Advertisement

ಗಣೇಶೋತವ ಸಂಭ್ರಮಕ್ಕೆ ವರುಣನ ಸಾಥ್‌!

11:55 AM Aug 28, 2017 | |

ವಿಜಯಪುರ: ಭೀಕರ ಬರದಿಂದ ತತ್ತರಿಸಿರುವ ಬಿಸಿಲನಾಡು ವಿಜಯಪುರ ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ ಪರಿಣಾಮ ಮಳೆನಾಡಾಗಿ ಪರಿವರ್ತನೆಗೊಂಡ ಅನುಭವ ನೀಡುತ್ತಿದೆ. ಇದರಿಂದ ಕಳೆ ಕಳೆದುಕೊಂಡು ಸುಕ್ಕುಗಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗಣೇಶ ಹಬ್ಬ ಎಂದರೆ ಮಳೆಯ ದರ್ಶನ ಖಾತ್ರಿ ಎಂದು ನಂಬಿಕೆ ಈ ಬಾರಿ ಉತ್ತಮವಾಗಿ ಸುರಿಯುತ್ತಿರುವ ಮಳೆ ಸಾಬೀತು ಮಾಡಿದೆ. ಸಮೃದ್ಧಿಯ ಪೂಜೆ, ನೈವೇದ್ಯ ಮಾಡಿದ ಭಕ್ತರಿಗೆ ಉತ್ತಮವಾಗಲೆಂದು ಮಳೆ ಸುರಿಸಿದ್ದಾನೆ ಎಂಬ ನಂಬಿಕೆಯ ಮಾತುಗಳು ದೈವಿ ಭಕ್ತರಿಂದ ಕೇಳಿ ಬರುತ್ತಿದೆ. ಜಿಲ್ಲೆಯ ಬಹುತೇಕ ಎಲ್ಲೆಡೆ ಕಳೆದ ಮೂರು-ನಾಲ್ಕು
ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಒಮ್ಮೆ ಅಬ್ಬರಿಸಿ, ಮತ್ತೂಮ್ಮೆ ಬೊಬ್ಬಿರಿದು, ಮತ್ತೂಮ್ಮೆ ಸಮಾಧಾನವಾಗಿ,
ಮಗದೊಮ್ಮೆ ಮಂದಹಾಸಿಯಂತೆ ತುಂತುರಾಗಿ ಬಹುರೂಪಿಯಾಗಿ ಬಸವನಾಡಿನಲ್ಲಿ ವಿವಿಧ ರೀತಿಯಲ್ಲಿ ದರ್ಶನ ನೀಡುತ್ತಿದೆ. ಇದರಿಂದ ರೈತರು ಸಂತಸಗೊಂಡಿದ್ದು ಉಳುಮೆಗೆ ಸಿದ್ಧಪಡಿಸಿಕೊಂಡಿರುವ ಜಮೀನುಗಳಲ್ಲಿ ಹಿಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಇತ್ತ ಕಾಣೆಯಾಗಿದ್ದ ಮಳೆಯಿಂದಾಗಿ ಮನೆಯ ಮೂಲೆಯಲ್ಲಿ ಮಡಚಿಕೊಂಡು ಮಲಗಿದ್ದ ಛತ್ರಿಗಳೆಲ್ಲ ಗರಿ ಬಿಚ್ಚಿಕೊಂಡು, ಧೂಳು ಕೊಡವಿಕೊಂಡು ಹೊರಬಂದಿವೆ. ಆಕಾಶಕ್ಕೆ ಮುಖ ಮಾಡಿ ಹಿಡಿಕೆ ಹಿಡಿದವರಿಗೆ ಮಳೆ ಹನಿ ನೀರು ಸಿಡಿಯದಂತೆ ರಕ್ಷಣೆ ನೀಡುತ್ತಿರುವ ಛತ್ರಿಗಳಿಗೆ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆ ಬಂದಿದೆ. ಮಳೆ ಕಾರಣದಿಂದಾಗಿ ನಗರದ ಮುಖ್ಯ ಹಾಗೂ ಪ್ರಮುಖ ಬಡಾವಣೆಗಳ ರಸ್ತೆಗಳೆಲ್ಲ ನೀರಿನಿಂದ ಆವರಿಸಿಕೊಂಡಿವೆ. ಪರಿಣಾಮ ಬೀದಿಬದಿ ವ್ಯಾಪಾರಕ್ಕೆ ಕೊಕ್ಕೆ ಬಿದ್ದಿದ್ದು, ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿದ್ದ
ವಾರದ ಸಂತೆಗಳೂ ಸಂಕಷ್ಟ ಅನುಭವಿಸುವಂತಾಗಿದೆ. ತರಕಾರಿ ವ್ಯಾಪಾರಿಗಳು ಮಳೆಯಿಂದಾಗಿ ಕೊಂಡು ತಂದು ಮಾರಲು ಮಾರುಕಟ್ಟೆಗೆ ಬಂದರೂ ಕೊಳ್ಳುವವರಿಲ್ಲದೇ ಪರದಾಡುವಂತಾಗಿದೆ. ಮಳೆಯ ಹನಿ ಪ್ರತ್ಯಕ್ಷವಾಗುತ್ತಲೇ ಸಿಕ್ಕ ಬೆಲೆಗೆ ತರಕಾರಿ ಮಾರಿಕೊಂಡು ನಷ್ಟನುಭವಿಸುತ್ತಿದ್ದಾರೆ. ಆದರೆ ಮಳೆಯಾದರೂ ಆಗಲಿ, ಬಿಡಿ ಎಂದು ತಮ್ಮ ನಷ್ಟದಲ್ಲೂ ಸಂತೃಪ್ತಿ ಭಾವ ವ್ಯಕ್ತಪಡಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next