Advertisement

ದೇವರು ಮಾತನ್ನೂ ಆಡುತ್ತಾನೆ, ಮಾತನಾಡಿಸಲು ಗೊತ್ತಿರಬೇಕಷ್ಟೆ

10:59 AM Jan 18, 2020 | mahesh |

ಶ್ರೀಕೃಷ್ಣ ಮಠದಲ್ಲಿ 2 ವರ್ಷಗಳ ಪರ್ಯಾಯ ಆರಂಭವಾದ ಬಳಿಕ 32ನೆಯ ಪರ್ಯಾಯ ಚಕ್ರದ ಎರಡನೆಯ ಪರ್ಯಾಯ ಪೂಜಾ ಕೈಂಕರ್ಯದ ಉತ್ಸವ ನಡೆಯುತ್ತಿದೆ. ಇದು ಅದಮಾರು ಮಠಕ್ಕೆ 32ನೆಯ ಪರ್ಯಾಯ. ಈ ಸರದಿ ಅದಮಾರು ಮಠಕ್ಕೆ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಶ್ರೀಪಾದರಾದ ಶ್ರೀ ವಿಶ್ವಪ್ರಿಯತೀರ್ಥರು “ಉದಯವಾಣಿ’ ಜತೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.

Advertisement

ಶ್ರೀಕೃಷ್ಣ ಪೂಜೆ ಮತ್ತು ಆಡಳಿತದ ಅಧಿಕಾರವನ್ನು ಕಿರಿಯ ಸ್ವಾಮೀಜಿಗೆ ಕೊಟ್ಟಿರುವ ಹಿನ್ನೆಲೆ ಏನು?
ನಮ್ಮ ಗುರುಗಳಾದ ಶ್ರೀ ವಿಬುಧೇಶತೀರ್ಥರು 1956-57, 1972-73ರಲ್ಲಿ ಎರಡು ಪರ್ಯಾಯ ಪೂಜೆಯನ್ನು ನಡೆಸಿದ ಬಳಿಕ 1988-89 ಮತ್ತು 2004-05ರಲ್ಲಿ ನಮ್ಮಿಂದಲೇ ಪರ್ಯಾಯ ಪೂಜೆ ಮಾಡಿಸಿದರು. ನಮ್ಮಿಂದಲೂ ಎರಡು ಪರ್ಯಾಯ ಪೂಜೆ ನಡೆದ ಕಾರಣ ಗುರುಗಳು ನಡೆದುಕೊಂಡಂತೆ ನಾವೂ ಕಿರಿಯ ಶ್ರೀಗಳಿಗೆ ಪೂಜಾಧಿಕಾರ ವನ್ನು ಬಿಟ್ಟುಕೊಡುತ್ತೇವೆ.

ತಮ್ಮ ಗುರುಗಳು 1988ರಲ್ಲಿ ಮೊದಲು ಪೀಠಾರೋಹಣ ಮಾಡಿ ತಮ್ಮನ್ನು ಮತ್ತೆ ಕೂಡಿಸಿದರಂತೆ. ಅದೇ ರೀತಿ ತಾವು ಮಾಡುತ್ತೀರಾ?
ಹೌದು. ನಮ್ಮ ಗುರುಗಳ ರೀತಿಯಲ್ಲಿಯೇ ನಾವು ಮೊದಲು ಸರ್ವಜ್ಞ ಪೀಠದಲ್ಲಿ ಕುಳಿತು ಬಳಿಕ ಕಿರಿಯ ಸ್ವಾಮೀಜಿಯವರನ್ನು ಕುಳ್ಳಿರಿಸುತ್ತೇವೆ.

ಕಿರಿಯ ಸ್ವಾಮೀಜಿಯವರಿಗೆ ಅದಮಾರು ಮಠದ ಆಡಳಿತವನ್ನು ಕೆಲವು ತಿಂಗಳ ಹಿಂದೆಯೇ ಕೊಟ್ಟಿದ್ದೀರಲ್ಲ?
ಮಠದ ಜವಾಬ್ದಾರಿ ಕೊಟ್ಟ ಬಳಿಕ ನಮಗೆ ಒತ್ತಡ ಕಡಿಮೆಯಾಗಿದೆ. ನಮಗೆ ಶಿಕ್ಷಣ ಸಂಸ್ಥೆಗಳ ಆಡಳಿತ ವನ್ನೂ ನೋಡಬೇಕಾಗಿದೆ. ಕಿರಿಯ ಸ್ವಾಮೀಜಿಯವರು ಏನು ಮಾಡುವುದಾದರೂ ನಮ್ಮಲ್ಲಿ ತಿಳಿಸುತ್ತಾರೆ. ನಾವು ಅದರ ಸಾಧಕ ಬಾಧಕ ಇದ್ದರೆ ತಿಳಿಸುತ್ತೇವೆ. ವಿಮರ್ಶೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಅದನ್ನು ಅವರು ಅನುಷ್ಠಾನಕ್ಕೆ ತರುತ್ತಾರೆ. ಚಿಕ್ಕ ಸ್ವಾಮೀಜಿಯವ ರಿಗೆ ಹಳೆಯ ವ್ಯವಸ್ಥೆಯ ಮೇಲೆ ಹೆಚ್ಚಿನ ಆಸಕ್ತಿ ಇದೆ.

