Advertisement

ರಾಜಸ್ಥಾನದಲ್ಲಿ ಶುರು ಭಿನ್ನಮತ!

12:27 AM May 28, 2019 | Team Udayavani |

ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸುವುದಕ್ಕೆ ಸಿಎಂ ಅಶೋಕ್‌ ಗೆಹಲೋಟ್ ತಮ್ಮ ಪುತ್ರನ ಮೇಲೆ ಹೆಚ್ಚು ಗಮನ ಹರಿಸಿರುವುದೇ ಕಾರಣ ಎಂದು ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಾಹುಲ್‌ ಗಾಂಧಿ ಹೇಳಿರುವುದು ನಿಜ. ಅವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕಾಂಗ್ರೆಸ್‌ ವಲಯ ದಿಂದಲೇ ಕೇಳಿಬಂದಿದೆ. ರಾಜಸ್ಥಾನದ 25 ಕ್ಷೇತ್ರಗಳ ಪೈಕಿ 24 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಅಲ್ಲದೆ, ಗೆಹಲೋಟ್ ಪುತ್ರ ವೈಭವ್‌ ಕೂಡ ಸೋತಿದ್ದರು. ಗೆಹಲೋಟ್ 130 ರ್ಯಾಲಿ ನಡೆಸಿದ್ದರು. ಆದರೆ ಈ ಪೈಕಿ ತಮ್ಮ ಪುತ್ರ ಸ್ಪರ್ಧಿಸಿರುವ ಜೋಧಪುರದಲ್ಲೇ 90 ರ್ಯಾಲಿ ನಡೆಸಿದ್ದರು.

Advertisement

ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಪ್ರತಾಪ್‌ ಸಿಂಗ್‌ ಖಚಾರಿಯವಸ್‌, ಕ್ರಮ ತೆಗೆದುಕೊಳ್ಳಲು ರಾಹುಲ್‌ ಪೂರ್ಣ ಅಧಿಕಾರವನ್ನು ಹೊಂದಿದ್ದಾರೆ. ಅವರಿಗಿಂತ ಮೇಲೆ ಯಾರೂ ಇಲ್ಲ. ಎಲ್ಲ ಕಾರ್ಯಕರ್ತರೂ ಅವರ ಮಾತಿಗೆ ಗೌರವ ನೀಡು ತ್ತಾರೆ ಎಂದಿದ್ದಾರೆ. ಇನ್ನೊಂದೆಡೆ ಸಚಿವ ಭನ್ವರಿಲಾಲ್‌ ಮೇಘಾಲ್‌ ಕೂಡ ರಾಹುಲ್‌ ಹೇಳಿರುವುದು ಸರಿಯಾಗಿದೆ. ಸೋಲಿಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ. ಇನ್ನೂ ಇಬ್ಬರು ಸಚಿವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ವಿಶ್ಲೇಷಣೆ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ರನ್ನು ಗೆಹಲೋಟ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಿಎಸ್‌ಪಿ ಬಹುಮತ ಹಿಂದಕ್ಕೆ?: ಈ ಮಧ್ಯೆ ಬಿಎಸ್‌ಪಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಲು ಹೊರಟಿದ್ದು, ಸರಕಾರಕ್ಕೆ ಬೆಂಬಲ ಹಿಂಪಡೆಯಲು ನಿರ್ಧರಿಸಿದ್ದಾರೆ ಎಂಬ ಊಹಾಪೋಹ ಕೇಳಿಬಂದಿದೆ. ಆದರೆ ಇದನ್ನು ತಳ್ಳಿಹಾಕಿದ ಬಿಎಸ್‌ಪಿ ಶಾಸಕರು, ರಾಜ್ಯಪಾಲರ ಭೇಟಿ ಒಂದು ಸಾಮಾನ್ಯ ಪ್ರಕ್ರಿಯೆ. 6 ಶಾಸಕರ ಪೈಕಿ ಒಬ್ಬರು ಲಭ್ಯವಿಲ್ಲದ್ದರಿಂದ ಸಭೆ ರದ್ದುಗೊಳಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next