Advertisement

ತೋಟದ ಮನೆ

06:00 AM Jul 22, 2018 | |

ಬಸ್ಸಿನಿಂದಿಳಿದು ಕಾಲುಹಾದಿಯತ್ತ ಸಾಗುತ್ತಿದ್ದಂತೆಯೇ ಕತ್ತಲು ಅಡರಿಕೊಳ್ಳತೊಡಗಿತ್ತು. ನಗರದ ಹಾಗೆ ಹಳ್ಳಿಯಲ್ಲಿ ಎಲ್ಲಿ  ಇರಬೇಕು ಝಗಮಗ ದೀಪ? ಅಲ್ಲೊಬ್ಬರು ಇಲ್ಲೊಬ್ಬರು ಟಾರ್ಚ್‌ ಹಿಡಿದು ಸಾಗುತ್ತಿದ್ದುದು ಬಿಟ್ಟರೆ ದೂರ ದೂರಕ್ಕೂ ಕಾಣುತ್ತಿದ್ದುದು ಮಿಂಚುಹುಳಗಳ “ಮಿಣಕ್‌ ಮಿಣಕ್‌’ ಬೆಳಕು ಮಾತ್ರ! ಆಗೊಮ್ಮೆ ಈಗೊಮ್ಮೆ ಜೀರುಂಡೆಗಳ ಸದ್ದು ಬಿಟ್ಟರೆ ಕೇಳಿಸುತ್ತಿದ್ದುದು ಇವರ ಚಪ್ಪಲಿಗಳ ಸದ್ದಷ್ಟೆ ! ಸ್ವಾತಿ ಮೊಬೈಲ್‌ನ ಟಾರ್ಚ್‌ ಅದುಮಿದಳು. “”ಕತ್ತಲಿನಲ್ಲಿ ಹಳ್ಳಿಲಿ ನಡೆಯೋದಂದ್ರೆ ಒಂಥರಾ ಥ್ರಿಲ್ಲಿಂಗ್‌… ಅಲ್ವಾ ಅಮ್ಮ…”

Advertisement

“”ಅದ್ಸರಿ, ಅಜ್ಜ ಇಷ್ಟೊತ್ತಿಗೆ ಏನ್‌ ಮಾಡ್ತಿರ್ತಾರೆ?” 
“”ಸುಮ್ನಿರೇ…” ಗದರಿದಳು ಗಿರಿಜೆ.
ಮಗಳ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಹಳ್ಳಿಗೆ ಬಂದಿಳಿದಾಗಿತ್ತು. ಅದೂ ಇಪ್ಪತ್ತೆ„ದು ವರ್ಷಗಳ ನಂತರ! ಮನದಲ್ಲೇನೋ ದೊಂಬರಾಟ. ದುಗುಡದ ಛಾಯೆ. ಪುಕ್ಕಲು ಮನ ಏನೇನನ್ನೋ ನೆನಪಿಸಿಕೊಂಡು ಕ್ಷಣಕ್ಷಣಕ್ಕೂ ತೊಳಲಾಟದಲ್ಲಿ ಬೇಯುವಂತೆ ಮಾಡಿತ್ತು.
ದೇವಸ್ಥಾನದ ಪಕ್ಕದ ಸಣ್ಣ ಹೆಂಚಿನ ಮನೆಯೇ ಚಿಕ್ಕಪ್ಪ ರಾಜಾರಾಮರದು. ವಯಸ್ಸಾಗಿ ಬೆನ್ನು ಬಾಗಿದ್ದರೂ ಇವರ ಬರುವಿಕೆಗಾಗಿ ಕಾಯುತ್ತಾ ಗೇಟ್‌ ಪಕ್ಕದಲ್ಲೇ ನಿಂತಿದ್ದರವರು. “”ಅಜಾj, ನಾವು ಬಂದಿºಟ್ವಿ…” ಸ್ವಾತಿ ಒಂದೇ ಉಸಿರಿಗೆ ಅತ್ತ ಹಾರಿ ಅಜ್ಜನ ತೋಳು ಹಿಡಿದು ನಿಂತಳು.
“”ಥೇಟ್‌ ನಿನ್‌ ಅಮ್ಮನ ಥರಾನೇ ಆಗಿºಟ್ಟಿದ್ದೀಯಲ್ಲೇ…” ಅಜ್ಜ ಮೊಮ್ಮಗಳನ್ನು ಒಳಗೆ ಕರೆದೊಯ್ದರು.

