Advertisement

Ghati Subramanya cattle fair: ಘಾಟಿ ಜಾತ್ರೆಯಲ್ಲಿ ಜೋಡೆತ್ತಿಗೆ 9 ಲಕ್ಷ ರೂ.!

02:37 PM Dec 28, 2023 | Team Udayavani |

ದೊಡ್ಡಬಳ್ಳಾಪುರ: ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಕ್ಷೇತ್ರದ ಭಾರೀ ದನಗಳ ಜಾತ್ರೆ ಆರಂಭವಾಗಿದ್ದು ಕಣ್ಣು ಹಾಯಿಸು ವಷ್ಟು ದೂರವೂ ಎತ್ತುಗಳ ವಿಹಂಗಮ ನೋಟ ಕಣ್ಮನ ಸೆಳೆಯುತ್ತಿದೆ. ಈ ಬಾರಿ ಬರಗಾಲ, ಕೋವಿಡ್‌ ಭೀತಿಯ ನಡುವೆಯೂ ದನಗಳ ಜಾತ್ರೆ ಕಳೆಗಟ್ಟಿದೆ.

Advertisement

ಕೃಷಿ ಚಟುವಟಿಕೆ ಹಿನ್ನಡೆ ಆಗುತ್ತಿರುವ ಇಂದಿನ ದಿನಗಳಲ್ಲಿ ಟ್ರ್ಯಾಕ್ಟರ್‌ ಬೆಲೆಗೆ ಎತ್ತುಗಳು ಮಾರಾಟವಾ ಗುತ್ತಿರುವುದು ಹುಬ್ಬೇರುವಂತೆ ಮಾಡಿವೆ. ಒಂದು ಕಡೆ ಕೃಷಿಗಾಗಿ ರಾಸು ಖರೀದಿಸುತ್ತಿದ್ದರೆ, ಇನ್ನೊಂದೆಡೆ ಘನತೆಗಾಗಿ ಅಲಂಕಾರದ ಎತ್ತುಗಳ ವ್ಯಾಪಾರ ನಡೆಯುತ್ತಿದೆ. ಈ ಬಾರಿ ಬರಗಾಲವಿರುವುದರಿಂದ ಉತ್ತರ ಕರ್ನಾಟಕದ ರೈತರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದು ವ್ಯಾಪಾರ ಅಷ್ಟೊಂದು ಬಿರುಸಾಗಿಲ್ಲ.

ಜಾತ್ರೆಗೆ ಅಮೃತ ಮಹಲ್‌, ಹಳ್ಳಿಕಾರ್‌ ಸೇರಿದಂತೆ ವಿವಿಧ ತಳಿಯ ಹೋರಿಗಳು ಆಗಮಿಸಿದ್ದು ಉತ್ತಮ ತಳಿಯ ರಾಸು ಗುರುತಿಸಿ ದೇವಾಲಯದ ಆಡಳಿತ ಮಂಡಳಿ ಬಹುಮಾನ ನೀಡಲಿದೆ. ಜಾತ್ರೆಯಲ್ಲಿ ಹೋರಿ ಕಟ್ಟುವ ಸ್ಥಳಕ್ಕೆ ಲಕ್ಷಾಂತರ ರೂ., ಖರ್ಚು ಮಾಡಿ ಹೈಟೆಕ್‌ ಮಾದರಿಯಲ್ಲಿ ಪೆಂಡಾಲ್‌ ನಿರ್ಮಿಸಿರುವ ರೈತರ ಸಂಖ್ಯೆಯೂ ಹೆಚ್ಚಾಗಿದೆ.

