Advertisement

ಗೋವಾ: ಗಡಿನಾಡಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ

07:04 PM May 29, 2022 | Team Udayavani |

ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಕರ್ನಾಟಕ ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಫಂದಿಸಿ ಪ್ರಸಕ್ತ ವರ್ಷದ ಕರ್ನಾಟಕದ ಆಯವ್ಯಯದಲ್ಲಿ ಕರ್ನಾಟಕ ಮುಖ್ಯಮಂತ್ರಿಗಳು ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದ್ದಾರೆ. ಇದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳನ್ನು ನಾವು ಅಭಿನಂದಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.

Advertisement

ವಾಸ್ಕೊದಲ್ಲಿ ಭಾನುವಾರ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಅಖಿಲ ಗೋವಾ ಕನ್ನಡ ಮಹಾಸಂಘ ಇವರ ಸಂಯುಕ್ತ ಆಶ್ರಯದಲ್ಲಿ  ಆಯೋಜಿಸಿದ್ದ ” ಗಡಿನಾಡಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮದಲ್ಲಿ ಮಾತನಾಡಿ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಈ ಮೂಲಕ ಗೋವಾ ಸರ್ಕಾರವನ್ನು ಮನವಿ ಮಾಡುತ್ತೇನೆ. ಗೋವಾದಲ್ಲಿ ನಾಲ್ಕೈದು ಲಕ್ಷ ಜನ ಕನ್ನಡಿಗರಿದ್ದಾರೆ. ಆರ್ಥಿಕವಾಗಿ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಗೋವಾವನ್ನು ಕಟ್ಟಿದವರು ಕನ್ನಡಿಗರು. ಗೋವಾದಲ್ಲಿ ಬೆಸರು ಸುರಿಸಿ ದುಡಿಯುವವರು ಕನ್ನಡಿಗರು. ಗೋವಾದಲ್ಲಿ ಕನ್ನಡಿಗರ ರಕ್ಷಣೆ ಬಹಳ ಮುಖ್ಯ. ಕರ್ನಾಟಕದಲ್ಲಿ ನಾವು ಕೊಂಕಣಿ ಅಕಾಡಮಿ ಮಾಡಿದ್ದೇವೆ. ಕರ್ನಾಟಕ ಕೊಂಕಣಿ ಅಕಾಡಮಿಗೆ ನಮ್ಮ ಪ್ರಾಧಿಕಾರವೇ ಕಳೆದ ಒಂದು ವರ್ಷದಲ್ಲಿ 5 ಕೋಟಿ ರೂಗಳನ್ನು ನೀಡಿದೆ. ಗೋವಾದಲ್ಲಿಯೂ ಕನ್ನಡ ಸಾಹಿತ್ಯ ಅಕಾಡಮಿಯನ್ನು ಮಾಡಬೇಕು. ಕಾಸರಗೋಡಿನಲ್ಲಿಯೂ ಕಯ್ಯಾರ ಕಿಣ್ಯಣ್ಣ ರೈ ರವರ ಹೆಸರಿನಲ್ಲಿ ಸಾಹಿತ್ಯ ಅಕಾಡಮಿ ನಿರ್ಮಾಣ ಮಾಡಿ 2 ಕೋಟಿ ರೂಗಳನ್ನು ಅಲ್ಲಿನ ಸರ್ಕಾರ ನೀಡಿದೆ. ಅಂತೆಯೇ ಗೋವಾದಲ್ಲಿಯೂ ಕೂಡ ಗೋವಾ ಸರ್ಕಾರ ಕನ್ನಡ ಸಾಹಿತ್ಯ ಅಕಾಡಮಿಯನ್ನು ನಿರ್ಮಾಣ ಮಾಡಬೇಕು ಎಂದು ಡಾ.ಸಿ.ಸೋಮಶೇಖರ್ ಮನವಿ ಮಾಡಿದರು.