ಎಷ್ಟು ಬಯಸಿದರೂ ನಾವು ಅಂದುಕೊಂಡಿದ್ದು ಆಗುವುದೇ ಇಲ್ಲ. ಹೀಗಾಗಬಾರದು ಎಂದು ಅದೆಷ್ಟು ಬಾರಿ ಅಂದುಕೊಂಡಿರಿ¤àವೋ ಅದೇ ಆಗಿಬಿಡುತ್ತದೆ! ನಿರೀಕ್ಷೆಗೂ ಮೀರಿದ ಸಂತೋಷ ಸಿಗುವುದುಂಟೆ? ಅಪರೂಪ. ನಿರೀಕ್ಷೆಗೂ ಮೀರಿದ ಆಕಸ್ಮಿಕ ಅವಘಡಗಳು ಎದುರಾಗುತ್ತಲೇ ಇರುತ್ತವೆ. ಕಾಡಿಸಿ-ಪೀಡಿಸಿ ಸಂದಿಗ್ಧತೆಯತ್ತ ನೂಕುತ್ತವೆ. ಬೇಡಬೇಡವೆಂದುಕೊಂಡರೂ ಊರಿಗೆ ಕಾಲಿಟ್ಟಾಗಿದೆ. ಏನೂ ಘಟಿಸದೆ ಇರಲಿ ದೇವರೇ ಎಂದು ಹತ್ತಾರು ಬಾರಿ ಹಲುಬಿದ್ದಾಳೆ ಗಿರಿಜೆ.

ಈ ಸ್ವಾತಿ ಬೇರೆ ಡಾಕ್ಯುಮೆಂಟರಿ, ಹಳ್ಳಿ ಜನಜೀವನದ ಚಿತ್ರೀಕರಣ ಅಂತ ಊರಿಡೀ ಅಲೀತಿದ್ದಾಳೆ. “”ಗಿರಿಜೆ ಮಗಳಲ್ವಾ ನೀನು? ನೋಡಿದ ಕೂಡ್ಲೆà ಗೊತ್ತಾಗುತ್ತೆ ಬಿಡು…” ಅನ್ನೋ ಊರಿನವರ ಮಾತು ಕೇಳಿ ಇನ್ನಷ್ಟು ಉಬ್ಬಿಹೋಗಿದ್ದಾಳೆ ಸ್ವಾತಿ. “”ನೋಡು ಅಮ್ಮಾ, ಹಳ್ಳಿ ಜನ ಇನ್ನೂ ನಿನ್ನ ಮರಿ¤ಲ್ಲ ಗೊತ್ತಾ…” ಅಂತ ನಕ್ಕುಬಿಡ್ತಾಳೆ.

ಇವ್ಳಿಗೆ ಹೇಗೆ ಹೇಳ್ಳೋದು ಬೆಳ್ಳಗಿರೋದೆಲ್ಲ ಹಾಲಲ್ಲ ಅಂತ? ಇವ್ಳಿಗೆ ಸ್ವತ್ಛಂದವಾಗಿ ಬೆಳೆದು ಗೊತ್ತು. ಎಗ್ಗುಸಿಗ್ಗಿಲ್ಲದೆ ವರ್ತಿಸ್ತಾಳೆ. ಅವಳಪ್ಪ ತೀರಿಕೊಂಡ ಮೇಲೆ, ಅಪ್ಪನ ಕೊರತೆ ಕಾಡಬಾರದು ಅಂತ ಒಂದು ಕೂದಲೂ ಕೊಂಕದ ಹಾಗೆ ಬೆಳೆಸಿದೀನಿ. ಹಳ್ಳಿಯ ಕೆಲ ಜನರ ಮುಖವಾಡದ ಹಿಂದಿನ ಕಟುಸತ್ಯದ ಅರಿವು ಅವಳಿಗಾಗಬಹುದೇ? ಸಂಜೆಯಾಯ್ತು. “”ಸ್ವಾತಿ ಎಲ್ಲಿ… ಕಾಣಿಸ್ತಾನೇ ಇಲ್ಲ ಚಿಕ್ಕಪ್ಪ…”

