Advertisement

ಚರ್ಚೆಗೆ ಸೀಮಿತ ಸಮಾನಾಂತರ ಜಲಾಶಯ

10:15 AM Feb 11, 2019 | Team Udayavani |

ಗಂಗಾವತಿ: ಈ ಭಾಗದ ಜೀವನಾಡಿಯಾದ ತುಂಗಭದ್ರಾ ಜಲಾಶಯ ನಿರ್ಮಿಸಿ ಆರು ದಶಗಳೇ ಕಳೆದಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೂಳು ತುಂಬಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ನೀರಾವರಿ ತಜ್ಞರು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement

ಸುಮಾರು 33 ಟಿಎಂಸಿ ಅಡಿಯಷ್ಟು ಹೂಳು ಸಂಗ್ರಹವಾಗಿರುವ ಕಾರಣ ಜಲಾಶಯದಲ್ಲಿ ಎರಡು ಬೆಳೆಗಾಗುವಷ್ಟು ನೀರನ್ನು ಸಂಗ್ರಹಿಸಲು ಆಗುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರಿನಲ್ಲಿ ಒಂದೇ ಬೆಳೆ ಬೆಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತುಂಗಭದ್ರಾ ಜಲಾಶಯ 123 ಟಿಎಂಸಿ ಅಡಿ ನೀರಿನ ಸಂಗ್ರಹ ಸಾರ್ಮಥ್ಯ ಹೊಂದಿದ್ದು, ಇದರಲ್ಲಿ ಹೂಳಿನ ಪರಿಣಾಮ ನಾಲ್ಕೈದು ವರ್ಷಗಳಿಂದ 97 ಟಿಎಂಸಿ ಅಡಿಗೂ ಕಡಿಮೆ ನೀರು ಸಂಗ್ರಹವಾಗುತ್ತಿದೆ. ಹೂಳನ್ನು ತೆಗೆಸುವ ಕುರಿತು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಅನೇಕ ಬಾರಿ ಭರವಸೆ ಮತ್ತು ಹೋರಾಟ ಮಾಡುವ ನೆಪದಲ್ಲಿ ಜನರಿಂದ ಮತಗಳನ್ನು ಪಡೆದಿವೆ. ಅಧಿಕಾರಕ್ಕೆ ಬಂದ ನಂತರ ಹೂಳಿನ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಮಂಡನೆ ಮಾಡಿದ ಬಜೆಟ್‌ಗಳಲ್ಲಿಯೂ ಹೂಳಿನ ಸಮಸ್ಯೆ ನಿವಾರಣೆಗೆ ಪ್ರಸ್ತಾಪಿಸಿಲ್ಲ. 2012ರಲ್ಲಿ ತಜ್ಞರ ಸಮಿತಿ ಹೂಳು ತೆಗೆಯುವುದು ಅವೈಜ್ಞಾನಿಕ. ಇದರ ಬದಲಿಗೆ ಮಳೆಗಾಲದಲ್ಲಿ ಪೋಲಾಗುವ ನೀರನ್ನು ಸಮಾನಾಂತರ ಜಲಾಶಯ ನಿರ್ಮಿಸುವ ಸಂಗ್ರಹಿಸಬೇಕು. ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆರೆ, ಕಟ್ಟೆಗಳನ್ನು ತುಂಬಿಸಿ ಬೇಸಿಗೆಯಲ್ಲಿ ಸಂಗ್ರಹಿಸಿದ ನೀರನ್ನು ಬಳಕೆ ಮಾಡಿಕೊಳ್ಳಲು ವರದಿಯಲ್ಲಿ ಸಲಹೆ ನೀಡಲಾಗಿದೆ. ಅದರಂತೆ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹತ್ತಿರ 37 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಲು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ವಿಸ್ತೃತ ವರದಿ ಸಿದ್ಧಪಡಿಸಲಾಗಿದೆ. ತುಂಗಭದ್ರಾ ಜಲಾಶಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಸಂಬಂಧಿಸಿರುವುದರಿಂದ ಮೂರು ರಾಜ್ಯಗಳ ಒಪ್ಪಿಗೆ ಅಗತ್ಯವಾಗಿದೆ. ರಾಜ್ಯ ಸರಕಾರ ಮೂರು ರಾಜ್ಯಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆದು ಸಮನಾಂತರ ಜಲಾಶಯ ನಿರ್ಮಾಣ ಕುರಿತು ಮಾತುಕತೆ ನಡೆಸಬೇಕು. ಕಳೆದ 10 ವರ್ಷಗಳಿಂದ ಸಮಾಂತರ ಜಲಾಶಯದ ಕುರಿತು ಮುಖಂಡರು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಕಾರ್ಯ ಮಾಡುತ್ತಿಲ್ಲ. ಪ್ರತಿ ಬಜೆಟ್ ಮಂಡನೆ ವೇಳೆ ಅಚ್ಚುಕಟ್ಟು ರೈತರು ಹೂಳು ಮತ್ತು ಸಮನಾಂತರ ಜಲಾಶಯ ನಿರ್ಮಾಣದ ಕುರಿತು ಆಶಾಭಾವ ಹೊಂದಿರುತ್ತಾರೆ. ನಂತರ ನಿರಾಸೆಯಾಗುತ್ತಾರೆ.

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹ ಕಡಿಮೆಯಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ತೊಂದರೆಯಾಗಿದೆ. ಪ್ರತಿ ಬೇಸಿಗೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಮುಖಂಡರು ಪ್ರತಿಭಟನೆ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹೂಳು ತೆಗೆಸುವ ಅಥವಾ ಸಮಾನಾಂತರ ಜಲಾಶಯ ನಿರ್ಮಿಸುವ ಇಚ್ಛಾಶಕ್ತಿ ಯಾರಿಗೂ ಇಲ್ಲ. ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಮೇಲ್ಭಾಗದ ಹಾಗೂ ಕೆಳಭಾಗದ ರೈತರು ಬಳಕೆ ಮಾಡಲು ಜಗಳವಾಡುವಂತೆ ರಾಜಕೀಯ ಮುಖಂಡರು ಷಡ್ಯಂತ್ರ ನಡೆಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನವಲಿ ಹತ್ತಿರ ನಿರ್ಮಿಸಲುದ್ದೇಶಿಸಿರುವ ಸಮಾನಾಂತರ ಜಲಾಶಯದ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರದ ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಇರುವುದು ಖಂಡನೀಯ.
•ಕನಕರೆಡ್ಡಿ ಕುಮಾರಪ್ಪ, ಸಿಂಗನಾಳ ರೈತ

Advertisement

Udayavani is now on Telegram. Click here to join our channel and stay updated with the latest news.

Next