Advertisement

ಗರ್ಮಾಗರಂ ರುಚಿಯ ಕಂದಕೂರು ಮಂಡಕ್ಕಿ

08:16 PM Dec 08, 2019 | Lakshmi GovindaRaj |

ಯಾದಗಿರಿ ಜಿಲ್ಲೆಯ ಕಂದಕೂರು ಒಗ್ಗರಣೆ ಮಂಡಕ್ಕಿಗೆ ಹೆಸರುವಾಸಿ. ಒಮ್ಮೆ ಇಲ್ಲಿನ ಒಗ್ಗರಣೆ ಮಂಡಕ್ಕಿ ರುಚಿ ನೋಡಿದವರು ಯಾವತ್ತೂ ಮರೆಯುವುದಿಲ್ಲ. ಮತ್ತೆ ಈ ಕಡೆ ಬಂದಾಗ ಮಂಡಕ್ಕಿ ಸವಿಯದೇ ಹೋಗುವುದಿಲ್ಲ.

Advertisement

ಯಾದಗಿರಿ ಜಿಲ್ಲಾ ಕೇಂದ್ರದಿಂದ 24 ಕಿ.ಮೀ. ಇರುವ ಕಂದಕೂರಿನಲ್ಲಿ ಇತಿಹಾಸ ಪ್ರಸಿದ್ಧ ಕೊಂಡಮಾಯಿದೇವಿ ಮಂದಿರ ಎಷ್ಟು ಪ್ರಸಿದ್ಧಿ ಪಡೆದಿದೆಯೋ, ಅಷ್ಟೇ ಜನಪ್ರಿಯತೆಯನ್ನು ಲಕ್ಷ್ಮಣ್‌ ಅವರ ಭವಾನಿ ಹೋಟೆಲಿನ ಮಂಡಕ್ಕಿ ಒಗ್ಗರಣೆಯೂ ಪಡೆದುಕೊಂಡಿದೆ. ಶುದ್ಧ ಎಣ್ಣೆ, ಹಾಲು, ಟೊಮೆಟೋ, ಉಳ್ಳಾಗಡ್ಡಿ, ಮೆಣಸಿನಕಾಯಿ, ಜೀರಿಗೆ, ಸಾಸಿವೆ, ಅರಶಿಣ, ಬೆಳ್ಳುಳ್ಳಿ, ಶುಂಠಿಯನ್ನು ಬಳಸಿ ಮಾಡಿದ ಬಿಸಿ ಬಿಸಿಯಾದ, ಘಮಘಮಿಸುವ ಮಂಡಕ್ಕಿ ಒಗ್ಗರಣೆ ಎಂಥವರ ಬಾಯಲ್ಲೂ ನೀರು ತರಿಸುತ್ತದೆ.

1974ರಲ್ಲಿ, ತಮ್ಮ ಜಮೀನಿಗೆ ಹೋಗುವ ದಾರಿಯಲ್ಲೇ ಸ್ವಲ್ಪ ಜಾಗ ಖರೀದಿಸಿದ ಲಕ್ಷ್ಮಣ್‌ ಅವರ ತಂದೆ ನಾಗೋಜಿ, ಅಲ್ಲಿ ಪುಟ್ಟದಾಗಿ ಗುಡಿಸಲು ಹಾಕಿ ಟೀ, ಕಾಫಿ, ಮಂಡಕ್ಕಿ ಒಗ್ಗರಣೆ ಮಾಡಲು ಶುರು ಮಾಡಿದ್ರು. ಆರಂಭದಲ್ಲಿ 15 ಪೈಸೆಗೆ ಒಂದು ಪ್ಲೇಟ್‌ ಮಂಡಕ್ಕಿ ಒಗ್ಗರಣೆ ಸಿಗುತ್ತಿತ್ತು. ದಿನಕಳೆದಂತೆ ಗ್ರಾಮವು ಪ್ರಗತಿಯತ್ತ ಸಾಗಿದ್ದು, 1986ರಲ್ಲಿ, ಇದ್ದ ಜಾಗದಲ್ಲೇ ಮನೆ ಕಟ್ಟಿಕೊಂಡು ಅದಕ್ಕೆ ಶ್ರೀ ಭವಾನಿ ಹೋಟೆಲ್‌ ಎಂದು ಹೆಸರಿಟ್ಟು, ತಿಂಡಿ -ಊಟ ಮಾರಾಟ ಮಾಡಲು ಶುರು ಮಾಡಿದ್ದರು. ಇದಕ್ಕೆ ಮನೆಯ ಸದಸ್ಯರೂ ಸಾಥ್‌ ನೀಡುತ್ತಿದ್ದರು.

10 ವರ್ಷದಿಂದ ಒಂದೇ ಬೆಲೆ: ಒಗ್ಗರಣೆ ಮಂಡಕ್ಕಿಯ ಬೆಲೆ ಪ್ಲೇಟ್‌ಗೆ 15 ಪೈಸೆ ಇದ್ದಾಗ, ಇಡೀ ದಿನದಲ್ಲಿ 20 ರೂ. ವ್ಯಾಪಾರ ಆದ್ರೆ ಅದೇ ಹೆಚ್ಚು ಎನ್ನಲಾಗುತ್ತಿತ್ತು. ಆದ್ರೆ, ಈಗ ದಿನಸಿ ಸಾಮಗ್ರಿ, ತರಕಾರಿ ಬೆಲೆ ಹೆಚ್ಚಾದಂತೆಲ್ಲ ಮಂಡಕ್ಕಿ ಒಗ್ಗರಣೆಯ ಬೆಲೆ 15 ರೂ.ಗೆ ಹೆಚ್ಚಿಸಲಾಗಿದೆ. 10 ವರ್ಷಗಳಿಂದಲೂ ಒಂದೇ ದರ ಇದೆ ಎನ್ನುತ್ತಾರೆ ಲಕ್ಷ್ಮಣ್‌.

