Advertisement

ರಿಸಲ್ಟ ಕೊಡಿ, ಪ್ರೋತ್ಸಾಹಧನ ತಗೊಳ್ಳಿ

12:55 PM Dec 13, 2018 | |

ಬೆಂಗಳೂರು: “ಉತ್ತಮ ಫ‌ಲಿತಾಂಶ ಕೊಡಿ, ಪ್ರೋತ್ಸಾಹ ಧನ ಪಡೆಯಿರಿ’. ತನ್ನ ಶಾಲಾ-ಕಾಲೇಜುಗಳಲ್ಲಿನ ಫ‌ಲಿತಾಂಶ ವೃದ್ಧಿಗೆ ಬಿಬಿಎಂಪಿ ರೂಪಿಸಿರುವ ವಿನೂತನ ಯೋಜನೆಯಿದು. ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ಹೆಚ್ಚಿನ ವಿದ್ಯಾರ್ಥಿ ಗಳು ಪ್ರವೇಶ ಪಡೆಯಲು ಹಲವು ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಜತೆಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಮಕ್ಕಳಿಗೆ ದೊರೆಯಬೇಕೆಂಬ ಉದ್ದೇಶದಿಂದ ಮೈಕ್ರೋಸಾಫ್ಟ್ ಹಾಗೂ ಟೆಕ್‌ ಅವಾಂತ್‌ ಗಾರ್ಡ್‌ ಸಂಸ್ಥೆಗಳ ಸಹಯೋಗದಲ್ಲಿ “ಬಿಬಿಎಂಪಿ ರೋಶಿನಿ’ ಯೋಜನೆ ಜಾರಿಗೆ ತಂದಿದ್ದು, ಇದೀಗ ಉತ್ತಮ ಫ‌ಲಿತಾಂಶ ನೀಡುವ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದೆ.

Advertisement

ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಫ‌ಲಿತಾಂಶ ಪ್ರಮಾಣ ಮಾತ್ರ ಶೇ.70ರಷ್ಟು ದಾಟುತ್ತಿಲ್ಲ. ಉತ್ತಮ ಫ‌ಲಿತಾಂಶ ತರುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಆ ಹಿನ್ನೆಲೆಯಲ್ಲಿ ಉತ್ತಮ ಫ‌ಲಿತಾಂಶ ನೀಡುವ ಶಾಲೆಗಳಲ್ಲಿ ಬೋಧನೆ ಮಾಡುವ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.
 
ಶಾಲೆಗಳು ಪಡೆಯುವ ಫ‌ಲಿತಾಂಶದ ಆಧಾರದ ಮೇಲೆ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅದರಂತೆ ಶೇ.60ರಿಂದ 70, 70 ರಿಂದ 80, 80 ರಿಂದ 90 ಹಾಗೂ 90 ರಂದ 100ರಷ್ಟು ಫ‌ಲಿತಾಂಶ ಪಡೆಯುವ ಶಾಲೆಗಳಿಗೆ ಒಂದೊಂದು ರೀತಿಯ ಪ್ರೋತ್ಸಾಹ ಧನ ಹಂಚಿಕೆ ಮಾಡಲಾಗುತ್ತದೆ. ಇದರಿಂದಾಗಿ ಶಾಲಾ-ಕಾಲೇಜುಗಳ ನಡುವೆ ಗುಣಾತ್ಮಕ ಪೈಪೋಟಿ ಏರ್ಪಡಲಿದ್ದು, ಶಿಕ್ಷಕರಲ್ಲಿಯೂ ಉತ್ಸಾಹ ಹೆಚ್ಚಾಗಲಿದೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿ.

ಇದರೊಂದಿಗೆ ಪರೀಕ್ಷೆ ಸಂದರ್ಭಗಳಲ್ಲಿ ಬಿಬಿಎಂಪಿ ಶಾಲೆಗಳಲ್ಲಿನ ಸ್ಮಾರ್ಟ್‌ಟಿವಿ ಮೂಲಕ ಪಾಠ ಪುನರಾವರ್ತನೆ ಮಾಡಿಕೊಳ್ಳಲು ಶಾಲೆಗೆ ಬರುವಂತಹ ವಿದ್ಯಾರ್ಥಿಗಳಿಗೆ ಸಂಜೆ ತಿಂಡಿ ನೀಡಲು ಸಹ ಪಾಲಿಕೆ ಮುಂದಾಗಿದೆ.

