದ 2000-01ರ ನಡುವಿನ ದಶಕದಲ್ಲಿ  ಶೇರು ಮಾರುಕಟ್ಟೆ ಪತನ ಸಂಭವಿಸಿದಾಗೆಲ್ಲ ಚಿನ್ನ ಧಾರಣೆ ಕಂಡ ಜಿಗಿತದ ಪ್ರಮಾಣ ಅತ್ಯಲ್ಪ ಎನ್ನಬೇಕು. 

2001-01ರ ಬಳಿಕದಲ್ಲಿ ಈ ತನಕ ವರೆಗಿನ ಅವಧಿಯಲ್ಲಿ ಚಿನ್ನ ಮತ್ತು ಶೇರು ಮಾರುಕಟ್ಟೆಯ ನಡುವಿನ ವ್ಯತಿರಿಕ್ತ ಸಂಬಂಧ ಹೆಚ್ಚುತ್ತಲೇ ಬಂದಿರುವುದನ್ನು ವಿಶ್ಲೇಷಕರು ಗಮನಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಚಿನ್ನಕ್ಕೆ ಹೂಡಿಕೆಯ ಮಾಧ್ಯಮವಾಗಿ ಅತ್ಯಧಿಕ ಅಂತಾರಾಷ್ಟ್ರೀಯ ಮಹತ್ವ ಲಭಿಸಿರುವುದೇ ಆಗಿದೆ.

ಕಳೆದ ದಶಕದಿಂದ ನಾವು ಜಾಗತಿಕ ಮಾರುಕಟ್ಟೆಗಳಲ್ಲಿ  ಕರೆನ್ಸಿ ವಾರ್‌ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾ ತೈಲ, ಇನ್ನೊಂದೆಡೆ ಬಲಿಷ್ಠ ಡಾಲರ್‌ ಎದುರಿನ ವಿನಿಮಯ ದರ, ಮತ್ತೂಂದೆಡೆ ಶೇರು ಮಾರುಕಟ್ಟೆಯಲ್ಲಿನ ಅಪಾರ ಏರಿಳಿತ – ಇವುಗಳ ನಡುವೆ ಹೂಡಿಕೆ ಮಾಧ್ಯಮವಾಗಿ ಅಂತಾರಾಷ್ಟ್ರೀಯ ಮಹತ್ವವನ್ನು ಚಿನ್ನ ಪಡೆದುಕೊಂಡಿರುವುದು ಗಮನಾರ್ಹವಾಗಿದೆ.

ಈ ಹಿನ್ನೆಲೆಯಲ್ಲಿ ಚಿನ್ನ ಮತ್ತು ಶೇರು ಮಾರುಕಟ್ಟೆಯ ನಡುವಿನ ವ್ಯತಿರಿಕ್ತ ಸಂಬಂಧ ಗಟ್ಟಿಯಾಗುತ್ತಲೇ ಬಂದಿರುವುದು ಗಮನಾರ್ಹವಾಗಿದೆ. ಕಳೆದ ವರ್ಷದಿಂದೀಚೆಗೆ ಗೋಲ್ಡ್‌ ಇಟಿಎಫ್, ಹೂಡಿಕೆದಾರರಿಗೆ ಶೇ.8ರ ಇಳುವರಿಯನ್ನು ನೀಡುತ್ತಿರುವುದು ಈ ಸ್ಕೀಮಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಶೇರಿನಂತೆ ಗೋಲ್ಡ್‌ ಇಟಿಎಫ್ ನಡಿ ಲಾಭನಗದೀಕರಣ ಸುಲಭವಾಗಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಮೇಲಾಗಿ ಸಿಪ್‌ (ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ ಪ್ಲಾನ್‌) ಹೂಡಿಕೆ ಸೌಕರ್ಯ ಸಾಮಾನ್ಯ ವರ್ಗದ ಜನರಲ್ಲಿ ಹೂಡಿಕೆ ಶಿಸ್ತನ್ನು ಹೆಚ್ಚಿಸಿದೆ.

