Advertisement

ಹಣ ಕೊಟ್ಟರೂ ಮೇವು, ನೀರು ಸಿಗಲ್ಲ: ರೈತರ ಅಳಲು

03:45 AM Feb 12, 2017 | Team Udayavani |

ಬೆಂಗಳೂರು: ಹಿಂಗಾರು ಮಳೆಯಿಲ್ಲದೆ ರಾಜ್ಯದಲ್ಲಿ ಉಂಟಾಗಿರುವ ಬೆಳೆ ಹಾನಿ, ಕುಡಿಯುವ ನೀರಿನ ತೊಂದರೆ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಶನಿವಾರ ಚಿತ್ರದುರ್ಗ, ಮೈಸೂರು, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು.

Advertisement

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹುಲಸಗೇರಿ ಬಳಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಮನವಿ ಪತ್ರ ಸಲ್ಲಿಸಿ, ಪರಿಹಾರಕ್ಕೆ ಆಗ್ರಹಿಸಿದರು. ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿ, ಈ ಬಾರಿ ಶೇ.93ರಷ್ಟು ಮಳೆ ಕೊರತೆ ಉಂಟಾಗಿದೆ. ಕೇವಲ ಶೇ.7ರಷ್ಟು ಮಳೆ ಬಂದಿದ್ದು, ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಆದರೆ, ಬರದಿಂದ ಬಳಲಿದ ರಾಜ್ಯದ ರೈತರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ, ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಪರಿಹಾರ ಬೇಡ; ನೀರು ಕೊಡಿ:
ಈ ಮಧ್ಯೆ, ಅಧ್ಯಯನ ಪ್ರವಾಸದ ವೇಳೆ ಅಧಿಕಾರಿಗಳ ತಂಡಕ್ಕೆ ಬರದ ಭೀಕರತೆಯ ಸಾಕ್ಷಾತ್‌ ದರ್ಶನವಾಯಿತು. ಅಧಿಕಾರಿಗಳ ಬಳಿ ಕೆಲವೆಡೆ ರೈತರು ನೀರಿಗಾಗಿ ಬೇಡಿಕೆ ಇಟ್ಟರು. ನಮಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪರಿಹಾರ ಬೇಡ. ನಮ್ಮ ಭೂಮಿಗೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸಿ. ಕೆರೆಗಳಿಗೆ ನೀರು ತುಂಬಿಸಿ, ಆಗ ನಾವು ನೆಮ್ಮದಿಯ ಕೃಷಿ ಮಾಡುತ್ತೇವೆ. ಕುಡಿಯಲು ನೀರು ಪೂರೈಸಿ ಎಂದು ಮನವಿ ಮಾಡಿದರು.

ಬರ ಅಧ್ಯಯನ ತಂಡದ ಸದಸ್ಯರು ಹೋದಲ್ಲೆಲ್ಲ ಉದ್ಯೋಗದ ಸಮಸ್ಯೆ, ಕುಡಿಯುವ ನೀರಿನ ಬವಣೆ ಮುಂದಿಟ್ಟ ರೈತರು, ಜಾನುವಾರುಗಳಿಗೆ ಮೇವು, ಗೋಶಾಲೆ ತೆರೆಯಬೇಕೆಂದು ಕಣ್ಣೀರಿಟ್ಟು ಕೋರಿಕೊಂಡರು. ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದ್ದು ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕುಡಿಯುವ ನೀರಿಗಾಗಿ ಗಂಟೆಗಟ್ಟಲೆ ಉರಿಬಿಸಿಲಿನಲ್ಲಿ ಕಾದು ನಿಂತು ಮಹಿಳೆಯರು ನೀರು ತರುವ ಪರಿಸ್ಥಿತಿ ಇದೆ. ಮಳೆ, ಇಲ್ಲದೆ ಕೃಷಿ ಮಾಡುವುದೇ ಕಷ್ಟವಾಗಿದೆ. ಹಳ್ಳಿಯಲ್ಲಿ ಹಣ ಕೊಟ್ಟರೂ ಮೇವು ಮತ್ತು ನೀರು ಸಿಗುತ್ತಿಲ್ಲ. ಹೀಗಾದರೆ ಜಾನುವಾರುಗಳನ್ನು ಸಾಕುವುದು ಹೇಗೆ ಎಂದು ಅಳಲು ತೋಡಿಕೊಂಡರು.

ಇದೇ ವೇಳೆ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ, ಜಿಲ್ಲಾಡಳಿತಗಳಿಂದ ಬರ ಪರಿಸ್ಥಿತಿ ಹಾಗೂ ತುರ್ತು ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ಅಧಿಕಾರಿಗಳು, ವಿವಿಧ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸುತ್ತಿದ್ದೇವೆ. ತೀವ್ರ ಬರ ಇರುವುದು ನಮ್ಮ ಗಮನಕ್ಕೆ ಬಂದಿದೆ. ಬೆಳೆ ಹಾನಿ, ನಷ್ಟದ ಕುರಿತು ವಿವರವನ್ನೂ ಪಡೆದಿದ್ದೇವೆ. ಒಂದು ವಾರದಲ್ಲಿ ಕೇಂದ್ರಕ್ಕೆ ನಮ್ಮ ಅಧ್ಯಯನ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next