ಇನ್ನೆರಡು ವರ್ಷಗಳಲ್ಲಿ ತಮ್ಮ ಪಾತ್ರಗಳು?
 ಎರಡು ವರ್ಷಗಳಲ್ಲಿ ಬಹುತೇಕ ಅವಧಿ ಉಡುಪಿಯಲ್ಲಿಯೇ ಇರುತ್ತೇವೆ. ಈ ಸಂದರ್ಭ ಬೆಳಗ್ಗೆ ಮತ್ತು ಸಂಜೆಯ ಪೂಜೆಗೆ ಹೋಗುತ್ತೇವೆ ಮತ್ತು ಸಂಜೆ ಉಪನ್ಯಾಸವನ್ನೂ ಮಾಡುತ್ತೇವೆ.

Advertisement

ಹೊರೆಕಾಣಿಕೆ, ಪರ್ಯಾಯ ದರ್ಬಾರ್‌ ಸಮಯ ಬದಲಾವಣೆ ನಿರ್ಧಾರದ ಹಿಂದೆ…?
 ವೈಭವಗಳು ಜಾಸ್ತಿಯಾದಂತೆ ಹೊರೆಕಾಣಿಕೆಗಳೂ ಜಾಸ್ತಿಯಾದವು. ನಮ್ಮ ಶಿಷ್ಯರ ಪ್ರಕಾರ, ಭಕ್ತರು ಸಮರ್ಪಿಸಿದ ವಸ್ತುಗಳು ಹಾಳಾಗದಂತೆ, ಅವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯ. ಇಲ್ಲ ವಾದರೆ ಒಮ್ಮೆಲೆ ಹೊರೆಕಾಣಿಕೆಗಳು ಬಂದು ಹಾಳಾಗಿ ಹೋಗುತ್ತವೆ. ಮುಂಜಾವ 2-3 ಗಂಟೆಗೆ ಪರ್ಯಾಯ ಮೆರವಣಿಗೆ ಆರಂಭವಾಗಿ ಪರ್ಯಾಯ ದರ್ಬಾರ್‌ ಮುಗಿಯುವಾಗ 9-10 ಗಂಟೆಯಾದದ್ದೂ ಇದೆ. ಅಷ್ಟು ಹೊತ್ತು ಬಂದವರು ಖಾಲಿ ಹೊಟ್ಟೆಯಲ್ಲಿ ಕುಳಿತುಕೊಳ್ಳುವುದೂ ಕಷ್ಟ. ಬೆಳಗ್ಗೆ ಮೆರವಣಿಗೆ ನೋಡಿ ಹೋಗಿ ಊಟವಾದ ಬಳಿಕ ಸಭೆಗೆ ಹಾಜರಾಗಲು ಅನುಕೂಲವಾಗುತ್ತದೆ. ಇಂತಹ ಬದಲಾವಣೆಗಳಿಂದ ಸಾಂಪ್ರದಾಯಿಕತೆಗೆ ಚ್ಯುತಿ ಬರುವುದಿಲ್ಲ ಮತ್ತು ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಅಗತ್ಯವೂ ಹೌದು. ಬೆಳಗ್ಗೆ ಸಾಂಪ್ರದಾಯಿಕ ದರ್ಬಾರ್‌ ಸಭೆ ಬಡಗು ಮಾಳಿಗೆಯಲ್ಲಿ ನಡೆಯುತ್ತದೆ. ಜನರ ಸಹಭಾಗಿತ್ವ ಶುರುವಾದ ಬಳಿಕ ಸಾರ್ವಜನಿಕ ದರ್ಬಾರ್‌ ಆರಂಭವಾಗಿತ್ತು. ಈಗ ಸಾಂಪ್ರದಾಯಿಕ ದರ್ಬಾರ್‌ ಮುಗಿದ ಬಳಿಕ ಸ್ವಾಮೀಜಿಯವರು ನೇರವಾಗಿ ಪೂಜೆಗೆ ಹೋಗುತ್ತಾರೆ. ಅಪರಾಹ್ನ ಸಾರ್ವಜನಿಕ ದರ್ಬಾರ್‌ ಸಭೆಗೆ ಸ್ವಾಮೀಜಿಯವರು ಬರುತ್ತಾರೆ.

