Advertisement

ಮ್ಯಾರಥಾನ್‌ಗೆ ಗಣ್ಯರ ಮೆರುಗು

03:20 PM Feb 26, 2018 | |

ವಿಜಯಪುರ: ಸೂರ್ಯ ಕಿರಣಗಳು ಬೆಳಕಹರಿಸುವ ಮೊದಲೇ ವಿಶ್ವವಿಖ್ಯಾತ ಗೋಲಗುಮ್ಮಟ ಆವರಣದಲ್ಲಿ ಜಿಲ್ಲೆಯ ಪರಿಸರ ರಕ್ಷಣೆಗಾಗಿ ಸಸಿಗಳನ್ನು ನೆಡಲು ಜನ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಗೋಲಗುಂಬಜ್‌ ಮ್ಯಾರಥಾನ್‌ -ವೃಕ್ಷಥಾನ್‌ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿತ್ತು.

Advertisement

ವಿಜಯಪುರದ ವೃಕ್ಷ ಅಭಿಯಾನ ಟ್ರಸ್ಟ್‌ ಜಿಲ್ಲೆಯಲ್ಲಿ ಪರಿಸರ ಜಾಗೃತಿ, ವೃಕ್ಷ ಸಂರಕ್ಷಣೆಗೆ ಹಮ್ಮಿಕೊಂಡಿದ್ದ ಎರಡನೇ ವೃಕ್ಷಾಥಾನ್‌ ಸ್ಪರ್ಧೆಗೆ ಈ ಬಾರಿ ಹಲವು ಗಣ್ಯರು ಆಗಮಿಸುವ ಮೂಲಕ ಮೆರುಗು ಹೆಚ್ಚಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಕನ್ನಡ ಚಿತ್ರರಂಗ ಖ್ಯಾತ ನಟ ಯಶ್‌ ಅವರು ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದ್ದು ಆಕರ್ಷಣೆ ಎನಿಸಿತ್ತು. ಕಿನ್ಯಾ ಸೇರಿದಂತೆ ದಕ್ಷಿಣ ಆಫಿಕಾ ಖಂಡದ ಹಲವು ದೇಶಗಳ ಮ್ಯಾರಥಾನ್‌ ಸ್ಪರ್ಧಿಗಳು ಪಾಲ್ಗೊಂಡು ಪ್ರಶಸ್ತಿ ಬಾಚುವ ಮೂಲಕ ಸ್ಪರ್ಧೆಯನ್ನು ಐತಿಹಾಸಿಕ ಗೊಳಿಸಿದರು.

ಬಳದಿ ಬಣ್ಣದ ಟೀ ಶರ್ಟ್‌ ತೊಟ್ಟಿದ್ದ ಮಕ್ಕಳು, ಮಹಿಳೆಯರು, ಯುವಕ-ಯುವತಿಯರು, ವೃದ್ಧರು ಎನ್ನದೇ ಸುಮಾರು 10 ಸಾವಿರ ಜನರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಮ್ಯಾರಥಾನ್‌ ಓಟದ ಜಾಗೃತಿಗಾಗಿ ಸ್ಪರ್ಧಿಗಳು, ಸಂಘಟಕರು, ಸ್ವಯಂ ಸೇವಕರು ತೊಟ್ಟಿದ್ದ ಹಳದಿ ವರ್ಣ ಟೀ ಶರ್ಟ್‌ ಮೇಲೆ ಪರಿಸರ ಜಾಗೃತಿ ಸಂದೇಶ ಸಾರುವ ಘೋಷಣೆಗಳು ಜಿಲ್ಲೆಯಲ್ಲಿ ಬರಮುಕ್ತ ವಿಜಯಪುರ ಕನಸು ನನಸುಮಾಡುವ ಆಶಾಭಾವನೆ ಮೂಡಿಸಿತ್ತು.

ನಸುಕಿನಲ್ಲೇ 1, 3, 5, 10 ಹಾಗೂ 21 ಕಿ.ಮೀ. ಓಟದ ಸ್ಪರ್ಧೆಗಳು ವಿಶ್ವವಿಖ್ಯಾತ ಗೋಲಗುಮ್ಮಟ ಆವರಣದಲ್ಲಿ ಆರಂಭಗೊಂಡು, ಆಯಾ ನಿಗದಿ ಮಾರ್ಗದಲ್ಲಿ ಸಂಚರಿಸಿ, ಅಂತಿಮವಾಗಿ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಮುಕ್ತಾಯ ಕಂಡಿದ್ದವು.

ವಿಶ್ವವಿಖ್ಯಾತ ಗೋಲಗುಮ್ಮಟದಲ್ಲಿ ಹೊಸ ಲೋಕವೇ ಸೃಷ್ಟಿಯಾಗಿತ್ತು. ಯುವಜನತೆ ಹೊಸ ಪರಿಸರ ಹಬ್ಬದಲ್ಲಿ ಮಿಂದೇಳುವ ಮೂಲಕ ಖುಷಿ ಅನುಭವಿಸಿದರು. ಗೋಲಗುಮ್ಮಟ ಆವರಣದಲ್ಲಿ ಮುಂಜಾವಿನಲ್ಲಿ ನಿಂತು ತಮ್ಮವರೊಂದಿಗೆ ಫೋಟೋ, ಸೆಲ್ಫಿ  ತೆಗೆದುಕೊಳ್ಳುವ ಮೂಲಕ ವೃಕ್ಷಥಾನ್‌ ಸ್ಮರಣಾರ್ಹ ಮಾಡಿಕೊಳ್ಳಲು ಮುಂದಾಗಿದ್ದರು. 

