Advertisement

ಶಿವಾನುಗ್ರಹ ಪಡೆಯುವುದು ಎಂದರೆ…

09:00 AM May 19, 2019 | Vishnu Das |

ಆತ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿ. ಕಾಳಿದಾಸನ ಕುಮಾರಸಂಭವ ಮಹಾಕಾವ್ಯದ ನಾಯಕನಾಗಿ ಹಣೆಯಲ್ಲಿ ಭಸ್ಮ ಬಳಿದುಕೊಂಡ, ತಲೆಯಲ್ಲಿ ಚಂದ್ರನನ್ನು ಮುಡಿದುಕೊಂಡ, ಕೈಯಲ್ಲಿ ಢಮರುವನ್ನು ಹಿಡಿದ, ಬಳೆಯಂತೆ ನಾಗನನ್ನು ಆಭರಣವಾಗಿಸಿಕೊಂಡ.

Advertisement

“ಕಾಮನನ್ನು ಗೆದ್ದವನು, ಶಂಭೋ ಮಹಾದೇವ ಶರಣಾಗತ ಜನರಕ್ಷಕ ಎಂಬ ಚರಣ ಕಿವಿಯ ಮೇಲೆ ಬಿದ್ದಾಗ ಆಕ್ಷಣಕ್ಕೆ ವಿವರಿಸಲಾಗದಂಥ ಭಕ್ತಿ ಭಾವ ಜೊತೆಯಾಗುತ್ತದೆ. ಅದು ಶ್ರೋತೃ ಪ್ರಿಯವಾದದ್ದು.

ನಮ್ಮ ಬಾಳೂ ಹಾಗೆ, ಶಿವ (ಮಂಗಲ) ಆಗಬೇಕೆಂದರೆ ಶಿವಾನುಗ್ರಹ ಬೇಕು, ಶ್ರುತಿಗೊಳ್ಳಬೇಕು. ಶಿವ ಅಂದಕೂಡಲೇ ನಮ್ಮ ಮನಸ್ಸಿನಲ್ಲಿ ಧ್ಯಾನನಿರತನಾಗಿ ಕಣ್ಮುಚ್ಚಿಕೊಂಡ ಅಥವಾ ಢಮರು ಹಿಡಿದು ಕುಣಿಯುತ್ತಿರುವ ಅಥವಾ ಭರತನಾಟ್ಯದ ಕಲ್ಪನೆಯಿಂದ ನಟನಾಮೂರ್ತಿಯ ಚಿತ್ರ ಥಟ್ಟನೆ ನಮ್ಮ ಕಣ್ಮುಂದೆ ಬಂದು ನಿಲ್ಲುವುದು. ಅಲ್ಲದೇ ಅಮರಸಿಂಹ ಕವಿ ಬರೆದ ಅಮರಕೋಶ ಓದಿದವರಿಗೆ, ಶಂಭುಃ ಈಶಃ ಎಂಬ ಶಬ್ದಗಳಿಂದ ಆರಂಭವಾಗಿ ಮಹಾಕಾಲೋ ಮಹಾನಟಃ ಎಂಬ 33 ಶಬ್ದಗಳು ಪುಂಖಾನುಪುಂಖವಾಗಿ ಬಂದು ನಿಲ್ಲುತ್ತವೆ.

ಶಿವ ಶಬ್ದದ ನಿಷ್ಪತ್ತಿ ಸಂಸ್ಕೃತ ಮೂಲದ್ದು. ಶೀ-ನಿದ್ರಿಸು ಎಂಬ ಅರ್ಥವುಳ್ಳ ಧಾತುವಿನಿಂದ ಬಂದಿದೆ. ನಿದ್ರೆಗಿಂತ ಸುಖಕರವಾದ ಸ್ಥಿತಿ ಜನಸಾಮಾನ್ಯರ ಅನುಭವಕ್ಕೆ ಬಂದಿರುವುದಿಲ್ಲ. ಈ ಗಾಢವಾದ ನಿದ್ರೆ ನಮ್ಮ ಶಾಂತಿ ನೆಮ್ಮದಿಗೆ ಮೂಲ. ನಿದ್ರೆ ಶಿವನ ವಶದಲ್ಲಿದೆ. ಆತ ನಿದ್ರೆಗೆ ಅಧೀನನಲ್ಲ. ವೇದಾಂತಿಗಳು ಜೀವ, ಜಗತ್ತು ಮತ್ತು ಈಶನ ಕುರಿತಾಗಿ ಹೇಳುವುದು ಹೀಗೆ:

ಆತ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿ. ಕಾಳಿದಾಸನ ಕುಮಾರಸಂಭವ ಮಹಾಕಾವ್ಯದ ನಾಯಕನಾಗಿ ಹಣೆಯಲ್ಲಿ ಭಸ್ಮ ಬಳಿದುಕೊಂಡ, ತಲೆಯಲ್ಲಿ ಚಂದ್ರನನ್ನು ಮುಡಿದುಕೊಂಡ, ಕೈಯಲ್ಲಿ ಢಮರುವನ್ನು ಹಿಡಿದ, ಬಳೆಯಂತೆ ನಾಗನನ್ನು ಆಭರಣವಾಗಿಸಿಕೊಂಡ, ಮುದಿಯೆತ್ತನ್ನು ಏರಿರುವಂತೆ ಕಾಣುವನು. ಅವನನ್ನು ಕಾಣುವುದಕ್ಕೆ ಜ್ಞಾನದಕಣ್ಣು-ಅಂದರೆ ಮೂರನೆಯ ಕಣ್ಣು ಬೇಕು. ಈಶ ಜ್ಞಾನದ ಮಾಲೀಕ.

Advertisement

ಭಕ್ತಿಯಿಂದ ಮಾಡಿಲ್ಲೆಲ್ಲ ಶಿವಪೂಜೆ
ಕಣ್ಣಪ್ಪನ ಹರಿದ ಚಪ್ಪಲಿಯೂ ಈಶನಿಗೆ ಕೂರ್ಚೆ (ಸ್ನಾನಕ್ಕೆ ಬಳಸುವ ಬ್ರಶ್‌) ಆಗುವುದು. ಬಾಯಿಂದ ಮುಕ್ಕಳಿಸಿದ ನೀರೂ ಅಭಿಷೇಕವಾಗುತ್ತೆ. ಅರ್ಧ ತಿಂದುಳಿದ ಮಾಂಸವೂ ನೈವೇದ್ಯವಾಗುವುದು. ಭಕ್ತಿಯೊಂದಿದ್ದರೆ ಎಲ್ಲಕ್ಕೂ ಬೆಲೆ ಬರುವುದು. ಅದಿಲ್ಲದಿದ್ದರೆ ಪಂಚಾಮೃತಾದಿ ಅಭಿಷೇಕಾದಿಗಳೂ ವ್ಯರ್ಥವೇ ಸರಿ. ಇದನ್ನು ಆಚಾರ್ಯ ಶಂಕರರೇ ಶಿವಾನಂದ ಲಹರಿಯಲ್ಲಿ ಹೇಳಿದ್ದಾರೆ. ಮತ್ತೂಂದು ಶ್ಲೋಕದಲ್ಲಿ ಹೇಳುತ್ತಾರೆ-ನಾವು ಮಾಡಿದ ಪೂಜೆಗಳು ಈಶನಿಗೆ ಇಷ್ಟವಾದರೆ ಅವನು ಏನು ತಿನ್ನುತ್ತಾನೋ ಅದನ್ನು ನಮಗೂ ಕೊಡಿಸ್ತಾನೆ. ಅವನು ನಂಜುಂಡ! (ವಿಷವನ್ನು ತಿನ್ನುತ್ತಾನೆ.) ಅದನ್ನು ನಮಗೆ ತಿನಿಸಿದರೆ ನಾವು ಕೈಲಾಸವಾಸಿಯೇ ಆಗುತ್ತೇವೆ.

ಇನ್ನು ಮೆಚ್ಚಿ ಏನಾದರೂ ಆತನ ಆಭರಣವನ್ನು ಕೊಟ್ಟರೆ ದೇವರೇ ಗತಿ. (ಸರ್ಪ ಅವನ ಆಭರಣ) ಬಟ್ಟೆಯನ್ನು ಕೊಟ್ಟರೂ ಉಡುವಂತಿಲ್ಲ. (ಹಸಿ ಹಸಿಯಾದ ರಕ್ತತೊಟ್ಟಿಕ್ಕುತ್ತಿರುವ ಗಜಚರ್ಮ) ಹೀಗೆ ನಮಗೆ ಕೊಡಬಹುದಾದದ್ದು ಈಶನಲ್ಲಿ ಏನೂ ಇಲ್ಲ. ಆದರೆ ನಿನ್ನ ಪಾದಕಮಲದಲ್ಲಿ ಭಕ್ತಿಬರುವಂತೆ ಮಾಡು ತಂದೆ ಅಂತ ಬೇಡಿಕೊಳ್ಳಬಹುದು ಅಷ್ಟೆ. ಶುಭ್ರ ಮನಸ್ಸಿನಿಂದ ಬಿಲ್ವಪತ್ರೆಯನ್ನು ಮಾಘಮಾಸದ ಕೃಷ್ಣಪಕ್ಷ$ದ ಚತುರ್ದಶಿಯಂದು ನೀಡೋಣ. ಈಶನ ಕಥಾ ಶ್ರವಣ ಮಾಡೋಣ!