ಅದಮಾರು ಮಠಕ್ಕೆ 32ನೆಯ ಪರ್ಯಾಯ ಸರದಿ ಸಿಗುತ್ತಿರುವಾಗ ಮತ್ತು ದ್ವೆ „ವಾರ್ಷಿಕ ಪರ್ಯಾಯ ಇತಿಹಾಸದ ನಾಲ್ಕನೆಯ ಶತಮಾನದ ಕೊನೆಯ ಪರ್ಯಾಯದಲ್ಲಿರುವಾಗ 32ನೆಯ ಪೀಠಾಧಿಪತಿಯಾಗಿ ಭಕ್ತರಿಗೆ ಸಂದೇಶ?
 ಕಾಲಕಾಲಕ್ಕೆ ಮಳೆ ಬರಲಿ, ಲೋಕದಲ್ಲಿ ಸಸ್ಯ ಸಮೃದ್ಧಿಯಾಗಲಿ, ಕ್ಷೋಭೆಗಳು ಇಲ್ಲದಿರಲಿ, ಸಾತ್ವಿಕರು, ಸಜ್ಜನರಿಗೆ ಮನಃಶಾಂತಿ ಸಿಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುತ್ತೇವೆ.

ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ರಾಗಿದ್ದೀರಿ. ಅಭಿವೃದ್ಧಿ ಹೇಗೆ ನಡೆಯುತ್ತಿದೆ?
ಅದಮಾರಿನಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಯ ನರ್ಸರಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಪಡು ಬಿದ್ರಿಯಲ್ಲಿ ಸ್ವಂತ ಜಾಗ ತೆಗೆದುಕೊಂಡು ಪ್ರೌಢಶಾಲೆಯನ್ನು ಅಲ್ಲಿಗೆ ವಿಸ್ತರಿಸಬೇ ಕೆಂದಿದೆ. ಬೆಂಗಳೂರಿನ ವೀಡಿಯಾ ಕ್ಯಾಂಪಸ್‌ನಲ್ಲಿ ಪ.ಪೂ. ಕಾಲೇಜು ಆರಂಭಿಸಿದ್ದೇವೆ. ಯಲಹಂಕದಲ್ಲಿ ಮುಂದಿನ ವರ್ಷ ಪ.ಪೂ. ಕಾಲೇಜು ಆರಂಭಿಸಲಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು 50 ಕೋ.ರೂ. ಅಭಿವೃದ್ಧಿ ಕೆಲಸ ನಡೆದಿದೆ.

 ಶ್ರೀಕೃಷ್ಣನ ಆರಾಧಕರಾಗಿ ದೇವರ ಅಸ್ತಿತ್ವ ಗಮನಕ್ಕೆ ಬಂದಿದೆಯೆ?
ನಮಗೆ ಏನಾದರೂ ಸಮಸ್ಯೆಗಳು ಬಂದಾಗ ದೇವರು ಸ್ಪಂದಿಸಿದ್ದಾನೆ. ಉದಾಹರಣೆಗೆ, ಹಿಂದಿನ ಪರ್ಯಾಯದಲ್ಲಿ ಕನಕ ಗೋಪುರದ ವಿವಾದ. ನಾವು ಏನೂ ಮಾತನಾಡಲಿಲ್ಲ. ಯಾವುದೇ ಹೇಳಿಕೆಗಳನ್ನು ನೀಡಲಿಲ್ಲ. ಅದರ ಉದ್ಘಾಟನೆ ಬೇಸಗೆಯಲ್ಲಿ ಅಕ್ಷಯತೃತೀಯದಂದು ನಡೆಯಿತು. ನಾವೇ ಅಷ್ಟು ಎತ್ತರಕ್ಕೇರಿ ಕಲಶಾಭಿಷೇಕ ನಡೆಸಿದೆವು. ಆಗ ಶ್ರೀಕೃಷ್ಣ ನಾಲ್ಕು ಹನಿ ಮಳೆಯನ್ನು ಕೊಟ್ಟ. ಆ ಸಮಯದಲ್ಲಿ ಒಂದೂವರೆ ವರ್ಷ ಬಳಿತ್ಥಾ ಸೂಕ್ತ, ಮನ್ಯುಸೂಕ್ತ, ಸುಂದರಕಾಂಡ ಪಾರಾಯಣ ಮಾಡುತ್ತ ಆಂಜನೇಯನಿಗೆ ಜೇನುತುಪ್ಪದಿಂದ ಅಭಿಷೇಕ ಮಾಡುತ್ತಿದ್ದೆವು. ದೇವರು ಮಾತನ್ನೂ ಆಡುತ್ತಾರೆ, ಆದರೆ ಮಾತನಾಡಿಸಲು ಗೊತ್ತಿರಬೇಕಷ್ಟೆ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next