Advertisement

ದೇವರ ನಾಡಲ್ಲಿ ನಿಲ್ಲದ ಸಂಘರ್ಷ

03:45 AM Mar 06, 2017 | Harsha Rao |

ಕೇರಳದ ರಕ್ತಸಿಕ್ತ ರಾಜಕಾರಣಕ್ಕೆ ಹೊಸ ಅಧ್ಯಾಯ

Advertisement

ಹಿಂಸಾತ್ಮಕ ಸಂಘರ್ಷವಿಲ್ಲದೆ ಕೇರಳದಲ್ಲಿ ರಾಜಕೀಯವೇ ಇಲ್ಲ. ಅದರ ಹಿನ್ನೆಲೆಯನ್ನು ನೋಡಬೇಕೆಂದರೆ ಸ್ವಾತಂತ್ರ ಹೋರಾಟದ ಕೊನೆಯ ದಿನಗಳು ಮತ್ತು ಪ್ರಜಾಪ್ರಭುತ್ವ ಸರಕಾರ ರಚನೆಗೊಂಡ ಆರಂಭದ ವರ್ಷಗಳತ್ತ ಹೊರಳಬೇಕು. ನಿರಂಜನ ಅವರ “ಚಿರಸ್ಮರಣೆ’ ಕಾದಂಬರಿಯಲ್ಲಿ ಇಂಥ ಗಲಾಟೆಗಳ ಉಲ್ಲೇಖವಿದೆ.

ಕೇರಳದ ರಾಜಕೀಯವೆಂದರೆ ಹಾಗೆಯೇ. ಹಿಂಸೆಯ ಜತೆಗೆ ಇರಬೇಕಾಗಿದೆ. ಅದರಲ್ಲೂ ಕಣ್ಣೂರು ಜಿಲ್ಲೆಯಲ್ಲಿ ರಾಜಕೀಯ ಹಿಂಸಾಚಾರವೆಂದರೆ ಅಲ್ಲಿನ ಜೀವನ ಜತೆ ಹಾಸುಹೊಕ್ಕಾಗಿಯೇ ಇದೆ. ಕಳೆದ ಚುನಾವಣೆಯಲ್ಲಿ ಸಿಪಿಎಂ, ಸಿಪಿಐ ನೇತೃತ್ವದ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎಲ್‌ಡಿಎಫ್) ಗೆದ್ದು ಅಧಿಕಾರಕ್ಕೇರಿದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ತವರು ಜಿಲ್ಲೆಯಲ್ಲಿ ಅಂಥ ಘಟನೆಗಳು ಹೆಚ್ಚಾಗಿಯೇ ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಸೌಹಾರ್ದ ಸಮಾವೇಶ ಆಯೋಜಿಸಲಾಗಿತ್ತು. ಅದರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾಗಿಯಾಗಬಾರದು ಎಂಬಲ್ಲಿಂದ ಹಾಲಿ ವಿವಾದ ಆರಂಭವಾದದ್ದು. ಕೇರಳದಲ್ಲಿ ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ಹಲ್ಲೆ, ಕೊಲೆ ಪ್ರಕರಣಗಳ ಬಗ್ಗೆ ಮೌನವಾಗಿದ್ದುಕೊಂಡು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದ ಸಮಾವೇಶ ದಲ್ಲಿ ಅವರು ಭಾಗವಹಿಸುವ ಔಚಿತ್ಯವನ್ನು ಪ್ರಶ್ನಿಸಲಾಗಿತ್ತು.

ಹೀಗಾಗಿಯೇ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗ್ಳಲ್ಲಿ ಪಿಣರಾಯಿ ಭೇಟಿಗೆ ಪರ, ವಿರೋಧ ಮಾತುಗಳು ಚರ್ಚೆಗಳು ಆರಂಭವಾಗಿ, ಅವು ನಡೆಯುತ್ತಿರುವಂತೆಯೇ ಮಂಗಳೂರಿನಲ್ಲಿ ಕಾರ್ಯಕ್ರಮವೂ ನಡೆದು ಮುಖ್ಯಮಂತ್ರಿ ಬಿಗಿ ಭದ್ರತೆಯಲ್ಲಿ ಬಂದು ಮಾತನಾಡಿಯೂ ಹೋಗಿದ್ದರು.

