Advertisement

ಗದ್ದುಗೆ ಗುದ್ದಾಟ: ಈ ಗ್ರಾಮದಲ್ಲೂ ಮನೆಮಾಡಿದ ಆತಂಕ!

10:53 PM Jul 15, 2019 | sudhir |

ಸುಬ್ರಹ್ಮಣ್ಯ: ರಾಜ್ಯ ರಾಜಕಾರ ಣದ ಗದ್ದುಗೆ ಗುದ್ದಾಟದಿಂದಾಗಿ ಇಲ್ಲಿನ ಗ್ರಾಮವೊಂದರಲ್ಲಿ ಆತಂಕ ಮನೆ ಮಾಡಿದೆ! ಸಿಎಂ ಕುಮಾರಸ್ವಾಮಿ ಕುರ್ಚಿ ಉಳಿಸಿ ಕೊಂಡರಷ್ಟೇ ಈ ಗ್ರಾಮದ ಅಭಿವೃದ್ಧಿ ನಿರೀಕ್ಷಿಸಲಾಗಿದೆ.

Advertisement

ಅದುವೇ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡುತ್ತಾರೆ ಎನ್ನಲಾಗಿದ್ದ ಮಡಪ್ಪಾಡಿ ಗ್ರಾಮ. ಸಿಎಂ ಬರಲಿದ್ದಾರೆ ಎಂದಾಗ ಈ ಗ್ರಾಮದಲ್ಲಿ ಸಂಭ್ರಮ ನೆಲೆಸಿತ್ತು. ಸಿಎಂ ಅನ್ನು ಕರೆತರುವ ಪ್ರಯತ್ನಗಳು ಚುರುಕುಗೊಂಡಿದ್ದವು.

ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿತ್ತು. ಅನಂತರದ ರಾಜಕೀಯ ತಲ್ಲಣಗಳಿಂದ ಸಿಎಂ ಆಗಮನ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ. ಇದರಿಂದ ಗ್ರಾಮದ ಜನರಿಗೆ ನಿರಾಸೆ ಆಗಿದೆ.

ತಾಲೂಕು ಕೇಂದ್ರದಿಂದ ದೂರವಿರುವ ಗಡಿಭಾಗದ ಮಡಪ್ಪಾಡಿ ಬೆಳೆಯುತ್ತಿರುವ ಗ್ರಾಮ. ಇತಿಹಾಸ, ರಾಜಕೀಯ, ಧಾರ್ಮಿಕ, ಕೃಷಿ, ಸಾಹಿತ್ಯ ಹೀಗೆ ಪ್ರತಿಯೊಂದು ರಂಗದಲ್ಲೂ ಮಡಪ್ಪಾಡಿಗೆ ಪ್ರಮುಖ ಪಾತ್ರವಿದೆ. ಬಹುಮುಖ್ಯವಾಗಿ ಮೂಲಸೌಕರ್ಯ ಕೊರತೆಯನ್ನು ಗ್ರಾಮ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಸಿಎಂ ಗ್ರಾಮ ವಾಸ್ತವ್ಯ ಹೂಡುವ ಪಟ್ಟಿಯಲ್ಲಿ ಮಡಪ್ಪಾಡಿ ಗ್ರಾಮದ ಹೆಸರು ಮುಂಚೂಣಿಯಲ್ಲಿತ್ತು.

ಸಿಎಂ ಅವರನ್ನು ಗ್ರಾಮ ವಾಸ್ತವ್ಯಕ್ಕೆ ಆಹ್ವಾನಿಸಿ ಗ್ರಾಮ ಅಭಿವೃದ್ಧಿಗೊಳಿಸುವ ಪ್ರಯತ್ನವನ್ನು ಸುಳ್ಯದ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಪಕ್ಷಗಳ ನಾಯಕರು ನಡೆಸಿದ್ದರು. ಸಿಎಂ ಮೇಲೆ ಒತ್ತಡ ತರುವ ಪ್ರಯತ್ನಗಳು ನಡೆದಿದ್ದವು. ಮಡಪ್ಪಾಡಿ ಗ್ರಾಮವನ್ನೇ ಸಿಎಂ ಈ ಬಾರಿ ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಾಲೂಕಿನ ಜನತೆ ಭಾವಿಸಿದ್ದರು.

Advertisement

ತಾಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿದೆ ಗ್ರಾಮ. ತಾಲೂಕಿನಲ್ಲೇ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಗ್ರಾಮವಿದು., ಗ್ರಾಮದಲ್ಲಿ 1,413 ಜನಸಂಖ್ಯೆ ಇದ್ದು, 13,731.64 ಎಕ್ರೆ ವಿಸ್ತಿರ್ಣವಿದೆ. 11,477.13 ಎಕರೆ ವಿಸ್ತರ್ಣ ಅರಣ್ಯ ಪ್ರದೇಶದಿಂದ ಕೂಡಿದೆ.

