Advertisement

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

03:17 PM Jul 27, 2024 | Team Udayavani |

ತೆಕ್ಕಟ್ಟೆ: ಹೊಂಬಾಡಿ ಮಂಡಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ (SLRM) ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಹೊಂಬಾಡಿ ಮಂಡಾಡಿ, ಕಾಳಾವರ, ಕೊರ್ಗಿ,ಗೋಪಾಡಿ, ಬೀಜಾಡಿ ಸೇರಿದಂತೆ ಒಟ್ಟು 5 ಗ್ರಾ.ಪಂ.ಗಳ ಘನ ತ್ಯಾಜ್ಯವನ್ನು ಈ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು,ಪ್ರಸ್ತುತ ತ್ಯಾಜ್ಯಗಳ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗ್ರಾ.ಪಂ.ಗೆ ಅದರ ಸಮರ್ಪಕ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ ಗ್ರಾ.ಪಂ. ಹಿಂದೂ ರುದ್ರಭೂಮಿಗಾಗಿ ಕಾದಿರಿಸಿದ ಸ್ಥಳದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಘನ ತ್ಯಾಜ್ಯ ಘಟಕ (SLRM) ನಿರ್ಮಾಣಗೊಂಡು ಕಾರ್ಯನಿರ್ವಹಿಸುತ್ತಿದೆ. ಸುಮಾರು ನಾಲ್ಕು ಗ್ರಾ.ಪಂ. ಗಳ ನಡುವೆ ಐದು ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಂಡು ಟಿಪ್‌ ಎನ್ನುವ ಖಾಸಗಿ ಎನ್‌ಜಿಒ ಸಂಸ್ಥೆಯ ಸಹಭಾಗಿತ್ವದೊಂದಿಗೆ ಸುಮಾರು 11 ಮಂದಿ ಕಾರ್ಮಿಕರು ಸ್ವತ್ಛತ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

Advertisement

ವಿಲೇವಾರಿಯಾಗದೆ ಉಳಿದ ತ್ಯಾಜ್ಯ ರಾಶಿ
ಐದು ಗ್ರಾ.ಪಂ. ವ್ಯಾಪ್ತಿಯಿಂದ ಬರುವ ತ್ಯಾಜ್ಯಗಳು 5 ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ 11 ಮಂದಿ ಕಾರ್ಮಿಕರು ನಿರಂತರವಾಗಿ ಕಸ ವಿಂಗಡಿಸಿದ ಸುಮಾರು ಟನ್‌ಗಟ್ಟಲೇ ಪ್ಲಾಸ್ಟಿಕ್‌ ತ್ಯಾಜ್ಯಗಳು ಕಿರಿದಾದ ಜಾಗದಲ್ಲೇ ಶೇಖರಿಸಲಾಗಿದ್ದು, ಅದರ ಸಮರ್ಪಕವಾದ ವಿಲೇವಾರಿಯಾಗದೆ ಮಳೆಗಾಲದ ಸಂದರ್ಭ
ಸುತ್ತಮುತ್ತಲಿನವರು ತೊಂದರೆ ಅನುಭವಿಸು ವಂತಾಗಿದೆ.

ಅತ್ಯಧಿಕ ತ್ಯಾಜ್ಯ
ಮೊದಲು ನಮ್ಮ ಒಂದೇ ಗ್ರಾಮದ ಕಸ ವಿಲೇವಾರಿ ಅಷ್ಟೊಂದು ಕಷ್ಟವಾಗುತ್ತಿರಲಿಲ್ಲ. ಆದರೆ ಈಗ 5 ಗ್ರಾಮ ಪಂಚಾಯತ್‌ಗಳಿಂದ ಘಟಕದ ಸಾಮರ್ಥ್ಯಕ್ಕಿಂತಲೂ ಅತ್ಯಧಿಕ ತ್ಯಾಜ್ಯಗಳು ಬಂದು ಬೀಳುವುದರಿಂದ ಇಲ್ಲಿನ ಕಾರ್ಮಿಕರಿಗೂ ಸಹ ಕಸ ವಿಲೇವಾರಿ ಕಷ್ಟಸಾಧ್ಯವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ ಎಂದು ನರಸಿಂಹ ಆಗ್ರಹಿಸಿದ್ದಾರೆ.

