ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಸಾಹಿತ್ಯಿಕ ಮತ್ತು ರಾಜಕೀಯ ವಾಗಿ ತೀವ್ರ ವಿವಾದಕ್ಕೆ ಕಾರಣ ವಾದ ಹಿನ್ನೆಲೆಯಲ್ಲಿ ಪ್ರೊ| ಬರ ಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗಳು ಯಾವ ಪಠ್ಯವನ್ನು ತೆಗೆದು ಯಾವುದನ್ನು ಸೇರ್ಪಡೆ ಮಾಡಿದ್ದವು ಎಂಬ ವಿವರಗಳನ್ನು ಸಾರ್ವಜನಿಕರಿಗೆ ಒದಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಮಾಹಿತಿಯನ್ನು ಸದ್ಯದಲ್ಲೇ ಶಿಕ್ಷಣ ಇಲಾಖೆ ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ. ಬಳಿಕ ಜನರು ಅಭಿ ಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಬಳಿಕ ಅಗತ್ಯಬಿದ್ದರೆ ಚರ್ಚಿಸಿ ಯಾವ ವಿಷಯಗಳನ್ನು ಸೇರ್ಪಡೆ ಮಾಡಬೇಕು ಮತ್ತು ಬಿಡಬೇಕು ಎಂಬ ಬಗ್ಗೆ ಸರಕಾರ ನಿರ್ಧರಿಸಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.
ಈ ಕುರಿತು ಮಾತನಾಡಿದ ಅವರು, ಪಠ್ಯಪುಸ್ತಕ ವಿಚಾರದಲ್ಲಿ ಸಾರ್ವಜನಿಕರು, ರಾಜಕೀಯ ಮುಖಂಡರು ಮತ್ತು ಮಾಧ್ಯಮಗಳು ಪರ ಹಾಗೂ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಯಾವ ಸಮಿತಿ, ಏನು ಮಾಡಿದೆ ಎಂಬ ಸ್ಪಷ್ಟ ಚಿತ್ರಣ ಯಾರಿಗೂ ಇಲ್ಲ. ಈ ವಿಚಾರವನ್ನು ರಾಜ್ಯದ ಜನತೆಗೆ ಮುಟ್ಟಿಸುವ ಉದ್ದೇಶದಿಂದ ಇಲಾಖೆಯ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಸದ್ಯದಲ್ಲಿಯೇ ನೀಡಲಾಗುತ್ತದೆ ಎಂದು ಹೇಳಿದರು.
ಸಭೆ-ಪಠ್ಯಪುಸ್ತಕಕ್ಕೂ ಸಂಬಂಧವಿಲ್ಲ; ಸ್ಪಷ್ಟನೆ
ಚಾಮರಾಜಪೇಟೆಯಲ್ಲಿರುವ ಕೇಶವಕೃಪಾದಲ್ಲಿ ಸೋಮವಾರ ನಡೆದ ಸಂಘದ ಸಭೆಗೂ ಪಠ್ಯಪುಸ್ತಕ ವಿಚಾರಕ್ಕೂ ಸಂಬಂಧವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿ, ಕೇಶವಕೃಪಾದಲ್ಲಿ ಪ್ರತೀ ತಿಂಗಳು “ಶಿಕ್ಷಣ ಸಂಕುಲನ’ ಎಂಬ ಸಭೆ ನಡೆಯುತ್ತದೆ. ಈ ಬಾರಿ ಪಠ್ಯಪುಸ್ತಕ ವಿಚಾರ ಚರ್ಚೆಯಲ್ಲಿ ಇರುವುದರಿಂದ ಸಭೆ ಮಹತ್ವ ಪಡೆದುಕೊಂಡಿದೆ ಅಷ್ಟೇ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಭೆಯಲ್ಲಿ ಪಠ್ಯಪುಸ್ತಕ ಕುರಿತು ಯಾವುದೇ ವಿಚಾರಗಳನ್ನು ಚರ್ಚಿಸಿಲ್ಲ ಎಂದು ತಿಳಿಸಿದರು.