Advertisement

ಕಸ-ಪ್ಲಾಸ್ಟಿಕ್‌ ದಂಡದ ಮೊತ್ತವೇ 2 ಕೋಟಿ!

10:46 AM Jan 27, 2020 | Suhan S |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಸುತ್ತಿದ್ದ ವಾಣಿಜ್ಯ ಉದ್ದಿಮೆಗಳಿಂದ ಪಾಲಿಕೆಯ ಆರೋಗ್ಯಾಧಿಕಾರಿಗಳು ಕಳೆದ ಏಪ್ರಿಲ್‌ ನಿಂದ ಡಿಸೆಂಬರ್‌ವರೆಗೆ 1.84 ಕೋಟಿ ರೂ.ದಂಡ ಸಂಗ್ರಹಿಸಿದ್ದಾರೆ.

Advertisement

ಇನ್ನು ಇದೇ ಅವಧಿಯಲ್ಲಿ ಕಸ ವಿಂಗಡಣೆ ಮಾಡುವುದರಲ್ಲಿ ಲೋಪ ವೆಸಗಿದ ಹಾಗೂ ಸಮರ್ಪಕವಾಗಿ ಕಸ ನೀಡದ ನಗರದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಪಬ್‌, ಹೋಟೆಲ್‌, ಮಾಲ್‌ ಹಾಗೂ ವಾಣಿಜ್ಯ ಉದ್ಯಮಗಳಿಗೆ 28.95ಲಕ್ಷ ರೂ. ದಂಡ ವಿಧಿಸಲಾಗಿದೆ. 55,371 ವಾಣಿಜ್ಯ ಉದ್ದಿಮೆಗಳಿಗೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದು, ಕಸ ವಿಂಗಡಣೆ ಮಾಡದ ಆರೋಪದ ಮೇಲೆ 30.85 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಇದರಲ್ಲಿ 28.95 ಲಕ್ಷ ರೂ. ಇಲ್ಲಿಯವರೆಗೆ ಸಂಗ್ರಹ ಮಾಡಲಾಗಿದೆ. ಅದೇ ರೀತಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡಿದ ಹಿನ್ನೆಲೆಯಲ್ಲಿ 1.95 ಕೋಟಿ ರೂ.ದಂಡ ವಿಧಿಸಲಾಗಿದ್ದು, 1.84 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಅಲ್ಲದೆ, 47.8 ಸಾವಿರ ಕೆ.ಜಿ ಪ್ಲಾಸ್ಟಿಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್‌, ವಾಣಿಜ್ಯ ಉದ್ದಿಮೆಗಳಿಂದ ಕಸ ವಿಲೇವಾರಿಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಪಾಲಿಕೆ ಕೆಲವು ನಿರ್ದಿಷ್ಟ ಯೋಜನೆಗಳನ್ನು ರೂಪಿಸಿಕೊಂಡಿದೆ. ಇದರಲ್ಲಿ ಘನತ್ಯಾಜ್ಯ ನಿರ್ವಹಣೆ -2016ರ ನಿಯಮಾನುಸಾರ 100 ಕೆ.ಜಿಯ ಒಳಗೆ ಕಸ ಉತ್ಪಾದನೆ ಮಾಡುವವರ ಕಸವನ್ನೂ ಇನ್ನು ಮುಂದೆ ಪಾಲಿಕೆಯೇ ಸಂಗ್ರಹಿಸಲಿದ್ದು, ಇದಕ್ಕೆ ತಿದ್ದುಪಡಿ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಕೌನ್ಸಿಲ್‌ ಸಭೆಯಲ್ಲಿ ಈ ತಿದ್ದುಪಡಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದರು.

ಹಿಂದಿನ ವರ್ಷದಿಂದ ನಗರದ ವಿವಿಧೆಡೆ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡುವವರ ಮೇಲೆ ದಂಡ ಪ್ರಯೋಗ ಅಸ್ತ್ರ ಬಳಸುತ್ತಿದೆ. ಆದರೆ, ಪಾಲಿಕೆ ಪ್ಲಾಸ್ಟಿಕ್‌ಗೆ ಬದಲಾಗಿ ಪರ್ಯಾಯವಾಗಿ ಬಟ್ಟೆಯಿಂದ ಮಾಡಿರುವ ಬ್ಯಾಗ್‌ಗಳನ್ನು ಕಡಿಮೆ ಮೊತ್ತದಲ್ಲಿ ಅಥವಾ ಉಚಿತವಾಗಿ ನೀಡುವ ಪ್ರಸ್ತಾವನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ದಂಡದ ಪ್ರಮಾಣ ದುಪಟ್ಟು :  ಕಸ ವಿಂಗಡಣೆ ಮಾಡದ ಸಾರ್ವಜನಿಕರ ಮೇಲೂ ದುಪ್ಪಟ್ಟು ದಂಡ ವಿಧಿಸುವ ಪ್ರಸ್ತಾವನೆಯೂ ಪಾಲಿಕೆಯ ಮುಂದಿದೆ. “ಬಿಬಿಎಂಪಿ ಕಸ ನಿರ್ವಹಣೆ ಬೈಲಾ- 2019′ ಕರಡು ರೂಪಿಸಿ ಪ್ರಕಟಿಸಲಾಗಿದ್ದು, ಅಂತಿಮ ಬೈಲಾದಲ್ಲಿ ಈಗ ಇರುವ ದಂಡಕ್ಕಿಂತ ದುಪ್ಪಟ್ಟು ದಂಡ ವಿಧಿಸುವ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಷಯ ಕೌನ್ಸಿಲ್‌ ನಲ್ಲಿ ಚರ್ಚೆಗೆ ಬರಲಿದೆ ಎಂದು ಬಿಬಿ ಎಂಪಿ ವಿಶೇಷ (ಘನತ್ಯಾಜ್ಯ ನಿರ್ವಹಣೆ) ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

