Advertisement

ಭಾರತದ ಜಿಡಿಪಿ ಬೆಳವಣಿಗೆ ದರ ಆಶಾದಾಯಕ

12:52 AM Jun 02, 2022 | Team Udayavani |

ಕೊರೊನಾ ವೇಳೆಯಲ್ಲಿ ತೀವ್ರ ಕುಸಿತ ಕಂಡು, ನೇತ್ಯಾತ್ಮಕ ಮಟ್ಟಕ್ಕೆ ತಲುಪಿದ್ದ ಭಾರತದ ಜಿಡಿಪಿ ದರ ಈಗ ಸುಧಾರಿಸಿಕೊಂಡು ಮತ್ತೆ ಉತ್ತಮ ಹಾದಿಯಲ್ಲಿದೆ. ಮಂಗಳವಾರವಷ್ಟೇ ಕೇಂದ್ರ ಸಾಂಖೀಕ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2021-22ರಲ್ಲಿ ಭಾರತದ ಜಿಡಿಪಿ ದರ ಶೇ. 8.7 ಆಗಿದೆ. ಆದರೆ ಮೂರನೇ ತ್ತೈಮಾಸಿಕಕ್ಕೆ ಹೋಲಿಕೆ ಮಾಡಿದರೆ, ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಿಂದಾಗಿ ನಾಲ್ಕನೇ ತ್ತೈಮಾಸಿಕದಲ್ಲಿ ಜಿಡಿಪಿ ದರ ಇಳಿಕೆಯಾಗಿದೆ. ಅಂದರೆ ಶೇ. 4.1ರಷ್ಟು ದಾಖಲಾಗಿದೆ.

Advertisement

ಪ್ರತೀ ಬಾರಿಯೂ ಭಾರತದ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ ಎನ್ನುವಾಗ, ಒಂದಿಲ್ಲೊಂದು ಕಾರಣಗಳಿಂದಾಗಿ ಪೆಟ್ಟು ಬೀಳುತ್ತದೆ. ಮೋದಿ ಸರಕಾರದ ಎರಡನೇ ಅವಧಿ ಶುರುವಾದಾಗ, ಭಾರತದ ಅಭಿವೃದ್ಧಿ ದರ ಏರಿಕೆಯ ಬಗ್ಗೆ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಆದರೆ, 2019ರ ಅಂತ್ಯ ಮತ್ತು 2020ರ ಆರಂಭದಲ್ಲಿ ಜಗತ್ತಿನಾದ್ಯಂತ ಕಾಣಿಸಿಕೊಂಡ ಕೊರೊನಾ ಮಹಾಮಾರಿ, ಜನರಿಗಷ್ಟೇ ಅಲ್ಲ, ಎಲ್ಲಾ ದೇಶಗಳ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿತು. ಆರ್ಥಿಕ ತಜ್ಞರ ಪ್ರಕಾರ, ಕೊರೊನಾ ವೇಳೆಯಲ್ಲಿ ಆಗಿರುವ ಹೊಡೆತ ಸರಿಯಾಗಬೇಕು ಎಂದರೆ, ಇನ್ನೂ ಹತ್ತಾರು ವರ್ಷಗಳು ಬೇಕು. ಅಂದರೆ, 2035ರ ವೇಳೆಗೆ ಜಗತ್ತಿನ ಆರ್ಥಿಕತೆ ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ.

ಈ ಎಲ್ಲ ಅಡ್ಡಿ ಆತಂಕಗಳ ನಡುವೆ 2021-22ರ ಭಾರತದ ಆರ್ಥಿಕತೆ ವರ್ಲ್ಡ್ ಬ್ಯಾಂಕ್‌, ಐಎಂಎಫ್ ಸೇರಿದಂತೆ ಎಲ್ಲ ಜಾಗತಿಕ ಆರ್ಥಿಕ ಸಂಸ್ಥೆಗಳ ನಿರೀಕ್ಷೆಗೆ ಅನುಗುಣವಾಗಿಯೇ ಬೆಳವಣಿಗೆ ಕಂಡಿದೆ.