ಅಭಿವೃದ್ಧಿಯಾಗದ ರಸ್ತೆಗಳು
ಕೆಲ ಪ್ರಮುಖ ರಸ್ತೆಗಳು ಕಾಂಕ್ರೀಟು ಗೊಂಡಿವೆ. ಬಿಟ್ಟರೆ, ಮಡಪ್ಪಾಡಿ- ಹಾಡಿಕಲ್ಲು, ಮಡಪ್ಪಾಡಿ- ಕಡ್ಯಕೋಟೆಗುಡ್ಡೆ, ಮಡಪ್ಪಾಡಿ-ಶೀರಡ್ಕ, ಮಡಪ್ಪಾಡಿ- ಬಾಳೆಗುಡ್ಡೆ, ಮಡಪ್ಪಾಡಿ- ಪೂಂಬಾಡಿ, ಮಡಪ್ಪಾಡಿ- ಮಾಯಿಪಳ್ಳ ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಮಡಪ್ಪಾಡಿ-ಕೊಲ್ಲಮೊಗ್ರು-ನಡುಗಲ್ಲು ರಸ್ತೆ ತೀರಾ ಹದಗೆಟ್ಟಿದೆ. ಪೂಂಬಾಡಿ, ಹಾಡಿಕಲ್ಲು ಪ್ರದೇಶದಲ್ಲಿ 60 ಕುಟುಂಬಗಳಿದ್ದು, ಇಲ್ಲಿಗೆ ತೆರಳುವ ರಸ್ತೆಗಳಿಗೆ ಇಂದಿಗೂ ಸರ್ವಋತು ಸೇತುವೆಗಳಿಲ್ಲ. ಗ್ರಾಮದ ತೋಟಗಳು ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಿವೆ.

ಅಡಿಕೆಗೆ ಹಳದಿ ರೋಗ
ಗ್ರಾಮದ ಬಹುಪಾಲು ರೈತರನ್ನು ಕಂಗೆಡಿಸಿದ್ದು ಅಡಿಕೆ ತೋಟಗಳಿಗೆ ವ್ಯಾಪಿಸಿದ ಹಳದಿ ರೋಗ. ಈ ರೋಗಕ್ಕೆ ತುತ್ತಾದ ಎಲ್ಲ ಅಡಿಕೆ ತೋಟಗಳು ಕ್ರಮೇಣ ಸಾಯುತ್ತಿದೆ. ಹಲವಾರು ಎಕ್ರೆ ಅಡಿಕೆ ತೋಟಗಳು ಹಳದಿ ರೋಗಕ್ಕೆ ತುತ್ತಾಗಿದೆ. ವರ್ಷಕ್ಕೆ 15-20 ಕ್ವಿಂಟಾಲ್‌ ಅಡಿಕೆ ಬರುತ್ತಿದ್ದ ಕೃಷಿಕನಿಗೆ ಹಳದಿ ರೋಗ ವ್ಯಾಪಿಸಿದ ಬಳಿಕ ವರ್ಷದ ಅಡಿಕೆ ಇಳುವರಿ 2-3 ಕ್ವಿಂಟಾಲ್‌ಗೆ ಇಳಿದಿದೆ. ಯುವಜನತೆ ನಗರ ಸೇರುತ್ತಿದ್ದಾರೆ. ಕೃಷಿ ಜಾಗವನ್ನು ಯಾರು ಕೂಡ ಖರೀದಿಸಲು ಬರುತ್ತಿಲ್ಲ ಎನ್ನುವುದು ಕೃಷಿಕರ ಅಳಲು.

ಪ್ರೌಢಶಾಲೆಯೇ ಇಲ್ಲಿಲ್ಲ
ಗ್ರಾಮದಲ್ಲಿ ಎರಡು ಕಿರಿಯ ಪ್ರಾಥಮಿಕ ಶಾಲೆ, ಒಂದು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಪ್ರೌಢಶಾಲೆ, ಕಾಲೇಜುಗಳಿಲ್ಲ. ಗ್ರಾಮದಲ್ಲಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಇದಕ್ಕೂ ಸುಳ್ಯವನ್ನೇ ಅವಲಂಬಿಸುವ ಸ್ಥಿತಿಯಿದೆ. ಕಳೆದ ಅಗಸ್ಟ್‌ ನಲ್ಲಿ ನಡೆದ ಪ್ರಾಕೃತಿಕ ವಿಕೋಪದಿಂದ ಗ್ರಾಮದ ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿತ್ತು. ಪರಿಹಾರವೂ ಸಿಕ್ಕಿಲ್ಲ.

