Advertisement

ಭಾರತೀಯ ಕ್ರಿಕೆಟನ್ನು ಮೇಲೆತ್ತಿದ ಗಂಗೂಲಿ

10:08 PM Oct 30, 2019 | mahesh |

ದೇಶ ಕಂಡ ಅಪ್ರತಿಮ ಕ್ರಿಕೆಟಿಗ, ನಾಯಕ ಸೌರವ್‌ ಗಂಗೂಲಿ. ಒಂದು ಕಾಲದಲ್ಲಿ ಫಿಕ್ಸಿಂಗ್‌ನಂತಹ ಬಿರುಗಾಳಿ ಭಾರತಕ್ಕೆ ಅಪ್ಪಳಿಸಿದ್ದಾಗ ಕೆಚ್ಚೆದೆಯಿಂದ ಗಂಗೂಲಿ ತಂಡವನ್ನು ಮುನ್ನಡೆಸಿದ್ದರು. ಸದ್ಯ ಬಿಸಿಸಿಐ ಸಂಕಷ್ಟದಲ್ಲಿದ್ದು, ಮೇಲೆತ್ತುವ ಹೊಣೆಗಾರಿಕೆ ಗಂಗೂಲಿ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಗಂಗೂಲಿ ಕುರಿತ ಕೆಲವು ಕುತೂಹಲಕಾರಿ ಸಂಗತಿ ಇಲ್ಲಿದೆ ನೋಡಿ.

Advertisement

ಫಿಕ್ಸಿಂಗ್‌ ಬಿರುಗಾಳಿಗೆ ಸಿಕ್ಕಿ ಭಾರತ ಕ್ರಿಕೆಟ್‌ ಭವಿಷ್ಯ ತೂಗುಯ್ನಾಲೆಯಲ್ಲಿದ್ದಾಗ ಗಂಗೂಲಿ ತಂಡದ ನಾಯಕತ್ವ ವಹಿಸಿ ಹೊಸತನ ಕೊಟ್ಟ ಯಶಸ್ವಿ ನಾಯಕ. ತನ್ನಂತೆ ಇತರರೂ ಬೆಳೆಯಬೇಕು ಎನ್ನುವುದು ಗಂಗೂಲಿಯ ಬಂಗಾರದ ಗುಣ. ವೀರೇಂದ್ರ ಸೆಹವಾಗ್‌, ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಜಹೀರ್‌ ಖಾನ್‌ರಂತಹ ಖ್ಯಾತ ಆಟಗಾರರನ್ನು ಗಂಗೂಲಿ ಬೆಳೆಸಿದ್ದರು. ಸಮಕಾಲೀನ ಆಟಗಾರರಾಗಿದ್ದ ವಿವಿಎಸ್‌ ಲಕ್ಷ್ಮಣ್‌, ರಾಹುಲ್‌ ದ್ರಾವಿಡ್‌ರಂತಹ ಅಪ್ರತಿಮರಿಗೆ ಕಷ್ಟದ ಸಮಯದಲ್ಲಿ ಅವಕಾಶಗಳನ್ನು ನೀಡುವ ಮೂಲಕ ದೊಡ್ಡತನ ಮೆರೆದಿದ್ದರು. ನಾಯಕರಾಗಿದ್ದಷ್ಟು ಕಾಲ ಭಾರತ ತಂಡದ ಏಳಿಗೆಗೆ ಶ್ರಮಿಸಿದ ಓರ್ವ ನಿಸ್ವಾರ್ಥಿ ಈ ಗಂಗೂಲಿ.

2000ರಲ್ಲಿ ಫಿಕ್ಸಿಂಗ್‌ ಭಾರತ ಕ್ರಿಕೆಟಿಗೆ ಮೊದಲ ಸಲ ಅಪ್ಪಳಿಸಿ ಭಾರೀ ಸದ್ದು ಮಾಡಿತ್ತು. ಮೊಹಮ್ಮದ್‌ ಅಜರುದ್ದೀನ್‌, ನಯನ್‌ ಮೊಂಗಿಯ, ಅಜಯ್‌ ಜಡೇಜ ತನಿಖೆ ಸುಳಿಗೆ ಸಿಲುಕಿದ್ದರು. ಈ ವೇಳೆ ನಾಯಕರಾಗಿದ್ದ ಸಚಿನ್‌ ತೆಂಡುಲ್ಕರ್‌ ಗಾಯದ ಕಾರಣದಿಂದ ಹಿಂದೆ ಸರಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ತಂಡದ ನಾಯಕತ್ವ ಗಂಗೂಲಿ ನಾಯಕತ್ವ ಹೆಗಲೇರಿತ್ತು. 2002ರ ನಾಟ್‌ವೆಸ್ಟ್‌ ಸರಣಿಯಲ್ಲಿ ಭಾರತದ ರೋಚಕ ಗೆಲುವಿನ ಅನಂತರ ಅಂಗಿ ಕಳಚಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಅಬ್ಬರದ ಅಲೆ ಸೃಷ್ಟಿಸಿದ್ದರು.