Advertisement

“”ಸಾಹುಕಾರರ ತೋಟದ ಮನೇಲಿ ಬರ್ತ್‌ಡೇ ಫ‌ಂಕ್ಷನ್‌ ನಡೀತಿದೆ.ಅದ್ಕೆ… ವಿಡಿಯೋ ತೆಗೀತೀನಿ” ಅಂತ ಹೋಗಿದ್ದಾಳೆ.
ಗಿರಿಜೆಯ ಎದೆ ಧಸಕ್ಕೆಂದಿತು. “”ಎಲ್ಲ ಗೊತ್ತಿದ್ದೂ ನೀವು ಅಲ್ಲಿಗೆ ಹೋಗೋಕೆ ಯಾಕ್‌ ಬಿಟ್ರಿ? ಏನು ಚಿಕ್ಕಪ್ಪ ನೀವು?” ಎನ್ನುತ್ತ ಚಪ್ಪಲಿ ತುಳಿದಳು. ಎದೆ ಡವಡವಿಸುತ್ತಿತ್ತು. ಮನಸ್ಸು ಅದ್ಯಾವುದೋ ಆತಂಕದಿಂದ ಚಡಪಡಿಸತೊಡಗಿತು. ಹಿಂದೆ ತಾನು ನೋಡಿದ ತೋಟದ ಮನೆಯತ್ತ ಮನ ನೆಟ್ಟಿತು.
ಉದ್ದುದ್ದದ ಕಂಗು-ತೆಂಗಿನ ಮರಗಳ ನಡುವೆ ಕಂಡೂ ಕಾಣದಂತೆ ಹುದುಗಿತ್ತು ಆ ತೋಟದ ಮನೆ. ಹೊರಗೆ ಗೋದಾಮಿನಂತೆ ಕಾಣುವ ಆ ಮನೆಯ ಒಳಹೊಕ್ಕರೆ ಸಾಕು ಶ್ರೀಮಂತಿಕೆಯ ವೈಭವವೇ ಅನಾವರಣಗೊಳ್ಳುತ್ತಿತ್ತು. ವಿಶಾಲವಾದ ಭವ್ಯ ಹಾಲ್‌, ಒಳಗೆ ನಾಲ್ಕಾರು ಕೊಠಡಿಗಳು, ಬಹು ಮೌಲ್ಯದ ಪೀಠೊಪಕರಣಗಳು, ಮೆತ್ತಮೆತ್ತನೆಯ ಹಾಸುಗಳು, ಅಡುಗೆಮನೆ ತುಂಬ ವಿದೇಶದಿಂದ ತರಿಸಿದ ಗಾಜಿನ ಪರಿಕರಗಳು, ಅಲ್ಲಲ್ಲಿ ಆಕರ್ಷಕವಾಗಿ ಜೋಡಿಸಿದ ನಿಲುವುಗನ್ನಡಿಗಳು…ಒಂದೇ ಎರಡೇ? ಆತನ ಖಾಸಾ ದೋಸ್ತ್ಗಳು ಸೇರುತ್ತಿದ್ದುದು ಇದೇ ಜಾಗದಲ್ಲಿ. ವಿಶೇಷ ಸಮಾರಂಭಗಳು, ಮೋಜು, ಮಸ್ತಿ ನಡೆಯುತ್ತಿದ್ದುದೂ ಇಲ್ಲಿಯೇ!

ಆನೆದಂತದಿಂದ ತಯಾರಿಸಿದ ಕುರ್ಚಿಯಲ್ಲಿ ಸಾಹುಕಾರ ವಿರಾಜಮಾನನಾಗಿದ್ದ. ಹತ್ತುಹಲವು ಗಣ್ಯ ವ್ಯಕ್ತಿಗಳ ಇರವು ಅವನ ಪ್ರಭಾವವನ್ನು ಸಾರಿ ಹೇಳುತ್ತಿತ್ತು. ಈ ಸ್ವಾತಿ, ಆತನ ತೀರಾ ಸನಿಹದಲ್ಲಿಯೇ ಎಂದಿನಂತೆ ಹಾಸ್ಯ ಚಟಾಕಿ ಹಾರಿಸುತ್ತ ನಗುನಗುತ್ತ ನಿಂತಿದ್ದಾಳೆ!
“”ಹ್ಯಾಪಿ ಬರ್ತ್‌ಡೇ ಅಂಕಲ್‌” ಎನ್ನುತ್ತ ಆತನ ಕೈಗೆ ಹೂಗುತ್ಛ ನೀಡಿ, “”ನಾಳೆ ಸಿಗೋಣ…” ಎಂದು ಕೈಕುಲುಕುವುದನ್ನು ಕಂಡು ಗಿರಿಜೆಗೆ ತಡೆದುಕೊಳ್ಳಲಾಗಲಿಲ್ಲ. ಏನಿವ್ಳು? ಇಷ್ಟೊಂದು ಬೀಡುಬೀಸಾಗಿ ವರ್ತಿಸ್ತಿದಾಳೆ? “”ಮನೆಗೆ ನಡಿ ಸ್ವಾತಿ” ಗಂಭೀರವಾಗಿ ಹಿಂದಿನಿಂದ ಕೇಳಿಸಿದ ತಾಯಿಯ ಆಣತಿಗೆ ಅವಾಕ್ಕಾದಳು ಸ್ವಾತಿ. “”ಸರಿ. ನನ್ನ ಕ್ಯಾಮರಾ ತಗೊಂಡು ಬರಿ¤àನಿ ತಾಳು…” ಎನ್ನುತ್ತಾ ಆಚೆ ಹೋದಳು.