ತಮ್ಮ ಮಾತಿನಲ್ಲಿ ಆರ್‌ಎಸ್‌ಎಸ್‌ ವಿರುದ್ಧ ವಾಗ್ಧಾಳಿ ನಡೆಸಿ ಹೋದ ಕೇರಳ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ದೇಗುಲಗಳ ಆಶ್ರಯದಲ್ಲಿ ನಡೆಯುವ ಶಸ್ತ್ರಾಭ್ಯಾಸ ನಿಯಂತ್ರಣಕ್ಕೆ ಕಾನೂನು ತರುವ ಮಾತುಗಳನ್ನು ಹೇಳಿದ್ದರು. ಈ ಮೂಲಕ ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದೂ ಸಂಘಟನೆಗಳನ್ನು ಕೇರಳದಲ್ಲಿ ನಿಯಂತ್ರಿಸಲೋ ಎಂಬಂತೆ ಕಾನೂನು ಕ್ರಮಕ್ಕೂ ಹಿಂದೇಟು ಹಾಕುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಅದಕ್ಕೆಲ್ಲ ಕಳಶವಿಟ್ಟಂತೆ ಉಜ್ಜೆ„ನಿಯ ಸ್ಥಳೀಯ ಆರ್‌ಎಸ್‌ಎಸ್‌ ನಾಯಕ ಕುಂದನ್‌ ಚಂದ್ರಾವತ್‌ ಪಿಣರಾಯಿ ವಿಜಯನ್‌ ತಲೆಕಡಿದು ತಂದೊಪ್ಪಿಸಿದವರಿಗೆ ನನ್ನ ಆಸ್ತಿ ಮಾರಾಟ ಮಾಡಿಯಾದರೂ 1 ಕೋಟಿ ರೂ. ನೀಡುತ್ತೇನೆ ಎಂದು ಹೇಳಿದ್ದು, ಸಂಘ ಪರಿವಾರಕ್ಕೆ ಮುಜುಗರ ತರುವಂತಾಯಿತು. ಇದೀಗ ಅವರ ವಿರುದ್ಧ ಮಧ್ಯಪ್ರದೇಶದ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರ್‌ಎಸ್‌ಎಸ್‌ ಕೂಡ ಎಲ್ಲಾ ಹೊಣೆಯಿಂದ ಮುಕ್ತಿಗೊಳಿಸಿ ತೀರ್ಮಾನವನ್ನೂ ಪ್ರಕಟಿಸಿದೆ. ಇದಿಷ್ಟು ಸದ್ಯ ನಡೆಯುತ್ತಿರುವ ವಿಚಾರದ ಹೊಳಹು.