ಚಾಪೆಲ್‌ ಜತೆ ಕಿತ್ತಾಟ, ಏರಿಳಿತ!
ಒಂದು ಕಾಲದಲ್ಲಿ ಸೌರವ್‌ ಗಂಗೂಲಿಯ ಬ್ಯಾಟಿಂಗ್‌ ನೋಡಲೆಂದೇ ಅದೆಷ್ಟೋ ಅಭಿಮಾನಿಗಳು ಟೀವಿ ಮುಂದೆ ಕುಳಿತಿರುತ್ತಿದ್ದರು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಜತೆಗೆ ಸೌರವ್‌ ಗಂಗೂಲಿ ಕ್ರೀಸ್‌ಗೆ ಇಳಿದರೆಂದರೆ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಎಂದೇ ಅರ್ಥ. ಅದರಲ್ಲೂ ಗಂಗೂಲಿ ಕ್ರೀಸ್‌ ಬಿಟ್ಟು ಮುಂದೆ ಬಂದು ಸ್ಪಿನ್‌ ಎಸೆತಕ್ಕೆ ಸಿಕ್ಸರ್‌ ಬಾರಿಸುವ ಸ್ಟೈಲ್‌ ಕಣ್ಣಿಗೆ ಹಬ್ಬ.

2003ರಲ್ಲಿ ಭಾರತ ತಂಡವನ್ನು ಏಕದಿನ
ವಿಶ್ವಕಪ್‌ ಫೈನಲ್‌ ತನಕ ಕೊಂಡೊಯ್ದದ್ದು ಗಂಗೂಲಿ ನಾಯಕತ್ವದ ಸಾಮರ್ಥ್ಯಕ್ಕೊಂದು ಉತ್ತಮ ನಿದರ್ಶನ. ಮರು ವರ್ಷವೇ ಕಳಪೆ ಪ್ರದರ್ಶನದಿಂದ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡರು. 2006ರಲ್ಲಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಗಂಗೂಲಿ ಸ್ಥಾನ ಪಡೆದರು. ಆಗ ತಂಡದ ಮುಖ್ಯ ಕೋಚ್‌ ಗ್ರೆಗ್‌ ಚಾಪೆಲ್‌ ಜತೆ ಜಗಳ ಮಾಡಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇಷ್ಟೆಲ್ಲದರ ನಡುವೆಯೂ ಗಂಗೂಲಿ 2007ರ ಏಕದಿನ ವಿಶ್ವಕಪ್‌ ಕೂಟದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು ಎನ್ನುವುದು ವಿಶೇಷ.

Advertisement

ಪ್ರತಿಭಾವಂತರಿಗೆ ನ್ಯಾಯ
ಪ್ರತಿಭಾವಂತ ಕ್ರಿಕೆಟಿಗರಿಗೆ ಗಂಗೂಲಿ ಯಾವತ್ತೂ ಅನ್ಯಾಯ ಮಾಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ರಾಹುಲ್‌ ದ್ರಾವಿಡ್‌. ಹೌದು, ಕರ್ನಾಟಕದ ದಿಗ್ಗಜ ಬ್ಯಾಟ್ಸ್‌ಮನ್‌ ಒಂದು ಹಂತದಲ್ಲಿ ಫಾರ್ಮ್ ಕಳೆದುಕೊಂಡು ಮನೆ ಸೇರುವ ಆತಂಕದಲ್ಲಿದ್ದರು. ಇಂತಹ ಹಂತದಲ್ಲಿ ಗಂಗೂಲಿ ರಾಜಕೀಯ ಮಾಡಲಿಲ್ಲ. ಬದಲಿಗೆ ದ್ರಾವಿಡ್‌ ಕೈಗೆ ವಿಕೆಟ್‌ ಕೀಪರ್‌ ಗ್ಲೌಸ್‌ ನೀಡಿ ಅವರ ಭವಿಷ್ಯವನ್ನು ಕಾಪಾಡಿದ್ದರು. ಅದೇ ರೀತಿ ವೀರೇಂದ್ರ ಸೆಹವಾಗ್‌ ಓಪನರ್‌ ಆಗಿ ಭಡ್ತಿ ಪಡೆದದ್ದು ಕೂಡ ಗಂಗೂಲಿ ದೂರದೃಷ್ಟಿಗೊಂದು ನಿದರ್ಶನವಾಗಿತ್ತು. ಅಂದಿನ ಯುವ ಆಟಗಾರರಾದ ಯುವರಾಜ್‌, ಧೋನಿ, ಜಹೀರ್‌ ಮೇಲೆ ದಾದಾ ಅಪಾರ ವಿಶ್ವಾಸವಿರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next