Advertisement

ಹೆಬ್ಬಾಳದ ಕಾಮಗಾರಿಗಳಿಗೆ “ಐಡಿಯಾ’ಕೊಡಿ

01:05 AM Jul 17, 2019 | Team Udayavani |

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಈಗಾಗಲೇ ಕಾಮಗಾರಿಗಳು ಸ್ಪರ್ಧೆಗೆ ಇಳಿದಂತೆ ಪ್ರಾರಂಭವಾಗಿವೆ. ಹೆಬ್ಬಾಳವನ್ನು (ಹೆಬ್ಬಾಳ ಜಂಕ್ಷನ್‌)ಕೇಂದ್ರೀಕರಿಸಿದಂತೆ ಮೆಟ್ರೋ ಮಾರ್ಗ, ಸಬ್‌ಅರ್ಬನ್‌ ರೈಲುನಿಲ್ದಾಣ, ಬಿಎಂಟಿಸಿ ಡಿಪೋ ಘಟಕ ಮತ್ತು ರಸ್ತೆ ವಿಸ್ತೀರ್ಣದ ಸೇರಿದಂತೆ ಹಲವು ಕಾಮಗಾರಿಗಳು ಪ್ರಾರಂಭವಾಗಲಿದೆ. ಜನರ ಸಹಭಾಗಿತ್ವ, ಅಧಿಕಾರಿಗಳ ಸಮನ್ವಯ ಸಾಧಿಸಲು ಸಿಟಿಜನ್‌ ಫಾರ್‌ ಸಸ್ಟೇನೆಬಿಲಿಟಿ ಸಂಸ್ಥೆ “ಎ ಬೆಟರ್‌ ಹೆಬ್ಬಾಳ’ ಆಂದೋಲನದ ಮೂಲಕ ಸಾರ್ವಜನಿಕರಿಂದ “ಐಡಿಯಾ’ ಆಹ್ವಾನಿಸಿದೆ.

Advertisement

ಇತ್ತೀಚಿನ ದಿನಗಳಲ್ಲಿ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದ ಹಲವು ಯೋಜನೆಗಳು ಹಳ್ಳ ಹಿಡಿದಿವೆ. ಈಗ ಒಂದೇ ಪ್ರದೇಶದಲ್ಲಿ ನಾಲ್ಕರಿಂದ ಐದು ಕಾಮಗಾರಿಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯು ಅಧಿಕಾರಿಗಳು ಹೇಗೆ ಸಮನ್ವಯ ಸಾಧಿಸುತ್ತಾರೆ ಎನ್ನುವ ಪ್ರಶ್ನೆ ಸಹಜ. ಈ ನಿಟ್ಟಿನಲ್ಲಿ “ಸಿಟಿಜನ್‌ ಫಾರ್‌ ಸಸ್ಟೇನೆಬಿಲಿಟಿ’ ಸಂಸ್ಥೆ ಹೆಬ್ಬಾಳದಲ್ಲಿ ನಡೆಯಲಿರುವ ಯೋಜನೆಗಳಿಗೆ ಜನ ಮತ್ತು ವಿವಿಧ ಇಲಾಖೆಗಳ ನಡುವೆ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಲು, ಸ್ಪರ್ಧೆ ಮತ್ತು ಚರ್ಚೆಗಳನ್ನು ಪ್ರಾರಂಭಿಸಿದೆ.

ಸಿಟಿಜನ್‌ ಫಾರ್‌ ಸಸ್ಟೇನೆಬಿಲಿಟಿ ಸಂಸ್ಥೆ “ಎ ಬೆಟರ್‌ ಹೆಬ್ಬಾಳ’ ವಿನ್ಯಾಸ ಮತ್ತು ಆಲೋಚನೆ ಎನ್ನುವ ಆಂದೋಲನ ಪ್ರಾರಂಭಿಸಿದ್ದು, ಸಾರ್ವಜನಿಕರಿಂದ “ಐಡಿಯಾ’ ಆಹ್ವಾನಿಸಿದೆ. ಜು. 21ರವರೆಗೆ ಸಂಸ್ಥೆಯ ವೆಬ್‌ಸೈಟ್‌ https://www.cifos.org/events/abetterhebbal ಗೆ ನೊಂದಾಯಿಸಿಕೊಳ್ಳಬಹುದು. ನೊಂದಾಯಿಸಿಕೊಂಡವರು ಆ.18ರ ಒಳೆಗೆ ಹೆಬ್ಬಾಳದಲ್ಲಿ ನಡೆಯಲಿರುವ ಕಾಮಗಾರಿಗಳ ಬಗ್ಗೆ ತಮ್ಮ ಆಲೋಚನೆ ಮತ್ತು ಸಲಹೆಗಳನ್ನು ಹಂಚಿಕೊಳ್ಳಬಹುದು. ಉತ್ತಮ ಆಲೋಚನೆ ಕಳುಹಿಸುವ 10ಜನರನ್ನು ಸಿಟಿಜನ್‌ ಫಾರ್‌ ಸಸ್ಟೇನೆಬಿಲಿಟಿ ಸಂಸ್ಥೆ ಆಯ್ಕೆ ಮಾಡಲಿದ್ದು, ಇವರಲ್ಲಿ ಅತ್ಯುತ್ತಮ ಆಲೋಚನೆ ನೀಡಿದವರಿಗೆ ನಗರ ಭೂಸಾರಿಗೆ ನಿರ್ದೇಶನಾಲಯ 10ಲಕ್ಷ ರೂ. ಬಹುಮಾನ ನೀಡಲಿದೆ.