Advertisement

ಹಾಗಿದ್ದರೆ ದೇವರೊಲಿದ ನಾಡಿನ ರಾಜಕೀಯದಲ್ಲಿ ಹಿಂಸೆ, ರಕ್ತಪಾತವೇ ಜೀವನಾಡಿಯಾಗಿದ್ದು ಹೇಗೆ ಎಂದು ತಿಳಿಯಬೇಕಾದರೆ ಸ್ವಾತಂತ್ರÂ ಹೋರಾಟದ ಕೊನೆಯ ದಿನಗಳು ಮತ್ತು ದೇಶದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಜಾರಿಗೆ ಬಂದ ಆರಂಭದ ವರ್ಷಗಳ ದಾಖಲೆಗಳನ್ನು ತಡಕಾಡಬೇಕಾಗುತ್ತದೆ. ಆರಂಭದ ದಿನಗಳಲ್ಲಿ ಇಂಥ ಸಂಘರ್ಷಗಳು ವರ್ಗ ಸಂಘರ್ಷದಿಂದ ಕೂಡಿದ್ದವು. ಕಾಲಾನಂತರದಲ್ಲಿ ಅದು ರಾಜಕೀಯ ಪಕ್ಷಗಳ ಕೇಂದ್ರೀಕೃತ ಘರ್ಷಣೆಯಾಗಿ ಪರಿವರ್ತನೆಗೊಂಡಿತು. ನಿರಂಜನ ಅವರ “ಚಿರಸ್ಮರಣೆ’ ಕಾದಂಬರಿಯಲ್ಲಿಯೂ ಇಂಥ ಗಲಾಟೆಗಳ ಉಲ್ಲೇಖವಿದೆ. 
ಕೇರಳದ ರಾಜಕೀಯ ಭೂಪಟದಲ್ಲಿ ತೀರಾ ಇತ್ತೀಚಿನ ವರೆಗೆ ಆರ್‌ಎಸ್‌ಎಸ್‌ ಮುಖ್ಯ ಭೂಮಿಕೆ ವಹಿಸದೇ ಇದ್ದರೂ ಅದರ ಶಾಖೆಗಳು ಹೆಚ್ಚಿನ ಕಡೆಗಳಲ್ಲಿವೆ. 2016ರ ವಿಧಾನಸಭೆ ಚುನಾವಣೆಗೆ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪುಟ್ಟ ರಾಜ್ಯದ ಹೆಚ್ಚಿನ ಸ್ಥಳಗಳಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ವರ್ಧಿಸಿಕೊಂಡದ್ದು ಬಹಿರಂಗ ಸತ್ಯ. ಇನ್ನು ರಾಜಕೀಯ ಹಿಂಸಾಚಾರದ ಆರಂಭತ್ವಕ್ಕೆ ಬರುವುದಾದರೆ, ಆರಂಭದ ದಿನಗಳಿಂದಲೂ ಕಣ್ಣೂರೇ ಅದರ ಕೇಂದ್ರ ಸ್ಥಾನವಾಗಿತ್ತು. ಭೂಮಾಲೀಕರು ಮತ್ತು ರೈತರ ನಡುವೆ ಮಾಲೀಕತ್ವ ವಿಚಾರಕ್ಕೆ ನಡೆಯುತ್ತಿದ್ದ ಸಂಘರ್ಷವೇ ವಿವಾದವೇ ಮೂಲ ಕಾರಣ. ನಂತರ ದಿನಗಳಲ್ಲಿ ಅದು ರಾಜಕೀಯವಾಗಿ ಪರಿವರ್ತನೆಗೊಂಡು ಎಡರಂಗ ಬೆಂಬಲಿತ, ಬಲಪಂಥೀಯ ಎಂಬಿತ್ಯಾದಿ ಶಿರೋನಾಮೆಗಳನ್ನು ಪಡೆದುಕೊಂಡಿತು. 1940ರಿಂದ ಈಚಿನ ವರ್ಷಗಳಲ್ಲಿ ಆರ್‌ಎಸ್‌ಎಸ್‌ ಕೂಡ ಕೇರಳದಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಲಾರಂಭಿಸಿತು. ಅದು ಎದುರಾಳಿ ಸಂಘಟನೆಗಳಿಗೆ ಕಣ್ಣು ಕುಕ್ಕುವಂತೆ ಮಾಡಿತು. ಇದರ ಜತೆಗೆ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ಬೆಂಬಲಿತ ಉದ್ದಿಮೆಗಳು, ವ್ಯಾಪಾರಸ್ಥರಿಗೂ ತಡೆ ಸಿಗಲಾರಂಭಿಸಿತು. ವಿಶೇಷವಾಗಿ ಮುಸ್ಲಿಮರು ಎಡಪಕ್ಷಗಳ ಜತೆ ಸೇರಿದ್ದರು. ಈ ಬೆಳವಣಿಗೆ ಸಹಜವಾಗಿಯೇ ಘರ್ಷಣೆಗೆ ನಾಂದಿಯಾಯಿತು. ಆರ್‌ಎಸ್‌ಎಸ್‌ನ ಅಂದಿನ ಮುಖ್ಯಸ್ಥ ಎಂ.ಎಸ್‌.ಗೋಲ್ವಲ್ಕರ್‌ ಆಯೋಜಿಸಿದ್ದ ರ್ಯಾಲಿ ಮೇಲೆ 1948ರಲ್ಲಿ ತಿರುವನಂತಪುರದಲ್ಲಿ ಮತ್ತು 1952ರಲ್ಲಿ ಆಲಪ್ಪುಝದಲ್ಲಿ ದಾಳಿ ನಡೆಸಲಾಯಿತು. ಈ ಎರಡು ಘಟನೆಗಳು ಹಿಂಸಾತ್ಮಕ ರಾಜಕೀಯಕ್ಕೆ ಮುನ್ನುಡಿ ಬರೆದವು. ಇದಾದ ಬಳಿಕ ತ್ರಿಶೂರ್‌, ಕೊಟ್ಟಾಯಂ, ಎರ್ನಾಕುಳಂ ಮತ್ತು ಪಾಲಕ್ಕಾಡ್‌ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ದಾಳಿ, ಕೊಲೆ ನಡೆಯಿತು.