“”ನೋಡು ನಿನ್ನ ಮಗಳು ಎಷ್ಟು ಫಾಸ್ಟ್‌!” ಎನ್ನುತ್ತಾ ಕಿಸಕ್ಕನೆ ನಕ್ಕ ಸಾಹುಕಾರ. ಈತ ಅಂದು ಹೇಗಿದ್ದಾನೋ ಇಂದೂ ಹಾಗೆಯೇ ಇದ್ದಾನೆ, ಒಂದಿಷ್ಟು ತಲೆಕೂದಲು ಬೆಳ್ಳಗಾದುದು ಬಿಟ್ರೆ…! ಗಿರಿಜೆ ಉತ್ತರಿಸದೆ ಅವನಿಗೆ ಬೆನ್ನು ಮಾಡಿದಳು. “”ಇನ್ಮುಂದೆ ನನ್ನ ಕೇಳೆª ಎಲ್ಲೂ ಅಲೆಯೋ ಹಾಗಿಲ್ಲ ನೀನು. ಯಾವ ಹುತ್ತದಲ್ಲಿ ಎಂಥ ಹಾವಿದ್ಯೋ ಹುಷಾರಾಗಿರ್ಬೇಕು ಸ್ವಾತಿ” ಎಂದಳು ಗಡಸು ದನಿಯಲ್ಲಿ. ತಾಯಿಗೆ ಸಿಟ್ಟು ಬಂದುದು ಅರಿತ ಸ್ವಾತಿ ಸುಮ್ಮನೆ ಹೂಂಗುಟ್ಟಿದಳಷ್ಟೇ.

ಉಂಡು ಮಲಗಿದ ಗಿರಿಜೆಗೆ ನಿದ್ದೆ ಹತ್ತಿರಕ್ಕೂ ಸುಳಿಯಲೊಲ್ಲದು. ಇದೇ ಈ ಸಾಹುಕಾರ ಹೇಮಂತ್‌ ಅಂದು ಚಿಗುರು ಮೀಸೆಯ ಆಕರ್ಷಕ ತರುಣ! ಹುಡುಗಿಯರನ್ನು ಮೋಡಿ ಮಾಡಿ ತನ್ನೆಡೆಗೆ ಸೆಳೆದುಕೊಳ್ಳುವ ಕಲೆ ಅವನಿಗೆ ಕರತಲಾಮಲಕ! ಹಿತವಾಗಿ ಹೊಗಳಿ, ಬೆಣ್ಣೆಯಂತೆ ಮಾತಾಡಿ, ಸೈರಣೆಯಿಂದ  ಕಾದು ಅವರ ಸಖ್ಯ ಸಂಪಾದಿಸುತ್ತಿದ್ದ. ಅಂದು, ಗಿರಿಜೆಯನ್ನು ನಾಲ್ಕಾರು ತಿಂಗಳು ಬಿಟ್ಟೂಬಿಡದೆ ಕಾಡಿದ್ದ. ಸ್ನೇಹವಷ್ಟೇ ತಾನೇ, ಎನ್ನುತ್ತಾ ಗಿರಿಜೆಯೂ ಅವನ ಹಿಂದೆಮುಂದೆ ಸುತ್ತುತ್ತಾ ನಿರುಮ್ಮಳವಾಗಿದ್ದಳು.

