Advertisement

ಮಾನವೀಯ ನೆಲೆಯಲ್ಲಿ ಪರಿಹಾರ ದೊರಕಿಸಿ

11:14 AM Aug 17, 2019 | Team Udayavani |

ಹಾವೇರಿ: ತಳಪಾಯ ಹಾಕಿ ನಿರ್ಮಾಣ ಮಾಡಿದ ಎಲ್ಲ ಮನೆಗಳು ಪಕ್ಕಾ ಮನೆಗಳಾಗಿವೆ. ಮನೆ ಹಾನಿ ಸಮೀಕ್ಷೆ ಸಂದರ್ಭದಲ್ಲಿ ಪಕ್ಕಾ ಮತ್ತು ಕಚ್ಚಾ, ಭಾಗಶಃಪೂರ್ಣ ಎಂದು ವಿಭಾಗೀಕರಣ ಮಾಡದೇ ಎಲ್ಲ ಮನೆಗಳನ್ನು ಪಕ್ಕಾ ಮನೆ ಎಂದು ಪರಿಗಣಿಸಿ ನೊಂದವರಿಗೆ ಮಾನವೀಯ ನೆಲೆಯಲ್ಲಿ ಪೂರ್ಣ ಪ್ರಮಾಣದ ಪರಿಹಾರ ದೊರಕುವಂತೆ ಶಿಫಾರಸ್ಸು ಮಾಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ತಹಶೀಲ್ದಾರ್‌ಗಳಿಗೆ ಸಲಹೆ ನೀಡಿದರು.

Advertisement

ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ಪ್ರವಾಹ ಪರಿಹಾರ ಕಾರ್ಯಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.

ಮುಖ್ಯಮಂತ್ರಿಗಳು ಘೋಷಿಸಿದಂತೆ ಮನೆ ಹಾನಿಯಾದವರಿಗೆ 10 ಸಾವಿರ ರೂ. ಮೊದಲ ಕಂತಾಗಿ ಪರಿಹಾರದ ಚೆಕ್‌ ಅಥವಾ ಆರ್‌.ಟಿ.ಜಿ.ಎಸ್‌. ಮೂಲಕ ಶೀಘ್ರ ಸಂದಾಯವಾಗುವಂತೆ ಕ್ರಮಕೈಗೊಳ್ಳಬೇಕು. ನೆರೆ ನೀರು ನುಗ್ಗಿ ಕೃಷಿ ಭೂಮಿ ಹಾನಿಯಾಗಿರುವ ಕುರಿತಂತೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಜಿಲ್ಲೆಯ ನದಿ ಪಾತ್ರದ ಕೆಲ ಗ್ರಾಮಗಳಿಗೆ ನೀರು ನುಗ್ಗಿ ಮನೆಯೊಳಗೆ ಎರಡರಿಂದ ಮೂರು ಅಡಿ ನೀರು ನಿಂತಿದೆ. ಮನೆಗಳು ಬೀಳದಿದ್ದರೂ ಪ್ರವಾಹದ ನೀರು ವಾರಗಟ್ಟಲೆ ನಿಂತಿರುವ ಕಾರಣ ಗೋಡೆಗಳು ನೆನೆದು ಶಕ್ತಿ ಕಳೆದುಕೊಂಡಿವೆ. ಇಂತಹ ಸೂಕ್ಷ ್ಮತೆಗಳನ್ನು ಪರಿಗಣಿಸಿ ಪರಿಹಾರಕ್ಕೆ ಶಿಫಾರಸ್ಸು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪರಿಹಾರ ಕೇಂದ್ರಗಳು ಬಹುಪಾಲು ಶಾಲೆಗಳಲ್ಲಿ ನಡೆಯುತ್ತಿವೆ. ತರಗತಿ ನಡೆಸಲು ತೊಂದರೆಯಾಗದಂತೆ ಆ ಗ್ರಾಮದ ಎತ್ತರ ಪ್ರದೇಶದಲ್ಲಿರುವ ಬಾಡಿಗೆ ಕಟ್ಟಡ ಅಥವಾ ಸಮುದಾಯ ಭವನ ಅಥವಾ ಸರ್ಕಾರಿ ಇಲ್ಲವೆ ಖಾಸಗಿ ಜಮೀನನ್ನು ಬಾಡಿಗೆಗೆ ಪಡೆದು ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಿ ಜನರನ್ನು ಸ್ಥಳಾಂತರಿಸಬೇಕು. ಈ ಕೆಲಸ ತುರ್ತಾಗಿ ಕೈಗೊಳ್ಳುವಂತೆ ಅವರು ಸೂಚಿಸಿದರು.

