Advertisement

ಇನ್ನು ಹಳ್ಳಿ ಮನೆಯಿಂದಲೂ ಕಸ ಸಂಗ್ರಹ

01:14 PM Nov 30, 2019 | Suhan S |

ಬಾಗಲಕೋಟೆ: ನಗರ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಿ, ಬಳಿಕ ಅದನ್ನು ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಸುವ ಯೋಜನೆ, ಇನ್ನು ಗ್ರಾಮ ಮಟ್ಟದಲ್ಲೂ ನಡೆಯಲಿದೆ. ಇದಕ್ಕಾಗಿ ಬಹುಗ್ರಾಮ ಯೋಜನೆಯಡಿ ಈ ಕಾರ್ಯ ಕೈಗೊಳ್ಳಲು ಜಿಪಂ ಮುಂದಾಗಿದೆ.

Advertisement

ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆ ಕಸವನ್ನು ಘನ ತ್ಯಾಜ್ಯ ನಿರ್ವಹಣೆ ಕೇಂದ್ರಕ್ಕೆ ತಂದು, ಹಸಿ ಮತ್ತು ಒಣ ಕಸ ಬೇರ್ಪಡಿಸಲಾಗುತ್ತದೆ. ಹಸಿ-ಒಣ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ಕಾರ್ಯವೂ ನಡೆಯುತ್ತಿದೆ. ಈ ಕಾರ್ಯದಲ್ಲಿ ಬಾಗಲಕೋಟೆಯ ನಗರಸಭೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಇತರೆ ನಗರಸಭೆಗಳಿಗೆ ಮಾದರಿಯಾಗಿದೆ. ಅಂತಹದ್ದೇ ಮಾದರಿ ಯೋಜನೆಯನ್ನು ಗ್ರಾಮೀಣ ಭಾಗದಲ್ಲೂ ಕೈಗೊಳ್ಳಲು ಈಗ ಜಿಪಂ ಮುಂದಾಗಿದೆ. ಇದಕ್ಕಾಗಿ ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಘನತ್ಯಾಜ್ಯ ನಿರ್ವಹಣ ಘಟಕ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ.

ಐದು ಗ್ರಾಪಂ ಆಯ್ಕೆ: ಕೇಂದ್ರ ಸರ್ಕಾರದ ಎಸ್‌ಡಬ್ಲ್ಯೂಎಂ (ಘನ ತ್ಯಾಜ್ಯ ನಿರ್ವಹಣೆ) ಯೋಜನೆಯಡಿ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಈ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಲೋಕಾಪುರ, ದಾದನಹಟ್ಟಿ, ಹೆಬ್ಟಾಳ, ಬಂಟನೂರ ಮತ್ತು ಲಕ್ಷಾನಹಟ್ಟಿ ಗ್ರಾಪಂಗಳನ್ನು ಈ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಗ್ರಾಪಂವೊಂದಕ್ಕೆ 20 ಲಕ್ಷ ರೂ. ಅನುದಾನ ಬರಲಿದ್ದು, ಅದನ್ನು ಗ್ರಾಪಂಗೆ ಒಂದು ಸ್ಥಾಪಿಸಲು ಅನುದಾನದ ಕೊರತೆ ಎದುರಾಗಲಿದೆ. ಹೀಗಾಗಿ ಬಹುಗ್ರಾಮ ಯೋಜನೆಯಡಿ ಅವುಗಳನ್ನು ನಿರ್ವಹಣೆ ಮಾಡಲು ಜಿಪಂ ಯೋಜನೆ ರೂಪಿಸಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆದಿದ್ದು, ಹೊಸ ವರ್ಷದಿಂದ ಈ ಐದು ಗ್ರಾಮಗಳಲ್ಲಿ ಮನೆ-ಮನೆಯ ಕಸ ಸಂಗ್ರಹ ಆರಂಭಗೊಳ್ಳು ಸಾಧ್ಯತೆ ಇದೆ.