ವ್ಯಾಪಾರ ಬಿರುಸುಗೊಳ್ಳಬೇಕಿದೆ: ದೊಡ್ಡಬಳ್ಳಾ ಪುರದ ಭುವನೇಶ್ವರಿ ನಗರದ ಮುನಿಶಾಮಪ್ಪ ಕುಟುಂಬ ಕಳೆದ 45 ವರ್ಷಗಳಿಂದ ಘಾಟಿ ಜಾತ್ರೆಗೆ ಬರುತ್ತಿದ್ದಾರೆ. ಕಳೆದ ಜಾತ್ರೆಯಲ್ಲಿ ಇವರ ರಾಸುಗಳ  ಬೆಲೆ 6.5 ಲಕ್ಷ ರೂ.ಗಳಾಗಿತ್ತು. ಈಗ 2.5 ಲಕ್ಷಕ್ಕೆ ಇವರ ಬೇರೆ ರಾಸು ಮಾರಾಟವಾಗಿವೆ. ಜಾತ್ರೆಗೆ ವ್ಯವಸ್ಥೆ ಮಾಡಿರುವುದು ತೃಪ್ತಿಕರವಾಗಿದೆ. ಆದರೆ ಉತ್ತರ ಕರ್ನಾಟಕದ ಮಂದಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. 10 ಜತೆ ಮಾರಾಟವಾಗುವ ಜಾಗದಲ್ಲಿ 4-5ಜತೆ ಮಾರಾಟವಾಗುತ್ತಿವೆ ಎನ್ನುತ್ತಾರೆ ರೈತ ಬಾಬು.

ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರದ ಬಸವ ರಾಜು, ಆಂಜಿನಪ್ಪ ಸಂಗಡಿಗರು ಮಾರಾಟಕ್ಕಿಟ್ಟಿರುವ ಎತ್ತುಗಳ ಜತೆಗೆ 4.5 ಲಕ್ಷ ರೂ., ಆಗಿದ್ದು ವ್ಯಾಪಾರ ಬಿರುಸಾಗಬೇಕಿದೆ ಎನ್ನುತ್ತಾರೆ. ಈ ಬಾರಿ ರಾಸುಗಳು ಹೆಚ್ಚಾಗಿ ಬಂದಿವೆ. ಆದರೆ, ಕರುಗಳ ಸಂಖ್ಯೆ ಹೆಚ್ಚಾಗಿವೆ. ಕೃಷಿಗೆ ಬೇಕಾದ ಪಳಗಿದ ರಾಸುಗಳ ಸಂಖ್ಯೆ ಕಡಿಮೆ ಆಗಿದೆ. ಈ ಬಾರಿಯೂ ರಾಸು ಬೆಲೆ ದುಬಾರಿ ಆಗಿದೆ. ಈ ಹಿಂದೆ ರಾಸು ಮಾರಾಟ ಮಾಡಿ ಬೇರೆ ರಾಸು ಖರೀದಿಸುತ್ತಿದ್ದರು. ಆದರೆ, ಈಗ, ಎಷ್ಟೋ ರೈತರು ರಾಸು ಮಾರಾಟ ಮಾಡಿ ಹಿಂದಿರುಗುತ್ತಿದ್ದಾರೆ ಎನ್ನುತ್ತಾರೆ ಬಳ್ಳಾರಿಯ ರೈತ ಇಸ್ಮಾಯಿಲ್‌.

Advertisement

ಸುಮಾರು 10 ವರ್ಷಗಳಿಂದ ಘಾಟಿ ದನಗಳ ಜಾತ್ರೆಗೆ ಬರುತ್ತಿದ್ದೇವೆ. ಜಾತ್ರೆಯಲ್ಲಿ ಸಾಕಷ್ಟು ರಾಸು ಬಂದಿದ್ದು ನಾವು 2.5 ಲಕ್ಷ ರೂ., ಬೆಲೆಯ ರಾಸು ಖರೀದಿಸಿದ್ದೇವೆ. ಬೆಲೆ ಕೊಂಚ ಹೆಚ್ಚಾಯಿತು, ಅನ್ನಿಸಿದರೂ ಕೃಷಿಗೆ ರಾಸುಗಳು ಅಗತ್ಯವಿದೆ ಎನ್ನುತ್ತಾರೆ ಹಾಸನದ ರೈತ ಶ್ರೀನಿವಾಸ್‌.  ಜ.16ರಂದು  ಶ್ರೀಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ. ಆದರೆ, ದನಗಳ ಜಾತ್ರೆ ಇನ್ನೂ 3-4 ದಿನ ಮಾತ್ರ ಇರುತ್ತದೆ. ದನಗಳ ಜಾತ್ರೆಯ ಆನಂದವನ್ನು ಸವಿಯಲು ಜಾತ್ರೆಗೆ ಬೇಗ ಆಗಮಿಸುವುದು ಒಳಿತು.