“”ನೋಡು ಚಿನ್ನೂ, ಅವ್ನು ಸರಿಯಿಲ್ಲ ಕಣೋ, ಹುಷಾರಾಗಿರು…” ಮಾವನ ಮಗ ರವಿ ಅದೆಷ್ಟು ಬಾರಿ ಹಲುಬಿದ್ದನೋ? ಅದ್ಯಾವುದೂ ಗಿರಿಜೆಯ ಕಿವಿಗೆ ಹೊಕ್ಕಿರಲಿಲ್ಲ. ಅದೊಂದು ದಿನ ಬರ್ತ್‌ಡೇ ಎಂದು ಇದೇ ತೋಟದ ಮನೆಗೆ ಕರೆದಿದ್ದ. ಅಲ್ಲಿ ಮಾತು ಬದಲಾಗಿತ್ತು, ವರ್ತನೆ ಅಸಹ್ಯವಾಗಿತ್ತು, ಕಣ್ಣು ಕೆಂಪೇರಿತ್ತು. “”ಈ ಊರಿನ ಚಂದೊಳ್ಳೆ ಚೆಲುವೆಯರೆಲ್ಲ ನನಗೆ ಬೇಕೇ ಬೇಕು. ಹೇಗಾದ್ರೂ ನಾನು ಅವರನ್ನು ಪಡೆದೇ ಪಡೀತೀನಿ” ಎನ್ನುತ್ತಾ ಹಿಂದಿನಿಂದ ಬಂದು ಅಪ್ಪಿಕೊಂಡಿದ್ದ. ಅವನ ಕೈಯನ್ನು ಬಲವಾಗಿ ಕಚ್ಚಿ ಅಲ್ಲಿಂದ ದೌಡಾಯಿಸಿದ್ದಳು ಗಿರಿಜೆ. ತುಂಬಾ ಕುಡಿದಿದ್ದರಿಂದಲೋ ಏನೋ ತನ್ನನ್ನು ಹಿಂಬಾಲಿಸಿ   ಬರಲಾಗಲಿಲ್ಲ.

“”ನಿನ್ನ ಬಿಡಲ್ಲ, ನೋಡ್ತಿರು… ನಿನ್ನ, ನಿನ್ನ ಕುಟುಂಬಾನ ಸರ್ವನಾಶ ಮಾಡ್ತೀನಿ” ಅಲ್ಲಿಂದಲೇ ಅಬ್ಬರಿಸಿದ್ದ. ಮೈಕೈಯಲ್ಲಿ ತರಚು ಗಾಯಗಳಾದರೂ ಲೆಕ್ಕಿಸದೆ ಬೇಲಿ ಹಾರಿ ಒಂದೇ ರಭಸಕ್ಕೆ ಮನೆಗೆ ಬಂದು ಸೇರಿದ್ದಳು ಗಿರಿಜೆ. ರಾತ್ರೋರಾತ್ರಿ ತಂದೆ-ತಾಯಿ, ರವಿಯೊಂದಿಗೆ ನಗರಕ್ಕೆ ಓಡಿಬಂದಿದ್ದಾಗಿತ್ತು. ದಿಢೀರನೆ ರವಿಯೊಂದಿಗೆ ಮದುವೆಯೂ ನಡೆದುಹೋಯ್ತು. ಅಪ್ಪ-ಅಮ್ಮ ಜೀವಭಯದಿಂದ ಊರಿಗೇ ಮರಳಿರಲಿಲ್ಲ. ಆಸ್ತಿ-ಪಾಸ್ತಿ, ಸೊತ್ತು ಎಲ್ಲವನ್ನೂ ಆತ ಕಬಳಿಸಿಬಿಟ್ಟಿದ್ದ.  ಇಬ್ಬರೂ ವರ್ಷಾನುಗಟ್ಟಲೆ ಟೈಲರ್‌ ಆಗಿ ದುಡಿದೂ ದುಡಿದೂ ರೆಡಿಮೇಡ್‌ ಬಟ್ಟೆ ಅಂಗಡಿ ಇಟ್ಟು ಸ್ವಲ್ಪ ಪರಿಸ್ಥಿತಿ ಸುಧಾರಿಸಿತು ಅನ್ನುವಷ್ಟರಲ್ಲಿ ಆ್ಯಕ್ಸಿಡೆಂಟಲ್ಲಿ ಅಪ್ಪ-ಅಮ್ಮ, ರವಿ ಮರಳಿ ಬಾರದ ಲೋಕಕ್ಕೆ ಹೊರಟುಬಿಟ್ಟಿದ್ದರು. ಈಗ ನೋಡಿದರೆ ಹೀಗೆ!