Advertisement

ಹರವಿ, ಬಸಾಪುರ, ಕೂಡಲ, ಕನ್ನೇಶ್ವೇರ, ಸೋಮೇಶ್ವರ ಸೇರಿದಂತೆ ಹಲವು ಗ್ರಾಮಗಳು ಪದೆ ಪದೆ ಜಲಾವೃತಗೊಳ್ಳುವುದನ್ನು ತಪ್ಪಿಸಲು ಪೂರ್ಣ ಪ್ರಮಾಣದಲ್ಲಿ ಎತ್ತರದ ಪ್ರದೇಶದಲ್ಲಿ ನಿವೇಶನ ಗುರುತಿಸಿ ಸ್ಥಳಾಂತರಕ್ಕೆ ಶಿಫಾರಸ್ಸು ಮಾಡಬೇಕು. ಪಂಚಾಯತ್‌ ರಾಜ್‌ ಹಾಗೂ ಲೋಕೋಪಯೋಗಿ ಇಲಾಖೆಯ ಸಂಪರ್ಕ ಕಡಿದುಹೋದ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆಮಾಡಬೇಕು. ಕುಡಿಯುವ ನೀರಿನ ಸಂಪರ್ಕ, ವಿದ್ಯುತ್‌ ಕಂಬಗಳ ಮರು ಸ್ಥಾಪನೆ ಕೆಲಸವನ್ನು ತಾತ್ಕಾಲಿಕವಾಗಿ ದುರಸ್ತಿಮಾಡಿ ಜನರಿಗೆ ತುರ್ತಾಗಿ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಶಾಶ್ವತ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.

ಪೂರ್ಣವಾಗಿ ಬಿದ್ದುಹೋಗಿರುವ ಶಾಲಾ ಕಟ್ಟಡಗಳ ಮರು ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಗೋಡೆ ಕುಸಿತ ಅಥವಾ ಛಾವಣಿ ಹಾಳಾದ ಕಟ್ಟಡಗಳನ್ನು ವಿಪತ್ತು ನಿರ್ವಹಣಾ ಅನುದಾನದಲ್ಲಿ ತುರ್ತಾಗಿ ದುರಸ್ತಿಗೆ ಕ್ರಮಕೈಗೊಳ್ಳಬೇಕು. ರಿಪೇರಿಗೆ ತಲಾ ಎರಡು ಲಕ್ಷ ರೂ. ಅನುದಾನ ವೆಚ್ಚ ಮಾಡಲು ಅವಕಾಶವಿದೆ. ಜಿಲ್ಲೆಯಾದ್ಯಂತ ಮರು ಸರ್ವೇಮಾಡಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಅಥವಾ ಹೊಸ ಕಟ್ಟಡಗಳ ನಿರ್ಮಾಣ ಕುರಿತಂತೆ ಪ್ರಸ್ತಾವನೆ ಸಲ್ಲಿಸಬೇಕು. ಹಾಳಾದ ಕಟ್ಟಡದಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ನಡೆಸಬಾರದು. ಕಾಲೇಜುಗಳ ದುರಸ್ತಿಗೆ ಅವಕಾಶವಿದ್ದರೆ ಈ ಅನುದಾನದಲ್ಲಿ ದುರಸ್ತಿಮಾಡಿಸಲು ಸೂಚಿಸಿದರು.