ತುರ್ತು ಸಭೆ ಕರೆಯಲು ನಿರ್ಣಯ
ಕಳೆದ ಐದು ವರ್ಷಗಳ ಹಿಂದೆ ಘಟಕ ಸ್ಥಾಪಿಸುವಾಗ ಕಾಳಾವರ ಗ್ರಾ.ಪಂ. ವ್ಯಾಪ್ತಿಯ ಸುಮಾರು 5 ಎಕ್ರೆ ವಿಸ್ತೀರ್ಣದಲ್ಲಿ ಎಂಆರ್‌ಎಫ್‌ ಘಟಕ ಸ್ಥಾಪನೆಗೆ ಯೋಜನೆಗಳು ಸಿದ್ಧವಾಗಿದೆ ಎನ್ನುವ ಕಾರಣಕ್ಕೆ ತಾತ್ಕಾಲಿಕ ನೆಲೆಯಆಧಾರದ ಮೇಲೆ ಈ 4 ಗ್ರಾ.ಪಂ.ಗಳನ್ನು ಒಂದಾಗಿಸಿಕೊಂಡಿದ್ದೇವೆ. ಆದರೆ ಇದುವರೆಗೆ ಎಂಆರ್‌ಎಫ್‌ ಘಟಕಕ್ಕಾಗಿ ಕಾದಿರಿಸಿದ ಸ್ಥಳಗಳ ಸಮಸ್ಯೆಗಳು ಬಗೆಹರಿಯದೇ ಇರುವ ಪರಿಣಾಮ ಇಲ್ಲಿ ಒತ್ತಡ ಹೆಚ್ಚಾಗಿದೆ. ಪ್ರಸ್ತುತ ಟಿಪ್‌ ಎನ್‌ಜಿಒ ಎನ್ನುವ ಖಾಸಗಿ ಸಂಸ್ಥೆಯೊಂದು ನಿರ್ವಹಣ ಜವಾಬ್ದಾರಿಯನ್ನು ಹೊತ್ತಿದ್ದು, ಇಲ್ಲಿನ ಯಾವುದೇ ಬೆಳವಣಿಗೆಗಳ ಕುರಿತು ಗ್ರಾ.ಪಂ.ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಆದ್ದರಿಂದ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ನಿಟ್ಟಿನಿಂದ ಸಂಬಂಧಪಟ್ಟವರಿಗೆ ಪತ್ರ ಬರೆದು ತುರ್ತು ಸಭೆ ಕರೆಯಲು ನಿರ್ಣಯಿಸಲಾಗಿದೆ.
– ಕೆ.ಗಣೇಶ್‌ ಶೆಟ್ಟಿ ಹುಣ್ಸೆಮಕ್ಕಿ ಸದಸ್ಯರು, ಗ್ರಾ.ಪಂ. ಹೊಂಬಾಡಿ ಮಂಡಾಡಿ

ಆಯಾ ಗ್ರಾ.ಪಂ.ಗಳೇ ವಿಲೇವಾರಿ ಮಾಡಿಕೊಳ್ಳಲಿ
ಐದು ಗ್ರಾ.ಪಂ.ಗಳಿಂದ ಒಂದೇ ವಾಹನದಲ್ಲಿ ದಿನಕ್ಕೆ ನಾಲ್ಕೈದು ಟ್ರಿಪ್‌ ಕಸಗಳ ರಾಶಿ ಬರುತ್ತಿದ್ದು, ಅದಕ್ಕೆ ಸರಿಯಾಗಿ ಕಾರ್ಮಿಕರ ಸಂಖ್ಯೆ ಹೆಚ್ಚು ಮಾಡಲು ಸಮರ್ಪಕವಾದ ಜಾಗದ ಕೊರತೆಯಿದೆ. ಬಂದ ಕಸ ಹಾಗೂ ವಿಂಗಡಣೆ
ಕಸಗಳನ್ನು ಅಲ್ಲಿಯೇ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಟಿಪ್‌ ಎನ್ನುವ ಎನ್‌ಜಿಒ ಸಂಸ್ಥೆಯು ಕಸ ವಿಲೇವಾರಿ ಮಾಡುವ ನಿಟ್ಟಿನಿಂದ ಕೆಲವೊಂದು ಪಂಚಾಯತ್‌ನ ಸಹಯೋಗದೊಂದಿಗೆ ಒಂದಷ್ಟು ಮಂದಿಗೆ ಉದ್ಯೋಗವನ್ನು ಸೃಷ್ಟಿಸಿ, ಸವಲತ್ತು ಒದಗಿಸುತ್ತಿದೆ. ಪ್ರಸ್ತುತ ಕಸ ವಿಲೇವಾರಿ ಕಾರ್ಯವನ್ನು ಸ್ಥಗಿತಗೊಳಿಸುತ್ತೇವೆ ಎಂದು ಟಿಪ್‌ ಎನ್‌ಜಿಒ ಕಡೆಯಿಂದ ಗ್ರಾ.ಪಂ.ಗೆ ಈಗಾಗಲೇ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಆಯಾ ಗ್ರಾ.ಪಂ.ಗಳು ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಿ.
– ವಿಜಯಲಕ್ಷ್ಮೀ, ಮುಖ್ಯ ಮೇಲ್ವಿಚಾರಕಿ, ಎಸ್‌ಎಲ್‌ಆರ್‌ಎಂ ಘಟಕ

Advertisement

ಕಾರ್ಮಿಕರಿಗೂ ಬೇಕಿದೆ ಆರೋಗ್ಯ ಸುರಕ್ಷತೆ

ಸುಮಾರು 11 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗ್ರಾಮೀಣ ಭಾಗದ ಪುರುಷ ಹಾಗೂ ಮಹಿಳಾ ಕಾರ್ಮಿಕರು ಆರೋಗ್ಯ ಸುರಕ್ಷತೆಯನ್ನು ಲೆಕ್ಕಿಸದೇ, ಮುಖ ಗವಸು ಹಾಗೂ ಕೈ ಗವಸು ಧರಿಸದೇ ಕಸ ವಿಂಗಡಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಕಂಡು ಬಂದಿದೆ.

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next