ಆತನ ಹೆಂಡ್ತಿ ಬೇರೆ ತೀರೊRಂಡುಬಿಟ್ಟಿರುವಳಂತೆ, ಮಕ್ಕಳು ಬೇರೆ ಫಾರಿನ್‌ನಲ್ಲಿದ್ದಾರೆ. ಹುಣಸೆಮರ ಮುಪ್ಪಾದರೂ ಹುಳಿ ಮುಪ್ಪಲ್ಲವಲ್ಲ… ಏನೇನೋ ಬಲೆ ಹೆಣೆದು ಮಗಳನ್ನು ಪಟಾಯಿಸದಿದ್ದರೆ ಸಾಕು, ಓ ದೇವರೇ… ಇವಿÛಗೇನೂ ಗೊತ್ತಾಗಲ್ಲ ಹೇಗೆ ಹೇಳಿÉ?… ಮನದಲ್ಲೇ ಹಲುಬಿದಳು ಗಿರಿಜೆ.

ಬೆಳಗ್ಗೆದ್ದು ಬ್ಯಾಗ್‌ ತುಂಬಿಕೊಳ್ಳುತ್ತಿದ್ದ ಅಮ್ಮನನ್ನೇ ನಿರುಕಿಸಿ ನೋಡಿದಳು ಸ್ವಾತಿ. “”ಹೊರಡೋಣ ಈಗ್ಲೆà… ಬೇಗ ರೆಡಿಯಾಗು ಸ್ವಾತಿ” ಗಿರಿಜೆಯ ಮಾತಿಗೆ ಸ್ವಾತಿ ಒಂದಿನಿತೂ ಕದಲಲಿಲ್ಲ. “”ಏನಾದ್ರೂ ಸರಿ, ನಾನು ನನ್ನ ಕೆಲ್ಸ ಮುಗಿಸ್ಕೊಂಡೇ ಹೊರಡೋದು. ನೈಟ್‌ಬಸ್ಸಿಗೆ ಆಗುತ್ತೋ ನೋಡ್ತೀನಿ. ಒಂದಿನಾ ಲೇಟ್‌ ಆದ್ರೆ ಏನೂ ಆಗಲ್ಲ”. ಗಿರಿಜೆ ಹತಾಶಳಾಗಿ ಕುಸಿದು ಕುಳಿತಳು. ಅಸಹಾಯಕತೆಯಿಂದ ಕಣ್ಣಲ್ಲಿ ನೀರು ತುಂಬಿಕೊಂಡಿತು. ಚಿಕ್ಕಪ್ಪಎತ್ತಲೋ ದೃಷ್ಟಿ ನೆಟ್ಟು ಕೂತಿದ್ದರು.
.  
“”ಅಮ್ಮ, ಟಿ.ವಿ. ಹಾಕು…” ಟೀ ಕಪ್‌ ಹಿಡಿದುಕೊಂಡು ಟಿ.ವಿ. ಹಾಕಿದ ಗಿರಿಜೆ ಬೆಚ್ಚಿಬಿದ್ದಳು! ಊರ ಸಾಹುಕಾರನ ಕರ್ಮಕಾಂಡ ಎಂಬ ಒಕ್ಕಣಿಕೆಯಲ್ಲಿ “ಆತನ’ ಚರಿತ್ರೆಯೆಲ್ಲ ಬಿತ್ತರಗೊಳ್ಳುತ್ತಿದೆ! ನಿರಂತರವಾಗಿ ಅವನಿಂದ ದೌರ್ಜನ್ಯಕ್ಕೆ ಒಳಗಾದ ನೊಂದ ಸ್ತ್ರೀಯರಿಬ್ಬರೂ ಮುಖಕ್ಕೆ ಮುಸುಗಿಕ್ಕಿ ಕುಳಿತು ತಮ್ಮ ನೋವಿನ ಕಥೆ-ವ್ಯಥೆಯನ್ನು ಬಿಚ್ಚಿಡುತ್ತಿದ್ದಾರೆ! ತನ್ನ ಬಾಲ್ಯದ ಗೆಳತಿಯರಿಬ್ಬರು, ಹಳ್ಳಿಯ ಒಂದಿಬ್ಬರು ಕುಳಿತು ಆತನ “ಘನಂದಾರಿ’ ಕೆಲಸಗಳನ್ನೆಲ್ಲ ವರ್ಣಿಸುತ್ತಿದ್ದಾರೆ! ಆತ ಹುಡುಗಿಯೊಂದಿಗೆ ಅಸಭ್ಯವಾಗಿ ವರ್ತಿಸಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದುದು, ಆಕೆ ಕಪಾಳಮೋಕ್ಷ ಮಾಡಿದ್ದು ಎಲ್ಲ ಚಿತ್ರಿತವಾಗಿದೆ!