ಕಾಮನನ್ನು ಗೆದ್ದವನು
ಶಿವನು (ನಮ್ಮೆಲ್ಲರ ಜೀವನಯಾತ್ರೆ ಕೊನೆಗೊಳ್ಳುವ) ಸ್ಮಶಾನದಲ್ಲಿದ್ದಾನೆ. ಆದರೆ ಅವನು ಈಶ್ವರ. ಅಲ್ಲಿ ನೆಲೆನಿಂತಾಗಲೇ ಜೀವನದ ನಿಜವಾದ ಅರ್ಥದ ಅರಿವಾಗುವುದು. ಅಲ್ಲಿಂದ ಹೊರಟುಬಂದರೆ ಅದು ಸ್ಮಶಾನ ವೈರಾಗ್ಯ! ಆತ ಶ್ರೀಮಂತ ಮಾತ್ರವಲ್ಲದೇ ನಮಸ್ಕರಿಸಿದವರಿಗೆ ಬೇಕು ಬೇಕಾದುದನ್ನು ನೀಡುವನು. ಹೆಂಡತಿಯೊಂದಿಗೆ ಮೈ ಬೆಸೆದುಕೊಂಡಿದ್ದಾನೆ. ಆದರೆ ಕಾಮನನ್ನು ಗೆದ್ದವನು. ಜಗತ್ತಿಗೆ ತಂಪುನೀಡುವ ಚಂದ್ರ ತಲೆಯಲ್ಲಿದ್ದಾನೆ. ಜಗತ್ತನ್ನು ಸುಡಬಲ್ಲ ಹಣೆಗಣ್ಣೂ ಇದೆ. ಆದ್ದರಿಂದ ದಡ್ಡರಿಗೆ ಶಿವ ಅರ್ಥವಾಗದೆ ಉಳಿದುಕೊಂಡ!

ಸಮುದ್ರ ಮಥನದ ಸಂದರ್ಭ ಜಗತ್ತನ್ನು ಕಾಪಾಡಲು ಶಿವ ಹಾಲಾಹಲವನ್ನು ಕುಡಿದುದು ಪುರಾಣ ಪ್ರಸಿದ್ದ ಘಟನೆ. ಆದರೆ ಇದು ಕವಿಗಳ ಕಣ್ಣಿಗೆ ಬೇರೆಯ ಅರ್ಥವನ್ನೂ ಕೊಟ್ಟಿದೆ.

ಈಶನ ಕುಟುಂಬವನ್ನು ನೋಡಿ. ಈಶನ ಮಗ ಗಣಪತಿ. ಅವನ ವಾಹನ ಇಲಿ. ಅದನ್ನು ಕಂಡರೆ ಈಶನ ಆಭರಣವಾದ ಸರ್ಪಕ್ಕೆ ಆಗೋದಿಲ್ಲ. ಇನ್ನು ಸರ್ಪವನ್ನು ಕಂಡರೆ ಮತ್ತೂಬ್ಬ ಮಗನಾದ ಸುಬ್ರಹ್ಮಣ್ಯನ ವಾಹನ ನವಿಲಿಗೆ ಆಗೋದಿಲ್ಲ.

ಇನ್ನು ಪಾರ್ವತಿಯ ವಾಹನ ಸಿಂಹ. ಅದಕ್ಕೆ ಆನೆಯ ಮುಖದ ಗಣಪತಿಯನ್ನು ಕಂಡರೆ ದ್ವೇಷ. ಪಾರ್ವತಿಗೆ ಈಶನ ತಲೆಯಲ್ಲಿ ಇಟ್ಟುಕೊಂಡ ಗಂಗೆ ಸವತಿಯಂತೆ ಕಾಣುವಳು! ಜಗತ್ತಿಗೆ ತಂಪುನೀಡುವ ಚಂದ್ರ ಅವನ ತಲೆಯಲ್ಲಿದ್ದಾನೆ. ಅವನಿಗೋ ಈಶನ ಬೆಂಕಿಯುಗುಳುವ ಮೂರನೆಯ ಕಣ್ಣನ್ನು ಕಂಡರೆ ಆಗೋದಿಲ್ಲ. ಹೀಗೆ, ಈಶ ತನ್ನ ಕುಟುಂಬದ ಸದಸ್ಯರನ್ನು ನಿಯಂತ್ರಿಸಲಿಕ್ಕಾಗದೇ, ಜೀವನವೇ ಸಾಕೆನಿಸಿ ವಿಷವನ್ನು ಕುಡಿದ! ಕವಿಗಳ ಕಲ್ಪನೆ ಹೇಗಿದೆ ನೋಡಿ.

ಡಾ| ಮಂಜುನಾಥ ಭಟ್ಟ ಆಲೇಖ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next