ಅಡಿಕೆ ಬೆಳೆ, ಬಾಳೆ ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ಹಾನಿ ಕುರಿತಂತೆ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ವರದಿಯ ಸಂದರ್ಭದಲ್ಲಿ ವಾಡಿಕೆ ಮಳೆ ಹಾಗೂ ಪ್ರಸ್ತುತ ಬಿದ್ದಿರುವ ಮಳೆಯ ವಿವರವನ್ನು ದಾಖಲಿಸಿ ಹಾನಿಯ ಕಾರಣ ರಹಿತ ವಿವರವನ್ನು ದಾಖಲಿಸುವಂತೆ ಸೂಚನೆ ನೀಡಿದರು.

ಹೊರಗುತ್ತಿಗೆ ನೇಮಕ: ರಸ್ತೆ ಪುನರ್‌ ನಿರ್ಮಾಣ, ಶಾಲಾ ಕಟ್ಟಡಗಳ ತುರ್ತು ರಿಪೇರಿ ಹಾಗೂ ನಿರ್ಮಾಣವಾಗಬೇಕು. ಒಂದೊಮ್ಮೆ ಸಮೀಕ್ಷೆ ಮಾಡಿ ಮರು ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಲ್ಲಿಸಲು ಸಿಬ್ಬಂದಿಗಳ ಕೊರತೆ ಇದ್ದರೆ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಇಂಜಿನೀಯರ್‌ಗಳನ್ನು ನೇಮಕ ಮಾಡಿಕೊಂಡು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸೂಚನೆ ನೀಡಿದರು.

ಸಭೆಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾತನಾಡಿ, ಜಿಲ್ಲೆಯಲ್ಲಿ 130 ಗ್ರಾಮಗಳು ಪ್ರವಾಹದಿಂದ ಹಾನಿಯಾಗಿವೆ. 130 ಪರಿಹಾರ ಕೇಂದ್ರಗಳನ್ನ ಆರಂಭಿಸಿದ್ದು ಇಂದಿಗೆ 71ಪರಿಹಾರ ಕೇಂದ್ರಗಳು ಮಾತ್ರ ಮುಂದುವರಿಸಲಾಗಿದೆ. ಉಳಿದಂತೆ ಸಂತ್ರಸ್ಥರು ಮರಳಿ ಮನೆಗೆ ತೆರಳಿದ ಹಿನ್ನೆಲೆಯಲ್ಲಿ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ಶಾಲಾ, ಕಾಲೇಜುಗಳಿಗೆ ತೊಂದರೆಯಾಗದಂತೆ ಸಂತ್ರಸ್ಥರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಡಲು ಉದ್ದೇಶಿಸಲಾಗಿದೆ. ಸಂತ್ರಸ್ಥ ಪ್ರತಿ ಕುಟುಂಬಕ್ಕೆ ಆಹಾರ ಕಿಟ್ ಜೊತೆಗೆ ಸೀಮೆ ಎಣ್ಣೆ ಹಾಗೂ ಸ್ಟೌವ್‌ ನೀಡಲಾಗುತ್ತಿದೆ. ದಾನಿಗಳು ನೀಡಿರುವ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಮರುಸ್ಥಾಪನೆ ಹಾಗೂ ಜನ ಮತ್ತು ಜಾನುವಾರುಗಳ ಆರೋಗ್ಯ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಎಲ್ಲ ತಾಲೂಕು ಆಡಳಿತಕ್ಕೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಹಾನಿಯ ಕುರಿತಂತೆ ಸಮೀಕ್ಷೆ ಕಾರ್ಯಗಳು ನಡೆದಿವೆ, ತುರ್ತು ಪರಿಹಾರ ವಿತರಣೆ ನಡೆದಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next