Advertisement

ಬೆಟಗೇರಿಯಲ್ಲಿ ದುರ್ಗಾದೇವಿಗೆ ಗಂಗಾಪೂಜೆ

05:32 PM Aug 27, 2018 | Team Udayavani |

ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದ ದುರ್ಗಾದೇವಿಯ ಮೂರ್ತಿಗೆ ನೂಲು ಹುಣ್ಣಿಮೆ ಪ್ರಯುಕ್ತ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಗಂಗಾಸ್ನಾನ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ನದಿ ತಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನ ಸಂತರ್ಪಣೆ ನೆರವೇರಿತು.

Advertisement

ಪ್ರತಿ ವರ್ಷದಂತೆ ಈ ಗ್ರಾಮದಿಂದ ಮದುವೆಯಾಗಿ ಪತಿಯ ಮನೆಗೆ ತೆರಳಿರುವ ಸಾವಿರಾರು ಮಹಿಳೆಯರು ನೂಲು ಹುಣ್ಣಿಮೆಯ ದಿನದಂದು ತವರು ಮನೆಗೆ ಬಂದು ತಮ್ಮ ಸಹೋದರರಿಗೆ ರಕ್ಷಾ ಬಂಧನ ಕಟ್ಟುವ ಮೂಲಕ ಹಬ್ಬದಲ್ಲಿ ಪಾಲ್ಗೊಳ್ಳುವ ಪದ್ಧತಿ ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ರವಿವಾರವೂ ಸಹಿತ ಸಾವಿರಾರು ಮಹಿಳೆಯರು ತವರು ಮನೆಗೆ ವಾಪಸ್ಸಾಗಿ ಅಣ್ಣ, ತಮ್ಮಂದಿರಿಗೆ ರಕ್ಷಾ ಬಂಧನ ಕಟ್ಟುವ ಮೂಲಕ ಸಹೋದರ ಬಾಂಧವ್ಯ ತೋರಿದರು. ಇದೇ ಹುಣ್ಣಿಮೆಯಂದು ಗ್ರಾಮದ ದುರ್ಗಾದೇವಿ ಮೂರ್ತಿಯೂ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ಮೆರವಣಿಗೆ ಹೊರಡಲಿದೆ. ಅದರಂತೆ ರವಿವಾರ ಗ್ರಾಮದಲ್ಲಿ ಪಾಯಸ, ಅನ್ನ, ಸಾಂಬಾರು ಸೇರಿದಂತೆ ಪ್ರಸಾದ ವ್ಯವಸ್ಥೆ ಸಿದ್ದಪಡಿಸಿಕೊಂಡು ಪಲ್ಲಕ್ಕಿಯಲ್ಲಿ ದುರ್ಗಾದೇವಿ ಮೂರ್ತಿಯನ್ನಿಟ್ಟು ಮೆರವಣಿಗೆ ಮಾಡುತ್ತಾ ಎಂಟು ಎತ್ತಿನ ಹಳಿ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಮತ್ತೂರು ಗ್ರಾಮದ ಮಾರ್ಗವಾಗಿ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ತೆರಳಿ ನದಿಯಲ್ಲಿ ಬೆಳ್ಳಿ ಮೂರ್ತಿಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಲಾಯಿತು.

ಜೊತೆಗೆ ಸುತ್ತಲಿನ ಸಾವಿರಾರು ಜನರು ಎತ್ತಿನ ಬಂಡಿ, ಟ್ರ್ಯಾಕ್ಟರ್‌, ಟಂಟಂ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಕುಟುಂಬ ಸಮೇತ ನದಿ ತಟಕ್ಕೆ ಆಗಮಿಸಿ ಮನೆಯಿಂದ ತಂದಿದ್ದ ವಿವಿಧ ಭಕ್ಷ್ಯಭೋಜನ ಸವಿದು ಸಂಭ್ರಮಿಸಿದರು. ಈ ವರ್ಷ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ರೈತರ ಮೊಗದಲ್ಲಿ ಹರ್ಷ ಕಂಡು ಬಂದಿತು. ದುರ್ಗಾದೇವಿ ಮೂರ್ತಿಯ ಪಲ್ಲಕ್ಕಿ ಮತ್ತೂರು ಗ್ರಾಮಕ್ಕೆ ಆಗಮಿಸಿ ರಾತ್ರಿಯವರೆಗೂ ಅದ್ಧೂರಿಯಿಂದ ಮೆರವಣಿಗೆ ಮಾಡಲಾಯಿತು. ವಿಶೇಷವೆಂಬಂತೆ, ದುರ್ಗಾದೇವಿ ಮೂರ್ತಿ ಬೆಟಗೇರಿ ಗ್ರಾಮದ್ದಾಗಿದ್ದರೂ, ಮತ್ತೂರು ಗ್ರಾಮದಲ್ಲಿ ಮೂರ್ತಿ ಮೆರವಣಿಗೆ ಮಾಡುವುದು ಇಲ್ಲಿನ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next