ತೋಟದ ಮನೆಯ ಇಂಚಿಂಚು ಕಥೆಯನ್ನೂ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ! ಕೆಲಸಗಾರರ ಶೋಷಣೆ, ಕಂಡ ಕಂಡ ಸ್ತ್ರೀಯರನ್ನೆಲ್ಲ ಯಾವ್ಯಾವುದೋ ತಂತ್ರದಿಂದ ಬಲೆಗೆ ಬೀಳಿಸಿ ಪಲ್ಲಂಗಕ್ಕೆ ಕರೆಯುತ್ತಿದ್ದುದು, ನಿರಂತರವಾಗಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ, ಬೆಟ್ಟದಷ್ಟು ಸಾಲ ಮಾಡಿ ಆತನ ಹಂಗಿಗೆ ಬಿದ್ದಿದ್ದ ಊರ ಜನರ ಅಸಹಾಯಕತೆ, ಸಾಹುಕಾರನ ಅಟ್ಟಹಾಸ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡಲಾಗಿದೆ!

“”ಓಹ್‌! ಅಂದ್ರೆ… ಇದೆಲ್ಲ ಸ್ವಾತೀದೇ ಕೆಲಸ!”
“”ಯಾಕೆ ಮಗಳೇ, ಇದೆಲ್ಲ ನಂಗೆ ಹೇಳೇ ಇಲ್ಲ!…”
“”ಹೇಳಿದ್ದರೆ ನೀನು ಬಿಡ್ತಾ ಇದೀಯಾ… ನೀನು ಮನಸ್ಸಲ್ಲೇನೋ ಇಟ್ಕೊಂಡು ಕೊರಗ್ತಿದೀಯಾ ಅಂತ ನಂಗೆ ಯಾವಾಗ್ಲೋ ಗೊತ್ತಾಗಿºಟ್ಟಿತ್ತು. ಯಾಕೋ ನೀನೂ ಹೇಳ್ಸಿಲ್ಲ. ಅದ್ಕೆà ಡಾಕ್ಯುಮೆಂಟರಿ ನೆಪ ಮಾಡ್ಕೊಂಡು ನಿನ್ನ ಹಳ್ಳಿಗೆ ಹೊರಡಿಸಿದೆ. ಅಜ್ಜ ನಂಗೆ ಎಲ್ಲ ಹೇಳಿದ್ರು. ಆ ಸಾಹುಕಾರ ಈಗ್ಲೂ ಚಾಳಿ ಬಿಟ್ಟಿಲ್ಲ, ದರ್ಪ, ದಬ್ಟಾಳಿಕೆ ಬಿಟ್ಟಿಲ್ಲ ಅಂತ ಗೊತ್ತಾಯ್ತು. ಇಂಥ ಮನುಷ್ಯನ್ನ ಸುಮ್ನೆ ಬಿಡಬಾರ್ಧು ಅನ್ನಿಸ್ತು… ಅದ್ಕೆ ಹೀಗೆ ಮಾದ್ದೇ”
“”ನಾನೊಬ್ಳೆà ಅಲ್ಲ, ನನ್‌ ಜೊತೆ ಫ್ರೆಂಡ್ಸ್‌ ಕೂಡ ಬಂದಿದ್ರು. ಅವರ ಹೆಲ್ಪ್ನಿಂದ ಇದೆಲ್ಲ ಮಾಡೋಕೆ ಸಾಧ್ಯವಾಯ್ತು”.
ಗಿರಿಜೆ ಮಾತಾಡಲಿಲ್ಲ. ಹೆಮ್ಮೆಯಿಂದ ಮಗಳ ಹಣೆಗೆ ಹೂಮುತ್ತನಿತ್ತಳು. 

ರಾಜೇಶ್ವರಿ  ಜಯಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next