ಕೇರಳದಲ್ಲಿನ ಮೊದಲ ಸಂಘರ್ಷ ನಡೆದದ್ದು 1971ರಲ್ಲಿ. ಅದೂ ಕೂಡ ಕಣ್ಣೂರು ಜಿಲ್ಲೆಯ ತಲಶೆÏàರಿಯಲ್ಲಿ. “ದ ವೈರ್‌’ ಎಂಬ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ 1969ರಿಂದ 2016ರ ವರೆಗೆ ಜಿಲ್ಲೆಯಲ್ಲಿ 210 ರಾಜಕೀಯ ಪ್ರೇರಿತ ಕೊಲೆಗಳು ನಡೆದಿವೆ. 

ಇಂಥ ಘಟನೆಗಳಿಗೆ ಕೇವಲ ರಾಜಕೀಯವೇ ಕಾರಣವಲ್ಲ. ಸಾಮಾಜಿಕ ಮತ್ತು ಆರ್ಥಿಕ ಕಾರಣವೂ ಇದೆ. ಕಣ್ಣೂರು ಸುತ್ತಮುತ್ತಲಿನ ಪ್ರದೇಶ ವಾಣಿಜ್ಯ ಚಟುವಟಿಕೆಗಳಿಗೆ ಹೆಸರಾಗಿದೆ. ಅದನ್ನು ನಿಯಂತ್ರಿಸಿಕೊಂಡಿದ್ದು ಮುಸ್ಲಿಂ ಸಮುದಾಯ ದವರು. ಹೊರಗಿನ ಪ್ರದೇಶದಿಂದ ಬಂದು ಅಲ್ಲಿ ವಾಣಿಜ್ಯ ಚಟುವಟಿಕೆಗಳನ್ನು  ಆರಂಭಿಸಿದ ಸಂದರ್ಭದಲ್ಲಿ ಅದಕ್ಕೆ ಸಹಜ ವಾಗಿಯೇ ಪ್ರತಿರೋಧ ಉಂಟಾಗಿತ್ತು. 1968ರಲ್ಲಿ ಅಂದಿನ ಕಮ್ಯುನಿಸ್ಟ್‌ ಸರ್ಕಾರ ಕೇರಳದಲ್ಲಿ ಕೇಂದ್ರ ಬೀಡಿ ಮತ್ತು ಸಿಗಾರ್‌ ಕಾಯ್ದೆಯನ್ನು ಜಾರಿಗೊಳಿಸಲು ನಿರ್ಧರಿಸಿತು. ಅದಕ್ಕೆ ಖಾಸಗಿ ಸಂಸ್ಥೆಗಳಿಂದ ಪ್ರತಿರೋಧ ಬರಲಾರಂಭಿಸಿತು. ಬೀಡಿ ಕಾರ್ಮಿಕರನ್ನು ನಿಯಂತ್ರಣದಲ್ಲಿರಿಸಿಕೊಂಡಿರುವ ಎಡಪಕ್ಷಗಳ ಕಾರ್ಯಕರ್ತರು ಈ ಕಾಯ್ದೆ ಬೆಂಬಲಿಸಿ, ಅದನ್ನು ಜಾರಿಗೊಳಿಸುವ ಬಗ್ಗೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರ ಜತೆ ಹೋರಾಟಕ್ಕೆ ಇಳಿದರು. ಸ್ವಾತಂತ್ರÂ ಬಂದ ಆರಂಭದ ದಿನಗಳಲ್ಲಿ ಕೇರಳದಲ್ಲಿ ಪ್ರಾಬಲ್ಯ ಇದ್ದದ್ದು ಕಾಂಗ್ರೆಸ್‌ನದ್ದೇ. ಬ್ರಿಟಿಷರ ಕಾಲದಲ್ಲಿ ಮತ್ತು ಸ್ವಾತಂತ್ರÂ ಬಂದ ಬಳಿಕ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ಪ್ರತಿಭಟನೆಗೆ ಇಳಿದಿದ್ದ ಕಮ್ಯೂನಿಸ್ಟ್‌ ಕಾರ್ಯಕರ್ತರನ್ನು ನಿರ್ದಯವಾಗಿ ಸದೆ ಬಡಿಯಲಾಗಿತ್ತು. ಇದು ಕೂಡ ರಕ್ತಸಿಕ್ತ ರಾಜಕೀಯ ಘರ್ಷಣೆಗೆ ಕಾರಣ ಎಂಬ ವಾದವೂ ಇದೆ.

