Advertisement

ಗೋವಾ : ಶಾಸಕರ ಪಕ್ಷಾಂತರ ವಿಫಲ ಗೊಳಿಸಲು ಕೈ ವರಿಷ್ಠರ ಪ್ರಬಲ ಪ್ರಯತ್ನ

05:16 PM Jul 15, 2022 | Team Udayavani |

ಪಣಜಿ: ಕಾಂಗ್ರೆಸ್‍ನ ಕೆಲ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡುವ ಯತ್ನ ವಿಫಲವಾಗಿದ್ದರೂ ಇನ್ನೂ ಕೆಲ ಶಾಸಕರ ಗುಂಪು ಸೇರುವುದು ಹಾಗೆಯೇ ಮುಂದುವರೆದಿದೆ.  ಹೀಗಾಗಿ ಸದ್ಯದಲ್ಲೇ ಮತ್ತೊಮ್ಮೆ ಪಕ್ಷಾಂತರ ಯತ್ನ ನಡೆಯುವ ಸೂಚನೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಸಿಕ್ಕಿದೆ. ಈ ಪ್ರಯತ್ನಗಳನ್ನು ವಿಫಲಗೊಳಿಸಲು ಪಕ್ಷದಿಂದ ಪ್ರಬಲ ಪ್ರಯತ್ನಗಳು ನಡೆಯುತ್ತಿವೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ಕೆ. ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ರಾಜ್ಯಾಧ್ಯಕ್ಷ ಅಮಿತ್ ಪಾಟ್ಕರ್ ಇಂದು ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಾರಿ ಗೋವಾದಲ್ಲಿ ಪಕ್ಷಾಂತರ ತಡೆಯಲು ತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ.

Advertisement

ಕಳೆದ ಭಾನುವಾರ ಕಾಂಗ್ರೆಸ್ ಶಾಸಕರ ಪಕ್ಷಾಂತರ ಮಾಡುವ ಯತ್ನ ನಡೆದ ನಂತರ ಪಕ್ಷದ ವರಿಷ್ಠರು ಮುಕುಲ್ ವಾಸ್ನಿಕ್ ಅವರನ್ನು ಗೋವಾಕ್ಕೆ ಕಳುಹಿಸಿದ್ದರು. ದಿನೇಶ್ ಗುಂಡೂರಾವ್ ಮತ್ತು ಪಾಟ್ಕರ್ ಅವರ ಪ್ರಯತ್ನದ ನಂತರ, ಬಂಡಾಯವು ಅಂತಿಮವಾಗಿ ಶಮನವಾಯಿತು. ಆದರೆ ಅಪಾಯ ಇನ್ನೂ ಇದೆ. ಏಕೆಂದರೆ ಪಕ್ಷದ ಕನಿಷ್ಠ ಐವರು ಶಾಸಕರು ಇನ್ನೂ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.  ಈ ಐದು ಜನ ಶಾಸಕರೊಂದಿಗೆ ಇನ್ನು ಮೂವರು ಶಾಸಕರು ಸೇರಿದರೆ ಪಕ್ಷಾಂತರ ಪಕ್ಕಾ ಎಂದೇ ಹೇಳಲಾಗುತ್ತಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಪಕ್ಷ ಶ್ರಮಿಸುತ್ತಿದೆ. ಲೋಬೋ ಅವರನ್ನು ಪ್ರತಿಪಕ್ಷದ ನಾಯಕ  ಸ್ಥಾನದಿಂದ ತೆಗೆದು ಹಾಕಿದ ನಂತರ ಇನ್ನೂ ಹೊಸ ನಾಯಕನ ಹೆಸರನ್ನು ಘೋಷಿಸಲಾಗಿಲ್ಲ. ಪ್ರತಿಪಕ್ಷದ ನಾಯಕರ ಸ್ಥಾನಕ್ಕೆ ಮೂವರ  ಹೆಸರುಗಳು ಸಭೆಯಲ್ಲಿ ಕೇಳಿ ಬಂದಿದ್ದು, ಅವರಲ್ಲಿ ಒಬ್ಬರು ಶಾಸಕ ಕಾರ್ಲೋಸ್ ಫೆರೇರಾ ರವರು ಎಂದೇ ಹೇಳಲಾಗುತ್ತಿದೆ.

ಪಕ್ಷಾಂತರ ಅನಿವಾರ್ಯ?
ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗೋವಾದಿಂದ ಕನಿಷ್ಠ 30 ಮತಗಳನ್ನು ಪಡೆಯುತ್ತಾರೆ ಎಂದು ಕೆಲವು ಬಿಜೆಪಿ ನಾಯಕರು ಖಾಸಗಿಯಾಗಿ ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಇನ್ನೂ ಪಕ್ಷಾಂತರದ ಭೀತಿಯಲ್ಲಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಕೆಲ ಕಾಂಗ್ರೆಸ್ ಶಾಸಕರು ಕೆಲ ಕಾಲ ಮಾತ್ರ ಕಾಂಗ್ರೇಸ್ ಪಕ್ಷದದಲ್ಲಿ ತಟಸ್ಥರಾಗಿ ಉಳಿದುಕೊಂಡಿದ್ದಾರೆ. ಯಾವುದೇ ಕ್ಷಣದಲ್ಲಿ ಪಕ್ಷಾಂತರ ಮಾಡುವ ಸಾಧ್ಯತೆಯಿದೆ  ಎಂಬ ಮಾತು ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next