ಲೋಕಾಪುರ ಅತಿದೊಡ್ಡ ಗ್ರಾಪಂ: ಜಿಲ್ಲೆಯ 198 ಗ್ರಾಪಂಗಳಲ್ಲಿ ಲೋಕಾಪುರ ಅತಿ ಹೆಚ್ಚು ಆದಾಯ ಇರುವ ಹಾಗೂ ದೊಡ್ಡ ಪಂಚಾಯಿತಿ ಎಂಬ ಖ್ಯಾತಿ ಪಡೆದಿದೆ. ಪಟ್ಟಣ ಪಂಚಾಯಿತಿ ಆಗುವ ಎಲ್ಲ ಅರ್ಹತೆ ಇದ್ದರೂ, ಕೆಲವು ಒತ್ತಡ-ಸಮಸ್ಯೆಗಳಿಂದ ಇನ್ನೂ ಗ್ರಾಪಂ ಆಗಿಯೇ ಮುಂದುವರಿದಿದೆ. ಇಲ್ಲಿ 13ರಿಂದ 15 ಸಾವಿರ ಜನಸಂಖ್ಯೆ ಹೊಂದಿದ್ದು, ಎರಡು ರಾಜ್ಯ ಹೆದ್ದಾರಿ ಹಾದು ಹೋಗಿದೆ.  ಅಲ್ಲದೇ ಪಕ್ಕದ ಬಂಟನೂರ ಗ್ರಾಪಂ ವ್ಯಾಪ್ತಿಯಲ್ಲಿ ಚಿಕ್ಕೂರ, ಬದನೂರ, ಜುನ್ನೂರ ಸೇರಿ ನಾಲ್ಕು ಗ್ರಾಮಗಳಿದ್ದು, 7500 ಜನಸಂಖ್ಯೆ ಇದೆ. ದಾದನಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ದಾದನಟ್ಟಿ, ಹೊಸಕೋಟಿ, ಮಲ್ಲಾಪುರ, ಕನಸಗೇರಿ ಗ್ರಾಮ ಒಳಗೊಂಡಿವೆ. ಲಕ್ಷಾನಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ವರ್ಚಗಲ್‌, ಚೌಡಾಪುರ, ಜಾಲಿಕಟ್ಟಿ ಬಿಕೆ, ಜಾಲಿಕಟ್ಟಿ ಕೆ.ಡಿ, ಪಾಲ್ಕಿಮಾನ್ಯ, ನಾಗನಾಪುರ, ಬ್ಯಾಡರ ಅರಳಿಕಟ್ಟಿ ಗ್ರಾಮ ಒಳಗೊಂಡಿದ್ದು, 9 ಸಾವಿರ ಜನಸಂಖ್ಯೆ ಹೊಂದಿದೆ. ಹೆಬ್ಟಾಳ ಗ್ರಾಪಂ ವ್ಯಾಪ್ತಿಯಲ್ಲಿ 6892 ಜನಸಂಖ್ಯೆ ಇದೆ.

ಏನು ಲಾಭ?: ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಯಿಂದ ಇಡೀ ಗ್ರಾಮವನ್ನು ಸ್ವಚ್ಛವಾಗಿಡಬಹುದು. ಎಸ್‌ಡಬ್ಲ್ಯೂಎಂ ಯೋಜನೆಯಡಿ ಪ್ರತಿ ಪಂಚಾಯಿತಿಗೆ 20 ಲಕ್ಷ ಅನುದಾನ ದೊರೆಯಲಿದ್ದು, ಆ ಅನುದಾನ ಬಳಕೆಗೆ ಸರ್ಕಾರನಿಯಮ ರೂಪಿಸಿದೆ. 5 ಲಕ್ಷ ವೆಚ್ಚದಲ್ಲಿ ಗ್ರಾಪಂಗೆ ಒಂದು ಕಸ ಸಂಗ್ರಹ ವಾಹನ, ಶೆಡ್‌ ನಿರ್ಮಾಣ, ಬ್ಯಾಟರಿ ಚಾಲಿತ ಟ್ರೈ ಸಕಲ್‌, ಕಸ ವಿಂಗಡಣೆಗೆ ಸಿಬ್ಬಂದಿ ನೇಮಕ ಒಳಗೊಂಡಿದೆ. ಲೋಕಾಪುರ ಸಹಿತ ಬಹುಗ್ರಾಮಘಟನ ತ್ಯಾಜ್ಯ ನಿರ್ವಹಣೆ ಯೋಜನೆಯಡಿ ಐದು ಗ್ರಾಪಂ ಆಯ್ಕೆ ಮಾಡಿಕೊಂಡಿದ್ದು, 1 ಕೋಟಿ ಅನುದಾನ ಲಭ್ಯವಾಗಲಿದೆ.

Advertisement

ಇದರಡಿ ಒಂದೇ ಕಡೆಶೆಡ್‌ ನಿರ್ಮಿಸಿ, ಎಲ್ಲ ಗ್ರಾಮಗಳ ಕಸವನ್ನು ಒಂದೆಡೆ ಸಂಗ್ರಹಿಸಿ, ಅದರಿಂದ ಗೊಬ್ಬರ ತಯಾರಿಸಲು ಅನುಕೂಲವಾಗಲಿದೆ. ಒಟ್ಟಾರೆ, ನಗರ ಪ್ರದೇಶದಂತೆ ಗ್ರಾಮೀಣ ಭಾಗದಲ್ಲೂ ಮನೆ-ಮನೆಯ ಕಸ ಸಂಗ್ರಹ ಯೋಜನೆಗೆ ಜಿಪಂ ಯೋಜನೆ ರೂಪಿಸಿದ್ದು, ಇದು ಲೋಕಾಪುರದಲ್ಲಿ ಮೊದಲು ಆರಂಭಗೊಳ್ಳಲಿದೆ.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next