Advertisement

ಹೋಗಿ ಬರ್ತೆನ್ರಪ್ಪಾ..

12:09 PM Aug 19, 2017 | Team Udayavani |

ಧಾರವಾಡ: ಅವರು ರಂಗದಲ್ಲಿ ಅಂತರಂಗ ಕಂಡವರು. ಅಂತರಂಗದಲ್ಲಿ ರಂಗಭೂಮಿಯ ವೇದಿಕೆಯನ್ನು ಸದಾ ಜಾಗೃತಾವಸ್ಥೆಯಲ್ಲಿಯೇ ಇಟ್ಟವರು. ಆ ಮುಖ ನಿನ್ನೆಯವರೆಗೂ ಬಣ್ಣ ಹಚ್ಚಿಕೊಳ್ಳಲು ಹಾತೊರೆಯುತ್ತಲೇ ಇತ್ತು. ರಂಗದ ಮೇಲೆ ನಿಂತರೆ ಮೈಯಲ್ಲಿ ಸ್ಫೂರ್ತಿ, ಸ್ಥೈರ್ಯ ತುಂಬಿಕೊಳ್ಳುವ ವಾಮನ ದೇಹ. 

Advertisement

ಬ್ರಿಟಿಷರಿಗೆ ರಂಗದ ಮೇಲಿಂದಲೇ ಚಳ್ಳೆಹಣ್ಣು ತಿನ್ನಿಸಿದ ಅವರ ಚಾಕಚಕ್ಯತೆಗೆ ಸ್ವಾತಂತ್ರ ಚಳವಳಿಯ ಮುಂಚೂಣಿ ನಾಯಕರು ಸೆಲ್ಯೂಟ್‌ ಎಂದಿದ್ದರು. ಅವರು ಬೇರೆ ಯಾರೂ ಅಲ್ಲ. ಭರ್ತಿ 104 ವರ್ಷಗಳ  ಲ ಬದುಕಿ, 85 ವರ್ಷ ಕನ್ನಡ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಕಾಯಕ ಯೋಗಿ, ನಾಡೋಜ ನಟ ಸಾಮ್ರಾಟ ಏಣಗಿ ಬಾಳಪ್ಪನವರು. 

ಅವರದ್ದು ಕಾಯಕ ತತ್ವ, ದೇಹವೇ ದೇಗುಲ ತತ್ವ, ಎನಗಿಂತ ಕಿರಿಯರಿಲ್ಲ ತತ್ವ,  ಹೀಗಾಗಿಯೇ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ಅವರನ್ನು ಯಾರೂ ಹೆಸರಿನಿಂದ ಕರೆಯುತ್ತಿರಲಿಲ್ಲ. ಅವರಿಗಿದ್ದ ಹೆಸರು ಜಗಜ್ಯೋತಿ ಬಸವೇಶ್ವರ. ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದ ಅವರು, ಬಸವಣ್ಣನ ಪಾತ್ರ ಮುಗಿಸಿ ನಾಟಕದ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರ ಕಾಲಿಗೆ ಜನ ನಮಸ್ಕರಿಸುತ್ತಿದ್ದರು.

ಇದಕ್ಕೆ ವರನಟ ಡಾ|ರಾಜ್‌ಕುಮಾರ್‌ ಕೂಡ ಹೊರತಾಗಿಲ್ಲ.  ಬಾಳಪ್ಪನವರ ರಂಗಭೂಮಿ ಪರಿಕಲ್ಪನೆಯೇ ವಿಭಿನ್ನ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕ ಮಾತ್ರ ಮಾಡುತ್ತಿದ್ದ ಅವರಿಗೆ 70-80ರ ದಶಕದ ಡಬಲ್‌ಮೀನಿಂಗ್‌ ನಾಟಕಗಳಿಂದ ತೀವ್ರ ಬೇಸರ ಬಂದು ಬಿಟ್ಟಿತು. ಹೀಗಾಗಿ ಬಾಳಪ್ಪನವರು ಕಂಪನಿಯನ್ನೇ ನಿಲ್ಲಿಸಿಬಿಟ್ಟರು. ಸತತ 85 ವರ್ಷಗಳ ಕಾಲ ರಂಗಭೂಮಿಯ ಸೇವೆ ಸಲ್ಲಿಸಿದ್ದ ಅವರು, ಸಿನೆಮಾ ಮತ್ತು ಟಿವಿ ಹಾವಳಿ ಎದ್ದಾಗ ಕೊಂಚ ಸ್ತಬ್ಧರಾಗಬೇಕಾಯಿತು. 

