ಗಂಗಾವತಿ:ಪತ್ನಿಯನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಪತಿಯ ವಿರುದ್ಧ ಮೃತಳ ಸಹೋದರ ನೀಡಿದ ದೂರಿನ ಅನ್ವಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತಾಲ್ಲೂಕಿನ ಜೀರಾಳ ಕಲ್ಗುಡಿ ಗ್ರಾಮದ ಶರಣಮ್ಮ ಅಲಿಯಾಸ್ ನಿರ್ಮಲ(30) ಇವಳನ್ನು ಅವರ ಪತಿ ಚಿದಾನಂದ (35) ಎಂಬ ಆರೋಪಿ ಹಾಗೂ ಅವರ ಕುಟುಂಬದವರು ಪದೇ ಪದೇ ಹೊಡಿ ಬಡಿ ಮಾಡಿ ವರದಕ್ಷಿಣೆ ತರುವಂತೆ ಹೇಳುತ್ತಿದ್ದರು.
ಮದುವೆ ಸಂದರ್ಭದಲ್ಲಿ ಬಂಗಾರ ಹಾಗೂ ವರದಕ್ಷಿಣೆ ಹಣ ನೀಡಲಾಗಿದ್ದರೂ ಕಿರುಕುಳ ನೀಡುತ್ತಿದ್ದರು. ಆದ್ದರಿಂದ ಶರಣಮ್ಮಳನ್ನು ತವರು ಮನೆ ಇರುವ ಇರಕಲ್ ಗಡಾ ಗ್ರಾಮಕ್ಕೆ ಕರೆದುಕೊಂಡು ಹೋಗಲಾಗಿತ್ತು. ಮೃತಳ ಪತಿ ಚಿದಾನಂದ ಸೆ.25 ರಂದು ಇರಕಲ್ ಗಡಾ ಗ್ರಾಮಕ್ಕೆ ಆಗಮಿಸಿ ಇನ್ನೊಮ್ಮೆ ಹೀಗೆ ಕಿರುಕುಳ ಕೊಡುವುದಿಲ್ಲ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಚೆನ್ನಾಗಿ ಬದುಕುವ ಭರವಸೆಯೊಂದಿಗೆ ಸಂಜೆ 5.30ಕ್ಕೆ ಬೈಕ್ ನಲ್ಲಿ ಜೀರಾಳ ಕಲ್ಗುಡಿ ಗ್ರಾಮಕ್ಕೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪತ್ನಿ ಶರಣಮ್ಮ ಅಲಿಯಾಸ್ ನಿರ್ಮಲ ಇವಳನ್ನು ಎಡದಂಡೆಯ ಕಾಲುವೆ ತಳ್ಳಿ ಕೊಲೆ ಮಾಡಿದ್ದು ಮೃತಳ ಶವ ಸಿಂಧನೂರು ತಾಲುಕಿನ ದುರ್ಗಾಕ್ಯಾಂಪ್ ಬಳಿ ದೊರಕಿದೆ. ಆದ್ದರಿಂದ ನಮ್ಮ ಸಹೋದರಿ ಕೊಲೆ ಮಾಡಿದ ಚಿದಾನಂದ ಹಾಗೂ ಅವರ ತಂದೆ,ಸಹೋದರರು, ಸಹೋದರಿಯರನ್ನು ಬಂಧಿಸಿ ಶಿಕ್ಷೆ ಕೊಡಿಸುವಂತೆ ಮೃತಳ ಸಹೋದರ ಮಂಜುನಾಥ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಪಿಎಸ್ ಐ ಮಂಜುನಾಥ ಸಿಲವೇರಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.