Advertisement

ಬೇಕಾಬಿಟ್ಟಿ ಕಸ ವಿಲೇವಾರಿ

04:30 PM Dec 12, 2019 | Team Udayavani |

ಚನ್ನಪಟ್ಟಣ: ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೋಡಂಬಳ್ಳಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿ ಸೂಕ್ತವಾಗಿ ವಿಲೇವಾರಿ ಮಾಡದೇ, ಪಂಚಾಯಿತಿ ಸಮೀಪದಲ್ಲಿಯೇ ಕಸದ ಗುಡ್ಡೆಗೆ ಬೆಂಕಿ ಹಾಕುತ್ತಿದೆ!

Advertisement

ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಪ್ರಮುಖ ವಾಣಿಜ್ಯ ಕೇಂದ್ರವಾದ ಚನ್ನಪಟ್ಟಣಹಲಗೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿಯಲ್ಲಿ ಕಸವನ್ನು ಗುಡ್ಡೆ ಹಾಕುತ್ತಿದೆ. ಇದನ್ನು ಈವರೆಗೆ ಬೇಕಾಬಿಟ್ಟಿ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಈಗ ಕಸದ ಗುಡ್ಡೆಗೆ ನೇರವಾಗಿ ಬೆಂಕಿ ಹಾಕುವ ಮೂಲಕ ತ್ಯಾಜ್ಯವನ್ನು ಹೊರ ಸಾಗಿಸದೆ, ಅಲ್ಲಿಯೇ ಸುಟ್ಟು ಹಾಕಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ಕೆರೆ ಏರಿಯ ಮೇಲೆ ಕಸ: ಈಗಾಗಲೇ ಇಲ್ಲಿ ಬೀಳುವ ಸುಮಾರು ಒಂದು ಟನ್‌ ನಷ್ಟು ತ್ಯಾಜ್ಯವನ್ನು ಬೇರೆಡೆ ಸಾಗಿಸಿ, ವಿಲೇವಾರಿ ಮಾಡಲು ಸಾವಿರಾರು ರೂ.ಗಳನ್ನು ಪಂಚಾಯಿತಿ ವತಿಯಿಂದ ವ್ಯಯಿಸಲಾಗುತ್ತಿದೆ. ಆದರೆ ಇದು ಪಂಚಾಯಿತಿ ಕಡತದಲ್ಲಿನ ಖರ್ಚು ಮಾಡುವ ಲೆಕ್ಕಕ್ಕೆ ಸೀಮಿತವಾಗಿದ್ದು, ಕೆಲವೊಮ್ಮೆ ತ್ಯಾಜ್ಯವನ್ನು ಕೋಡಂಬಳ್ಳಿ ಕೆರೆ ಏರಿಯ ಮೇಲೆ ರಾತ್ರಿ ವೇಳೆ ಸುರಿಯಲಾಗುತ್ತಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

ಕಠಿಣ ಕ್ರಮವಿಲ್ಲ: ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗ್ರಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆರೆಯ ಏರಿಯ ಮೇಲೆ ಅಂಗಡಿ ಮಾಲೀಕರು ಕಸವನ್ನು ನೇರವಾಗಿ ಹಾಕುತ್ತಾರೆ ಎಂದು ಸಬೂಬು ಹೇಳುತ್ತಾರೆ. ಆದರೆ ಕಸವನ್ನು ಕೆರೆಯ ಏರಿಯ ಮೇಲೆ ಹಾಕುವ ಅಂಗಡಿ ಮಾಲೀಕರ ಮೇಲೆ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎನ್ನುವ ದೂರು ಕೂಡ ವ್ಯಾಪಕವಾಗಿದೆ.