Advertisement

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ , ಚಿತ್ರನಟ ಯಶ್‌ ಅವರನ್ನು ಕಾಣಲು ಸಾವಿರಾರು ಸಂಖ್ಯೆ ಅಭಿಮಾನಿಗಳು ನೆರೆದಿದ್ದರು. ಇಬ್ಬರೂ ನಾಯಕರು ಗೋಲಗುಮ್ಮಟ ಪ್ರವೇಶಿಸಿದಾಗ ಸಾವಿರಾರು ಅಭಿಮಾನಿಗಳಿಂದ ಮೊಳಗಿದ ಉದ್ಘೋಷ ಕಿವಿಗಡಚಿಕ್ಕುತ್ತಿತ್ತು. ಯಶ್‌ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು, ಹಸ್ತಲಾಘವ ಮಾಡಲು, ಸೆಲ್ಪಿಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಇಬ್ಬರು ನಾಯಕರ ಭದ್ರತೆಗೆ ನಿಯೋಜಿತ ಪೊಲೀಸರು ಜನರನ್ನು ನಿಯಂತ್ರಿಸಲು ಹೆಣಗುವಂತೆ ಮಾಡಿತು. 

ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಕ್ರೀಡಾಸಕ್ತರು, ಸಾವಿರಾರು ಸ್ವಯಂ ಸೇವಕರು ಸ್ಪರ್ಧಿಗಳಿಗೆ ಓಟದಲ್ಲಿ ಆಯಾಸ ನೀಗಲು ಹಲವು ಬಗೆಯ ಪಾನೀಯಗಳು, ಚಾಕ್‌ಲೇಟ್‌, ನೀರು, ಗ್ಲುಕೋಸ್‌ ಪೌಡರ್‌, ನಿಂಬೆಹುಳಿ-ಪೆಪ್ಪರ್‌ವೆುಂಟ್‌, ಬಿಸ್ಕತ್‌ ನೀಡಿ ಸ್ಪರ್ಧಿಗಳಿಗೆ ಸ್ಫೂರ್ತಿ ನೀಡಿದರು. ವಿವಿಧ ಭಾಗಗಳ ಮ್ಯಾರಥಾನ್‌ ಓಟ ಸಾಗುವ ಬಸವ ವನ, ಡಾ| ಅಂಬೇಡ್ಕರ್‌ ವೃತ್ತ, ಗಾಂಧಿ ಚೌಕ್‌, ಶಿವಾಜಿ ವೃತ್ತ, ವಾಟರ್‌ ಟ್ಯಾಂಕ್‌, ಇಟಗಿ ಪೆಟ್ರೋಲ್‌ ಪಂಪ್‌, ರಿಂಗ್‌ ರಸ್ತೆಯ ಆಕಾಶವಾಣಿ ಮೂಲಕ ಬೇಗಂ ತಲಾಬ್‌ ಕೆರೆಯ ನೀರಿನ ತೊಟ್ಟಿ ಸೇರಿದಂತೆ ಹತ್ತಾರು ಭಾಗಗಳಲ್ಲಿ ಜನರು ಸಾಲುಗಟ್ಟಿ ನಿಂತು ವೃಕ್ಷಾಥಾನ್‌ ವೀಕ್ಷಿಸಿದರು.

ಮುಖ್ಯ ಸ್ಪರ್ಧೆಯ ಅಂತಿಮ ಘಟ್ಟಕ್ಕೆ ನಿಗದಿಯಾಗಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಸಿದ್ದ ಅಂಗವಿಕಲ ಕ್ರೀಡಾಪಟುಗಳು ಹ್ಯಾಪಿರನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಜನತೆಯಲ್ಲಿ ಪರಿಸರ ರಕ್ಷಣೆಯ ಸಂದೇಶ ರವಾನಿಸಿದರು. ಮ್ಯಾರಥಾನ್‌ ಓಟದಲ್ಲಿ ಪಾಲ್ಗೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಾಧನೆ ಮಾಡಿದ ಅಥ್ಲೀಟ್‌ ಗಳನ್ನು ಕಾಣುವ ಅವಕಾಶವೂ ವಿಜಯಪುರ ನಗರದ ಯುವಜನತೆಗೆ ದೊರಕಿತು. ಹವ್ಯಾಸಿ ಮ್ಯಾರಥಾನ್‌ ಓಟಗಾರರು ಅಂತಹ ಅಥ್ಲೀಟ್‌ಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು, ಆಟೋಗ್ರಾಫ್‌ ಸಹ ಪಡೆದುಕೊಂಡರು. ಅಭಿಮಾನಿಗಳ ಆಗ್ರಹಕ್ಕೆ ಮಣಿದ ಯಶ್‌ ಅವರು, ಕೆಜಿಎಫ್‌ ಚಲನಚಿತ್ರದ ಡೈಲಾಗ್‌ ಹೇಳಿ ಖುಷಿ ನೀಡಿ ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next