ನಕ್ಸಲರ ಹೆಜ್ಜೆಗುರುತು
ಗ್ರಾಮದಲ್ಲಿ ಅಂಬೇಡ್ಕರ್‌ ಕಾಲನಿ, ಹಾಡಿಕಲ್ಲು ಕಾಲನಿ, ಕಜೆಕಾಲನಿ ಹೆಸರಿನ ಮೂರು ಕಾಲನಿಗಳಿದ್ದು, ಕೊರಗ, ಎಸ್ಸಿ, ಮಲೆಕುಡಿಯ ಜನಾಂಗದವರು ಮಾತ್ರ ವಾಸವಿದ್ದಾರೆ. ಕಾಲನಿಗಳು ಅಭಿವೃದ್ಧಿ ಕಂಡಿಲ್ಲ. ಕಳೆದ ವರ್ಷ ಈ ಪ್ರದೇಶದ ಒಂದು ಮನೆಗೆ ನಕ್ಸಲರು ಬಂದಿದ್ದರು.

“ಉದಯವಾಣಿ’ ಗುರುತಿಸಿದ್ದ ಕುಗ್ರಾಮ
ದಟ್ಟ ಕಾನನದ ನಡುವೆ ಇದೆ ಮಡಪ್ಪಾಡಿ ಗ್ರಾಮ. ಈ ಗ್ರಾಮವು ಹಲವು ಮೂಲ ಸೌಕರ್ಯ ಕೊರತೆ ಎದುರಿಸುತ್ತಿದೆ. ಹಿಂದಿನಿಂದಲೂ ಕುಗ್ರಾಮವಾಗಿ ಪರಿಗಣಿಸಲ್ಪಟ್ಟಿದೆ. ಹಿಂದೆ “ಉದಯವಾಣಿ’ ಗುರುತಿಸಿದ ಕುಗ್ರಾಮಗಳ ಪಟ್ಟಿಯಲ್ಲಿ ಸುಳ್ಯ ತಾಲೂಕಿನಲ್ಲಿ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವುಗಳೆರಡರಲ್ಲಿ ಒಂದು ಮಂಡೆಕೋಲು ಮತ್ತು ಇನ್ನೊಂದು ಇದೇ ಮಡಪ್ಪಾಡಿ ಆಗಿತ್ತು.

ಹಲವು ಸಮಸ್ಯೆಗಳ ಸುಳಿ
ಸರಕಾರ ಸ್ಥಿರವಾಗಿದ್ದಲ್ಲಿ ನಮ್ಮ ಗ್ರಾಮಕ್ಕೆ ಸಿಎಂ ಬರುತ್ತಿದ್ದರು. ನಮ್ಮ ಬಹುಕಾಲದ ಬೇಡಿಕೆಗಳಿಗೆ ಸ್ಪಂದನೆ ದೊರಕುತ್ತಿತ್ತು. ಮೂಲ ಸೌಕರ್ಯಗಳು ಈಡೇರುತ್ತಿತ್ತು. ರಸ್ತೆ, ಸೇತುವೆ, ಸಂಪರ್ಕ, ವಿದ್ಯುತ್‌, ನೆಟ್‌ವರ್ಕ್‌, ಆರೋಗ್ಯ, ಕಾಡುಪ್ರಾಣಿ ಹಾವಳಿ, ಗ್ರಾಮದಲ್ಲಿ ವ್ಯಾಪಕವಾಗಿರುವ ಅಡಿಕೆ ಹಳದಿ ರೋಗ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು ಎನ್ನುವ ನಿರೀಕ್ಷೆಗಳು ಈಗ ಹುಸಿಯಾಗಿದೆ.

ನಿರೀಕ್ಷೆ; ನಿರಾಸೆ
ಸಿಎಂ ಗ್ರಾಮ ವಾಸ್ತವ್ಯಕ್ಕೆ ಬರುತ್ತಾರೆ ಎಂದು ನಂಬಿದ್ದೆವು. ಗ್ರಾಮ ಅಭಿವೃದ್ಧಿ ನಿರೀಕ್ಷೆ ಹೊಂದಿದ್ದೆವು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಿರೀಕ್ಷೆಗಳು ಕಡಿಮೆಯಾಗಿವೆ. ಇದರಿಂದ ನಮಗೆ ತುಂಬಾ ನಿರಾಸೆಯಾಗಿದೆ.
– ಧರ್ಮಪಾಲ ಹಾಡಿಕಲ್ಲು ಸ್ಥಳೀಯ ನಿವಾಸಿ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next