ರಂಗಕ್ಕೆ ಚಾಲನೆ: ನಾಡೋಜ ಬಾಳಪ್ಪ ಅವರು, ಬೇಸರ ಬಂದಾಗೆಲ್ಲಾ ಧಾರವಾಡದತ್ತ ಮುಖ ಮಾಡುತ್ತಿದ್ದರು. ಇಲ್ಲಿನ ರಂಗಭೂಮಿಯ ಮೂರು ತಲೆಮಾರಿನ ನಟರು, ನಿರ್ದೇಶಕರೊಂದಿಗೆ ಖುಷಿಯಾಗಿ ಕುಳಿತುಕೊಂಡು ತಮ್ಮ ಕಾಲದ ಘಟನೆಗಳನ್ನು ಮೆಲಕು ಹಾಕುತ್ತಿದ್ದರು. ಉಳವಿ ಬಸವೇಶ್ವರ ದೇವಸ್ಥಾನದ ಪೌಳಿಯಲ್ಲಿನ ಅವರ ಮೌನ ಭಂಗಿ, ಬಸಪ್ಪ ಖಾನಾವಳಿಯ ರೊಟ್ಟಿ, ಎಲ್‌ಇಎ ಕ್ಯಾಂಟೀನ್‌ ತುಪ್ಪದ ಅವಲಕ್ಕಿಯ ನಂಟು ಕೊನೆವರೆಗೂ ಇತ್ತು.

Advertisement

ಜಾತಿ, ಧರ್ಮದ ಸೊಂಕು ಅವರಿಗೆ ಸೋಕಿರಲೇ ಇಲ್ಲ. ಧಾರವಾಡದಲ್ಲಿ ಕರೆದವರ ಮನೆಗೆಲ್ಲ ಶರಣರಂತೆ ಹಣೆಗೆ ವಿಭೂತಿ ಹಚ್ಚಿಕೊಂಡು ಹೊರಟು ಬಿಡುತ್ತಿದ್ದರು. ಆಧುನಿಕ ರಂಗಭೂಮಿಯ ಸಾಧ್ಯತೆಗಳ ಕುರಿತು ರಂಗಕರ್ಮಿಗಳಾದ ಡಾ|ಶಿವಾನಂದ ಶೆಟ್ಟರ್‌, ಡಾ| ಪ್ರಕಾಶ ಗರೂಡ, ಅರವಿಂದ ಕುಲಕರ್ಣಿ, ಡಾ| ಶಶಿಧರ್‌ ನರೇಂದ್ರ, ಕೆ.ಜಗುಚಂದ್ರ ಸೇರಿದಂತೆ ಅನೇಕರೊಂದಿಗೆ ಸದಾ ಚರ್ಚಿಸುತ್ತಿದ್ದರು.  

ವೃತ್ತಿ- ಹವ್ಯಾಸಿ ಒಂದೇ: ರಂಗ ಚಟುವಟಿಕೆಗಳಿಂದ ದಶಕದ ಕಾಲ ದೂರವಿದ್ದ ಅವರು, 1993ರಲ್ಲಿ ಧಾರವಾಡದಲ್ಲಿ ಮ್ಯಾಳ ಸಂಘದ ಮೂಲಕ ಮತ್ತೆ ರಂಗಭೂಮಿಯತ್ತ ಮುಖ ಮಾಡಿದರು. ವಿಶ್ವಚೇತನ ತಂಡಕಟ್ಟಿದರು, ಹೇಮರಡ್ಡಿ ಮಲ್ಲಮ್ಮ, ಸತ್ಯಹರಿಶ್ಚಂದ್ರದಂತಹ ನಾಟಕಗಳನ್ನು ಹೊಸ ತಲೆಮಾರಿಗೆ ಕಲಿಸಿಕೊಟ್ಟರು. ವೃತ್ತಿ ರಂಗಭೂಮಿಯ ಅತಿರೇಕಗಳು, ಹವ್ಯಾಸಿಗಳ ಕೊರತೆಗಳು ಎರಡೂ ಸರಿ ಹೋಗಬೇಕು ಎನ್ನುತ್ತಿದ್ದರು ಬಾಳಪ್ಪನವರು. 

ರಂಗಭೂಮಿಯನ್ನು ಪ್ರಯೋಗ ಶೀಲತೆಗೆ ಒಳಪಡಿಸುವ, ಚಲನಶೀಲವಾಗಿಟ್ಟುಕೊಳ್ಳುವ ಬಗ್ಗೆ ತಾಸುಗಟ್ಟಲೇ ಧಾರವಾಡದ ಬುದ್ಧಿಜೀವಿ ಗಳೊಂದಿಗೆ ಮಾತನಾಡುತ್ತಿದ್ದರು. ವೃತ್ತಿ ಮತ್ತು ಹವ್ಯಾಸಿ ಎಂಬ ಭೇದವಿಲ್ಲದೇ ಎರಡನ್ನೂ ಒಟ್ಟಾಗಿ ನೋಡುವ ಅವರ ಹೊಸ ಪರಿಕಲ್ಪನೆಯೇ ಅವರ ಚಲನಶೀಲತೆಗೆ ಸಾಕ್ಷಿಯಾಗಿತ್ತು. ಕವಿವಿ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ನೀಡಿ ಗೌರವಿಸಿತು. 

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next