Advertisement

ಗಿರಡ್ಡಿ ಅವರದ್ದು ಸ್ನೇಹಮಯಿ ವ್ಯಕ್ತಿತ್ವ

12:22 PM May 15, 2018 | Team Udayavani |

ಬೆಂಗಳೂರು: ಇತ್ತೀಚೆಗೆ ನಿಧನರಾದ ಖ್ಯಾತ ವಿಮರ್ಷಕ ಡಾ.ಗಿರಡ್ಡಿ ಗೋವಿಂದರಾಜ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸೋಮವಾರ ನುಡಿನಮನ ಸಲ್ಲಿಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಬಿರುಸು ಮಾತಿನ ಮಲ್ಲನಾಗಿದ್ದ ಗಿರಡ್ಡಿ ಗೋವಿಂದರಾಜ ಅವರು ಹೃದಯದಲ್ಲಿ ಅಷ್ಟೇ ಸ್ನೇಹಮಯಿ ಆಗಿದ್ದರು.

Advertisement

ಅವರು ಇತ್ತೀಚಗಷ್ಟೇ ಅನುವಾದಿಸಿದ್ದ ಕೃತಿ “ಜಯ’ ನನಗೆ ಬಹಳಷ್ಟು ಇಷ್ಟವಾಗಿತ್ತು. ವಿಮರ್ಶಕರಾಗಿಯೂ ನಾಡಿನ ಮನೆಮಾತಾಗಿದ್ದ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಾ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದರು. ಹಲವು ವಿಚಾರಗಳಲ್ಲಿ ನಾನು ಅವರು ವಿಭಿನ್ನ ದೃಷ್ಟಿಕೋನ ಹೊಂದಿದ್ದೆವು. ಆದರೆ, ಸಾಹಿತ್ಯ ವಿಚಾರ ಬಂದಾಗ ಒಂದಾಗುತ್ತಿದ್ದೇವು. ಅದರ ಕುರಿತಾಗಿಯೇ ಹರಟುತ್ತಿದ್ದೆವು. ಸ್ನೇಹಿತನ ಆಗಲಿಕೆ ತುಂಬಾ ದುಃಖ ತಂದಿದೆ ಎಂದರು.

ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಕಂಬಾರರ ಆಪ್ತ ಮಿತ್ರರಾಗಿದ್ದ ಗಿರಡ್ಡಿ ಗೋವಿಂದರಾಜ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲರನ್ನೂ ಆತ್ಮೀಯರಾಗಿ ಕಾಣುತ್ತಿದ್ದ ಅವರ ನಡವಳಿಕೆ ನಮಗೆ ಮಾದರಿ. ವಿಮರ್ಶಕ್ಷೇತ್ರದಲ್ಲಿ ಅವರು ಅಜರಾಮರವಾಗಿ ಉಳಿದಿದ್ದಾರೆ ಎಂದು ಬಣ್ಣಿಸಿದರು.

ವಿಮರ್ಶಕ ಎಸ್‌.ಆರ್‌.ವಿಜಯಶಂಕರ್‌ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ವಿಮರ್ಶೆಯ ಬಗ್ಗೆ ಗಿರಡ್ಡಿ ಗೋವಿಂದರಾಜ ಅವರು ಮಾತನಾಡುವಾಗ ಸೌಮ್ಯವಾಗಿ ಹರಿಯುವ ನದಿಯಂತಿರುತ್ತಿದ್ದರು. ಗಿರಡ್ಡಿ ಅವರ ಕೃತಿಗಳಲ್ಲಿ ಸಮಾಜಮುಖೀಯಾದ ಅವರ ದೃಷ್ಟಿಕೋನವನ್ನು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎಲ್‌.ಎನ್‌.ಮುಕುಂದರಾಜ್‌, ಮಾರ್ಕಂಡಪುರ ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next