ಕಳೆದ ಹಲವಾರು ವರ್ಷಗಳಿಂದ ಕೆರೆ ಏರಿಯ ಮೇಲೆ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದ ಕೆರೆಯ ಅಂಗಳ ಮತ್ತು ಅಸುಪಾಸಿನ ಜಮೀನುಗಳು ಕಲುಷಿತ ವಾಗುತ್ತಿದೆ. ಅಂಗಡಿ ಬೀದಿಯಲ್ಲಿ ಹಮಾ ಲಿಗಳು ಸ್ವಚ್ಚಗೊಳಿಸಿ, ಕಸವನ್ನು ಪಂಚಾಯಿತಿ ಅಸುಪಾಸಿನಲ್ಲಿ ಗುಡ್ಡೆ ಹಾಕುತ್ತಿದ್ದಾರೆ. ಕಸದ ಗುಡ್ಡೆ ವಾರಗಟ್ಟಲೇ ಇಲ್ಲಿಂದ ವಿಲೇ ಆಗದೇ ಕೊಳೆಯುವುದರಿಂದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ.

Advertisement

ಇಬ್ಬರು ಪಿಡಿಓಗಳು!: ಸದ್ಯ ಪಂಚಾಯಿತಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳ ಅವಧಿಗೆ ರಜೆ ಮೇಲೆ ತೆರಳಿದ್ದ ಇಲ್ಲಿನ ಪಿಡಿಓ ಶಿವಲಿಂಗಯ್ಯ ಮತ್ತೆ ಕೆಲಸಕ್ಕೆ ಹಾಜ ರಾಗಿದ್ದಾರೆ. ಇಲ್ಲಿ ಪ್ರಭಾರ ವಹಿಸಿಕೊಂಡಿದ್ದ ಹೊಂಗನೂರು ಪಂಚಾಯಿತಿ ಪಿಡಿಓ ಭಾಗ್ಯ ಲಕ್ಷ್ಮಮ್ಮ ಕೂಡ ರಜೆ ಮೇಲೆ ತೆರಳಿದ್ದ ಶಿವ ಲಿಂಗಯ್ಯಗೆ ಅಧಿಕಾರ ಬಿಟ್ಟು ಕೊಟ್ಟಿಲ್ಲ! ಇಬ್ಬರು ಈ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ! ಆದರೆ, ಇವರು ಪಂಚಾಯಿತಿ ಕಚೇರಿಯಲ್ಲಿ ಜನತೆಗೆ ಕಾಣ ಸಿಗುವುದೇ ಅಪರೂಪವಾಗಿದೆ.

ಅಪರೂಪಕ್ಕೊಮ್ಮೆ ಪಂಚಾಯಿತಿಗೆ ಬರುವ ಪಿಡಿಓ ಶಿವಲಿಂಗಯ್ಯ ಅವರು ಇನ್ನು ತಾವು ಭಾಗ್ಯಲಕ್ಷ್ಮಮ್ಮ ಅವರಿಂದ ಅಧಿಕಾರವನ್ನು ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಉತ್ತರಿಸುತ್ತಾರೆ. ಯಾವುದಾದರೂ ಚೆಕ್‌ ಅಥವಾ ದಾಖಲೆಗಳಿಗೆ ಸಹಿ ಬೇಕೆಂದರೆ ಜನತೆ ಭಾಗ್ಯಲಕ್ಷ್ಮಮ್ಮ ಕರ್ತವ್ಯ ನಿರ್ವಹಿಸುವ ಹೊಂಗನೂರು ಗಾಪಂ ಅಥವಾ ಚನ್ನಪಟ್ಟಣದಲ್ಲಿ ಅವರು ಹೇಳಿದ ಸ್ಥಳಕ್ಕೆ ಹೋಗಿ ಸಹಿ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಇನ್ನಾದರೂ ಪಂಚಾಯಿತಿ ಆಡಳಿತ ಹಾಗೂ ಹಿರಿಯ ಅಧಿಕಾರಿಗಳು ಇತ್ತ ಗಮನ ನೀಡಬೇಕಿದೆ.

 

-ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next