ಪ್ರತ್ಯೇಕ ಪರೀಕ್ಷಾ ಮಂಡಳಿ ರಚನೆ: ಸರ್ಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮಾದರಿಯಲ್ಲಿಯೇ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ “ಬಿಬಿಎಂಪಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ’ ರಚಿಸಲಾಗಿದೆ. ಸರ್ಕಾರ ಮಂಡಳಿಯ ನಡೆಸುವಂತೆಯೇ ಪಾಲಿಕೆಯ ಮಂಡಳಿಯೂ ಕಾರ್ಯನಿರ್ವಹಿಸಲಿದೆ. ಮಂಡಳಿಯ ಪಾಲಿಕೆಯ ಪ್ರೌಢಶಾಲೆಗಳ ಎಲ್ಲ ಪ್ರಾಂಶುಪಾಲರು, ಶಿಕ್ಷಣಾಧಿಕಾರಿಗಳು, ಶಿಕ್ಷಣ ವಿಭಾ ಗದ ಅಧಿಕಾರಿಗಳು ಇರಲಿದ್ದಾರೆ.

ಎರಡು ಪೂರ್ವ ಸಿದ್ಧತಾ ಪರೀಕ್ಷೆ: ಸರ್ಕಾರದ ಪರೀಕ್ಷಾ ಮಂಡಳಿಯಿಂದ ಒಮ್ಮೆ ಮಾತ್ರ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಪಾಲಿಕೆಯಿಂದ ಮುಖ್ಯ ಪರೀಕ್ಷೆಯೊಳಗೆ ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ. ಪರೀಕ್ಷೆಯನ್ನೂ ಸಹ ಸರ್ಕಾರದ ಪರೀಕ್ಷಾ ಮಂಡಳಿ ನಡೆಸುವಂತಹ ರೀತಿಯಲ್ಲಿಯೇ ನಡೆಸಲು ತೀರ್ಮಾನಿಸಿದ್ದು, ಇದರಿಂದಾಗಿ ಮಕ್ಕಳಿಗೆ ಪರೀಕ್ಷೆಯ ಭಯ ಹೋಗಲಿದೆ. ಜತೆಗೆ ಪೂರ್ವ ಸಿದ್ಧತಾ ಪರೀಕ್ಷೆ ಗಳು ಮುಖ್ಯಪರೀಕ್ಷೆಗೆ ಅನುಕೂಲವಾಗಲಿದ್ದು, ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಪಾಲಿಕೆಯ ಶಿಕ್ಷಣ ವಿಭಾಗದ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಸೋಮವಾರದಿಂದ ಪೂರ್ವಸಿದ್ಧತಾ ಪರೀಕ್ಷೆ ಆರಂಭ: ಬಿಬಿಎಂಪಿಯ 32 ಪ್ರೌಢ ಶಾಲೆಗಳಲ್ಲಿ ಸೋಮವಾರದಿಂದ ಮೊದಲ ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗಲಿದೆ. ಅದರಂತೆ ಈಗಾಗಲೇ ಪ್ರತಿಯೊಂದು ವಿಷಯ ನಾಲ್ಕು ಪ್ರಶ್ನೆ ಪತ್ರಿಕೆಗಳು ಮಂಡಳಿಗೆ ಸಲ್ಲಿಕೆಯಾಗಿದ್ದು, ಆ ಪೈಕಿ ಒಂದು ಪ್ರಶ್ನೆ ಪತ್ರಿಕೆ ಯನ್ನು ಹಿರಿಯ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಜತೆಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಯೂ ಸಹ ಸೋಮವಾರ ಬೆಳಗ್ಗೆ 8 ಗಂಟೆಗೆ ಶಾಲೆಗಳಿಗೆ ಹೋಗಲಿದೆ. 

ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಈಗಾಗಲೇ ಬಿಬಿಎಂಪಿ ರೋಶಿನಿ ಯೋಜನೆ ಜಾರಿಯಾಗಿದೆ. ಅದರಂತೆ ಫ‌ಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಉತ್ತಮ ಫ‌ಲಿತಾಂಶ ಬರುವ ಶಾಲೆಗಳ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡಲಾಗುವುದು.
ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next