ಸರ್ಕಾರದ ವಿರುದ್ಧದ ಹೋರಾಟ ಹೇಗೆ ನಡೆದಿತ್ತು ಮತ್ತು ಕಮ್ಯೂನಿಸ್ಟ್‌ ಪಕ್ಷ ಯಾವ ರೀತಿ ಕೇರಳದಲ್ಲಿ ಪ್ರವರ್ಧಮಾನಕ್ಕೆ ಬಂತೆಂಬುದರ ಬಗ್ಗೆ 1990ರಲ್ಲಿ ವೇಣು ನಾಗವಲ್ಲಿ ಅವರು ಆ ಕಾಲದ ಬೆಳವಣಿಗೆಗಳನ್ನಾಧರಿಸಿ “ಲಾಲ್‌ ಸಲಾಂ’ ಎಂಬ ಸಿನಿಮಾ ನಿರ್ದೇಶಿಸಿದ್ದರು. ಅದರಲ್ಲಿ ಅವರ ವೈರುಧ್ಯಗಳ ಬಗ್ಗೆಯೂ ಸಮಗ್ರ ಚಿತ್ರಣ ಕೊಡಲಾಗಿದೆ.

ಇನ್ನು ಹಲ್ಲೆ, ಹತ್ಯೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೊಂದವರ ಬಗ್ಗೆ ಹೇಳುವುದಾದರೆ ಶೇ.90ರಷ್ಟು ಮಂದಿ ತೀಯ ಸಮುದಾಯವರಾಗಿದ್ದಾರೆ. ಕುತೂಹಲಕಾರಿ ಮತ್ತು ಅಷ್ಟೇ ಕ್ರೂರವಾಗಿರುವ ಅಂಶವೆಂದರೆ ಈ ರಾಜಕೀಯ ಹತ್ಯೆಯಲ್ಲಿ ಕುಡಿಪ್ಪಕಂ ಎಂಬ ಪದ್ಧತಿ ಪಾಲಿಸಲಾಗುತ್ತದೆ. ಒಂದು ಕುಟುಂಬದ ಸದಸ್ಯನೊಬ್ಬ ಮತ್ತೂಬ್ಬ ಕುಟುಂಬದವನ ಮೇಲೆ ಹಲ್ಲೆ ಮಾಡಿದರೆ ಅಥವಾ ಕೊಂದು ಹಾಕಿದರೆ, ಅದಕ್ಕೆ ಪ್ರತೀಕಾರವಾಗಿ ಎದುರಾಳಿ ಕುಟುಂಬದವನ ವಿರುದ್ಧ ಪ್ರತೀಕಾರ ತೀರಿಸುವುದಕ್ಕೆ ಹೀಗೆನ್ನಲಾಗುತ್ತದೆ. 

ಈ ಎಲ್ಲ ರಕ್ತಸಿಕ್ತ ಇತಿಹಾಸಕ್ಕೆ ಒಂದು ಹಂತದಲ್ಲಿ ಪೂರ್ಣ ವಿರಾಮವೂ ಸಿಕ್ಕಿತ್ತು. ಕೇರಳದ ಖಡಕ್‌ ಪೊಲೀಸ್‌ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಐಪಿಎಸ್‌ ಅಧಿಕಾರಿ ಮನೋಜ್‌ ಅಬ್ರಹಾಂ ಕಣ್ಣೂರು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದಿದ್ದಾಗ ಒಂದು ಹಂತಕ್ಕೆ ಅದು ನಿಂತೇ ಹೋಗಿತ್ತು. ವೈಯಕ್ತಿಕ ದ್ವೇಷದಿಂದ ನಡೆಯುವಂಥ ಕೊಲೆಯೋ, ಹಲ್ಲೆ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದರೂ, ಸಾಮೂಹಿಕವಾಗಿ ದೇಶಾದ್ಯಂತ ಸುದ್ದಿಯಾಗುವಂಥ ರಾಜಕೀಯ ಹತ್ಯೆಗಳು ನಿಂತೇ ಹೋಗಿದ್ದವು. ಹೀಗೆ ರಾಜಕೀಯ ಪ್ರಭಾವಳಿಗಳ ಹೊರತಾಗಿಯೂ ಇಂಥ ಹತ್ಯೆಗಳನ್ನು ಮೆಟ್ಟಿ ನಿಂತ ಉದಾಹರಣೆಗಳು ಕಡಿಮೆಯೇ. ಹಾಲಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕಣ್ಣೂರು ಮತ್ತು ಕೇರಳದ ಇತರ ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ. 