ಕಟ್ಟಿಗೆ ಒಲೆ: ಇಂದಿಗೂ ಕಟ್ಟಿಗೆಯನ್ನು ಬಳಕೆ ಮಾಡಿ ಉಪಾಹಾರದ ತಯಾರಿ ಮಾಡುವ ಲಕ್ಷ್ಮಣ್‌ಗೆ, ಪತ್ನಿ ತಾರಾಬಾಯಿ, ಪುತ್ರ ಈಶ್ವರ ಮತ್ತು ಸೊಸೆ ಸಂಧ್ಯಾ ಸಾಥ್‌ ನೀಡುತ್ತಾರೆ. ಗ್ರಾಹಕರ ಸಂಖ್ಯೆ ಹೆಚ್ಚಾದ ಕಾರಣ ಇಬ್ಬರು ನೌಕರರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

Advertisement

“ಈ ಪುಟ್ಟ ಹೋಟೆಲ್‌ ನಡೆಸಿಕೊಂಡೇ ಬದುಕು ಕಟ್ಟಿಕೊಂಡಿರುವೆ. ಮೂವರು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಿರುವೆ. ಮುಖ್ಯವಾಗಿ, ಗ್ರಾಹಕರು ಸಂತೃಪ್ತರಾದರೆ, ಅದಕ್ಕಿಂತ ಖುಷಿ ಮತ್ತೂಂದಿಲ್ಲ’ ಎನ್ನುತ್ತಾರೆ ಲಕ್ಷ್ಮಣ್‌. ಮೊದಲು ಮಧ್ಯಾಹ್ನದ ಊಟದ ವ್ಯವಸ್ಥೆ ಇತ್ತು. ಈಗ ಪಕ್ಕದಲ್ಲೇ ಅಣ್ಣನ ಮಗಳು ಖಾನಾವಳಿ ಪ್ರಾರಂಭಿಸಿದ ನಂತರ ಊಟ ಕೊಡುವುದನ್ನು ನಿಲ್ಲಿಸಿದ್ದಾರೆ. ಇಲ್ಲಿ ಮಂಡಕ್ಕಿಯ ಜೊತೆಗೆ ಮಿರ್ಚಿ, ಬಜ್ಜಿ, ಪೂರಿ-ಪಿಟ್ಲಾ ಕೂಡ ತಯರಾಗುತ್ತದೆ.

ಲಭ್ಯವಿರುವ ತಿಂಡಿ: ಬೆಳಗ್ಗೆ 6.30ಯಿಂದ ಮಧ್ಯಾಹ್ನ 12.30ರವರೆಗೆ ಪೂರಿ(ನಾಲ್ಕಕ್ಕೆ 20 ರೂ.), ಒಗ್ಗರಣೆ ಮಂಡಕ್ಕಿ ಸಿಗುತ್ತೆ. ಮಧ್ಯಾಹ್ನದ ನಂತರ ಒಗ್ಗರಣೆ ಮಂಡಕ್ಕಿ, ಬಜ್ಜಿ, ಟೀ, ಕಾಫಿ, ತಂಪು ಪಾನೀಯ ಸಿಗುತ್ತದೆ. ದರ 20 ರೂ. ಒಳಗೆ.

ಪಿಟ್ಲಾ ಸೂಪರ್‌: ಪೂರಿ ಜೊತೆ ಕೊಡುವ ಪಿಟ್ಲಾ(ಸಾಗು) ತಿಂಡಿಯ ರುಚಿಯನ್ನು ಹೆಚ್ಚಿಸುತ್ತೆ. ಹುಳಗಟ್ಟಿ, ಟೊಮೆಟೋ, ಖಾರದ ಪುಡಿ, ಮಸಾಲೆ ಹಾಕಿ ಕಡ್ಲೆ ಇಟ್ಟು ಹಾಕಿ ಮಾಡುವ ಪಿಟ್ಲಾ ಪೂರಿ ರುಚಿಯನ್ನು ಹೆಚ್ಚಿಸಿದೆ.

ಹೋಟೆಲ್‌ ಸಮಯ: ಬೆಳಗ್ಗೆ 6.30ರಿಂದ ರಾತ್ರಿ 7.30ರವರೆಗೆ, ವಾರದ ರಜೆ ಇಲ್ಲ.

ಹೋಟೆಲ್‌ ವಿಳಾಸ: ಯಾದಗಿರಿಯಿಂದ 24 ಕಿ.ಮೀ., ಕಂದಕೂರ ಗ್ರಾಮ, ಬಸ್‌ ನಿಲ್ದಾಣ ಎದುರು. ಶ್ರೀ ಭವಾನಿ ಹೋಟೆಲ್‌

* ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next