ಬೈನಾದಲ್ಲಿ ಕನ್ನಡಿಗರ ಮನೆ ತೆರವಾದಾಗ ಇಲ್ಲಿ ಮನೆ ಕಳೆದುಕೊಂಡ ಸಾವಿರಾರು ಕನ್ನಡಿಗರ ಕುಟುಂಬದ ಆಕ್ರಂದನವನ್ನು ನಾವು ಕಂಡಿದ್ದೇವೆ. ಹಿಂದಿನ ಸರ್ಕಾರಗಳು ಈ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಲು ಪ್ರಯತ್ನ ನಡೆಸಿತ್ತು. ಪ್ರಸಕ್ತ ಸರ್ಕಾರ ಕೂಡ ಈ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಗಡಿನಾಡ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ .ಸಿ ಸೋಮಶೇಖರ್ ಆಗ್ರಹಿಸಿದರು.

ಕಾರ್ಯಕ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ವಾಸ್ಕೊ ಶಾಸಕ ದಾಜಿ ಸಾಲ್ಕರ್, ಗೋವಾದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಕನ್ನಡಿಗರ ಯೋಗದಾನವಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಗೋವಾ ಸರ್ಕಾರದಿಂದ ಜಾಗ ಕೊಡಿಸಲು ಅಗತ್ಯ ಪ್ರಯತ್ನ ಮಾಡುತ್ತೇನೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಲೇ ಬೇಕು. ದೆಹಲಿಯಲ್ಲಿಯೂ ಗೋವಾ ಭವನವಿದೆ. ಅಂತೆಯೇ ಗೋವಾಕ್ಕೆ ಆಗಮಿಸುವ ಕನ್ನಡಿಗರಿಗೂ ಕೂಡ ಅನುಕೂಲದ ದೃಷ್ಠಿಯಿಂದ ಗೋವಾದಲ್ಲಿ ಕನ್ನಡ ಭವನದ ಅಗತ್ಯವಿದೆ. ನಾನು ಈ ಕುರಿತು ನಮ್ಮ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಕದ್ ಮಾತನಾಡಿ, ಗೋವಾದಲ್ಲಿ ಒಂದು ಕನ್ನಡ ಭವನ ನಿರ್ಮಾಣವಾಗಬೇಕು. ಕನ್ನಡಿಗರು ಮತ್ತು ಗೋವಾದ ಜನತೆ ಒಬ್ಬರೊಬ್ಬರು ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು. ವಿವಿಧೆಡೆಯ ಸಂಸ್ಕ್ರತಿಯನ್ನು ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ಮುಂದುವರೆಸಿಕೊಂಡು ಹೋಗುವತಾಗಬೇಕು ಎಂದರು.

Advertisement

ಮುಖ್ಯ ಅತಿಥಿಗಳಾಗಿ  ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ಅಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ವಿಜಯಪುರ ಬಾಗಲಕೋಟೆಯ ಜನರು ಕಟ್ಟಡ ನಿರ್ಮಾಣದಂತಹ ಕೆಲಸ ಮಾಡಿದರೆ ಧಾರವಾಡಭಾಗದ ಜನರು ಗೋವಾದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ವೇದಿಕೆಯ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾದ ದಾಮೋದರ ಮಾವಜೊ,  ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ,ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೋವಾದ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಕನ್ನಡಿಗರು ಉಪಸ್ಥಿತರಿದ್ದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಗೋವಾ ಘಟಕದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ನಂತರ “ಗಡಿನಾಡ ಕನ್ನಡಿಗರ ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ವಿಷಯದ ಮೇಲೆ ಒಂದು ಅವಲೋಕನ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕಸಂಭ್ರಮ ಕಾರ್ಯಕ್ರಮ ನಡೆದು, ಸಂಜೆ 5 ಗಂಟೆಯಿಂದ ಕವಿಗೋಷ್ಠಿ, ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next