“ಹೆಬ್ಬಾಳದಲ್ಲಿ ಎಲಿವೇಟರ್‌ ಕಾರಿಡಾರ್‌ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಬರಲಿವೆ. ಹೀಗಾಗಿ, ಈ ಭಾಗದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಅಂದಾಜು 8ಲಕ್ಷ ಜನ ಸಂದಣಿ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹಲವು ಕಾಮಗಾರಿಗಳು ಪ್ರಾರಂಭವಾಗುವುದರಿಂದ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗಲಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವುದು ಮುಖ್ಯ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ನಡುವೆ ಚರ್ಚೆಗೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ’ ಎನ್ನುತ್ತಾರೆ ಸಿಟಿಜನ್‌ ಫಾರ್‌ ಸಸ್ಟೇನೆಬಿಲಿಟಿ ಸಂಸ್ಥೆಯ ಸಹ ಸಂಸ್ಥಾಪಕ ಸುಬ್ಬಯ್ಯ.

” ಯೋಜನೆ ಪೂರ್ಣಗೊಂಡ ಮೇಲೆ ಸಾರ್ವಜನಿಕರಿಂದ ಆಕ್ಷೇಪವ್ಯಕ್ತವಾಗುತ್ತವೆ ಮತ್ತು ಈ ಯೋಜನೆಗಳಿಗೆ ಸಾರ್ವಜನಿಕರಲ್ಲಿ ಇನ್ನೂ ಉತ್ತಮವಾದ ಆಲೋಚನೆಗಳಿರಬಹುದು. ಅದನ್ನು ಗುರುತಿಸಿ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳುವವರಿಗೆ ವಿವಿಧ ಕಾಮಗಾರಿಗಳ ವಿವಿರವನ್ನೂ ನೀಡಲಾಗುವುದು’ ಎಂದು ಅವರು ವಿವರಿಸಿದರು.

Advertisement

ನೀವೂ ಭಾಗವಹಿಸಿ: ಆಂದೋಲನದಲ್ಲಿ ನೀವೂ ಭಾಗವಹಿಸಬಹುದು. ನಿಮ್ಮ ಸಲಹೆ ಮತ್ತು ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಇದರಲ್ಲಿ ಭಾಗವಹಿಸುವುದಕ್ಕೆ ತಾಂತ್ರಿಕ ನೈಪುಣ್ಯತೆಯ ಅಗತ್ಯತೆ ಇಲ್ಲ ಎಂದು ಸಿಟಿಜನ್‌ ಫಾರ್‌ ಸಸ್ಟೇನೆಬಿಲಿಟಿ ಸ್ಪಷ್ಟಪಡಿಸಿದೆ. ವೆಬ್‌ಸೈಟ್‌ ಕನ್ನಡ ಮತ್ತು ಇಂಗ್ಲಿಷ್‌ ಎರಡರಲ್ಲೂ ಲಭ್ಯವಿದೆ https://www.cifos.org/events/abetterhebbal ಮಾಹಿತಿಗೆ ಸಂರ್ಪಕಿಸಬಹುದು.

ಉತ್ತಮ ಆಲೋಚನೆಗೆ ಬಹುಮಾನ: ಸಿಟಿಜನ್‌ ಫಾರ್‌ ಸಸ್ಟೇನೆಬಿಲಿಟಿ ಆಯ್ಕೆ ಮಾಡುವ 10 ಜನರಲ್ಲಿ ಅತ್ಯುತ್ತಮ ಆಲೋಚನೆಯುಳ್ಳವರಿಗೆ ಪ್ರಶಸ್ತಿಯೂ ಸಿಗಲಿದೆ. ತೀರ್ಪುಗಾರರಾಗಿ ವಿವಿಧ ಇಲಾಖೆಯ ಅಧಿಕಾರಿಗಳೇ ಭಾಗವಹಿಸಲಿದ್ದು, ಇದಕ್ಕಾಗಿ ನಗರ ಭೂಸಾರಿಗೆ ನಿರ್ದೇಶನಾಲಯ 10ಲಕ್ಷರೂ. ಮೀಸಲಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next