ಕ್ರೇಜ್‌ಗಾಗಿ ರಾಸು ಖರೀದಿ: ಕೆಂಪಣ್ಣ :

ದೇವನಹಳ್ಳಿ ತಾಲೂಕಿನ ವಿಜಯಪುರದ ಮರವೆ ನಾರಾಯಣಪ್ಪ ಅವರ ಕುಟುಂಬದವರು ಬೃಹತ್‌ ಪೆಂಡಾಲ್‌ ಹಾಕಿ ಮಾರಾಟಕ್ಕೆ ಇಟ್ಟಿರುವ ಹಳ್ಳಿಕಾರ್‌ ತಳಿಯ ರಾಸುಗಳ ಬೆಲೆ ಬರೋಬ್ಬರಿ 9 ಲಕ್ಷ ರೂ., ಇದಕ್ಕೆ ಟಗರು ಉಚಿತ. ಇವರ ಬೇರೆ ರಾಸುಗಳು 6.5 ಲಕ್ಷ ರೂ.,ಗಳವರೆಗೆ ಇವೆ. 2.5 ಲಕ್ಷ ರೂ.ನಿಂದ 3.5ಲಕ್ಷದವರೆಗಿನ ರಾಸುಗಳೂ ಮಾರಾಟವಾಗಿವೆ. ಎತ್ತುಗಳಿಗೆ ಮೇವಿನೊಂದಿಗೆ ವಿವಿಧ ಬಗೆಯ ಧಾನ್ಯಗಳು ಸೇರಿದಂತೆ  ಮೇವು ನೀಡಿ ಬಹಳ ಜೋಪಾನವಾಗಿ ಸಾಕುತ್ತೇವೆ. ಇದಕ್ಕಾಗಿ ದಿನಕ್ಕೆ ಸಾವಿರಾರು ರೂ., ಖರ್ಚು ಮಾಡುತ್ತೇವೆ.  ಕ್ರೇಜ್‌ ಇರುವವರು ಎಷ್ಟೇ ದರ ವಿದ್ದರೂ  ರಾಸುಗಳನ್ನು ಖರೀದಿ ಸುತ್ತಾರೆ. ನಮ್ಮ ತಾತ ಹನುಮಂತಪ್ಪ ಅವರ ಕಾಲದಿಂದ ಅಂದರೆ ಸುಮಾರು 60 ವರ್ಷ ಗಳಿಂದಲೂ ಘಾಟಿ ಜಾತ್ರೆಗೆ ಬರುತ್ತಿದ್ದೇವೆ. ಕಡಿಮೆ ಆಗುತ್ತಿರುವ ದೇಸಿ ತಳಿ ಹಳ್ಳಿಕಾರ್‌ ಉಳಿಯಬೇಕಿದೆ ಎಂದು ಮರವೆ ನಾರಾಯಣಪ್ಪ ಅವರ ಮಗ ಕೆಂಪಣ್ಣ ತಿಳಿಸಿದ್ದಾರೆ.

ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮನ :

ಸಾಧಾರಣ ರಾಸು ಬೆಲೆ 60 ಸಾವಿರದಿಂದ‌ 2.5ಲಕ್ಷ ರೂ.,ಗಳವರೆಗೂ ಇದೆ. ಬಳ್ಳಾರಿ, ರಾಯಚೂರು, ಉತ್ತರ ಕರ್ನಾಟಕ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಮತ್ತಿತರ ಜಿಲ್ಲೆಗಳ ರೈತರು ಹಾಗೂ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ರೈತರೂ ರಾಸುಗಳ ಖರೀದಿಗೆ ಆಗಮಿಸಿದ್ದಾರೆ. ಇನ್ನು ತಮಿಳುನಾಡಿನ ಸೇಲಂ, ಹೊಸೂರು, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಸೇರಿ ವಿವಿಧ ಕಡೆಗಳಿಂದಲೂ ರೈತರು ಬರುವ ನಿರೀಕ್ಷೆಯಿದೆ. ಕೋವಿಡ್‌ ಕಾರಣದಿಂದ ಕಳೆದ ಮೂರು ವರ್ಷಗಳಿಂದಲೂ ರಾಸುಗಳ ಜಾತ್ರೆ ನಡೆದಿರಲಿಲ್ಲ. 2022ರ ಡಿಸೆಂಬರ್‌ನಲ್ಲಿ ಚರ್ಮ ಗಂಟು ರೋಗ ರಾಸುಗಳನ್ನು ಕಾಡಿದ್ದರಿಂದ ಜಾತ್ರೆಯನ್ನು ನಿಷೇಧಿಸಲಾಗಿತ್ತು. ಅಲ್ಲದೇ, ರಥೋತ್ಸವ ಮಾತ್ರ ನಡೆದಿತ್ತು. ಆದರೆ ಈ ಬಾರಿ ಭಾರೀ ದನಗಳ ಜಾತ್ರೆ ಯಾವುದೇ ವಿಘ್ನವಿಲ್ಲದೇ ಆರಂಭವಾಗಿದೆ.

ದನಗಳ ಜಾತ್ರೆ ವಿಶೇಷತೆ ಏನೇನು? :

ರಾಸುಗಳ ಮಾರಾಟಗಾರರು, ಜಾತ್ರೆ ನೋಡಲು ಬರುವ ಜನಜಂಗುಳಿ. ಇದು ಘಾಟಿ ಸುಬ್ರಹ್ಮಣ್ಯ ಭಾರೀ ದನಗಳ ಜಾತ್ರೆಯ ವಿಶೇಷ. ಬಹುತೇಕ ರೈತರು ತಮ್ಮ ರಾಸುಗಳ ಮಾರಾಟಕ್ಕೂ ಮುನ್ನ ಹೂವುಗಳಿಂದ ಶೃಂಗರಿಸಿ ಮಂಗಳ ವಾದ್ಯಗಳೊಂದಿಗೆ ದೇವಾಲಯದವರೆಗೂ ಮೆರವಣಿಗೆಯಲ್ಲಿ ತೆರಳಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಜಾತ್ರೆಯಲ್ಲಿ ರಾಸುಗಳಿಗೆ ಕುಡಿವ ನೀರು, ವಿದ್ಯುತ್‌ ದೀಪ, ಪಶು ಇಲಾಖೆ ವತಿಯಿಂದ ತಾತ್ಕಾಲಿಕ ಪಶು ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಕೃಷಿ ಚಟುವಟಿಕೆಗೆ ಬೇಕಾಗುವ ಪರಿಕರಗಳ ಮಾರಾಟವೂ ಭರದಿಂದ ನಡೆಯುತ್ತಿದೆ.  ಮೂಗುದಾರದ ಹಗ್ಗ, ಬಾರು ಗೋಲು, ರಾಸುಗಳ ಕೊರಳಿಗೆ ಕಟ್ಟುವ ಗೆಜ್ಜೆ, ಕಣದಲ್ಲಿ ಉಪಯೋಗಿಸುವ ಸಾಮಗ್ರಿ, ನೇಗಿಲು, ಗಾಡಿಗಳಿಗೆ ಬೇಕಾದ ಬಿಡಿಭಾಗ ಜಾತ್ರೆಯಲ್ಲಿ ದೊರೆಯುತ್ತಿವೆ.

-ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next