Advertisement

ಯಾವ ವಲಯದಲ್ಲಿ ಹೆಚ್ಚು ದಂಡ? :  ಕಸ ವಿಂಗಡಣೆ ಲೋಪವೆಸಗುವ ಉದ್ದಿಮೆಗಳಲ್ಲಿ ಬೆಂಗಳೂರು ಪೂರ್ವ ವಲಯ ಮುಂಚೂಣಿಯಲ್ಲಿದೆ. ಅದರಲ್ಲೂ ವಾಣಿಜ್ಯ ಉದ್ದಿಮೆಗಳಲ್ಲಿ ಲೋಪ ಹೆಚ್ಚು ಕಂಡುಬಂದಿದೆ. ಈ ಭಾಗದ ಉದ್ದಿಮೆಗಳಿಂದ ಪಾಲಿಕೆ 18.2 ಲಕ್ಷ ರೂ. ದಂಡ ಸಂಗ್ರಹಿಸಿದೆ. ಇನ್ನು ನಿಷೇಧಿತ ಪ್ಲಾಸ್ಟಿಕ್‌ ಬಳಕೆಯಲ್ಲಿ ಬೊಮ್ಮನಹಳ್ಳಿ ವಲಯ ಮುಂಚೂಣಿಯಲ್ಲಿದ್ದು, ನಿಷೇಧಿತ ಪ್ಲಾಸ್ಟಿಕ್‌ ಬಳಸಿದ ಉದ್ದಿಮೆಗಳ ಮೇಲೆ ಕಳೆದ ವರ್ಷ ಪಾಲಿಕೆ ಆರೋಗ್ಯಾಧಿಕಾರಿಗಳು 64. 84 ಲಕ್ಷ ರೂ. ದಂಡ ವಿಧಿಸಿದ್ದಾರೆ. ವಲಯವಾರು ನೋಟಿಸ್‌ ನೋಡಿದರೆ, ಪಶ್ಚಿಮ ವಲಯದ ಉದ್ದಿಮೆಗಳಿಗೆ 19,755 ಉದ್ದಿಮೆಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಗೊಂದಲಕ್ಕೆ ತೆರೆ ಎಳೆಯಲು ಪಾಲಿಕೆ ಚಿಂತನೆ: ನಗರದಲ್ಲಿ ಸಗಟು ಉತ್ಪಾದಕರು (ಹೆಚ್ಚು ಕಸ ಉತ್ಪಾದಿಸುವವರು)ಅವರು ಉತ್ಪಾದಿಸುವ ಕಸವನ್ನು ಅವರೇ ವಿಲೇವಾರಿ ಮಾಡಬೇಕು ಎಂಬ ನಿಯಮ ಇದೆ. ಈ ನಿಯಮ ತಿದ್ದುಪಡಿಗೆ ಸಿದ್ಧವಾಗಿದೆ. ರಾ ಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರಂತರ ವಾಗಿ ಪಾಲಿಕೆಗೆ ಚಾಟಿ ಬೀಸಿದ ಪರಿಣಾಮ ಪಾಲಿಕೆ ಎಚ್ಚೆತ್ತುಕೊಂಡಿದೆ. ಈಗ 10 ಕೆ.ಜಿ.ವರೆಗೆ ಉತ್ಪತ್ತಿಯಾಗುವ ಕಸವನ್ನು ಮಾತ್ರ ಸಂಗ್ರಹ ಮಾ ಡುತ್ತಿದೆ.ಇದಕ್ಕಿಂತ ಹೆಚ್ಚು ಕಸ ಉತ್ಪಾದನೆ ಮಾಡುವವರುತಾವೇ ಪ್ರತ್ಯೇಕವಾಗಿ ವಿಲೇವಾರಿ ಮಾಡುತ್ತಿದ್ದರು. ಸಗಟು ಉತ್ಪಾದಕರು ಎಲ್ಲೆಂದರಲ್ಲಿ ಎಸೆಯು ತ್ತಿರುವಬಗ್ಗೆ, ಬಿಬಿಎಂಪಿ ವಾಹನಗಳಿಗೇ ಕಸ ಸಾಗಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದವು. ಎನ್‌ಜಿಟಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ -2016ರ ನಿಯಮ ಉಲ್ಲಂ ಘನೆ ಮಾಡುತ್ತಿದ್ದು ಸರಿ ಪಡಿಸಿಕೊಳ್ಳಲು ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next