Advertisement

“ಹಂತ-ಹಂತ ಲಾಕ್‌ಡೌನ್‌ ಹಿಂಪಡೆಯಲಿ’

01:37 PM Apr 09, 2020 | Naveen |

ಗೋಕಾಕ: ದೇಶದ ಇಂದಿನ ಪರಿಸ್ಥಿತಿ ಅವಲೋಕಿಸಿದಾಗ ಏ.14ರ ನಂತರ ಲಾಕ್‌ ಡೌನ್‌ವನ್ನು ಒಮ್ಮೆಲೆ ತೆರವುಗೊಳಿಸಬಾರದು. ಹಂತ-ಹಂತವಾಗಿ ತೆರವುಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.

Advertisement

ಬುಧವಾರ ನಗರದಲ್ಲಿ ತಮ್ಮ ಗೃಹ ಕಚೇರಿ ಹಿಲ್‌ ಗಾರ್ಡನ್‌ನಲ್ಲಿ ನಗರಸಭೆ ಸದಸ್ಯರಿಗೆ ಮತ್ತು ಪತ್ರಕರ್ತರಿಗೆ ಸ್ಯಾನಿಟೈಸರ್‌ ವಿತರಿಸಿ ಅವರು ಮಾತನಾಡಿದರು. ಈವರೆಗೆ ರಾಜ್ಯಗಳಲ್ಲಿ ದಾಸ್ತಾನು ಇದ್ದ ಜೀವನಾಶ್ಯಕ ಅಗತ್ಯ ವಸ್ತುಗಳಿಂದ ಜನರಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ ಏ.14ರ ನಂತರ ಪ್ರಥಮ ಹಂತವಾಗಿ ಅಂತರ್‌ ರಾಜ್ಯ ಮತ್ತು ಜಿಲ್ಲಾ ಗಡಿಗಳನ್ನು ತೆರವುಗೊಳಿಸಿ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ನೀಡಬೇಕು. ನಂತರ ಹಂತ-ಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕೊರೊನಾ ಸೋಂಕು ತಡೆಯಲು ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್‌ ಜಾರಿಗೊಳಿಸಬೇಕಾಗಿತ್ತು. ಆದರೆ ಒಮ್ಮೆಲೆ ಲಾಕ್‌ಡೌನ್‌ ಘೋಷಣೆ ಮಾಡಿದ್ದು ಸರಿಯಲ್ಲ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ಒಂದೆರಡು ದಿನದ ಅವಕಾಶ ನೀಡಿ ನಂತರ ಲಾಕ್‌ಡೌನ್‌ ಘೋಷಿಸಿದ್ದರೆ ಈಗ ಉದ್ಭವಿಸಿರುವ ಸಮಸ್ಯೆಗಳು ಹುಟ್ಟುತ್ತಿರಲಿಲ್ಲ ಎಂದ ಸತೀಶ ಜಾರಕಿಹೊಳಿ, ಒಮ್ಮೆಲೆ ಲಾಕ್‌ ಡೌನ್‌ ಘೋಷಿಸಿದ್ದರಿಂದ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುವಂತಾಯಿಗಿದೆ ಎಂದರು.

ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಲಾಕ್‌ಡೌನ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅದನ್ನು ಬಿಟ್ಟು ಅವೈಜ್ಞಾನಿಕವಾಗಿ ಚಪ್ಪಾಳೆ ಮತ್ತು ದೀಪ ಬೆಳಗಿಸುವದು ಸರಿಯಾದ ಕ್ರಮವಲ್ಲ. ಇದು ವೈಜ್ಞಾನಿಕ ಕ್ರಮವಾಗಿದ್ದರೆ ಖಂಡಿತ ಅದನ್ನು ಸ್ವಾಗತಿಸಬಹುದು ಎಂದು ಸತೀಶ ಜಾರಕಿಹೊಳಿ ಹೇಳಿದರು. ನಗರಸಭೆ ಸದಸ್ಯರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next