ಎ.ಕೆ.ಆ್ಯಂಟನಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹರತಾಳ, ಬಂದ್‌ ಅನ್ನು ನಿಷೇಧಗೊಳಿಸಿ ಆದೇಶ ಹೊರಡಿಸಿದ್ದರು. ಅದು ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. 2006ರಲ್ಲಿ ಕೇರಳದಲ್ಲಿ ವಿವಿಧ ಕಾರಣಗಳಿಗಾಗಿ 223 ಹರತಾಳಕ್ಕೆ ಕರೆ ಕೊಡಲಾಗಿತ್ತು. ಆ ವರ್ಷ ಸರ್ಕಾರದ ಬೊಕ್ಕಸಕ್ಕೆ 2 ಸಾವಿರ ಕೋಟಿ ರೂ.ಗಳಿಗೆ ಕಡಿಮೆ ಇಲ್ಲದಂತೆ ನಷ್ಟ ಉಂಟಾಗಿತ್ತು. ಹೇಗಿದ್ದರೂ ಹೆಚ್ಚಿನ ಪ್ರಮಾಣದ ಕಾರ್ಮಿಕ ಸಂಘಟನೆಗಳು, ಟ್ರೇಡ್‌ ಯೂನಿಯನ್‌ಗಳು ಸಕ್ರಿಯವಾಗಿ ಇದ್ದದ್ದು ಈ ರಾಜ್ಯದಲ್ಲಿಯೇ. ಆದರೆ ಜಾಗತೀಕರಣದ ರಭಸದಲ್ಲಿ ಅದೆಲ್ಲ ಕಳೆಗುಂದಿರುವ ವಿಚಾರ.

ಅದೇನೇ ಇದ್ದರೂ ಹೆಚ್ಚುತ್ತಿರುವ ರಾಜಕೀಯ ಹಿಂಸಾಚಾರ ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. ವಿದೇಶಗಳಿಂದ ಬಂಡವಾಳ ಆಕರ್ಷಣೆಗಾಗಿ ಕೋಟಿಗಟ್ಟಲೆ ರೂಪಾಯಿಗಳ ವೆಚ್ಚದಲ್ಲಿ ಬಂಡವಾಳ ಹೂಡಿಕೆ ಸಮಾವೇಶ ನಡೆಸಿದರೇನೂ ಫ‌ಲವಿಲ್ಲ. ಇಂಥ ಘಟನೆಗಳು ಹೆಚ್ಚಿದಷ್ಟೂ  ಕೇರಳ ಸರ್ಕಾರದ ವರ್ಚಸ್ಸಿಗೇ ಧಕ್ಕೆ. ದುರಂತವೆಂದರೆ ಎಲ್ಲಾ ರಾಜಕೀಯ ಪಕ್ಷಗಳದ್ದೂ ಗುರಿ, 2021ರ ಆರಂಭದಲ್ಲಿ ಬರುವ ವಿಧಾನಸಭಾ ಚುನಾವಣೆ. ಅಲ್ಲಿಯ ವರೆಗೆ ದೇವರ ಸ್ವಂತ ರಾಜ್ಯವಾಗಿರುವ ಕೇರಳದ ಪಾಡು ದೇವರೇ ಬಲ್ಲ. 

– ಸದಾಶಿವ ಖಂಡಿಗೆ

Advertisement

Udayavani is now on Telegram. Click here to join our channel and stay updated with the latest news.

Next