ವಿಚಿತ್ರವೆಂದರೆ ಕಳೆದ ಆರ್ಥಿಕ ವರ್ಷದ ಮೊದಲ ಮೂರು ತ್ತೈಮಾಸಿಕಗಳಲ್ಲಿ ಬೆಳವಣಿಗೆ ದರ ಕೊಂಚ ಹೆಚ್ಚಾಗಿಯೇ ಇದೆ. ಆದರೆ, ಕಡೇ ತ್ತೈಮಾಸಿಕದ ಮೇಲೆ ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧ, ತೈಲ ದರ ಏರಿಕೆ, ಹಣದುಬ್ಬರ ಅಡ್ಡಪರಿಣಾಮ ಬೀರಿವೆ.

2021-22ರ ಹಣಕಾಸು ವರ್ಷದಲ್ಲಿ ಮೊದಲ ತ್ತೈಮಾಸಿಕದಲ್ಲಿ ಶೇ. 20.1, 2ನೇ ತ್ತೈಮಾಸಿಕದಲ್ಲಿ ಶೇ. 8.4, 3ನೇ ತ್ತೈಮಾಸಿಕದಲ್ಲಿ ಶೇ.5.4 ಹಾಗೂ 4ನೇ ತ್ತೈಮಾಸಿಕದಲ್ಲಿ ಶೇ. 4.1ರಷ್ಟು ಬೆಳವಣಿಗೆಯಾಗಿದೆ. ಇಲ್ಲಿ ಕಡೇ ತ್ತೈಮಾಸಿಕದಲ್ಲಿ ಇಳಿಕೆಯಾಗಿರುವುದು ಕಾಣಿಸಿದೆ.

Advertisement

ಇನ್ನು ವ್ಯಾಪಾರ, ಹೊಟೇಲ್‌ ಮತ್ತು ಸಾರಿಗೆ ವಲಯಗಳಲ್ಲಿಯೂ ಉತ್ತಮ ಸುಧಾರಣೆಯಾಗಿದೆ. ಇಲ್ಲಿ ಶೇ. 11.1ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷದ ಇದೇ ವೇಳೆಗೆ ಶೇ.20ರಷ್ಟು ನೇತ್ಯಾತ್ಮಕ ಪ್ರಗತಿಯಾಗಿತ್ತು. ಹಾಗೆಯೇ ಉತ್ಪಾದನಾ ವಲಯವೂ ಶೇ. 9.9ರಷ್ಟು ಪ್ರಗತಿಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.0.6ರಷ್ಟು ನೇತ್ಯಾತ್ಮಕ ಬೆಳವಣಿಗೆಯಾಗಿತ್ತು. ಆದರೆ ಕಳೆದ ವರ್ಷ ಕೃಷಿ ವಲಯ ಶೇ.3.3ರಷ್ಟು ಬೆಳವಣಿಗೆ ಸಾಧಿಸಿದ್ದು, ಈ ವರ್ಷ ಶೇ. 3ಕ್ಕೆ ಕುಸಿತವಾಗಿದೆ. ಈ ಎಲ್ಲ ಅಂಕಿ ಅಂಶಗಳು, ಆರ್ಥಿಕತೆಯ ಬಗ್ಗೆ ಆಶಾವಾದ ಮೂಡಿಸುವಂತಿವೆ. ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಬಂಧಿತ ವಲಯಗಳ ಉತ್ತೇಜನಕ್ಕೆ ಮತ್ತಷ್ಟು ಸಹಕಾರ ನೀಡಬೇಕು. ಎಲ್ಲೆಲ್ಲಿ ಕಡಿಮೆ ಬೆಳವಣಿಗೆ ದರವಾಗಿದೆಯೋ ಅಲ್ಲಿ, ಹೆಚ್ಚಿನ ಮುತುವರ್ಜಿ ವಹಿಸಬೇಕು. ಅಲ್ಲದೆ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಎಲ್ಲ ರೀತಿಯ ಕ್ರಮ ತೆಗೆದುಕೊಂಡು ಹಣದುಬ್ಬರ ಸಮಸ್ಯೆಯನ್ನೂ ಹೋಗಲಾಡಿಸಬೇಕು. ಆಗಷ್ಟೇ ಮುಂದಿನ ಹಣಕಾಸು ವರ್ಷದಲ್ಲಿ ಮತ್ತಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next