ಜನಸಾಮಾನ್ಯರ ದೃಷ್ಟಿಯಲ್ಲಿ ಚಿನ್ನ ಆಪದ್ಧನ ಎನ್ನುವುದ ನಿರ್ವಿವಾದ. ಈಗ ಜಾಗತಿಕ ಮಟ್ಟದಲ್ಲಿ ಕೂಡ ಅನೇಕ ದೇಶಗಳಿಗೆ ಚಿನ್ನವು ಆಪದ್ಧನವೇ ಆಗಿದೆ. 1990-91ರ ವೇಳೆ ಭಾರತ ಆರ್ಥಿಕ ದೀವಾಳಿ ಅಂಚನ್ನು ತಲುಪಿದ್ದಾಗ ಪ್ರಧಾನಿ ನರಸಿಂಹ ರಾವ್‌ ಅವರ ಸಂಪುಟದಲ್ಲಿ  ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರು ದೇಶವನ್ನು ಪಾರುಗೊಳಿಸಲು ಸರಕಾರದ ಭಂಡಾರದಲ್ಲಿದ್ದ ಚಿನ್ನದ ಗಮನಾರ್ಹ ಪಾಲನ್ನು ವಿಶ್ವ ಬ್ಯಾಂಕ್‌ ನಲ್ಲಿ ಅಡವಿಟ್ಟಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.

 

ಒಟ್ಟಿನಲ್ಲಿ ಉತ್ತಮ ಹೂಡಿಕೆದಾರನು ತನ್ನ ಉಳಿತಾಯದ ಹಣವನ್ನು ಒಂದೇ ಮಾಧ್ಯಮದಲ್ಲಿ ತೊಡಗಿಸಬಾರದು ; ವಿವಿಧ ಬಗೆಯ ಹೂಡಿಕೆ ಮಾಧ್ಯಮಗಳನ್ನು ಅನುಸರಿಸಬೇಕು ಎಂಬುದೇ ನೈಜ ಹೂಡಿಕೆ ಸಂದೇಶ.

ಎಂದರೆ ಸ್ವಲ್ಪಾಂಶ ಹಣವನ್ನು ಚಿನ್ನದ ಮೇಲೆ, ಸ್ವಲ್ಪಾಂಶವನ್ನು ಮ್ಯೂಚುವಲ್‌ ಫ‌ಂಡ್‌ ನಲ್ಲಿ, ರಿಯಲ್‌ ಎಸ್ಟೇಟ್‌ ನಲ್ಲಿ , ಇನ್ನು ಸ್ವಲ್ಪ ಪ್ರಮಾಣವನ್ನು ಬ್ಯಾಂಕ್‌ ನಿರಖು ಠೇವಣಿಗಳಲ್ಲಿ, ಮತ್ತೆ ಸ್ವಲ್ಪವನ್ನು ಪೋಸ್ಟ್‌ ಆಫೀಸ್‌ ಸ್ಕೀಮುಗಳಲ್ಲಿ, ಸ್ವಲ್ಪವನ್ನು ನೇರ ಶೇರು ಹೂಡಿಕೆಯಲ್ಲಿ, ಸರಕಾರಿ ಬಾಂಡ್‌ಗಳಲ್ಲಿ  – ಹೀಗೆ ಹೂಡಿಕೆ ವೈವಿಧ್ಯಕ್ಕೆ ಹಲವಾರು ಮಾಧ್ಯಮಗಳಿವೆ ಎನ್ನುವುದನ್ನು ಮರೆಯಬಾರದು.

ಶೇರು ಮಾರುಕಟ್ಟೆ ನೆಲಕಚ್ಚಿದಾಗ ಸಹಜವಾಗಿಯೇ ಚಿನ್ನ  ಏರುಗತಿಯನ್ನು ಕಾಣುವುದರಿಂದ, ಶೇರು ಹೂಡಿಕೆಯ ನಷ್ಟವನ್ನು ಚಿನ್ನದ ಹೂಡಿಕೆಯ ಮೂಲಕ ಸರಿದೂಗಿಸುವುದಕ್ಕೆ ಅವಕಾಶ ಇರುತ್ತದೆ. ಆದುದರಿಂದಲೇ ಚಿನ್ನ ಯಾವತ್ತೂ ಅಪದ್ಧನ – ಅದು ಬೌತಿಕ ರೂಪದಲ್ಲೇ ಇರಲಿ; ಅಭೌತಿಕ ರೂಪದಲ್ಲೇ ಇರಲ್ಲಿ – ಚಿನ್ನ ಯಾವತ್ತೂ ಚಿನ್ನ, ಅಪ್ಪಟ ಆಪದ್ಧನ ! 

Advertisement

Udayavani is now on Telegram. Click here to join our channel and stay updated with the latest news.

Next